ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 2 ತಿಂಗಳಿನಿಂದ ನಡೆಸುತ್ತಿರುವ ಹೋರಾಟ 71 ನೇ ದಿನಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದರ ಭಾಗವಾಗಿ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಮತ್ತೊಂದು ಮಹಾಪಂಚಾಯತ್ ಸಭೆಯನ್ನು ಆಯೋಜಿಸಲಾಗಿದ್ದು, ಇಲ್ಲಿ ಸುಮಾರು 50 ಸಾವಿರ ರೈತ ಬೆಂಬಲಿಗರು ಸೇರುವ ನಿರೀಕ್ಷೆಯಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.
ರೈತ ಹೋರಾಟವನ್ನು ಬೆಂಬಲಿಸಿ ಇದುವರೆಗೂ ಬಾಗ್ಪಥ್, ಮಥುರಾ, ಮುಜಪ್ಪರ್ ನಗರ, ರಾಜಸ್ಥಾನ್ ಸೇರಿದಂತೆ ಹಲವು ಕಡೆ ಮಹಾಪಂಚಾಯತ್ಗಳು ನಡೆದಿವೆ. ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶದಾದ್ಯಂತ ಇಂತಹ ಪಂಚಾಯತ್ಗಳನ್ನು ಸಂಘಟಿಸಲಾಗುವುದು ಎಂದು ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದ ಕೇಂದ್ರ – ರೈತ ಹೋರಾಟದ ಬಗ್ಗೆ ಸಂಸತ್ತಿನಲ್ಲಿ 15 ಗಂಟೆ…
ಸರ್ಕಾರವು ರೈತರೊಂದಿಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದೆಯಾದರೂ ಎಲ್ಲವೂ ವಿಫಲಗೊಂಡಿದೆ. ಇದೀಗ ರೈತರು ಶನಿವಾರದಂದು ದೇಶಾದ್ಯಂತ ‘ಸಂಚಾರ ಸ್ಥಗಿತ ಚಳವಳಿ’ (ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ತಡೆ) ನಡೆಸುವಂತೆ ಕರೆ ನೀಡಿದ್ದಾರೆ.
‘ಸಂಚಾರ ಸ್ಥಗಿತ ಚಳವಳಿ’ ಫೆಬ್ರವರಿ 6ರ ಶನಿವಾರ ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಅಂದರೆ ಒಟ್ಟು ಮೂರು ಗಂಟೆಗಳ ಕಾಲ ನಡೆಯಲಿದ್ದು, ಶಾಂತಿಯುವ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರು ಮನವಿ ಮಾಡಿದ್ದಾರೆ.
100ಕ್ಕೂ ಹೆಚ್ಚು ರೈತರು ಕಾಣೆಯಾಗಿರುವುದು, ರೈತರು ಮತ್ತು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು, ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತ, ಹೋರಾಟಗಾರರಿಗೆ ಕಿರುಕುಳ, ಪ್ರತಿಭಟನಾ ಸ್ಥಳಗಳ ವಿದ್ಯುತ್ ಮತ್ತು ನೀರು ಸರಬರಾಜನ್ನು ನಿಲ್ಲಿಸಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಲು ರೈತರು ಈ ‘ಸಂಚಾರ ಸ್ಥಗಿತ ಚಳವಳಿ’ ಕರೆ ನೀಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
ಕೇಂದ್ರ ಸರ್ಕಾರ ರೈತರನ್ನು ಬೆದರಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳ ಹೊರತಾಗಿಯು ರೈತರು ಹೋರಾಟದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್, “ಕೇಂದ್ರ ಸರ್ಕಾರಕ್ಕೆ ನಾವು ಅಕ್ಟೋಬರ್ವರೆಗೆ ಸಮಯ ನೀಡಿದ್ದು, ನಮ್ಮ ಮಾತನ್ನು ಆಲಿಸದಿದ್ದರೆ ದೇಶವ್ಯಾಪಿ 40 ಲಕ್ಷ ಟ್ರಾಕ್ಟರ್ಗಳ ರ್ಯಾಲಿ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಜನವರಿ 26 ರ ಗಣರಾಜ್ಯೋತ್ಸವಂದು ರೈತರು ನಡೆಸಿದ ಟ್ರಾಕ್ಟರ್ ಪರೇಡ್ ನಂತರ ರೈತ ಹೋರಾಟದ ಸ್ಥಳಗಳಲ್ಲಿ ಅಹಿತಕರ ಘಟನೆ ನಡೆದಿತ್ತು. ಹಲವಾರು ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ಇದನ್ನು ಬಿಜೆಪಿಯೆ ಮಾಡಿಸಿದೆ ಎಂದು ವರದಿ ಮಾಡಿದೆ. ಅದಾಗಿಯು, ಕೇಂದ್ರ ಸರ್ಕಾರ ದೆಹಲಿಯ ಹೋರಾಟದ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿತ್ತು. ಇದು ಜಗತ್ತಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