Homeಅಂಕಣಗಳುಆನಿ ಬಂದವು ಆನಿ ಎರಡೆರಡು ಆನಿ - ಒಂದು ಅಂಬಾನಿ, ಇನ್ನೊಂದು ಅಡಾನಿ

ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ

- Advertisement -
- Advertisement -

ಈಗಿನ ಯಡಿಯೂರಪ್ಪನವರ ಸರಕಾರ ಒಂದು ಬಾರಾ ಭಾನಗಡಿ ತಿದ್ದುಪಡಿ ಮಾಡಲಿಕ್ಕೆ ಹೊಂಟದ. ಮಿತಿಗಳನ್ನ ತೆಗೆದು ಹಾಕಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಬದಲಾಯಿಸಲಿಕ್ಕೆ ಹೊಂಟದ. ಅದಕ್ಕ ಒಂದು ಅಧ್ಯಯನ ಸಮಿತಿ ಅಂತ ಮಾಡಬೇಕು, ಅದಕ್ಕ ಪೂರಕವಾದ ತಯಾರಿ ಮಾಡಿಕೊಳ್ಳಬೇಕು ಅಂತ ಮೊನ್ನೆನ ಆಯವ್ಯಯದಾಅಗ ಬರದದ.

ಉತ್ತರ ಕರ್ನಾಟಕದ ಆಯಿಗಳು ಅಂದರೆ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳನ್ನ ಒಂದು ಹಾಡು ಹೇಳಿ ಬೆಳೆಸತಾರ. ‘ಆನಿ ಬಂತು ಒಂದು ಆನಿ. ಯಾವ ಊರು ಆನಿ’ ಅಂತ. ಅವರು ಆಡಾಡತ ಹಾಡಿದ ಜನಪದ ಹಾಡು ಒಂದು ದಿನ ಖರೆ ಆಗತದ ಅಂತ ಅವರಿಗೆ ಗೊತ್ತ ಇರಲಿಲ್ಲ.

ಆದರ ಒಂದಲ್ಲ ಎರಡು ಆನಿ ಬಂದು ಬಿಟ್ಟಾವು. ಒಂದು ಅಂಬಾನಿ, ಇನ್ನೊಂದು ಅಡಾನಿ.

ಅವು ಎರಡೂ ಬರೇ ಒಂದೇ ಕ್ಷೇತ್ರದಾಗ ಬೀಡು ಬಿಟ್ಟಿಲ್ಲ. ಎಲ್ಲಾದರಾಗೂ ಬಂದಾರ. ಅಂಬಾನಿಯವರು ಚಹಾ ಕಂಪನಿಯಿಂದ ಹಿಡದು ಯುದ್ಧ ವಿಮಾನ ತಂತ್ರಜ್ಞಾನದತನಕಾ ರೊಕ್ಕ ಹೂಡ್ಯಾರ. ಅವರು ಹಳೇ ಕಾಲದಿಂದಲೂ ಇದ್ದವರು. ಕಾಂಗ್ರೆಸ್‍ನಿಂದಲೂ ಉಪಕೃತರಾದವರು, ಹಂಗ ಈಗಿನವರ ಹಂಗಿನಾಗೂ ಇರೋರು. ಈ ರಾಜಕೀಯದಾಗ ಯಾರು ಯಾರ ಹಂಗಿನ್ಯಾಗ ಇದ್ದಾರ ಅನ್ನೋದು ಹೆಂಗ ಗೊತ್ತಾಗಬೇಕು? ಇರಲಿ.

ಹೇಳೋದಿಷ್ಟ, ಅಡಾನಿಯವರು ಮಾತ್ರ ಈಗ ಬಂದವರು. ಇನ್ಸಟಂಟ ಕಾಫಿ ಇದ್ದಂಗ.

ಈ ಚಹಾ ಹಾಗೂ ಕಾಫಿ ಇಬ್ಬರೂ ಕೂಡಿ ಏನೇನೋ ಮಾಡತಿದ್ದರು. ಅದಕ್ಕ ಸರಕಾರದ ಕೃಪೆ- ಆಶೀರ್ವಾದ ನೂ ಇತ್ತು. ಆದರ ಈಗ ಈ ಚಹಾ- ಕಾಫಿ ಕಾಕಟೇಲು ಭಾಳ ಅಪಾಯಕಾರಿ ಆಗೇದ. ಅವರಿಬ್ಬರ ಕಣ್ಣು ಬಡ ಬೋರೇಗೌಡನ ಜಮೀನು ಮ್ಯಾಲೆ ಬಿದ್ದದ.

