Homeಮುಖಪುಟದೇಶ ಆರ್ಥಿಕ ಬಿಕ್ಕಟ್ಟಿಗೆ ಹೋಗುತ್ತಿದೆ ಎನ್ನಲು ಆಧಾರಗಳು ಬೇಕೆ?

ದೇಶ ಆರ್ಥಿಕ ಬಿಕ್ಕಟ್ಟಿಗೆ ಹೋಗುತ್ತಿದೆ ಎನ್ನಲು ಆಧಾರಗಳು ಬೇಕೆ?

- Advertisement -
- Advertisement -

ಬಹುಶಃ ಕೇಂದ್ರ ಸರ್ಕಾರದ ಸಮರ್ಥಕರೂ ಸಹ ದೇಶದ ಆರ್ಥಿಕತೆಯ ಸ್ಥಿತಿಗತಿ ಅದ್ಭುತವಾಗಿದೆ ಎಂದು ಹೇಳುತ್ತಿಲ್ಲ. ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣಕ್ಕೆ ನಿರುದ್ಯೋಗದ ದರ ಏರಿದೆ ಎಂಬ ಸುದ್ದಿ ಚುನಾವಣೆಗೆ ಮುಂಚೆಯೇ ಓಡಾಡುತ್ತಿತ್ತು. ಆದರೆ, ಅಧಿಕೃತವಾಗಿ ಸರ್ಕಾರದ ಅಂಕಿಅಂಶಗಳೇ ಅದನ್ನು ಖಾತರಿ ಪಡಿಸಿದ್ದು ಚುನಾವಣೆಯ ನಂತರ. ಕಳೆದ 20 ದಿನದಲ್ಲಿ ಆರ್ಥಿಕತೆಯ ದುಸ್ಥಿತಿಯ ಕುರಿತು ಹಲವು ಪತ್ರಿಕಾವರದಿಗಳು ಬರತೊಡಗಿದವು. ಅದರಲ್ಲೂ ಕಾಫಿ ಡೇ ಮಾಲೀಕ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡ ನಂತರವಂತೂ ಹಲವರು ಈ ಬಗ್ಗೆ ಮಾತನಾಡಲಾರಂಭಿಸಿದರು.

ಇಂದಿನ ರಾಜಕೀಯ ವಾತಾವರಣದಲ್ಲಿ ಅಭಿಪ್ರಾಯಗಳು ಒಂದೋ ಈ ಕಡೆಗೆ ಅಥವಾ ಆ ಕಡೆಗೆ ಎಂಬಂತಾಗಿದೆ. ಪ್ರತಿಯೊಬ್ಬರ ಅಭಿಪ್ರಾಯವನ್ನು ರಾಜಕೀಯ ಒಲವಿನ ಕನ್ನಡಕದಿಂದಲೇ ನೋಡಲಾಗುತ್ತದೆ. ಹೀಗಾಗಿ ದೇಶದ ಆರ್ಥಿಕತೆಯ ಕುರಿತು ನಾವು ಚರ್ಚಿಸಬೇಕೆಂದರೆ ವಸ್ತುಸ್ಥಿತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೋಡುವ ಅಗತ್ಯವಿದೆ. ಉದ್ದಿಮೆಪತಿಗಳ, ಆರ್ಥಿಕತಜ್ಞರ ಅನಿಸಿಕೆಗಳೂ ಮುಖ್ಯವೇ. ಆದರೆ ಅದಕ್ಕಿಂತಲೂ ಜನಸಾಮಾನ್ಯರ ಬದುಕಿನ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತಿದೆ ಎಂಬುದು ಇನ್ನೂ ಮುಖ್ಯ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಅಧ್ಯಯನ ಮಾಡಿರುವ ಪರಿಣಿತರಿಂದ ಸರಣಿ ಲೇಖನಗಳನ್ನು ‘ನ್ಯಾಯಪಥ’ ಪ್ರಕಟಿಸಲಿದೆ. ಆ ಸರಣಿಯಲ್ಲಿ ಮೊದಲ ಲೇಖನವನ್ನು ಡಾ.ಬಿ.ಸಿ.ಬಸವರಾಜು ಅವರು ಬರೆದಿದ್ದಾರೆ. ಉದ್ದಿಮೆ ಕ್ಷೇತ್ರ ಮತ್ತು ಒಟ್ಟಾರೆ ಆರ್ಥಿಕತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳನ್ನು ಬಹಳ ಸರಳವಾಗಿ ಅವರು ಮುಂದಿಟ್ಟಿದ್ದಾರೆ. ಓದುಗರೂ ಸಹ ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಕೋರುತ್ತೇವೆ.

