Homeಕರ್ನಾಟಕನೈಸರ್ಗಿಕ ಕೃಷಿ ಸಂವಾದ: ಕೃಷಿಯ ಅಸ್ಮಿತೆ ಉಳಿಸಬೇಕಾಗಿದೆ ಬದಲಿಗೆ ಕೃಷಿ ವಿ.ವಿಗಳದಲ್ಲ...

ನೈಸರ್ಗಿಕ ಕೃಷಿ ಸಂವಾದ: ಕೃಷಿಯ ಅಸ್ಮಿತೆ ಉಳಿಸಬೇಕಾಗಿದೆ ಬದಲಿಗೆ ಕೃಷಿ ವಿ.ವಿಗಳದಲ್ಲ…

- Advertisement -
- Advertisement -

ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು “ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ” ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕ ವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. ಈ ನಡುವೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಅನೇಕ ಕೃಷಿ ಪಂಡಿತರು, ವಿಜ್ಞಾನಿಗಳು, ರೈತಪರ ಚಿಂತಕರು ಕೃಷಿ ವಿಶ್ಲೇಷಕರು ಒಳಗೊಂಡಂತೆ ರಾಷ್ಟ್ರವ್ಯಾಪಿ ಚರ್ಚೆ ನಡೆದಿದೆ. ಕಳೆದ ವಾರ ರಮೇಶ್ ಮುಳಬಾಗಿಲುರವರು ಬರೆದ ‘ನೈಸರ್ಗಿಕ ಕೃಷಿಯೊಳಗಿನ ಬಲಪಂಥೀಯ ವಾದ’ ಲೇಖನಕ್ಕೆ ಚುಕ್ಕು ನಂಜುಡಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.

‘ಶೂನ್ಯ ಬಂಡವಾಳ’- ನೈಸರ್ಗಿಕ ಕೃಷಿಯನ್ನು ವಿಮರ್ಶೆ ಮಾಡುತ್ತಿರುವ ಅನೇಕ ಕೃಷಿ ತಜ್ಞರಿಗೆ ನೈಸರ್ಗಿಕ ಕೃಷಿ ಬಗ್ಗೆ ಅನೇಕ ಅನುಮಾನಗಳು ಇದ್ದಂತಿವೆ. ಯಾವ ಬಂಡವಾಳವೂ ಹೂಡದ ಕೃಷಿ ಸಾಧ್ಯವೇ? ಈ ಪದ್ದತಿಯಿಂದ ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸಲು ಸಾಧ್ಯವೇ? ದೇಶದ ಎಲ್ಲ ಹವಾಮಾನ ವಲಯಗಳಲ್ಲಿ ಇದನ್ನು ಅಳವಡಿಸಲು ಸಾಧ್ಯವೇ. ಈ ಪದ್ಧತಿಯು ಕೃಷಿ ವಿಶ್ವ ವಿದ್ಯಾಲಯಗಳ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕೃಷಿ ಪದ್ಧತಿಯನ್ನು ಸಂಶೋಧನೆಗೆ ಒಳಪಡಿಸಿ ಪರೀಕ್ಷಿಸಬೇಕೆಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಈ ದೇಶದ ಬಹು ಸಂಖ್ಯಾತರ ಭೂಮಿ ಮತ್ತು ಬದುಕನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ನಮ್ಮ ಕೃಷಿ ವಿಶ್ವವಿದ್ಯಾಲಯಗಳಿಗೆ ಕೊಡಲಾಗಿತ್ತು. ಆದರೆ ನಮಗೆ ಎದುರಾಗಿದ್ದ ಸವಾಲುಗಳಿಗೆ ನಮ್ಮಲ್ಲೇ ಉತ್ತರ ಹುಡಕುವ ಗೋಜಿಗೆ ಹೋಗಲಿಲ್ಲ ಈ ವಿಶ್ವವಿದ್ಯಾಲಯಗಳು. ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆದ ‘ಹಸಿರು ಕ್ರಾಂತಿ’ಯನ್ನು ಪ್ರಚುರಪಡಿಸಿದ್ದಷ್ಟೇ ಇವುಗಳ ಸಾಧನೆಯಾಯಿತು.

