Homeಮುಖಪುಟನಿರುತ್ತರದಿಂದ ನಿರ್ಗಮಿಸಿದ ಅಕ್ಕ

ನಿರುತ್ತರದಿಂದ ನಿರ್ಗಮಿಸಿದ ಅಕ್ಕ

- Advertisement -
- Advertisement -

ರಾಜೇಶ್ವರಿಯಕ್ಕ ನಿರುತ್ತರದಿಂದ ನಿರ್ಗಮಿಸಿದ್ದಾರೆ. ಹಾಗೆ ನೋಡಿದರೆ, ತೇಜಸ್ವಿಯವರು ತೀರಿಕೊಂಡ ಮೇಲೆ ಅವರೊಬ್ಬರೇ ಹೇಗಿರುತ್ತಾರೆ ಎಂದೆನಿಸಿದ್ದುಂಟು. ಹಾಗೆ ಒಮ್ಮೆ ಕೇಳಿದಾಗ ಆರಾಮಾಗಿದ್ದಿನಿ ಎಂದಿದ್ದರು. ಪುಸ್ತಕ ಪ್ರಕಾಶನದ ಜವಾಬ್ದಾರಿಯನ್ನು ತಮ್ಮನೊಡನೆ ತಾವೇ ನಿರ್ವಹಿಸಿದ್ದರು. ಆ ವ್ಯವಹಾರ ಕುಶಲತೆಯನ್ನ ತೇಜಸ್ವಿ ಕಲಿಸಿ ಹೋಗಿದ್ದರು. ಅದಕ್ಕಿಂತ ಮುಖ್ಯವಾಗಿ ತೇಜಸ್ವಿಯವರು ಮುಂಜಾನೆ ಎದ್ದು, ಕಾಡು ಬರಹೇಳಿ ಕಳುಹಿಸಿದೆ ಎಂಬಂತೆ ತಮ್ಮ ಹತಾರಗಳೊಂದಿಗೆ ಕಾಡಿಗೆ ಹೋದವರು ಸಂಜೆ ಬರುತ್ತಿದ್ದರು. ಹಾಗಾಗಿ ಅವರ ನಿರ್ಗಮನ, ಕಾಡಿಗೆ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎಂಬಂತಾಗಿತ್ತು ರಾಜೇಶ್ವರಿಯವರಿಗೆ.

ಕುವೆಂಪು ತಮ್ಮ ಅವಧಿಯಲ್ಲಿ ಮೈಸೂರು ಯೂನಿವರ್ಸಿಟಿಯನ್ನು ಬೆಳೆಸಿದ ಸಮಯ ಒಂದು ಮರೆಯಲಾಗದ ಯುಗ ಎನ್ನಬಹುದು. ಸಾಹಿತಿಗಳು ಬರೆದಂತೆ ಬದುಕುತ್ತಿದ್ದ ಕಾಲ ಅದು. ’ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಕುವೆಂಪು ಕರೆ ಅವರ ಮಗನನ್ನೆ ತೀವ್ರವಾಗಿ ತಾಕಿತ್ತು. ಅದರಂತೆ ತಾವು ಇಷ್ಟಪಟ್ಟ ರಾಜೇಶ್ವರಿಯವರನ್ನ ಮದುವೆಯಾಗುವ ಪ್ರಸ್ತಾಪವನ್ನ ಕುವೆಂಪು ಮುಂದಿಟ್ಟಾಗ ಸಂತೋಷದಿಂದ ಮಂತ್ರ ಮಾಂಗಲ್ಯ ಸಂಹಿತೆಯನ್ನು ತಾವೇ ಬೋಧಿಸಿ, ಮದುವೆ ಮಾಡಿದ್ದರು. ಅದೂ ಅಂತರ್ಜಾತಿ ವಿವಾಹ! ಈ ಪ್ರಸಂಗ ಅಂದು ಎಷ್ಟು ವಿದ್ಯಾರ್ಥಿಗಳನ್ನ ಪ್ರಭಾವಿಸಿತ್ತೆಂದರೆ ತೇಜಸ್ವಿರ ತಲೆಮಾರಿನ ಒಂದು ದೊಡ್ಡ ವರ್ಗ ಮಂತ್ರ ಮಾಂಗಲ್ಯದ ಮದುವೆ ಮಾಡಿಕೊಂಡರು. ಈ ಪೈಕಿ ಕಡಿದಾಳು ಶಾಮಣ್ಣನವರದೊಂದು ದೊಡ್ಡ ಕತೆ. ಮಂತ್ರಮಾಂಗಲ್ಯ ಮದುವೆಗಾಗಿ ಎಲ್ಲ
ಸೇರಿದ್ದರೆ ಶಾಮಣ್ಣ ಇಸ್ತ್ರಿಗೆ ಕೊಟ್ಟಿದ್ದ ಜುಬ್ಬಾ ತರಲು ಹೋಗಿದ್ದರು. ದೋಟಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಅಂತೂ ಹಳೆ ಜುಬ್ಬದಲ್ಲೇ ಮದುವೆಯಾಗಬೇಕೆಂಬ ಶಾಮಣ್ಣನವರ ಹಠ ಗೆದ್ದಿತು. ತೇಜಸ್ವಿ ರಾಜೇಶ್ವರಿ ಜೋಡಿಯಂತೆ ಶಾಮಣ್ಣ ಶ್ರೀದೇವಕ್ಕನವರದೂ ಒಂದು ಅಪರೂಪದ ಜೋಡಿ.