ಅದು ಹೆಂಗಪಾ ಅಂದರ ಕಾರ್ಪರೇಟು ಕಂಪನಿಗಳು ಕೃಷಿ ಜಮೀನು ಖರೀದಿ ಮಾಡಿ ಅಥವಾ ಲೀಸು ತೊಗೊಂಡು ಕೃಷಿ ಮಾಡಬಹುದು ಅನ್ನೋ ವಿಚಾರಕ್ಕ ಅವರು ಬಂದಾರ. ಅದು ಯಾಕಪ್ಪಾ ಅಂದರ ಇಡೀ ಜಗತ್ತಿನ್ಯಾಗ ಅತಿಹೆಚ್ಚು ಬೇಡಿಕೆ ಇರೋ ವಸ್ತುಗಳು ಕೆಲವೇ ಕೆಲವು- ಆಹಾರ, ನೀರು, ಆರೋಗ್ಯ – ಶಿಕ್ಷಣ ಹಾಗೂ ಹೆಂಡ. ನೀರು, ಆರೋಗ್ಯ -ಶಿಕ್ಷಣ ಹಾಗೂ ಹೆಂಡ ಅಂತೂ ಕಂಪನಿಗಳ ಕೈಯಾಗ ಅದಾವು. ಆಹಾರ ಒಂದು ಉಳಕೊಂಡಿತ್ತು. ಈಗ ಅದನ್ನೂ ಈ ಕಂಪನಿಗಳ ಉಡ್ಯಾಗ ಹಾಕಿ ಪುಣ್ಯಾ ಕಟಿಗೊಳ್ಳೋಣು ಅಂತ ಸರಕಾರ ನಿರ್ಧಾರ ಮಾಡೇದ.

ಭಾರತ ದೇಶದ ಸುಮಾರು ರಾಜ್ಯದೊಳಗ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಕಾನೂನು ಅದ. ಆದರ ಕರ್ನಾಟಕದಾಗ ಇದು ಇರಲಿಲ್ಲ. ಯಾಕಂದ್ರ ಬಡವರು ಬೆಳಗಾಗೆದ್ದು ನೆನೆಯೋ ನಾಯಕರಾದ ದೇವರಾಜ ಅರಸರು ರೈತರಿಗೆ ಇರೋದು ಜಮೀನೊಂದೇ. ಅದೂ ಅವರ ಕೈತಪ್ಪಿ ಹೋಗಬಾರದು ಅಂತ ಹೇಳಿ ಕರ್ನಾಟಕ ಜಮೀನು ಸುಧಾರಣಾ ಕಾಯಿದೆ ಹಾಗೂ ಕಂದಾಯ ಕಾಯಿದೆ ಅಂತ ಮಾಡಿದರು. ಅದರ ಪ್ರಕಾರ ರೈತರ ಮಕ್ಕಳು ಮಾತ್ರ ಕೃಷಿ ಜಮೀನು ಖರೀದಿಸಬಹುದು. ಅದಕ್ಕ ಅವರು ತಮ್ಮ ಕುಟುಂಬದವರಲ್ಲಿ ಕೃಷಿ ಜಮೀನು ಮೊದಲಿನಿಂದಲೂ ಇದೆ ಅಂತ ಪುರಾವೆ ತೋರಿಸಬೇಕು. ಅಷ್ಟೇ ಅಲ್ಲದೇ ವಾರ್ಷಿಕ ಕೇವಲ ಎರಡೂವರೆ ಲಕ್ಷ ರೂಪಾಯಿಗಿಂತ ಹೆಚ್ಚು ವರಮಾನ ಇರೋರು ಖರೀದಿ ಮಾಡಲಿಕ್ಕೆ ಬರೋದಿಲ್ಲ, ಅಂತ ಅದರಲ್ಲಿ ಬರೆದರು. ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಅದನ್ನು 25 ಲಕ್ಷ ಅಂತ ತಿದ್ದುಪಡಿ ಮಾಡಿದರು.

ಈಗಿನ ಯಡಿಯೂರಪ್ಪನವರ ಸರಕಾರ ಒಂದು ಬಾರಾ ಭಾನಗಡಿ ತಿದ್ದುಪಡಿ ಮಾಡಲಿಕ್ಕೆ ಹೊಂಟದ. ಈ ಮಿತಿಗಳನ್ನ ತೆಗೆದುಹಾಕಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು ಅಂತ ಬದಲಾಯಿಸಲಿಕ್ಕೆ ಹೊಂಟದ. ಅದಕ್ಕ ಒಂದು ಅಧ್ಯಯನ ಸಮಿತಿ ಅಂತ ಮಾಡಬೇಕು, ಅದಕ್ಕ ಪೂರಕವಾದ ತಯಾರಿ ಮಾಡಿಕೊಳ್ಳಬೇಕು ಅಂತ ಮೊನ್ನೆನ ಆಯವ್ಯಯದಾಗ ಬರದದ.