ಹಸಿರು ಕ್ರಾಂತಿಯ ನಂತರ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು ಎನ್ನುವುದೇನೋ ಸತ್ಯ. ಎರಡನೇ ಮಹಾಯುದ್ಧದ ನಂತರ ಶಸ್ತ್ರಾಸ್ತ್ರಗಳಿಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ ಕಂಪೆನಿಗಳಿಗೆ ಮಾರುಕಟ್ಟೆ ಇಲ್ಲದಂತಾಗಿತ್ತು. ಕೃಷಿ ಸಾಧನ ಸಲಕರಣೆಗಳು- ಬೀಜ ಗೊಬ್ಬರ ಕೀಟನಾಶಕಗಳ ತಯಾರಿಕೆಯಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸಲು ಈ ಎಲ್ಲ ಕಂಪೆನಿಗಳಿಗೆ ಹಸಿರು ಕ್ರಾಂತಿಯೇ ರತ್ನಗಂಬಳಿ ಹಾಸಿಕೊಟ್ಟಿತು ಎಂಬುದೂ ಅಷ್ಟೇ ಸತ್ಯ.

ಹಸಿರು ಕ್ರಾಂತಿಗೂ ಮುಂಚೆ ಭಾರತದ ಕೃಷಿ ಬದುಕಿನ ಭಾಗವಾಗಿತ್ತು. ಸಂಸ್ಕೃತಿಯ ನೆಲೆಯಾಗಿತ್ತು. ನಿಸರ್ಗದಲ್ಲಿರುವ ವೈವಿಧ್ಯತೆಯನ್ನು ಆರಾಧಿಸಿ ನಮ್ಮ ಹಿರಿಯರು ಮಾಡುತ್ತಿದ್ದುದು ಮಿಶ್ರ ಬೆಳೆ ಪದ್ಧತಿ. ಕರ್ನಾಟಕದಲ್ಲಿ ಅಕ್ಕಡಿ ಎಂದು ಕರೆದರೆ, ಉತ್ತರ ಭಾರತದಲ್ಲಿ `ಬಾರಾ ಅನಾಜ್” (ಹನ್ನೆರಡು ದವಸ ಧಾನ್ಯ) ಎಂದು ಕರೆದರು. ಮನೆಯ ಆಹಾರ ಭದ್ರತೆಗೆ ಬೇಕಾದ ಧವಸ, ಧಾನ್ಯ, ಬೇಳೆಕಾಳುಗಳು, ಎಣ್ಣೆಬೀಜಗಳನ್ನು ಒಂದಕ್ಕೊಂದು ಹೊಂದುವಂತೆ ಬಿತ್ತಿ ಬೆಳೆಯುವ ಪದ್ಧತಿ ನಶಿಸುತ್ತ ಬಂದು ಅದರ ಜಾಗವನ್ನು ಕಾಲಕ್ರಮೇಣ ಏಕ ಬೆಳೆಯ ಪದ್ಧತಿಯು ಆವರಿಸಿಕೊಂಡಿತು. ನಮ್ಮಲ್ಲಿದ್ದ ಕೋಟ್ಯಾಂತರ ತಳಿಗಳು ಕಾಣೆಯಾದವು. ಹೆಚ್ಚು ಹೆಚ್ಚು ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರಗಳು-, ಕ್ರಿಮಿನಾಶಕಗಳನ್ನು ಮನೆ ಬಾಗಿಲಿಗೆ ತಂದುಕೊಟ್ಟರು. ಇವುಗಳನ್ನು ಸುರಿದು ಭೂಮಿ ಬಂಜರಾಯಿತು. ಎಕರೆಗಟ್ಟಲೆ ಭೂಮಿಯಲ್ಲಿ ರೈತರು ಕಬ್ಬು, ಭತ್ತ, ಹತ್ತಿ, ಅಡಿಕೆಯಂತಹ ಬೆಳೆಗಳನ್ನು ಈ ದೇಶದ ಆಹಾರ ಸ್ವಾವಲಂಬನೆಗಾಗಿ ಬೆಳೆದರು. ಮಿಕ್ಕೆಲ್ಲದಕ್ಕೂ ಮಾರುಕಟ್ಟೆಯ ಮೊರೆ ಹೋಗುವಂತಾಯಿತು. ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಯಿತು. ರೈತ ತನ್ನ ಖುದ್ದು ಆಹಾರ ಭದ್ರತೆಗೆ ಪರಾವಲಂಬಿಯಾದ. ಬೇರೆಯವರಿಗೆ ಕೊಡುತ್ತಿದ್ದ ರೈತನ ಕೈ ಮೂರು ಕಾಸಿನ ಸಬ್ಸಿಡಿ ಬೇಡಿ ಚಾಚುವಂತಾಯಿತು. ಇದೆಲ್ಲದರ ಶ್ರೇಯಸ್ಸು ಈ ದೇಶದ ಕೃಷಿ ವಿಜ್ನಾನಿಗಳಿಗೇ ಸಲ್ಲಬೇಕು.

ಇದರ ನಡುವೆ ತೊಂಬತ್ತರ ದಶಕದಲ್ಲಿ ಮುಕ್ತ ಮಾರುಕಟ್ಟೆ ನೀತಿ ಜಾರಿಯಾಯಿತು ವಿದೇಶೀ ಕೃಷಿ ಉತ್ಪನ್ನಗಳು ಯಾವುದೇ ಆಮದು ಸುಂಕವಿಲ್ಲದೆ ಅಗ್ಗದ ದರದಲ್ಲಿ ದೇಶದೊಳಗೆ ಭಾರೀ ಪ್ರಮಾಣದಲ್ಲಿ ಸುರಿದವು. ನಮ್ಮ ದೇಶದ ರೈತರ ಗಾಯದ ಮೇಲೆ ಬರೆ ಎಳೆದವು. ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತಾಯಿತು. ಇಂದಿಗೂ ಕೃಷಿ ಮಾರುಕಟ್ಟೆ ಜೂಜಾಟವಿದ್ದಂತೆ. ಯಾರು ಯಾವಾಗ ಬಾಜಿ ಕಟ್ಟುತ್ತಾರೋ ಯಾರಿಗೂ ತಿಳಿಯದು. ಇಂದಿಗೂ ಬೆಳೆಗಳ ಬೆಲೆ ರಕ್ಷಣೆಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಯಾವ ಶಾಸನವೂ ಇಲ್ಲ. ಬೆಂಬಲ ಬೆಲೆ ನೀತಿಗಾಗಿ ಪ್ರತಿ ವರ್ಷ ನಡೆಯುವ ರೈತರ ಹೋರಾಟಗಳು ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಮ್ಮ ಕಣ್ಮುಂದೆ ಇವೆ. ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಅಂಕಿಅಂಶಗಳ ಪ್ರಕಾರ 1951ರಲ್ಲಿ ಭಾರತದಲ್ಲಿ ಒಕ್ಕಲುತನದಲ್ಲಿ ತೊಡಗಿದ್ದ ಜನಸಂಖ್ಯೆಯ ಒಟ್ಟು ಶೇಕಡಾ 69.7%. ಈ ಪ್ರಮಾಣ 2011 ರಲ್ಲಿ 54.6% ಕ್ಕೆ ಕುಸಿದಿದೆ.

ಇಷ್ಟೆಲ್ಲಾ ಆದರೂ ಸರ್ಕಾರಗಳೇ ಆಗಲಿ, ಕೃಷಿ ವಿಶ್ವವಿದ್ಯಾಲಯಗಳೇ ಆಗಲಿ, ಕೃಷಿ ಒಂದು ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆಯೆಂದು ಗುರುತಿಸುವ ಕನಿಷ್ಠ ಕೆಲಸವನ್ನು ಕೂಡ ಮಾಡಲಿಲ್ಲ. ಕೃಷಿಯಲ್ಲಾಗುತ್ತಿದ್ದ ಅನ್ಯಾಯ, ಮೋಸಗಳ ಕುರಿತು ಕಣ್ಣು ಬಾಯಿ ಕಿವಿ ಮುಚ್ಚಿಕೊಂಡವು. ಇದೇ ಸಮಯದಲ್ಲಿ ಅನೇಕ ವರ್ಷಗಳ ಸಂಶೋಧನೆಗಳ ನಂತರ ಹಸಿರು ಕ್ರಾಂತಿಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುತ್ತಾ ನೈಸರ್ಗಿಕ ತತ್ವಗಳನ್ನಾಧರಿಸಿದ “ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ” ಎಂಬ ಹೆಸರಿನ ಒಂದು ಪರ್ಯಾಯವನ್ನು ದೇಶದ ರೈತರ ಮುಂದಿಟ್ಟವರು ಮಹಾರಾಷ್ಟ್ರದ ಶ್ರೀ.ಸುಭಾಷ್ ಪಾಳೇಕರ್ ರವರು.

ಸುಭಾಷ್ ಪಾಳೇಕಾರ್

ಇದಕ್ಕೂ ಮುಂಚೆ ನೈಸರ್ಗಿಕ ತತ್ವಗಳನ್ನಾಧರಿಸಿ ಮಾಡಬಹುದಾದ ಕೃಷಿಯನ್ನು “ಶೂನ್ಯ ಉಳುಮೆ ಕೃಷಿ” (Zero Tillage Farming) ಎಂಬ ಹೆಸರಿನ ಸಹಜ ಕೃಷಿಯನ್ನು ಜಗತ್ತಿಗೇ ಪರಿಚಯಿಸಿದ್ದು ಜಪಾನಿನ ಕೃಷಿ ಸಂತ ಮಸನೊಬು ಫುಕುವೊಕಾ. ಆನಂತರ ನಮ್ಮವರೇ ಆದ ತಮಿಳುನಾಡಿನ ಶ್ರೀಯುತ ನಮ್ಮಾಳವರ್, ಗ್ರಾಮೀಣ ಗಾಂಧೀ ಎಂದೇ ಹೆಸರುವಾಸಿಯಾಗಿದ್ದ ಶ್ರೀ.ಭಾಸ್ಕರ್ ಸಾವೆ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಡಾ.ನಾರಾಯಣರೆಡ್ಡಿಯವರು.

2002 ನೇ ಇಸವಿಯಲ್ಲಿ ಕರ್ನಾಟಕದ ರೈತ ಚಳವಳಿಯ ಹಿರಿಯ ಮುಖಂಡರಾಗಿದ್ದ ಶ್ರೀ.ಬಸವರಾಜ್ ತಂಬಾಕೆಯವರು ಶ್ರೀ. ಸುಭಾಷ್ ಪಾಳೇಕರ್ ರವರನ್ನು ಕರ್ನಾಟಕಕ್ಕೆ ಪರಿಚಯ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಭಾಷ್ ಪಾಳೇಕರರ ಅನೇಕ ತರಬೇತಿಗಳನ್ನು ಆಯೋಜಿಸಿತು. ಶಿಬಿರಕ್ಕೆ ಬರುತ್ತಿದ್ದ ರೈತರ ಊಟ, ವಸತಿಗೆ ಅನೇಕ ಪ್ರಗತಿಪರ ಮಠಾಧೀಶರುಗಳ ಸಹಕಾರ ದೊರಕಿತು. ಕರ್ನಾಟಕದಲ್ಲಿ ಮೊದಲಿಗೆ ಈ ಕೃಷಿ ಪದ್ಧತಿಯಲ್ಲಿ ರೈತ ಸಂಘದ ಕಾರ್ಯಕರ್ತ ಬನ್ನೂರಿನ ಕೃಷ್ಣಪ್ಪ ಅಳವಡಿಸಿ ಎಲ್ಲರೂ ಹುಬ್ಬೇರಿಸುವಂತೆ ಬಾಳೆ ಬೆಳೆದರು. ಆಗ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಸ್ವಾಮಿ ಆನಂದ್ ರವರು ಕೃಷ್ಣಪ್ಪರವರ ಬಾಳೆಯ ಬಗ್ಗೆ ಲೇಖನ ಬರೆದರು. ನಂತರ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ಕರ್ನಾಟಕದಲ್ಲಿ ವ್ಯಾಪಕಗೊಳ್ಳುತ್ತಾ ಹೋಯಿತು. 2006 ಅಥವಾ 2007 ಇರಬೇಕು. ಕೂಡಲ ಸಂಗಮದಲ್ಲಿ ನಡೆದ ಪಾಳೇಕರ್ ರವರ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ ರೈತರ ಸಂಖ್ಯೆ ಆರು ಸಾವಿರ ದಾಟಿತ್ತು.

ಕರ್ನಾಟಕದಲ್ಲಿ ಮೌನವಾಗಿ ನಡೆಯುತ್ತಿದ್ದ ಈ ಚಳವಳಿಯನ್ನು ನೋಡಿದ ತಮಿಳುನಾಡಿನ “ಪಸುಮೈ ವಿಕಟನ್” ಪತ್ರಿಕೆ ತಮಿಳುನಾಡಿನಲ್ಲೂ ಪಾಳೇಕರರ ಶಿಬಿರ ಆಯೋಜಿಸಿತು. ನಂತರ ಕೇರಳ, ಪಂಜಾಬ್, ಆಂಧ್ರ ಪ್ರದೇಶ, ರಾಜಸ್ಥಾನ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ವ್ಯಾಪಕವಾಗಿ ಬೆಳೆಯತೊಡಗಿತು. ವಿಶ್ವ ರೈತ ಚಳವಳಿಯಾದ `ಲಾ ವಿಯಾ ಕ್ಯಾಂಪೆಸಿನಾ”ದ ಮೂಲಕ ಶ್ರೀಲಂಕಾ, ನೇಪಾಳ ಮತ್ತು ಇಂಡೋನೇಷಿಯಾದಲ್ಲೂ ಅನೇಕ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿ ಯಶಸ್ಸನ್ನು ಕಂಡಿದ್ದಾರೆ.

ಆದರೆ, ಇದೆಲ್ಲದರ ನಡುವೆ ನಮ್ಮ ಯಾವೊಬ್ಬ ಕೃಷಿ ವಿಜ್ಞಾನಿಯೂ, ಕೃಷಿ ಅಧಿಕಾರಿಯೂ ಇದರ ಕಡೆ ತಿರುಗಿ ನೋಡಲಿಲ್ಲ. ಪಾಳೇಕರ್ ಪದ್ಧತಿ ಅವೈಜ್ಞಾನಿಕ ಅಥವಾ ಅರ್ಥಹೀನ ಎಂದು ತೀರ್ಮಾನಿಸಿದಂತಿತ್ತು ಅವರ ನಡೆ.

ಇವರೆಲ್ಲರನ್ನೂ ಮೀರಿ ಅನೇಕ ರಾಜ್ಯ ಸರ್ಕಾರಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರವೂ ಸೇರಿದಂತೆ ಶೂನ್ಯ ಬಂಡವಾಳ (ನೈಸರ್ಗಿಕ) ಕೃಷಿಗೆ ಒತ್ತು ನೀಡಲು ತೀರ್ಮಾನಿಸಿಯಾಗಿದೆ. ಆಂಧ್ರ ಪದೇಶದ ಸರ್ಕಾರ 2015ರಲ್ಲಿ ಈ ಕೃಷಿ ಪದ್ಧತಿಯನ್ನು ರಾಜ್ಯದಾದ್ಯಂತ ಒಯ್ಯಲು ಕೈಗೊಂಡ ತೀರ್ಮಾನವೇ ಇದೆಲ್ಲಕ್ಕೆ ನಾಂದಿ ಆಗಿತ್ತು. 2024 ರವರೆಗೆ ಇಡೀ ರಾಜ್ಯವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಬೇಕೆಂದು ಆಂಧ್ರ ಪಣ ತೊಟ್ಟಿದೆ. ಇದಕ್ಕೆ ಮೀಸಲಿಟ್ಟಿರುವ ಹಣ ಹದಿನೇಳು ಸಾವಿರಕೋಟಿಗಳಷ್ಟು. ಇದರ ಬಗ್ಗೆ ಅನೇಕ ಟೀಕೆಗಳು ಕೇಳಿ ಬರುತ್ತಿವೆ.

ಶೂನ್ಯ ಬಂಡವಾಳವೆಂದಮೇಲೆ ಹದಿನೇಳು ಸಾವಿರ ಕೋಟಿ ಏಕೆ? ಹದಿನೇಳುಸಾವಿರ ಕೋಟಿ ಮೀಸಲಿಟ್ಟಿರುವುದು ಎಂಟರಿಂದ ಹತ್ತು ವರ್ಷಗಳ ಯೋಜನಾ ಅವಧಿಗೇ ಹೊರತು ಕೇವಲ ಒಂದು ವರ್ಷಕ್ಕಲ್ಲ. 2024 ರ ಒಳಗೆ ರಾಜ್ಯದ ಅರವತ್ತು ಲಕ್ಷ ರೈತರನ್ನು ತಲುಪಲು ಈ ಹಣವನ್ನು ಬಳಸಲಾಗುತ್ತಿದೆ. (http://apzbnf.in/an-open-letter-to-critics/). ಈ ಹಣ ಬಹುರಾಷ್ಟೀಯ ಕಂಪೆನಿಗಳಿಂದ ಅಥವಾ ಜಗತ್ತಿನ ದೈತ್ಯ ಕಂಪೆನಿಗಳಿಂದ ಬರುತ್ತಿದ್ದಲ್ಲಿ, ಅದನ್ನು ವಿರೋಧಿಸಬೇಕಾಗುತ್ತೆ. ಆದರೆ ಈ ಆಪಾದನೆಗಳಿಗೆ ಸದ್ಯ ಯಾವ ಪುರಾವೆಗಳೂ ಇಲ್ಲ.

ಈಗ ವಿಮರ್ಶೆ ಮಾಡಿರುವ ಅನೇಕರು “ಶೂನ್ಯ ಬಂಡವಾಳ” ಎಂಬುದನ್ನು ಯಥಾವತ್ ಅರ್ಥ ಮಾಡಿಕೊಂಡಂತಿದೆ. ಪಾಳೇಕರ್ ಅವರು ಹೇಳಿರುವುದು ಒಂದು ಬೆಳೆಯನ್ನು ಬೆಳೆಯಲು ತಗಲುವ ವೆಚ್ಚವನ್ನು ಬೆಳೆಯ ನಡುವೆ ಬೆಳೆಯಬಹುದಾದ ಅಂತರ ಬೆಳೆಯಿಂದ ಬರುವ ಆದಾಯದಿಂದ ಭರಿಸುವುದೆಂದು. ಅದಕ್ಕೂ ಮಿಗಿಲಾಗಿ “ಶೂನ್ಯ ಬಂಡವಾಳ” ಎಂಬುದು ಒಂದು ಪರ್ಯಾಯ ಕೃಷಿ ಚಿಂತನೆಗೆ ಆಹ್ವಾನ ನೀಡುವ ಘೋಷಣೆಯೂ ಆಗಿದೆ. ಈಗ ಸುಭಾಷ್ ಪಾಳೇಕರ್ ರವರು ಹೆಸರನ್ನು ಬದಲಾಯಿಸಿದ್ದಾರೆ. ಅದಕ್ಕೆ ಅನೇಕರ ಸಹಮತ ಇಲ್ಲ.

ಶೂನ್ಯ ಬಂಡವಾಳದ ಕೃಷಿಯಲ್ಲಿ ಹೊರಗಿನಿಂದ ಏನನ್ನೂ ತರುವುದಿಲ್ಲ. ಬೀಜ, ಜೀವಾಮೃತ, ಕ್ರಿಮಿನಾಶಕಗಳ ಸಿದ್ಧತೆಯಲ್ಲಿ ಪ್ರಕೃತಿದತ್ತವಾಗಿ ಸಿಗುವದನ್ನೇ ಬಳಸಲಾಗುತ್ತದೆ. ಇದನ್ನು ವೈಜ್ನಾನಿಕ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿರುವ ವಿಜ್ಞಾನಿಗಳು ಕಾನೂನುಬಾಹಿರವಾಗಿ ಮಾರಲಾಗುತ್ತಿರುವ ಬಿಟಿ ಬದನೆ ಬೀಜಗಳ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಜಗತ್ತಿನ ಅನೇಕ ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದ್ದು ನಮ್ಮ ದೇಶದಲ್ಲಿ ರಾಜಾರೋಷವಾಗಿ ಮಾರಾಟ್ವಾಗುತ್ತಿರುವ ಹಾನಿಕಾರಕ Glyphosate ಅಥವಾ Round Up ಕಳೆ ನಾಶಕಗಳ ಬಗ್ಗೆ ಯಾವುದೇ ವಿಜ್ಞಾನಿ ಏಕೆ ಪ್ರಶ್ನೆ ಮಾಡುತ್ತಿಲ್ಲ?

ನೈಸರ್ಗಿಕ ಕೃಷಿಗೆ ವೈಜ್ಞಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಅಪ್ರಸ್ತುತ. ಈಗಾಗಲೇ ಹದಿನೈದು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವ ರೈತರೇ ಮಾನ್ಯತೆ ಕೊಟ್ಟಿರುವಾಗ, ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆಯುವ ಅಗತ್ಯವಿದೆಯೇ?

ಹಿಮಾಚಲದ ಸೇಬು ಬೆಳೆಗಾರರಿಂದ ಹಿಡಿದು ಬೀದರ ಜಿಲ್ಲೆಯ ಖುಷ್ಕಿ ಬೆಳೆಗಾರರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲಾ ಹವಾಮಾನಗಳಿಗೂ ಹೊಂದುವುದಿಲ್ಲ ಎನ್ನುವವರಿಗೆ ಒಂದು ಸಲಹೆ: ದಯವಿಟ್ಟು ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಮಾತನಾಡಿಸಿ. ವಿತಂಡ ವಾದಗಳನ್ನು ಮಾಡುತ್ತಿರುವವರಿಗೆ ಜಗತ್ತಿನ ಮುಂದೆ ನಿಂತಿರುವ ಅತಿ ದೊಡ್ಡ ಗಂಡಾಂತರ ಕಾಣಿಸುತ್ತಿಲ್ಲ.

ಹವಾಮಾನ ವೈಪರೀತ್ಯ ಅಥವಾ “Climate Change” ಮನುಕುಲದ ಮುಂದಿರುವ ಭಯಾನಕ ಸತ್ಯ. ಈಗಾಗಲೇ ಕಾಯಂ ಆಗಿಹೋಗಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯೇ ನಮ್ಮ ಮುಂದಿರುವ ನಿಜವಾದ ಸಮಸ್ಯೆ.

ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಜಗತ್ತನ್ನು ಉಳಿಸುವುದೊಂದೇ ನಮ್ಮ ಧರ್ಮ. ಕೃಷಿಯ ಅಸ್ಮಿತೆ ರಕ್ಷಿಸಬೇಕಾಗಿದೆ, ಕೃಷಿ ವಿಶ್ವ ವಿದ್ಯಾಲಯಗಳದ್ದಲ್ಲ. ನಮ್ಮೆಲ್ಲ ಬಿಗುಮಾನವ ಬಿಟ್ಟು ಒಂದಾಗಿ ಕೆಲಸಮಾಡಬೇಕಾಗಿದೆ. ನಮಗಲ್ಲದಿದ್ದರೂ ನಮ್ಮ ಮುಂದಿನ ತಲೆಮಾರುಗಳಿಗಾಗಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...