“ಮೇಕೆದಾಟು ಪಾದಯಾತ್ರೆಯ ವಿರುದ್ಧದ್ಧ ಪಿತೂರಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಹೈಡ್ರಾಮಾ ಮಾಡಿದ್ದಾರೆ” ಎಂದು ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷರಾದ ಬೈರಪ್ಪ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಡಿ.ಕೆ. ಸಹೋದರರ ಮೇಲೆ ಭಿನ್ನಾಭಿಪ್ರಾಯಗಳಿವೆ ಎಂದೂ ಉಲ್ಲೇಖಿಸಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಮೇಕೆದಾಟು ಯೋಜನೆಯ ಯಶಸ್ವಿಗೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಅನುಷ್ಟಾನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಆ ಬಳಿಕ ಬಂದ ಸರ್ಕಾರಗಳು ಮೇಕೆದಾಟು ವಿಚಾರದಲ್ಲಿ ಆಮೆವೇಗವನ್ನು ಅನುಸರಿಸಿದ್ದರು. ಬಿಜೆಪಿ ಸರ್ಕಾರವಂತೂ ಕೇಂದ್ರ ಸರ್ಕಾರ ಮಾತ್ರವಲ್ಲದೇ ತಮಿಳುನಾಡು ಸರ್ಕಾರಕ್ಕೇ ಗೋಣು ಹಾಕುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಈಗ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ಇದು ಡಿ.ಕೆ.ಶಿವಕುಮಾರ್ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎನ್ನುವವರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಾವೂ ಕೆಲಸ ಮಾಡುತ್ತೇವೆ ಎಂದು ಘೋಷಿಸಿಬಿಡಲಿ. ಕಾಂಗ್ರೆಸ್ ಮಾತ್ರವಲ್ಲದೇ ಬಿಜೆಪಿಯೂ ಮೇಕೆದಾಟು ಯೋಜನೆಯ ಅನುಷ್ಟಾನದ ಪರ ಇದೆ ಎಂದು ಘೋಷಿಸಿಬಿಟ್ಟರೆ ಡಿ.ಕೆ.ಶಿವಕುಮಾರ್ ಪಾದಯಾತ್ರೆಯ ರಾಜಕಾರಣ ಮಾಡುವಂತೆಯೇ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಮುಂದೆ ಹೋಗಿ ಡಿ.ಕೆ.ಶಿವಕುಮಾರ್ ಜೊತೆ ಬಿಜೆಪಿ ಸರ್ಕಾರದ ಮಂತ್ರಿಗಳೂ, ಮುಖಂಡರೂ ಹೆಜ್ಜೆ ಹಾಕಲಿ ಎಂದು ಆಶಿಸಿದ್ದಾರೆ.
ಹೇಗೂ ಮೇಕೆದಾಟು ಪಾದಯಾತ್ರೆ ರಾಜಕೀಯ ರಹಿತ ಪಾದಯಾತ್ರೆ ಎಂದು ಡಿಕೆಶಿ ಘೋಷಿಸಿದ್ದಾರೆ. ಸಾಹಿತಿಗಳು, ಚಿತ್ರರಂಗದ ಗಣ್ಯರೂ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ. ಹಾಗಿರುವಾಗ ಬಿಜೆಪಿಯೂ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿ. ಆದರೆ ಬಿಜೆಪಿ ಮೇಕೆದಾಟು ಯೋಜನೆಯ ಅನುಷ್ಠಾನದ ಪರ ಡಿ.ಕೆ.ಶಿವಕುಮಾರ್ ಜೊತೆಗೆ ಪಾದಯಾತ್ರೆಯ ಭಾಗ ಆಗುವುದರ ಬದಲು ಯೋಜನೆ ಅನುಷ್ಠಾನ ಆಗಕೂಡದು, ಪಾದಯಾತ್ರೆ ಯಶಸ್ವಿ ಆಗಬಾರದು ಎಂದು ಪ್ರಯತ್ನ ಮಾಡುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿನ ಪಾದಯಾತ್ರೆ ಯಶಸ್ವಿ ಆಗಬಾರದು ಎನ್ನುವ ಕಾರಣಕ್ಕಾಗಿಯೇ ಕೊರೋನಾ, ಒಮಿಕ್ರಾನ್ ನೆಪಗಳನ್ನು ವೈಭವೀಕರಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣೆ, ಜಾತ್ರೆ, ಸಮಾವೇಶ, ಹಬ್ಬಗಳಿಗೆ ಇಲ್ಲದ ಕೊರೋನಾ ಮೇಕೆದಾಟು ಪರವಾಗಿನ ಪಾದಯಾತ್ರೆಗೆ ಅಡ್ಡಿಯಾಗುತ್ತಿದೆ. ಇದೊಂದು ಸರ್ಕಾರಿ ಪಿತೂರಿಯಷ್ಟೆ. ಇದರಲ್ಲಿ ಪೂರ್ಣ ಯಶಸ್ವಿ ಆಗದೇ ಇದ್ದಾಗ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಮಂತ್ರಿ ಅಶ್ವತ್ಥನಾರಾಯಣ ಅವರು ಗಂಡು, ಗಂಡಸ್ತನ ಎಂಬ ಲಿಂಗ ಸಮಾನತಾ ವಿರೋಧಿ ಶಬ್ದಗಳನ್ನು ಬಳಸಿ ಡಿ.ಕೆ.ಸುರೇಶ್ ಅವರನ್ನು ನಿಂದಿಸುವ ಪ್ರಯತ್ನ ಮಾಡಿದರು. ಇದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆಯ ವಿರುದ್ದದ ಅಸಮಾಧಾನವೇ ಹೊರತು ಇನ್ನೇನೂ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇಕೆದಾಟು ಯೋಜನೆ ಮಾಡಲು ಕರ್ನಾಟಕ ಎಲ್ಲಾ ರೀತಿಯ ಹಕ್ಕು ಹೊಂದಿದೆ. ಅದನ್ನು ಕನ್ನಡಿಗರು ಮಾಡಿಯೇ ತೀರುತ್ತೇವೆ. ಮೇಕೆದಾಟು ಯೋಜನೆಗೆ ಅಡ್ಡಿ ಬರಲು ತಮಿಳುನಾಡಿಗೆ ಯಾವ ಅಧಿಕಾರವೂ ಇಲ್ಲ. ವಿನಾಕರಣ ಕನ್ನಡಿಗರನ್ನು ಕೆರಳಿಸುವ, ಕನ್ನಡಿಗರ ಹಕ್ಕಿಗೆ ಚ್ಯುತಿ ತರುವ ಕೆಲಸ ತಮಿಳುನಾಡು ಮಾಡುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರವೂ ಸೊಪ್ಪು ಹಾಕುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆಯುವ ಪಾದಯಾತ್ರೆ ಯಶಸ್ವಿಯಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.