ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ಯುವತಿಯನ್ನು ಡ್ರಾಪ್ ಮಾಡಲು ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ಚಾಲಕನ ಮೇಲೆ ಗುಂಪೊಂದು ಮತೀಯ ಗೂಂಡಾಗಿರಿ ನಡೆಸಿ ಹಲ್ಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಉಜಿರೆ ನಿವಾಸಿ, ಆಟೋ ಚಾಲಕ ಮುಹಮ್ಮದ್ ಆಶಿಕ್ ಯುವತಿಯೊಬ್ಬರನ್ನು ಧರ್ಮಸ್ಥಳಕ್ಕೆ ಬಿಟ್ಟು ಬರಲು ಬಾಡಿಗೆಗೆ ಹೋಗಿದ್ದರು. ಯುವತಿಯನ್ನು ಇಳಿಸಿ, ಹಿಂದಿರುಗಿ ಬರುವಾಗ ಗುಂಪೊಂದು ಆತನನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿದೆ.
ಧರ್ಮಸ್ಥಳದ ಬಸ್ ನಿಲ್ದಾಣದ ಹೊರಭಾಗದಲ್ಲಿ ಆಟೋವನ್ನು ತಡೆ ನಾಲ್ವರು ದುಷ್ಕರ್ಮಿಗಳ ಗುಂಪು, ಆಶಿಕ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಶಿಕ್ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡ ಮತೀಯ ಗೂಂಡಾಗಿರಿ ಪ್ರಕರಗಳು ಈಗಲೂ ವರದಿಯಾಗುತ್ತಿವೆ. ನೂತನ ಕಾಂಗ್ರೆಸ್ ಸರ್ಕಾರ ಈ ರೀತಿಯ ಅನೈತಿಕ ಪೊಲೀಸ್ಗಿರಿ ತಡೆಯಲು ನೂತನ ಸರ್ಕಾರ ಆಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿದೆಯಾದರೂ ಪ್ರಕರಣಗಳು ಮಾತ್ರ ನಿಂತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಬಳಿಯ ಸೋಮೇಶ್ವರ ಬೀಚ್ಗೆ ವಿಹಾರಕ್ಕೆಂದು ಬಂದಿದ್ದು ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ಮತೀಯ ಗೂಂಡಾಗಿರಿ ನಡೆಸಿದ ಪ್ರಕರಣ ಜೂನ್ 2 ರಂದು ವರದಿಯಾಗಿತ್ತು. ಮಂಗಳೂರಿನಲ್ಲಿ ‘ಮುಸ್ಲಿಮ್’ ಎಂದು ಭಾವಿಸಿ ಖಾಸಗಿ ಸುದ್ದಿ ಸಂಸ್ಥೆಯ ವರದಿಗಾರನೋರ್ವನಿಗೆ ನಿಂದನೆ, ಬೆದರಿಕೆ ಹಾಕಿದ್ದ ಘಟನೆ ಸಹ ನಡೆದಿತ್ತು. ಜುಲೈ 29ರಂದು ಕಾರಿನಲ್ಲಿ ಹೋಗುತ್ತಿದ್ದ ವೈದ್ಯರು ಹಾಗೂ ಪ್ರಾಧ್ಯಾಪಕರನ್ನು ತಡೆದು ಅನೈತಿಕ ಪೊಲೀಸ್ಗಿರಿ ನಡೆಸಿದ ಆರೋಪದಲ್ಲಿ ಹಿಂದೂ ಜಾಗರಣಾ ವೇದಿಕೆಯ ಐವರು ಕಾರ್ಯಕರ್ತರನ್ನು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ; ಉಡುಪಿ ವಿಡಿಯೋ ಪ್ರಕರಣ: ಹಾಸ್ಟೆಲ್ ಮಕ್ಕಳ ಹುಚ್ಚಾಟವೂ, ಹಿಡನ್ ಹಿಂದುತ್ವದ ಹಿಕಮತ್ತೂ!!