ಇದರಿಂದ ಏನಾಗತದ ಅಂದರ ಕಾರ್ಪೊರೇಟು ಕಂಪನಿಗಳು ಇಡೀ ಹಳ್ಳಿಗಳನ್ನೇ ಲೀಸಿಗೆ ತೊಗೋಬಹುದು. ಈ ಲೀಸು ಹತ್ತು ವರ್ಷದಿಂದ ಹಿಡಕೊಂಡು 99 ವರ್ಷದ ತನಕಾನೂ ಆಗಬಹುದು. ಅಲ್ಲಿ ತನಕಾ ಆ ಜಮೀನು ರೈತರ ಒಡೆತನದಾಗ ಇರೋದಿಲ್ಲ. ಒಬ್ಬ ರೈತ ಒಮ್ಮೆ ನೂರು ವರ್ಷ ಲೀಸು ಕೊಟ್ಟಾ ಅಂದರ ನಾಕು ತಲೆಮಾರಿನ ತನಕಾ ಅವರು ಅದನ್ನ ಮಾರಲಿಕ್ಕೆ ಬರಂಗಿಲ್ಲ. ಆ ಜಮೀನಿನ್ಯಾಗ ಏನು ಬೆಳೀಬೇಕು, ಏನು ಬೇಳೀಬಾರದು ಅಂತ ಅವರು ಹೇಳಲಿಕ್ಕೆ ಬರಂಗಿಲ್ಲಾ.

ರೈತರಿಗೆ ತಿಂಗಳಿಗೆ ಇಷ್ಟು ಅಂತ `ರಿಟೇನರಷಿಪ್’ (ಅಂದರ ಜಮೀನು ಕೊಟ್ಟದ್ದಕ್ಕ ಆ ರೈತ ಜೀವ ಉಳಿಸಿಕೊಳ್ಳಲಿ ಅಂತ ಅವರು ಕೊಡೋ ತಿರುಪೆ) ಕೊಡತಾರ. ನಮ್ಮ ರಾಜ್ಯದಾಗ 80 ಶೇಕಡಾ ರೈತರು ಐದು ಎಕರೆಗೂ ಕಮ್ಮಿ ಜಮೀನು ಹೊಂದಿದವರು ಇದ್ದಾರ. ಅವರಿಗೆ ಇರೋ ಆಸ್ತಿ ಅಂದರ ಅದೊಂದ. ಅವರು ಅದನ್ನೂ ಕಳಕೊಂಡರ ಅಕ್ಷರಶ ಜೀವಚ್ಛವ ಆಗಿ ಓಡಾಡಲಿಕ್ಕೆ ಹತ್ತತಾರ.

