ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು. ಭೂರಹಿತ ಸಂತ್ರಸ್ತ ಗಣಿ ಕಾರ್ಮಿಕರ ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು ಎಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ವತಿಯಿಂದ ನಡೆಯುತ್ತಿರುವ ಪಾದಯಾತ್ರೆಯು ಇಂದು ಬಳ್ಳಾರಿ ಜಿಲ್ಲೆ ತಲುಪಿದೆ.
ಎಐಸಿಸಿಟಿಯು ರಾಜ್ಯಾಧ್ಯಕ್ಷರಾದ ಕ್ಲಿಫ್ಟನ್ ಡಿ ರೊಜಾರಿಯೋ ಮಾತನಾಡಿ, “ರಕ್ತ ಸುರಿಸಿ, ಬೆವರು ಬಸಿದು ಹತ್ತಾರು ವರ್ಷ ದುಡಿದ ಗಣಿ ಕಾರ್ಮಿಕರಿಗೆ ಒಂದು ಮನೆ ಕೊಡಲಾಗದ ಸರ್ಕಾರ ಇದ್ದು ಪ್ರಯೋಜನವೇನು? ಅಂಬಾನಿ, ಅದಾನಿಗಾಗಿ, ಗಣಿ ಕಂಪನಿಗಳ ಪರವಾಗಿ ಮಾತ್ರ ಸರ್ಕಾರವಿದೆಯೇ? ನಾವು ಮತ ಕೊಟ್ಟು ಸರ್ಕಾರ ಚುನಾಯಿಸಿದ್ದೇವೆಯೆ ಹೊರತು ಅವರಲ್ಲ” ಎಂದು ಕಿಡಿಕಾರಿದರು.
ರಾಜ್ಯದಲ್ಲಿ 283 ಗಣಿಭಾದಿತ ಹಳ್ಳಿಗಳಿವೆ. ಅದರಲ್ಲಿ ಸುಮಾರು 140 ಹಳ್ಳಿಗಳು ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಇವೆ. ಗಣಿಗಳಲ್ಲಿ ದುಡಿದ ಜನ ಈಗ ನಿರಾಶ್ರಿತರಾಗಿದ್ದಾರೆ. ಈ ಜನರ ರಕ್ತಹೀರಿದ ಕಂಪನಿಗಳು ಕುಬೇರರಾಗಿದ್ದಾರೆ. ಇಂತಹ ಸಮಯದಲ್ಲಿ ಮತ್ತೆ ಕೆಲ ಗಣಿ ಕಂಪನಿಗಳು ಕೆಲಸ ಆರಂಭಿಸುತ್ತಿವೆ. ಆದರೆ ಈಗ ಇಲ್ಲಿನ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳದೆ ಹೊರರಾಜ್ಯದ ಕಾರ್ಮಿಕರನ್ನು ಕರೆತರುತ್ತಿವೆ. ಆ ಮೂಲಕ ಇಲ್ಲಿನ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು.
ಎಐಸಿಸಿಟಿಯು ಸಂಘಟನೆ ನೇತೃತ್ವದಲ್ಲಿ ಸಂಡೂರಿನಿಂದ ಆರಂಭವಾಗಿದ್ದ ಪಾದಯಾತ್ರೆ 70 ಕಿ.ಮೀಗಳನ್ನು ಕ್ರಮಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕುವುದರೊಂದಿಗೆ ಅಂತ್ಯಗೊಂಡಿತು. ವಕೀಲೆ ಮತ್ತು ಹೋರಾಟಗಾರ್ತಿ ಮೈತ್ರೇಯಿ ಕೃಷ್ಣನ್ ಮತ್ತು ಕಾರ್ಮಿಕ ಮಹಿಳೆಯರು ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
On Day 3, the rally has reached Bellary and is moving towards the DC's office! Let us wish the mine workers a success on their onward struggles! pic.twitter.com/cTwqusLOIH
— AICCTU Karnataka (@aicctukar) October 13, 2022
ಎಲ್ಲ ಗಣಿ ಕಾರ್ಮಿಕರಿಗೆ ಆರ್ ಆ್ಯಂಡ್ ಆರ್ನಲ್ಲಿ ಸಮಗ್ರ ಪುನರ್ವಸತಿ, ಉದ್ಯೋಗ ಕಲ್ಪಿಸಬೇಕು. ಎಲ್ಲಾ ಗಣಿ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು. ನಿವೃತ್ತಿ ವಯಸ್ಸು ತಲುಪಿದ ಗಣಿ ಕಾರ್ಮಿಕರಿಗೆ ಮಾಸಿಕ 5000 ರೂ ಪಿಂಚಣಿ ನೀಡಬೇಕು. ಗಣಿ ಕಾರ್ಮಿಕರು ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಂಗನವಾಡಿ, ಸಮುದಾಯ ಭವನ, ಗ್ರಂಥಾಲಯ, ಕಾರ್ಮಿಕರ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಗಣಿ ಕಾರ್ಮಿಕರಿಗೆ ಆಸ್ಪತ್ರೆ ನಿರ್ಮಿಸಿ, ಗಣಿ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಒದಗಿಸಬೇಕು. ಗಣಿ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಸಹಾಯಧನ ಹಾಗೂ ಮದುವೆಗೆ ಹಣಕಾಸಿನ ನೆರವು ಒದಗಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.
ಹೋರಾಟಗಾರರಾದ ಜೆ.ಭಾರದ್ವಾಜ್, ಪಿ.ಆರ್.ಎಸ್ ಮಣಿ, ಪಿ.ಪಿ ಅಪ್ಪಣ್ಣ, ಹುಸೇನ್ ಪೀರ್, ಮಲ್ಲಿಸ್ವಾಮಿ, ಶಾಂತಮ್ಮ, ಎ.ಯರಿಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹೋರಾಟದ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ; ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