ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಮುಖ್ಯಸ್ಥ ಶಿವಮೂರ್ತಿ ಮೇಲೆ ಮತ್ತೊಂದು ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿದೆ.
ಚಿತ್ರದುರ್ಗದ ವಕೀಲರೊಬ್ಬರು ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ದೂರಿನ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಆದರೆ ದೂರು ನೀಡಿರುವ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಮಾನಕೆರೆ ಅವರು ತಿಳಿಸಿದ್ದಾರೆ ಎಂದು ಸುದ್ದಿ ಪೋರ್ಟಾಲ್ ಈ ದಿನ.ಕಾಮ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದೂರನ್ನು ಅಕ್ಟೋಬರ್ 6 ರಂದು ನೀಡಲಾಗಿದ್ದರೂ, ಇಷ್ಟು ಗಂಭೀರ ವಿಷಯದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ಒಂದು ವಾರದ ಬಳಿಕ ಹೇಳುತ್ತಿದ್ದಾರೆ.
ಇದನ್ನೂ ಓದಿ: ಚೆಕ್ಗಳಿಗೆ ಜೈಲಿನಿಂದಲೇ ಸಹಿಹಾಕಲು ಅತ್ಯಾಚಾರ ಆರೋಪಿ ಮುರುಘಾ ಶರಣರಿಗೆ ಹೈಕೋರ್ಟ್ ಅನುಮತಿ
ದೂರಿನಲ್ಲಿ ಏನಿದೆ?
ಚಿತ್ರದುರ್ಗದ ಜಿಲ್ಲಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ಸಂಬಂಧ ಅಕ್ಟೋಬರ್ 6 ರಂದು ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತರೂ ಆದ ಈ ವಕೀಲರು, “ಮುರುಘಾ ಶ್ರೀಗಳು 19 ವರ್ಷದ ಮತ್ತೊಂದು ಬಾಲಕಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸುಮಾರು 19 ವರ್ಷ ವಯಸ್ಸಿನ ಈ ಬಾಲಕಿಯ ಮೇಲೆ ಮುರುಘಾ ಶ್ರೀಗಳು ಮತ್ತು ಇನ್ನಿತರರು ನಿರಂತರ ಆರೇಳು ವರ್ಷಗಳ ಕಾಲ ಅಮಾನವೀಯ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಮಗೆ ತಿಳಿಸಿವೆ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
“ಹೀಗೆ ದೌರ್ಜನ್ಯಕ್ಕೆ ಒಳಗಾದ ಬಾಲಕಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಆದ್ದರಿಂದ ಈ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಆಕೆಯಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು, ಆಕೆಗೆ ರಕ್ಷಣೆ ಒದಗಿಸಬೇಕು” ಎಂದು ದೂರಿನಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಮುರುಘಾ ಶರಣರ ವಿರುದ್ಧದ ಸಾಕ್ಷಿ ನಾಶವಾಗಿದೆ: ವಿಶ್ವನಾಥ್ ಆರೋಪ
ಪ್ರಸ್ತುತ ದೂರಿನ ಬಗ್ಗೆ ಮೈಸೂರಿನ ಒಡನಾಡಿ ಸಂಸ್ಥೆಯ ಪರಶು ಅವರು ಖಚಿತಪಡಿಸಿದ್ದಾರೆ ಎಂದು ಈದಿನ.ಕಾಮ್ ವರದಿ ಹೇಳಿದೆ. “ಇಂತದೊಂದು ದೂರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ದೂರಿನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.