“ಈಗ ದೇಶದಲ್ಲಿ ಬಹುತೇಕ ಸರಕುಗಳಿಗೆ ಬೇಡಿಕೆಯೇ ಇಲ್ಲ, ಯಾವ ವಲಯಕ್ಕೂ ಬಂಡವಾಳ ಹರಿದು ಬರ್ತಾ ಇಲ್ಲ. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಅನ್ನುವುದೇನು ಸ್ವರ್ಗದಿಂದ ಧುಮುಕಿಬಿಡುತ್ತಾ?” ಅಂತ ಬಜಾಜ್ ಕಂಪನಿಯ ಮುಖ್ಯಸ್ಥ ಎಂಬತ್ತೊಂದು ವರ್ಷದ ರಾಹುಲ್ ಬಜಾಜ್ ಮೊನ್ನೆ ಕೇಳಿದ್ದಾರೆ.

ರಾಹುಲ್ ಬಜಾಜ್

ಹೌದು, ಯಾವುದೇ ದೇಶದ ಆರ್ಥಿಕ ಅಭಿವೃದ್ಧಿ ಆಗಬೇಕೆಂದರೆ ಮುಖ್ಯವಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರಬೇಕು. ಆ ಹೆಚ್ಚಿನ ಬೇಡಿಕೆ ಪೂರೈಸಲು ವಿವಿಧ ವಲಯದ ಕೈಗಾರಿಕೆಗಳು ಮತ್ತು ಕಂಪನಿಗಳು ಹೆಚ್ಚೆಚ್ಚು ಉತ್ಪಾದನೆ ಮಾಡುತ್ತವೆ. ಹಾಗೆಯೇ ಇಲ್ಲಿಯ ಬೇಡಿಕೆಯನ್ನು ಕಂಡು ಇನ್ನೂ ಹೆಚ್ಚಿನ ಬಂಡವಾಳ ಹೂಡಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಮುಂದೆ ಬರುತ್ತವೆ. ಹೀಗೆ ಒಂದಕ್ಕೊಂದು ಪೂರಕವಾದ ಬೆಳವಣಿಗೆ ಒಟ್ಟಾರೆ ದೇಶದ ಉತ್ತಮ ಆರ್ಥಿಕ ಅಭಿವೃದ್ಧಿಯನ್ನು ಸಾಧ್ಯವಾಗಿಸುತ್ತದೆ.

ಆದರೆ, ರಾಹುಲ್ ಬಜಾಜ್ ಮೇಲೆ ಹೇಳಿರುವಂತೆ ಈಗ ಭಾರತದ ಆರ್ಥಿಕ ಪರಿಸ್ಥಿತಿ ಬಹಳ ಕಳವಳಕಾರಿಯಾಗಿದ್ದು, ಈ ಪರಿಸ್ಥಿತಿಯಿಂದ ಚೇತರಿಕೆ ಸದ್ಯದಲ್ಲಿ ಸುಲಭವಿಲ್ಲ ಎಂಬುದು ಅನೇಕ ಪರಿಣತರ ಅಭಿಪ್ರಾಯವಾಗಿದೆ.

ಈಗ ದೇಶದಲ್ಲಿ ಯಾವುದೇ ರೀತಿಯ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂಬುದು ಮತ್ತು ಅದರಿಂದಾಗಿ ಹಲವು ಅಭಿವೃದ್ಧಿ ವಲಯಗಳ ಬೆಳವಣಿಗೆ ಆತಂಕಕಾರಿ ಅನಿಸುವಷ್ಟು ಕಡಿಮೆಯಾಗಿದೆ ಎನ್ನುವುದು ಈ ಕೆಳಗಿನ ಅಂಕಿಅಂಶಗಳನ್ನು ನೋಡಿದರೆ ಗೊತ್ತಾಗುತ್ತದೆ.