ಅಂದು ಮೈಸೂರು ಯೂನಿವರ್ಸಿಟಿಯಲ್ಲಿ ಎಂ.ಎ ಮುಗಿಸಿದ್ದ ತೇಜಸ್ವಿ ಮತ್ತು ರಾಜೇಶ್ವರಿಯವರಿಗೆ ಕೆಲಸ ಸಿಗುವುದು ಕಷ್ಟವೇನಾಗಿರಲಿಲ್ಲ. ಆದರೆ ಆ ಜೋಡಿಹಕ್ಕಿ ಯೂನಿವರ್ಸಿಟಿ ವ್ಯಾಪ್ತಿಯಲ್ಲದೆ ನಗರ ಜೀವನಕ್ಕೆ ವಿದಾಯ ಹೇಳಿ ಚಿತ್ರಕೂಟದ ಕಗ್ಗಾಡಿನ ಅಂಚಿಗೆ ಬಂದು ನೆಲೆಸಿದರು. ಅಲ್ಲಿಗೆ ಆ ಡಿಗ್ರಿ ಸರ್ಟಿಫಿಕೇಟ್ ಏನಾದವೊ ಏನೋ, ಆಗಿನ ಅವರ ತೀರ್ಮಾನ ಈಗ ನೆನಸಿಕೊಂಡರೆ ಭಯವಾಗುತ್ತದೆ. ಏಕೆಂದರೆ ಬದುಕಲು ಒಂದು ನೆಲೆ ಮಾಡಿಕೊಳ್ಳಬೇಕಿತ್ತು. ಜೀವಿಸಲು ಬೇಸಾಯ ಮಾಡಬೇಕಿತ್ತು. ಇಬ್ಬರೂ ನಿರಂತರವಾಗಿ ದುಡಿದು ಚಿತ್ರಕೂಟದಲ್ಲಿ ನೆಲೆಗೊಂಡರು. ತೇಜಸ್ವಿ ನೆಲ ಅಗೆದು ಗದ್ದೆ ಮಾಡಿ ಬದ ಸವರಿ ಅಚ್ಚುಗಟ್ಟು ಮಾಡಿ ಭತ್ತ ಬೆಳೆದರು. ಅದನ್ನು ಕುಯ್ದು ಬಡಿದು, ತೂರಿ, ಕೇರಿ ಸಕಲೇಶಪುರದವರೆಗೂ ಹೋಗಿ ಮಾರಿ ಬಂದರು. ಆಗ ಭತ್ತ ಬೆಳೆದ ರೈತ ಯಾಕೆ ಇನ್ನ ಉದ್ಧಾರವಾಗಿಲ್ಲ ಎಂಬುದು ಅರಿವಿಗೆ ಬಂತು.

ನಂತರ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ಗೆ ಬಂದು ನೆಲೆಸಿದರು. ಒಂದು ಸಂಸಾರ ಎಷ್ಟು ಬೇಕೊ ಅಷ್ಟೇ ಭೂಮಿಯನ್ನ ಕೊಂಡು ತಮ್ಮ ಕನಸಿನ ಲೋಕ ನಿರ್ಮಿಸಿಕೊಂಡರು. ಅದಾಗಲೇ ’ನಿಗೂಢ ಮನುಷ್ಯರು’, ’ಯಮಳ ಪ್ರಶ್ನೆ’, ’ಅಬಚೂರಿನ ಪೋಸ್ಟಾಫೀಸು’ ಬರೆದಿದ್ದರು. ಅದರ ಮುನ್ನುಡಿಯಲ್ಲಿ ಹೇಳಿದಂತೆ ಕನ್ನಡ ಸಾಹಿತ್ಯದ ಅಂದಿನ ಸ್ಥಿತಿಯಿಂದ ಮುಂದೆ ಹೋಗಲು ಹೊಸದಿಗಂತದೆಡೆಗೆ ಅನಿವಾರ್ಯ ಎಂದು ಘೋಷಿಸಿ ಅದರಂತೆ ಬರೆದರು. ಅಷ್ಟರಲ್ಲಾಗಲೆ ಲಂಕೇಶ್ ಪತ್ರಿಕೆ ಹೊರಬಂದಿದ್ದರಿಂದ ಲಂಕೇಶ್ ಕೋರಿಕೆಯಂತೆ ತೇಜಸ್ವಿ ನಿರಂತರವಾಗಿ ಬರೆಯತೊಡಗಿದರು. ಆಗ ಲಂಕೇಶ್ ಪ್ರತಿವಾರ ಮೂಡಿಗೆರೆಗೆ ಹೊರಡುತ್ತಿದ್ದರು. ಆಗೊಮ್ಮೆ ನಾನು ಮೂಡಿಗೆರೆಗೆ ಬರುತ್ತೇನೆ ಎಂದೆ. ಆಯ್ತು ಬಾ ಎಂದರು. ಅಂದಿನಿಂದ ಹಲವು ಬಾರಿ ಮೂಡಿಗೆರೆಗೆ ಹೋಗಿ ಅಪರೂಪದ ಆ ಜೋಡಿ ