Homeಕರ್ನಾಟಕಹೂತ ಚಕ್ರ ಎತ್ತುತ್ತಿರುವ ಗ್ರಾಮೀಣ ಭಾಗದ ಮೇಲೆ ಬಿದ್ದ ಬಾಣ: ಉಳಿದುಕೊಳ್ಳುವುದೇ ಗ್ರಾಮೀಣ ಕರ್ನಾಟಕ?

ಹೂತ ಚಕ್ರ ಎತ್ತುತ್ತಿರುವ ಗ್ರಾಮೀಣ ಭಾಗದ ಮೇಲೆ ಬಿದ್ದ ಬಾಣ: ಉಳಿದುಕೊಳ್ಳುವುದೇ ಗ್ರಾಮೀಣ ಕರ್ನಾಟಕ?

ರೈತರು ಬೆಳೆಯುವ ಉತ್ಪನ್ನದ ಮಾರಾಟದ ಬಗ್ಗೆ ಸದಾ ನಿರ್ಲಕ್ಷ್ಯ ಮಾಡುವ ಸರಕಾರ ಈ ಬಾರಿ ಕೈ ಬಿಗಿ ಮಾಡಿ ಕೂತಿರುವ ನಗರ/ಸಣ್ಣ ಪಟ್ಟಣಗಳ ಗ್ರಾಹಕರ ವರ್ತನೆಯನ್ನು ಗಮನಿಸಬೇಕು. ಈ ಅರ್ಥದಲ್ಲಿ ಒಂದು ಕಾರ್ಯಸಾಧು ಯೋಜನೆಯೆಂದರೆ ಸಣ್ಣ ಪಟ್ಟಣಗಳಲ್ಲಿರುವ ತಳ್ಳು ಗಾಡಿ ಮಾರಾಟಗಾರರೇ ಅತ್ಯುತ್ತಮ ಸಪ್ಲೈ ಚೈನ್ ಎಂದು ಗುರುತಿಸಬೇಕು.

- Advertisement -
- Advertisement -

ಮಹಾಭಾರತದಲ್ಲಿ ಹೂತ ರಥದ ಚಕ್ರ ಎತ್ತುವಾಗ ಕರ್ಣನ ಮೇಲೆ ಬಾಣ ಪ್ರಯೋಗ ಮಾಡಿ ಅರ್ಜುನ ಅವನನ್ನು ಕೊಲ್ಲುತ್ತಾನೆ. ಅಧರ್ಮ ಮಾತ್ರ ಅಲ್ಲ; ಅನ್ಯಾಯದ ಸಾವು ಅದು. ಆದರೆ ಈ ಪುರಾಣ ಕತೆಗೆ ದುರಂತದ ಹೀರೋಯಿಸಂ ಆದರೂ ಇದೆ.

ನಮ್ಮ ಗ್ರಾಮ ಭಾರತದ ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರಿಗೆ ಕೊರೋನಾ ಇಂಥಾ ದುರ್ಭರ ಸ್ಥಿತಿಯನ್ನು ತಂದಿಟ್ಟಿದೆ.

ಅರ್ಧ ಕರ್ನಾಟಕ ಕಳೆದ ವರ್ಷದ ಅಭೂತಪೂರ್ವ ನೆರೆಯಿಂದ ತತ್ತರಿಸಿ ಹೋಯಿತು. ಸರ್ಕಾರದ ಅಧಿಕೃತ ಲೆಕ್ಕದ ಪ್ರಕಾರ ನಷ್ಟದ ಪ್ರಮಾಣ 40 ಸಾವಿರ ಕೋಟಿ. ಅಂದರೆ ಇದು ರಾಜ್ಯದ ಒಟ್ಟು ಯೋಜನಾ ವೆಚ್ಚದಷ್ಟು. ಪರಿಹಾರ ಘೋಷಣೆ ಮಾಡಿದರೂ ಸಾಲಮನ್ನಾ ಹೊರತಾಗಿ ಮಿಕ್ಕಿದ್ದೇನೂ ಅರ್ಥಪೂರ್ಣವಾಗಿ ತಲುಪಿಲ್ಲ. ಈ ನೆರೆ ತಕ್ಷಣದ ಜೀವನೋಪಾಯವನ್ನಷ್ಟೇ ಅಲ್ಲ, ಹಲವುಕಡೆ ದೀರ್ಘಕಾಲಿಕವಾದ ಹೊಡೆತವನ್ನೂ ನೀಡಿದೆ. ಮರಳು, ನದಿಕಸ ತುಂಬಿ ಜಮೀನು ಹದಗೆಟ್ಟಿರುವುದು ಒಂದೆಡೆಯಾದರೆ, ಮೇಲ್ಮಣ್ಣು ಕೊಚ್ಚಿ ಹೋಗಿ ಜಮೀನು ನಿಸ್ಸಾರವಾದ ಪ್ರಮಾಣವೂ ಸಾಕಷ್ಟಿದೆ. ಇವುಗಳ ಮಣ್ಣು ಸರಿಪಡಿಸುವಿಕೆಗೆ ಬೇಕಾದ ಸರ್ಕಾರದ ಸಹಾಯ ಎಷ್ಟು ಸಿಕ್ಕಿದೆ ಎಂಬ ಮಾಹಿತಿಯೇ ಇಲ್ಲ.

ಇಂಥಾ ಹಿನ್ನೆಲೆಯಲ್ಲೇ ಈ ಹಂಗಾಮಿಗೆ ರೈತರು ತಯಾರಾಗಬೇಕಾದ ಅನಿವಾರ್ಯತೆ ಇತ್ತು. ಬಹುತೇಕ ಉತ್ತರ ಕರ್ನಾಟಕದ ಕುಟುಂಬಗಳು ಎಂದಿಗಿಂತ ಹೆಚ್ಚಾಗಿ ವಲಸೆ ಹೋಗಿದ್ದು ಈ ಕಾರಣಕ್ಕೆ. ಈ ವಲಸೆ ಕೂಲಿ ಮುಖಾಂತರ ಒಂದಷ್ಟು ಕಾಸು ರೂಢಿಸಿಕೊಂಡು ವಾಪಾಸಾಗುವುದು ಆರ್ಥಿಕ ಲೆಕ್ಕಾಚಾರ ಎಂಬುದನ್ನು ಮರೆಯಬಾರದು.

ಕೊರೋನಾ ಅಪ್ಪಳಿಸಿದ್ದು ಈ ಸಂಕ್ರಮಣ ಕಾಲದಲ್ಲಿ.

ಆರ್ಥಿಕ ಹಿಂಜರಿತದ ಕಾರಣಕ್ಕೇ ಕೇಂದ್ರ ಸರಕಾರವೂ ತನ್ನ ಸ್ವಯಂಕೃತ ಅಪರಾಧಗಳಿಂದ ಹೇಗೋ ನಡಕೊಂಡು ಹೋಗುತ್ತಿದ್ದ ಆರ್ಥಿಕತೆಯ ಕಾಲು ಕತ್ತರಿಸುವ ಕೆಲಸ ಮಾಡಿ ಈಗ ಕಾಸಿಲ್ಲದೇ ಒದ್ದಾಡುತ್ತಿದ್ದರೆ ರಾಜ್ಯ ಸರ್ಕಾರ ಕೇಂದ್ರದ ಅನುದಾನ ಮತ್ತು ತೆರಿಗೆ ಪಾಲಿನ ಕಡಿತದಿಂದಾಗಿ ಇನ್ನಷ್ಟು ಸೊರಗಿ ಕೂತಿದೆ. ಈಗ ಲಾಕ್‍ಡೌನ್ ಕಾರಣಕ್ಕೆ ಇಡೀ ದೇಶಕ್ಕೆ ದೇಶದ ವ್ಯವಹಾರವೇ ಲಕ್ವಾ ಹೊಡೆದು ಕೂತಿದೆ. ಹೇಗೆ ಬಿದ್ದರೂ ಅಂಡಿಗೆ ಪೆಟ್ಟು ಅಂತ ಗಾದೆ ಇದೆ. ಇದರಂತೆ ನೆರೆಯ ಹೊಡೆತ ತಿಂದಿದ್ದೂ ನಮ್ಮ ಗ್ರಾಮೀಣರೇ; ಆರ್ಥಿಕ ಹಿಂಜರಿತದ ಹೊಡೆತವೂ ಅವರಿಗೇ ಹೆಚ್ಚು ತಟ್ಟಿದ್ದು. ಈಗ ಈ ಕೊರೋನಾ ಪಿಡುಗು ಅವರ ಬದುಕನ್ನು ಪ್ರಪಾತದಂಚಿಗೆ ನಿಲ್ಲಿಸಿದೆ.

ಈಗ ಮುಂಗಾರು ಬೆಳೆಗೆ ಬೇಕಾದ ತಯಾರಿ ಸಾಂಪ್ರದಾಯಿಕವಾಗಿ ನಡೆಯಬೇಕು. ರೇವತಿ ಮಳೆ ಅಲ್ಲಿ-ಇಲ್ಲಿ ಆಗಿದೆ. ಭರಣಿ ಮಳೆ ಅಂದರೆ ಮೇ ಮೊದಲ ವಾರದಲ್ಲಿ ಮಳೆಯಾದರೆ ಬೇಸಾಯದ ಆರಂಭಿಕ ಕೆಲಸಗಳು ಮಾಡಲೇಬೇಕು.

ಆದರೆ ಈ ಲಾಕ್‍ಡೌನ್ ಮುಂದುವರಿಯುವ ಸೂಚನೆಗಳಿದ್ದು ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆಂಬುದು ಊಹೆಗೆ ಬಿಟ್ಟ ವಿಚಾರ.

ಊರಿನ ಕಿರಾಣಿ ಅಂಗಡಿಗಳಲ್ಲಿ ನಿತ್ಯದ ದಿನಸಿ ದಾಸ್ತಾನು ಅಷ್ಟಕ್ಕಷ್ಟೇ ಆಗಿದ್ದು ಇರುವ ವಸ್ತುಗಳನ್ನೂ ದುಬಾರಿಬೆಲೆಗೆ ಮಾರುತ್ತಿರುವ ವರದಿಗಳಿವೆ. ಇನ್ನೊಂದೆಡೆ ರೈತರು ಬೆಳೆದ ಉತ್ಪನ್ನಗಳೂ ಮಾರಾಟವಾಗದೇ ಕೊಳೆಯುತ್ತಿದೆ. ಗ್ರಾಮೀಣ ಭಾಗದ ಬಲಿಷ್ಠ ಆರ್ಥಿಕ ಜಾಲವಾದ ಮಹಿಳೆಯರ ಸ್ವಸಹಾಯ ಸಂಘಗಳ ವ್ಯವಹಾರ ಸ್ತಬ್ಧವಾಗಿದೆ. ಸಣ್ಣ ಪುಟ್ಟ ಅನಾರೋಗ್ಯಕ್ಕೂ ವೈದ್ಯಕೀಯ ಸೌಲಭ್ಯ ದೊರೆಯದೇ ದುಗುಡ ಹೆಚ್ಚಿದೆ.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಜೀವ ತುಂಬುವ ಮೊದಲ ಕೆಲಸ ಸರ್ಕಾರ ಬೀಜ ಮತ್ತು ಗೊಬ್ಬರದ ಸಂಗ್ರಹ ಮತ್ತು ವಿತರಣೆಯನ್ನು ಖಚಿತಪಡಿಸುವುದು. ನಮ್ಮ ರೈತರು ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಬಿತರಾಗಿರುವ ಎರಡು ಅಂಶಗಳಿವು. ಈ ಬಾರಿ ಸರ್ಕಾರ ಇವೆರಡನ್ನೂ ನಿಭಾಯಿಸುವ ಶಕ್ತಿ ಕಳಕೊಂಡಿದೆ. ಕ್ಷೇತ್ರವಾರು ಗಮನಿಸಿದರೆ ಅತ್ಯಂತ ಹೆಚ್ಚು ಹೂಡಿಕೆಯಾಗುತ್ತಿರುವುದು ಕೃಷಿಯಲ್ಲಿ. ಕರ್ನಾಟಕದಲ್ಲೇ ಏನಿಲ್ಲವೆಂದರೂ 50 ಸಾವಿರ ಕೋಟಿಯಷ್ಟು ಮೊತ್ತವನ್ನು ರೈತರು ಬಂಡವಾಳವಾಗಿ ಹೂಡುತ್ತಿದ್ದಾರೆ. ಇದರಲ್ಲಿ ಸರ್ಕಾರದ ನೆರವು ಇರುವುದು ಸಾಲದ ಲಭ್ಯತೆಯನ್ನು ದೃಢೀಕರಿಸುವುದರಲ್ಲಿ ಮಾತ್ರಾ. ಈ ಸಾಲವೂ ಅರ್ಥಶಾಸ್ತ್ರದ ಪ್ರಕಾರ ಹೂಡಿಕೆಯೇ ಹೊರತು ನೆರವಲ್ಲ!! ಸರ್ಕಾರದ ಸಬ್ಸಿಡಿ ಹೆಚ್ಚೆಂದರೆ ಶೇ.10 ಇರಬಹುದು.

ಈ ಬಾರಿ ರೈತರ ಬಂಡವಾಳ ಹೂಡಿಕೆಯ ಸಾಮಥ್ರ್ಯವೇ ಅರ್ಧಕ್ಕರ್ಧ ಕುಸಿದಿದೆ (ಪ್ರಾಯಶಃ ಇನ್ನೂ ಜಾಸ್ತಿ) ಇದನ್ನು ತುಂಬುವ ತಾತ್ವಿಕ ಇಚ್ಛೆಯೂ ಸರ್ಕಾರಕ್ಕೆ ಇದ್ದಂತಿಲ್ಲ.

ಇನ್ನೊಂದೆಡೆ ಸಾಂಪ್ರದಾಯಿಕವಾಗಿ ಕೃಷಿಯಲ್ಲಿ ಸರ್ಕಾರ ಹೇರುತ್ತಿರುವ ಬೆಳೆ ಕ್ಲಸ್ಟರ್ ಮತ್ತು ಬೆಳೆಯ ಆಯ್ಕೆಯ ಮಾನದಂಡ ಈ ಬಾರಿ ಹೇರುವುದು ಉಚಿತವಾಗಲಾರದು.

ಈಗಾಗಲೇ ಊರಿಗೆ ಮರಳಿರುವ ಕಾರ್ಮಿಕರೂ ಊರಲ್ಲೇ ಇರುವ ಅನಿವಾರ್ಯತೆ ಇರುವ ಕಾರಣ ಈ ಬಾರಿಯ ಕೃಷಿ ಹಂಗಾಮಿನ ಪ್ಲಾನಿಂಗ್, ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆಯಬೇಕಾಗಿದೆ. ಅರ್ಥಾತ್ ಕೃಷಿ ಇಲಾಖೆಯ ಮಾಮೂಲಿ ಯಾಂತ್ರಿಕ ಲೆಕ್ಕಾಚಾರ ಸಲ್ಲದು.

ಸಾಂಪ್ರದಾಯಿಕವಾಗಿ ಮಾರುಕಟ್ಟೆ ನಂಬಿಕೊಂಡು ಬೆಳೆಯುವ ಹಲವಾರು ಬೆಳೆಗಳು ಈ ಬಾರಿ ಎಷ್ಟರಮಟ್ಟಿಗೆ ರೈತರ ಕೈ ಹಿಡಿಯಬಹುದು ಎಂಬುದರ ಲೆಕ್ಕವೇ ನಡೆದಿಲ್ಲ. ಉದಾ: ಮೆಕ್ಕೆಜೋಳ ಕರ್ನಾಟಕದ ಆಹಾರ ಬೆಳೆಗಳ ಜಾಗವನ್ನು ಆಕ್ರಮಿಸಿದೆ. ಆದರೆ ಇದರ ಮಾರುಕಟ್ಟೆ ಬಿದ್ದಿರುವ ಕಾರಣ ಗೊತ್ತು. ಕುಕ್ಕುಟೋದ್ಯಮ ತತ್ತರಿಸಿದೆ. ಇದೇ ರೀತಿಯಲ್ಲಿ ಉಳಿದ ಬೆಳೆಗಳ ಗತಿ. ಅಕ್ಟೋಬರ್ ವೇಳೆಗೆ ಏನಾಗಬಹುದು ಎಂಬ ಊಹೆಯ ಲೆಕ್ಕವೂ ಇಲ್ಲ.

ಈಗಾಗಲೇ ಕಂಗೆಟ್ಟಿರುವ ನಗರದ ಗ್ರಾಹಕರು ತಮ್ಮಲ್ಲಿರುವ ಸೀಮಿತ ಆದಾಯ ಮತ್ತು ಉಳಿಕೆಯ ಮೇಲೆ ತೀವ್ರ ನಿಗಾ ಇಟ್ಟೇ ಖರ್ಚು ಮಾಡುವವರು. ಆದ್ದರಿಂದ ಆಹಾರ ವಸ್ತುಗಳ ಬಳಕೆ ಪ್ರಮಾಣದಲ್ಲೂ ಕಡಿತವಾಗುವ ಸಂಭವ ಇದೆ. ಅಂದರೆ ಒಂದು ಕೆಜಿ ಬೇಳೆಯ ಖರ್ಚನ್ನು ಮುಕ್ಕಾಲು ಕೇಜಿಗಿಳಿಸುವ ಸಂಗತಿ.