1. ಗ್ರಾಹಕ ಸರಕುಗಳ ಮಾರಾಟ ಗಣನೀಯವಾಗಿ ಕಡಿಮೆಯಾಗಿದ್ದು ಇದರಿಂದಾಗಿ ಗ್ರಾಹಕ ಸರಕು ತಯಾರಿಕಾ ಕಂಪನಿಗಳ ಬೆಳವಣಿಗೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಬೆಳವಣಿಗೆ ದರ ಕಳೆದ ವರ್ಷದ ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ 11% ಇದ್ದಿದ್ದು ಈಗ 2019 ರ ಮೊದಲ ತ್ರೈಮಾಸಿಕದಲ್ಲಿ 7% ಗೆ ಇಳಿದಿದೆ. ಹಾಗೆಯೇ ದೊಡ್ಡ ಕಂಪನಿಗಳಾದ ಐಟಿಸಿ ಮತ್ತು ಗೋದ್ರೆಜ್ ಕೂಡ ಈ ಬಾರಿ ಸಿಂಗಲ್ ಡಿಜಿಟ್ ಬೆಳವಣಿಗೆಯನ್ನಷ್ಟೇ ಸಾಧಿಸಿವೆ.

2. ಅದೇರೀತಿ ಅತೀ ಪ್ರಮುಖ ಆಟೋಮೊಬೈಲ್ ವಲಯ ಕೂಡ ಬೆಳವಣಿಗೆಯಲ್ಲಿ ಭಾರೀ ಕುಸಿತ ಕಂಡಿದೆ. ಐದು ಲಕ್ಷ ಪ್ಯಾಸೆಂಜರ್ ಗಾಡಿಗಳು ಮತ್ತು ಮೂವತ್ತು ಲಕ್ಷ ದ್ವಿಚಕ್ರ ವಾಹನಗಳು ( ಹಾಗೂ ಸಾವಿರಾರು ಟ್ರ್ಯಾಕ್ಟರುಗಳು, ಹೆವಿ ವಾಹನ ಇತ್ಯಾದಿ) ಮಾರಾಟವಾಗದೆ ಉಳಿದಿವೆ. ಮಾರುತಿ ಕಂಪನಿಯ ವ್ಯಾಪಾರವೊಂದೇ 30% ರಷ್ಟು ಕುಸಿತ ಕಂಡಿದೆ.

ಕಳೆದ ಜುಲೈನಲ್ಲಿ 11 ರಲ್ಲಿ 9 ಆಟೋಮೊಬೈಲ್ ಕಂಪನಿಗಳು ಮಾರಾಟದಲ್ಲಿ ಡಬಲ್ ಡಿಜಿಟ್ ಇಳಿಕೆ ಪ್ರಮಾಣ ದಾಖಲಿಸಿವೆ.
ಆಟೋಮೊಬೈಲ್ ಕಂಪನಿಗಳು ಈ ದೇಶದಲ್ಲಿ 37 ಮಿಲಿಯನ್‍ನಷ್ಟು ಜನರಿಗೆ ಉದ್ಯೋಗ ಒದಗಿಸಿದ್ದು ದೇಶದ ಒಟ್ಟು ಆದಾಯಕ್ಕೆ ಶೇ 7ರಷ್ಟು ಕೊಡುಗೆ ಸಲ್ಲಿಸುತ್ತಿವೆ.

ಆದರೆ, ಈಗಿನ ಪರಿಸ್ಥಿತಿಯಲ್ಲಿ ಈ ಕಂಪನಿಗಳು ಜಿಡಿಪಿಗೆ ಕೊಡುಗೆ ಕೊಡುವುದಿರಲಿ, ತಮ್ಮಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವುದೂ ಕಷ್ಟವಾಗಲಿದೆ. ಇದರಿಂದಾಗಿ ನಿರುದ್ಯೋಗ ಹೆಚ್ಚುವುದರ ಜೊತೆಗೆ ಜನರ ಕೊಳ್ಳುವ ಶಕ್ತಿ ಮತ್ತಷ್ಟು ಕಡಿಮೆಯಾಗಿ ಬೇಡಿಕೆ ಮತ್ತಷ್ಟು ಕುಸಿದು ಆರ್ಥಿಕ ಚೇತರಿಕೆ ಮತ್ತಷ್ಟು ಕಠಿಣವಾಗಲಿದೆ.

ಈಗಾಗಲೇ ಟಾಟಾ ಮೋಟಾರ್ಸ್‍ನವರು ಕುಸಿದ ಬೇಡಿಕೆಯಿಂದಾಗಿ ನಾಲ್ಕೈದು ಬಾರಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ತಲಾ ಹದಿನೈದು ದಿನಗಳಷ್ಟೇ ಉತ್ಪಾದನಾ ಕೆಲಸ ಮಾಡಿದೆ.

3. ಆಯಿಲ್ ಮತ್ತು ಗ್ಯಾಸ್, ಕಲ್ಲಿದ್ದಲು, ಸ್ಟೀಲ್, ಶಕ್ತಿ, ಸಿಮೆಂಟ್ ಮತ್ತು ಫರ್ಟಿಲೈಸರ್‍ನಂತಹ ಎಂಟು ಕೋರ್ ಇಂಡಸ್ಟ್ರಿಗಳು 2019 ರ ಜೂನ್ ತಿಂಗಳಿನಲ್ಲಿ ಕೇವಲ 0.2% ನಷ್ಟು ಮಾತ್ರ ಬೆಳವಣಿಗೆ ದಾಖಲಿಸಿವೆ. ಕಳೆದ ವರ್ಷದ ಜೂನ್‍ನಲ್ಲಿ ಇವುಗಳ ಬೆಳವಣಿಗೆ ದರ 8% ನಷ್ಟಿತ್ತು.

ದೇಶದ ಒಟ್ಟಾರೆ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (Index of industrial production)ನಲ್ಲಿ ಎಂಟು ಪ್ರಮುಖ ಇಂಡಸ್ಟ್ರಿಗಳ ವೇಯ್ಟೇಜ್ 40.27% ಇದೆ. ಇಷ್ಟು ವೇಯ್ಟೇಜ್ ಇರುವಂತಹ ಈ ಇಂಡಸ್ಟ್ರಿಗಳು ಒಟ್ಟಿಗೆ ಕೇವಲ 0.2% ಬೆಳವಣಿಗೆ ತೋರಿಸಿರುವುದು ಜೂನ್ ತಿಂಗಳಿನಲ್ಲಿ ಇಡೀ ಕೈಗಾರಿಕಾ ವಲಯದ ಉತ್ಪಾದನಯೇ ಅತಿ ಕಡಿಮೆಯಿರುವುದನ್ನು ಬಿಂಬಿಸುತ್ತಿದೆ.

ಹೀಗೆ ಅತ್ಯಂತ ಪ್ರಮುಖವಾದ ಗ್ರಾಹಕ ಸರಕು ಉತ್ಪಾದನಾ ವಲಯ, ಆಟೋಮೊಬೈಲ್ ವಲಯ ಮತ್ತು ಭಾರೀ ಕೈಗಾರಿಕಾ ವಲಯಗಳೆಲ್ಲದರ ಕುಂಠಿತ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಅನೇಕ ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕುವ ಇಲ್ಲವೇ ಹೊಸದಾಗಿ ಯಾರನ್ನೂ ಉದ್ಯೋಗಕ್ಕೆ ತೆಗೆದುಕೊಳ್ಳದಂತ ಕ್ರಮಗಳಿಗೆ ಕೈಹಾಕಲಿವೆ. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತಷ್ಟು ಕುಸಿಯಲಿದ್ದು ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ.

ಈಗಾಗಲೇ ದೇಶಿಯ ಉಳಿತಾಯ ಅತಿಕಡಿಮೆ ಮಟ್ಟಕ್ಕೆ ತಲುಪಿದ್ದು 2008ಕ್ಕೆ ಹೋಲಿಸಿದರೆ 7% ಪಾಯಿಂಟುಗಳಷ್ಟು ಕಡಿಮೆಯಾಗಿದೆ. ಇದರಿಂದಾಗಿ ಸಾರ್ವಜನಿಕ ಬಂಡವಾಳ ಹೂಡಿಕೆಗೆ ಸರ್ಕಾರದ ಬಳಿ ಸಂಪನ್ಮೂಲದ ಕೊರತೆ ಎದುರಾಗಲಿದೆ. ಇವತ್ತು ಭಾರತದಲ್ಲಿ ಉದ್ಯೋಗದಲ್ಲಿ ತೊಡಗಿರುವವರ ಸಂಖ್ಯೆ ಅವರ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಗಿಂತಲೂ ಜಾಸ್ತಿಯಿದೆ. ಈ ಅನುಕೂಲವಿದ್ದೂ ಕೂಡ ಒಟ್ಟಾರೆ ಸಾರ್ವಜನಿಕ ದೇಶೀಯ ಉಳಿತಾಯ ಕಡಿಮೆಯಿರುವುದು ದೇಶದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿರುವುದನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿವೆ.

ಒಂದು ಕಡೆ ದೇಶೀಯ ಉಳಿತಾಯ ಕಡಿಮೆಯಾಗಿದೆ. ಇನ್ನೊಂದೆಡೆ ಮೊದಲ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹ ಕೇವಲ 1.4% ರಷ್ಟು ಮಾತ್ರ ಬೆಳವಣಿಗೆಯಾಗಿದೆ. ಇದರಿಂದಾಗಿ ಇಡೀ ವರ್ಷದ ತೆರಿಗೆ ಸಂಗ್ರಹದ ಗುರಿ ಮುಟ್ಟಲು ಮುಂಬರುವ ಪ್ರತಿ ತ್ರಾಸಿಕದಲ್ಲಿ 23.3% ರಷ್ಟು ತೆರಿಗೆ ಸಂಗ್ರಹದ ಬೆಳವಣಿಗೆ ಸಾಧಿಸಬೇಕಿದ್ದು ಇದು ನಿಜಕ್ಕೂ ಕಷ್ಟಸಾಧ್ಯವಾದದ್ದಾಗಿದೆ.

ಜೊತೆಗೆ ಭಾರತದ ರಫ್ತಿನ ಸಾಮಥ್ರ್ಯ ಕೂಡ ಕಡಿಮೆಯಾಗಿದ್ದು ಇದು ವಿದೇಶಿ ವಿನಿಮಯದ ಮೇಲೆ ಬೀರುವ ನಕಾರಾತ್ಮಕ ಪರಿಣಾಮದಿಂದಾಗಿ ಕೈಗಾರೀಕರಣಕ್ಕೆ ಬೇಕಾಗುವ ಭಾರೀ ಬಂಡವಾಳ ಸರಕುಗಳನ್ನು ಹೊರಗಿನಿಂದ ತರಿಸಿಕೊಳ್ಳಲು ಕಷ್ಟವಾಗಿದ್ದು, ಇದು ಈಗಾಗಲೇ ನರಳುತ್ತಿರುವ ಕೈಗಾರಿಕಾ ವಲಯದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರಲಿದೆ.

ಒಟ್ಟಾರೆಯಾಗಿ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಪ್ರಸಕ್ತ ಸ್ಥಿತಿ ಮತ್ತು ದಿಕ್ಕನ್ನು ತೋರುವ ಯಾವುದೇ ದಿಕ್ಸೂಚಿಗಳನ್ನು (ಈ ಲೇಖನದಲ್ಲಿ ಕೆಲ ಪ್ರಮುಖ ದಿಕ್ಸೂಚಿಗಳನ್ನು ಮಾತ್ರ ಪರಿಗಣಿಸಲಾಗಿದೆ) ನೋಡಿದರೂ ದೇಶದ ಆರ್ಥಿಕತೆ ನಿರಾಶಾದಾಯಕವಾಗಿರುವುದನ್ನು ಬಿಂಬಿಸುತ್ತಿವೆ.