ಇನ್ನ ಇಡೀ ಊರು- ಅಥವಾ ಹೋಬಳಿ ಅಥವಾ ತಾಲೂಕು ಒಂದು ಕಂಪನಿ ಕೈಯ್ಯಾಗ ಹೋಗೋದಕ್ಕ ಅವರು ಅಲ್ಲಿನ ಆಹಾರ ಉತ್ಪಾದನೆಯನ್ನ ಸಂಪೂರ್ಣವಾಗಿ ತಮ್ಮ ಕೈಯ್ಯಾಗ ತೊಗೋಬಹುದು. ಜ್ವಾಳ- ಬ್ಯಾಳಿ- ಕಾಳು ಬಿಟ್ಟು ಯಾವುದೋ ಕಂಪನಿಗೆ ಬೇಕಾದ ಕಚ್ಚಾ ವಸ್ತು ಬೆಳೀಬಹುದು. ಒಂದು ಭೂಪ್ರದೇಶಕ್ಕ ತಾಳಲಾರದ ಇನ್ನೊಂದು ಪ್ರದೇಶದ ಬೆಳಿ ಬೆಳದು ಮಣ್ಣು- ನೀರು ಹಾಳು ಮಾಡಬಹುದು. ಅತಿ ಗೊಬ್ಬರ- ಅತಿ ನೀರಾವರಿ ಮಾಡಿ ಆ ಮಣ್ಣು ಬರಬಾದು ಮಾಡಬಹುದು. ಇದನ್ನು ಯಾರೂ ಮಾತನಾಡಲಿಕ್ಕೆ ಆಗಂಗಿಲ್ಲ. ಇನ್ನು ಲೀಸು ತೊಗೊಂಡ ಕಂಪನಿ, ತಂಬಾಕು- ಕಾಫಿ- ಕಬ್ಬು- ರಬ್ಬರು -ಸ್ಟೀವಿಯಾ- ನೀಲಗಿರಿ – ಮಣ್ಣು ಮಸಿ ಅಂತ ಏನರ ಬೆಳದು ಕೋಟ್ಯಂತರ ರೂಪಾಯಿ ಲಾಭ ಮಾಡಿದರೂ ಸಹ ರೈತರಿಗೆ ಮೊದಲಿಗೆ ಒಪ್ಪಿಕೊಂಡಷ್ಟ ಕೊಡತದ. ಇದನ್ನ ಏರಿಸೂ ಅಂತ ಕೇಳೋ ಹಂಗ ಇರಂಗಿಲ್ಲ. ಈಗ ರೈತಸಂಘದವರಿಗೆ ಕಬ್ಬಿನ ಕಾರ್ಖಾನಿ ಮಾಲಿಕರಿಂದ ಬಾಕಿ ಬಿಡಿಸಿಕೊಳ್ಳಲಿಕ್ಕೆ ಅಗವಲ್ಲದು. ಇನ್ನು ನಾಳೆ ಆನಿ ಕಂಪನಿ ಸೊಂಡಿಯೊಳಗಿಂದ ಕಬ್ಬಿನ ತುಂಡು ಹೆರೀಲಿಕ್ಕೆ ಆಗತದ?

ಸಾವಿರಾರು ಎಕರೆ ಏಕ ಬೆಳೆ ಪದ್ಧತಿ- ಪರಿಸರ ನಾಶ- ಹಾನಿಕಾರಕ ರಿಟೇನರ್ ಪಾವತಿ- ಆಹಾರದ ಏಕಸ್ವಾಮ್ಯ ಇಂಥಾವು ಎಲ್ಲಾ ಆಗಬಹುದು. ಆದರ ಇದರ ಅಪಾಯಗಳ ಬಗ್ಗೆ ಇನ್ನೂ ಯಾರೂ ದನಿ ಎತ್ತವಲ್ಲರು. ಬೆಲೆ ಕಮ್ಮಿ ಅಂತ ಹೇಳಿ ಟೊಮ್ಯಾಟೋ ತೊಗೊಂಡು ಬಂದು ರಸ್ತೆಯೊಳಗ ಹಾಕೋ ರೈತಸಂಘದವರು ಈ ಮಹಾ ಮಾರಿಯ ಜೊತೆ ಹೆಂಗ ಯುದ್ಧ ಮಾಡಬಹುದು ಅಂತ ವಿಚಾರನ ಮಾಡಿಲ್ಲ.

ನಮ್ಮ ದುರಾದೃಷ್ಟಕ್ಕ ಕರ್ನಾಟಕದ ಸುಮಾರು ಶೇಕಡಾ 70ರಷ್ಟು ಇರೋ ರೈತರ ಜೀವನದ ಕೊಡಲಿಯ ಕಾವು ಆಗಬಹುದಾದ ಈ ಕಾನೂನು ತಿದ್ದುಪಡಿಯ ಬಗ್ಗೆ ನಮ್ಮ ವಿಧಾನಮಂಡಲದಾಗ ಚರ್ಚೆ ಆಗಲೇ ಇಲ್ಲ. ಅದು ಯಾರಿಗೂ ಮಾತನಾಡುವಷ್ಟು ಗಂಭೀರ ಅಂತ ಅನ್ನಿಸಲೇ ಇಲ್ಲೋ ಏನೋ?