ಇಂಥಾ ಗ್ರಾಹಕ ಹಿಂಜರಿತದ ಸಂಭಾವ್ಯತೆ ನಿಜವಾದರೆ ಸರ್ಕಾರ ಮಧ್ಯಪ್ರವೇಶಿಸುವುದು ಕನಸಿನ ಮಾತು. ಯಾಕೆಂದರೆ ಈ ಬಾರಿ ಮೋದಿ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಇಟ್ಟ ಅನುದಾನ ಕೇವಲ 2000 ಕೋಟಿ. ಇದು ಪುಡಿಗಾಸು. ಕರ್ನಾಟಕದಲ್ಲೇ ಇದಕ್ಕಿಂತ ಅಧಿಕ ಗಾತ್ರದ ಮಧ್ಯಪ್ರವೇಶದ ಅವಶ್ಯಕತೆ ಈ ಹಿಂದೆಯೂ ಬಿದ್ದಿತ್ತು.

ಇನ್ನೊಂದೆಡೆ ಬೇಳೆ ಕಾಳಿಗೆ ಉತ್ತೇಜನ ನೀಡಲು ಪಡಿತರದಲ್ಲಿ ಬೇಳೆ ಕಾಳು ಹಂಚುವ ಪ್ರಸ್ತಾಪವನ್ನು ಮೋದಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಅದಕ್ಕೆ ಮೀಸಲಿಟ್ಟಿರುವ ಕೇವಲ 800 ಕೋಟಿ ಮೊತ್ತದಿಂದಲೇ ಗೊತ್ತಾಗುತ್ತದೆ.

ಅಂದರೆ ಸಾಂಪ್ರದಾಯಿಕವಾಗಿ ಬೆಳೆದಂತೆ ಈ ಬಾರಿಯೂ ಬೆಳೆಯಿರಿ ಎಂದು ಸರ್ಕಾರ ಹೇಳಿದರೆ ಹಂಗಾಮಿನ ಅಂತ್ಯಕ್ಕೆ ಸರ್ಕಾರ ಕೈ ಎತ್ತುವುದು ಖಂಡಿತ. ದಾಕ್ಷಿಣ್ಯಕ್ಕೆ ಬಸಿರಾಗಿ ಹೆರಲು ಜಾಗವಿಲ್ಲ ಎಂಬ ಗಾದೆ ರೈತರ ಪಾಲಿಗೆ ನಿಜವಾಗುವ ಸಾಧ್ಯತೆ ಇದೆ.

ರೈತರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಬೆಳೆ ಆಯ್ಕೆಯನ್ನೂ ಮಾಡಬೇಕಿದೆ.

ಇನ್ನೊಂದೆಡೆ ಗ್ರಾಮಭಾರತದ ಭೂರಹಿತ ಕಾರ್ಮಿಕರ ಸ್ಥಿತಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ. ಸ್ಟ್ರಾಟೆಜಿಕ್ ಆಗಿ ವಲಸೆ ಹೋಗಿ ಹೇಗೋ ಹೊಟ್ಟೆ ಹೊರೆಯುತ್ತಿದ್ದ ಈ ಕಾರ್ಮಿಕರನ್ನು ಊರಲ್ಲಿ ಉಳಿಸಿಕೊಳ್ಳಲೆಂದೇ ಜಾರಿಗೆ ಬಂದ ಉದ್ಯೋಗ ಖಾತರಿಯಲ್ಲಿ ತಿಂಗಳಾದರೂ ಕೂಲಿ ಬಾರದ ಅಧ್ವಾನಕ್ಕೆ ಈ ಕಾರ್ಮಿಕರೂ ಅತ್ತ ಸುಳಿಯುತ್ತಿಲ್ಲ.