ಹೊಸ ಸರ್ಕಾರ ಬಂದ ಐವತ್ತು ದಿನಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿರುವವರು 12 ಲಕ್ಷ ಕೋಟಿಯಷ್ಟು ಬಂಡವಾಳ ಕಳೆದುಕೊಂಡಿರುವುದು ಕೂಡ ಆರ್ಥಿಕ ಹಿಂಜರಿಕೆಯನ್ನು ತೋರಿಸುತ್ತಿದೆ.

ಮೋಹನ್ ದಾಸ್ ಪೈ, ಕಿರಣ್ ಮುಜುಮ್‍ದಾರ್ ಷಾರಂತವರೂ ಕೂಡ ಕೇಂದ್ರದ ತೆರಿಗೆ ನೀತಿಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಮಾತಾಡತೊಡಗಿರುವುದು ಆರ್ಥಿಕ ಹಿನ್ನಡೆಯನ್ನು ಎತ್ತಿ ತೋರಿಸುತ್ತಿದೆ.

ಒಟ್ಟಿನಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಕೈಹಾಕದಿದ್ದರೆ ರಾಹುಲ್ ಬಜಾಜ್ ಹೇಳಿದಂತೆ ಅಭಿವೃದ್ಧಿ ಸ್ವರ್ಗದಿಂದ ಉದುರುತ್ತದೆಂದು ಕಾಯುತ್ತಾ ಕೂರಬೇಕಾಗುತ್ತದೆ ಅಷ್ಟೆ. ಆದರೆ ಆ ಅವಧಿಯಲ್ಲಿ ಕೋಟ್ಯಂತರ ಜನರ ಬದುಕು ಮೂರಾಬಟ್ಟೆಯಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೇಶದಲ್ಲಿ ಆರ್ಥಿಕ ಸ್ಥಿತಿ ಕಷ್ಟದಲ್ಲಿ ಇದೆ. ಔದ್ಯೋಗಿಕ ಕ್ಷೇತ್ರದಲ್ಲಿ ಉತ್ಪಾದನೆ ಇಳಿದಿದೆ. ಕಾರಣ ಬೇಡಿಕೆ ಕಡಿಮೆ ಆಗಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ತೆರಿಗೆ ಸಂಗ್ರಹ ಕೂಡಾ ಕಡಿಮೆ ಆಗಿದೆ. ಇದಕ್ಕೆ ಕಾರಣ ಕಾರು, ಸ್ಕೂಟರ್, ಟಿವಿ ಫ್ರಿಡ್ಜ್ ಮುಂತಾದ ಕನ್ಸೂಮರ್ ಗೂಡ್ಸ್ ಗಳಿಗೆ ಬೇಡಿಕೆ ಕುಸಿದಿರುವುದು.
    ನಮ್ಮ ದೇಶದ ಆರ್ಥಿಕ ನೀತಿಗಳನ್ನು ಸರಿಪಡಿಸಲು ಇದು ಒಳ್ಳೆಯ ಬೆಳವಣಿಗೆ.
    ಕನ್ಸೂಮರ್ ಗೂಡ್ಸ್ ಗಳ ಉತ್ಪಾದನೆ ಪ್ರಧಾನವಾಗಿ ರಫ್ತು ಮಾಡುವ ಉದ್ದೇಶ ಕ್ಕೋಸ್ಕರ ಉಳಿಸಿಕೊಳ್ಳಬಹುದು. ಇದೀಗ ದೀರ್ಘಕಾಲಿಕ ಯೋಜನೆಗಳೆಡೆ ಬಂಡವಾಳ ಹೂಡಿಕೆ ಅಗತ್ಯ ಇದೆ. ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಗಮನ ನೀಡಬೇಕು. ಅಪಾರ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ನಗರೀಕರಣ ಕಡಿಮೆ ಆಗುತ್ತದೆ. ಹಳ್ಳಿಗಳು ಬದುಕುವಂತೆ ಮಾಡುವ ಅಗತ್ಯ ಇದೆ. ಅದೇ ಅಭಿವೃದ್ಧಿ.

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...