ಮುಂದಿನ ವರ್ಷ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ)ರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆಯಿದ್ದ ಚುನಾವಣಾ ಆಯುಕ್ತ (ಇಸಿ) ಅಶೋಕ್ ಲವಾಸ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ನೀಡಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಹರಿಯಾಣ ಕೆಡರ್ನ ಅಶೋಕ್ ಲಾವಸ ಫಿಲಿಪ್ಪೈನ್ಸ್ನ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಗೆ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು. ಅವರು ಮುಂದಿನ ತಿಂಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳೇ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಂಸ್ಥೆಯು ಅಶೋಕ್ ಲಾವಸ ಅವರ ನೇಮಕಾತಿಯ ಮಾಹಿತಿಯನ್ನು ಪ್ರಕಟಿಸಿತ್ತು.
ಓದಿ: ಮೋದಿ ಅಮಿತ್ ಷಾ ಗೆ ಕ್ಲಿನ್ ಚಿಟ್ ಪ್ರಕರಣ: ಚುನಾವಣಾ ಆಯೋಗದಲ್ಲಿ ಅಶೋಕ್ ಲಾವಸ ಭಿನ್ನಮತ
ಚುನಾವಣಾ ಆಯೋಗದಲ್ಲಿ ಅಶೋಕ್ ಲಾವಸ ಅವರ ಸೇವಾವಧಿ ಇನ್ನೂ 2 ವರ್ಷ ಇದ್ದು, ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅವರ ನಂತರ ಸೇವಾ ಹಿರಿತನದಲ್ಲಿ ಅಶೋಕ್ ಅವರೇ ಮೊದಲಿಗರಾಗಿ ಇರುವುದರಿಂದ ಕಾನೂನಾತ್ಮಕವಾಗಿ ಅಶೋಕ್ ಲಾವಸ ಅವರೇ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಬಹುದಿತ್ತು.
ಪ್ರಸ್ತುತ ಲಾವಸ ರಾಜೀನಾಮೆ ನೀಡಿರುವುದರಿಂದ ಮತ್ತೊಬ್ಬ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮುಂದಿನ ಸಿಇಸಿ ಆಗುವ ಅವಕಾಶ ಪಡೆದಿದದ್ದಾರೆ.
ಕಳೆದ ವರ್ಷದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 11 ದೂರುಗಳು ದಾಖಲಾಗಿದ್ದವು. ಆಗ ಚುನಾವಣಾ ಆಯೋಗವು ಎಲ್ಲಾ ದೂರುಗಳಲ್ಲೂ ಮೋದಿ ಮತ್ತು ಶಾಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಆದರೆ, ಅಷ್ಟೂ ಪ್ರಕರಣಗಳಲ್ಲಿ ಲಾವಸ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ದೇಶದ ಗಮನ ಸೆಳೆದಿದ್ದರು.
ಓದಿ: ಅಶೋಕ್ ಲಾವಾಸರವರ ಭಿನ್ನಾಭಿಪ್ರಾಯನ್ನು ಬಹಿರಂಗಪಡಿಸುವುದರಿಂದ ಅವರ ಜೀವಕ್ಕೆ ಅಪಾಯ: ಚುನಾವಣಾ ಆಯೋಗ