ಸ್ಥಳೀಯ ಉದಾಸೀನ ಮತ್ತು ಭ್ರಷ್ಟಾಚಾರದ ಪ್ರಮಾಣವೂ ಇದರ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಆದರೆ ಈ ಬಾರಿಯ ಸನ್ನಿವೇಶ ಎಂಥಾ ಚಾರಿತ್ರಿಕವಾದದ್ದು ಎಂದರೆ ಸರಕಾರ ಕೊಂಚ ಉಡಾಫೆ ಮಾಡಿದರೂ ಇದು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ತಿರುಗಾ ಮುರುಗಾ ಮಾಡುವ ಸಾಧ್ಯತೆ ಇದೆ.

ಕೃಷಿ ಕಾರ್ಯದೊಂದಿಗೆ ಇದನ್ನು ತಕ್ಷಣವೇ ಸಂಯೋಜಿಸಿ ಈಗಿರುವ ಕುಟುಂಬದ ಕೂಲಿ ದಿನಗಳನ್ನು 150ಕ್ಕೆ ಏರಿಸಬೇಕು. ಯಾಕೆಂದರೆ ಮರಳಿ ಬಂದಿರುವ ಕುಟುಂಬ ಸದಸ್ಯರನ್ನೂ ಪರಿಗಣಿಸಿದರೆ ಒಂದು ಕುಟುಂಬ ಎರಡೇ ತಿಂಗಳೊಳಗೆ ಈ ಕೋಟಾ ಮುಗಿಸಬಹುದು. ಮುಂದಿನ ಮಾರ್ಚ್ ಅಂತ್ಯದವರೆಗೂ ಈ ಆರ್ಥಿಕ ವರ್ಷ ಜಾರಿಯಲ್ಲಿರುತ್ತದೆ ಅಲ್ಲವೇ? ಈ ಸಂಕಷ್ಟ ದೀಪಾವಳಿವರೆಗೂ ಮುಂದುವರಿದರೆ ಆಷಾಢದಲ್ಲೇ ಹುಲ್ಲು ತಿನ್ನಬೇಕಾದೀತು.

ಈಗ ತೋಟಗಾರಿಕಾ ಬೆಳೆಗಳಿಗೆ ಮಾತ್ರ ಉದ್ಯೋಗ ಖಾತರಿಯ ವಿಸ್ತರಣೆ ಇದೆ. ಸೀಜನಲ್ ಬೆಳೆ ಬೆಳೆಯುವ ಅಂದರೆ ನಮ್ಮ ಬಹುಪಾಲು ಮಳೆ ಆಶ್ರಿತ ಆಹಾರ/ ಧಾನ್ಯ, ಕಾಳು ಬೆಳೆಯುವ ರೈತರು ಈ ಅನುಕೂಲದಿಂದ ಹೊರಗಿದ್ದಾರೆ. ಕೂಲಿ ಕೊಡುವ ಕಷ್ಟವೂ ಇವರಿಗೇ ಜಾಸ್ತಿ. ಉದ್ಯೋಗ ಖಾತರಿಯ ಮೂಲಕ ಹೊಲ ಗದ್ದೆಗಳ ಕೃಷಿ ಕೆಲಸ ಮಾಡಿಸುವ ಅವಕಾಶ ಸಿಕ್ಕರೆ ಕಾರ್ಮಿಕರಿಗೂ ಒಳಿತು; ರೈತರೂ ಬಚಾವಾಗುತ್ತಾರೆ.

ಈ ಬಾರಿ ಶಾಶ್ವತ ಆಸ್ತಿ ನಿರ್ಮಾಣ ಎನ್ನುವ ನೆಪದಲ್ಲಿ ಕಟ್ಟಡ ಕಟ್ಟಿಸುವ, ಬಾಕ್ಸ್ ಚರಂಡಿ ಮಾಡುತ್ತಾ ಕಾಸು ಮಾಡುವ ಗುತ್ತಿಗೆದಾರರ ಉದ್ಯೋಗ ಖಾತರಿಗೆ ಇದರಿಂದ ಕಲ್ಲು ಬೀಳುತ್ತದೆ ಅನ್ನುವುದು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ.

ಅಂದಾಜು ಐದು ಸಾವಿರ ಕೋಟಿಯಷ್ಟು ಈ ಉದ್ದೇಶಕ್ಕೆ ಸರ್ಕಾರ ನಿಗದಿ ಪಡಿಸಿದರೆ ತಳಮಟ್ಟದ ಆರ್ಥಿಕ ಬುನಾದಿಯ ಚೇತರಿಕೆಗೆ ಮೊದಲ ಹೆಜ್ಜೆ ಇಟ್ಟಂತೆ.