ಅಪ್ರತಿಮ ನಾಯಕ ಶಕ್ತಿಮಾನ್‍ನ ಎದುರಿಗೆ ಕೈಕಟ್ಟಿಕೊಂಡು `ಎಸ್ ಸರ್’ ಅಂತ ಹಾಜರಾತಿ ನೀಡುವ ಆಳುವ ಪಕ್ಷದವರಂತೂ ಬಿಡ್ರಿ, ಸರಕಾರದ ಮ್ಯಾಲೆ ಕಣ್ಣು ಇಡಲಿಕ್ಕೆ ಅಂತನ ಇರುವ ವಿರೋಧ ಪಕ್ಷದ ಹದ್ದುಗಳು ಸಹಿತ ಸುಮ್ಮನೇ ಕೂತಾವ. ಯಾಕಂದರ ಈ ದೇಶದಾಗ ಆಡಳಿತ ಪಕ್ಷ- ವಿರೋಧ ಪಕ್ಷ ಅಂತ ಇಲ್ಲ. ಇಲ್ಲಿ ಇರೋದು ಬರೇ ಇಂದಿನ ಆಡಳಿತ ಪಕ್ಷ- ನಿನ್ನೆಯ ಆಡಳಿತ ಪಕ್ಷ ಹಾಗೂ ನಾಳೆಯ ಆಡಳಿತ ಪಕ್ಷ ಅಂತ ಮಾತ್ರ. ಇವರು ಇವತ್ತು ಆನಿ- ಕುದರಿ ಕಂಪನಿಗಳನ್ನ ಚನ್ನಾಗಿ ನೋಡಿಕೊಂಡರೆ ನಾಳೆ ಅವರು ಅಧಿಕಾರಕ್ಕ ಬರಲು ಅವರು ಸಹಾಯ ಮಾಡತಾರ. ಇಲ್ಲಾಂದರ ಬರೇ ಒಂದ ಪಕ್ಷದ ಆಡಳಿತ ನೋಡಬೇಕಾಗತದ. ಅಥವಾ ಆಡಳಿತದಾಗಿರೋ ಪಕ್ಷ ಸೇರಿಕೋಬೇಕಾಗತದ. ರಾಜಮಹಾರಾಜರೇ ಪಕ್ಷ ಬಿಟ್ಟು ಹೋಗಲಿಕ್ಕೆ ಹತ್ತಾಗ ಅಧಿಕಾರದಿಂದ ದೂರ ಇರೋ ವೆಂಕಾ- ನೊಣಾ- ಸೀನಾನಂಥವರು ಯಾಕ ಸುಮ್ಮನೇ ಇರತಾರ?

ಕೃಷಿ ಭೂಮಿ ಮಾರಾಟಕ್ಕ ಮಿತಿ ಇರೋದರಿಂದನ ಇಲ್ಲಿ ಉದ್ಯಮ ಅಭಿವೃದ್ಧಿ ಹೊಂದಿಲ್ಲ ಅನ್ನೋ ಅರ್ಥಹೀನ ವಾದವನ್ನ ಕಂಪನಿಗಳು ಮಂಡಸಲಿಕ್ಕೆ ಹತ್ಯಾವು. ಅವರಿಗಿಂತ ಜೋರಾಗಿ ನಮ್ಮನ್ನಾಳುವ ರಾಜಕಾರಣಿಗಳೇ ಇದರ ಬಗ್ಗೆ ಮಾತಾಡಲಿಕ್ಕೆ ಹತ್ಯಾರ. ಭೂಮಿ ಇದ್ದರೆ ಬಂಡವಾಳ, ಬಂಡವಾಳ ಬಂದರೆ ಉದ್ದಿಮೆ, ಉದ್ದಿಮೆ ಇದ್ದರೆ ಉದ್ಯೋಗ, ಉದ್ಯೋಗ ಇದ್ದರೆ ಅಭಿವೃದ್ಧಿ ಅನ್ನೋ ಮಂತ್ರ ಜಪಿಸಲಿಕ್ಕೆ ಹತ್ಯಾರ. ಆದರ ಅಭಿವೃದ್ಧಿ ಅನ್ನೋದು ಮಾಯಾ ಮೋಹಿನಿ. ಅದರ ಬೆನ್ನು ಹತ್ತಿದರ ತಿರಗಿ ಬರಲಿಕ್ಕೆ ಆಗೋದಿಲ್ಲ. ಆ ದಾರಿಯೊಳಗ ಹೋಗಬೇಕಾದರ ನೆಮ್ಮದಿ ಅನ್ನೋದನ್ನ ಬಿಟ್ಟುಹೋಗಬೇಕಾಗತದ. ಪರಿಸರ ನಾಶ ಸಹಿಸಿಕೊಳ್ಳಬೇಕಾಗತದ. ಕಾಲ ಮಿಂಚಿ ಹೋಗೋದರಾಗ ಇದು ನಮ್ಮೆಲ್ಲರಿಗೂ ತಿಳೀಬೇಕಾಗತದ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನೀವು ಕೊಡುವ ಮಾಹಿತಿ, ಸುದ್ದಿ, ಚಿಂತನೆ ಗಳು ತುಂಬಾ ಮೌಲಿಕ ಹಾಗೂ ತುರ್ತು. ನನಗೆ ಇಷ್ಟ ವಾಯಿತು. ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...