ರೈತರು ಬೆಳೆಯುವ ಉತ್ಪನ್ನದ ಮಾರಾಟದ ಬಗ್ಗೆ ಸದಾ ನಿರ್ಲಕ್ಷ್ಯ ಮಾಡುವ ಸರಕಾರ ಈ ಬಾರಿ ಕೈ ಬಿಗಿ ಮಾಡಿ ಕೂತಿರುವ ನಗರ/ಸಣ್ಣ ಪಟ್ಟಣಗಳ ಗ್ರಾಹಕರ ವರ್ತನೆಯನ್ನು ಗಮನಿಸಬೇಕು. ಈ ಅರ್ಥದಲ್ಲಿ ಒಂದು ಕಾರ್ಯಸಾಧು ಯೋಜನೆಯೆಂದರೆ ಸಣ್ಣ ಪಟ್ಟಣಗಳಲ್ಲಿರುವ ತಳ್ಳು ಗಾಡಿ ಮಾರಾಟಗಾರರೇ ಅತ್ಯುತ್ತಮ ಸಪ್ಲೈ ಚೈನ್ ಎಂದು ಗುರುತಿಸಬೇಕು. ಇವರಿಗೆ ಈಗಾಗಲೇ ದಿನವಹಿ ಬೇಕಾದ ಬಂಡವಾಳ ಒದಗಿಸುವ ಯೋಜನೆಯೊಂದಿದೆ, ಆದರೆ ಅದು ಕುಂಟುತ್ತಿದೆ. ನಮ್ಮ ಮುನ್ಸಿಪಾಲಿಟಿಗಳಲ್ಲಿರುವ ಫಂಡ್‍ನಲ್ಲಿ ಕೇವಲ 5 ಲಕ್ಷ ರೂಪಾಯಿಯನ್ನು ಆವರ್ತ ಸಾಲನಿಧಿಯಾಗಿ ಬಳಸಿದರೂ ಈ ಮಾರಾಟಗಾರರು ರೈತರಿಂದಲೇ ನೇರ ಖರೀದಿಸುವ ಶಕ್ತಿ ಹೊಂದುತ್ತಾರೆ. (ದಿನಕ್ಕೆ 3-5 ಸಾವಿರ ಸಾಲ ಇವರಿಗೆ ಬೇಕಾದಷ್ಟು) ರೈತ- ಮಾರಾಟಗಾರರ ಮುಖಾಮುಖಿ ವೇದಿಕೆ ಸೃಷ್ಟಿಸುವುದೂ ಕಷ್ಟವಲ್ಲ.

ಇವೆಲ್ಲಾ ಸಮಸ್ಯೆಗೆ ಪೂರ್ತಿ ಪರಿಹಾರವೆಂದಲ್ಲ. ಸುಮಾರು 40%ದಷ್ಟು ರೈತ ಉತ್ಪನ್ನದ ಮಾರಾಟ ಸುಲಲಿತವಾಗಬಹುದು.

ಬೆಂಗಳೂರು ಒಂದು ಸಂಪೂರ್ಣ ರೋಗಗ್ರಸ್ತ ಗ್ರಾಹಕ ಸಂಸ್ಕೃತಿ ಮತ್ತು ವಿತರಣಾ ಜಾಲ ಹೊಂದಿದ ನಗರವೆಂದೇ ನನ್ನ ಅನಿಸಿಕೆ. ಇಲ್ಲಿಗೆ ರೈತನೊಬ್ಬ ನುಗ್ಗಲು ಸಾಧ್ಯವೇ? ಸರ್ಕಾರದ ಏಜೆನ್ಸಿಗಳು ಈ ನಗರದಲ್ಲಿ ಶೇ.2ರ ಪಾಲನ್ನೂ ಹೊಂದಿಲ್ಲ. ಈ ದೃಷ್ಟಿಯಲ್ಲಿ ಸರಕಾರ ಖರೀದಿ- ಪೂರೈಕೆ ಜಾಲದ ಸಾಧ್ಯತೆ ಬಗ್ಗೆ ರ್‍ಯಾಪಿಡ್ ಅಧ್ಯಯನವೊಂದನ್ನು ಮಾಡುವುದೊಂದೇ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...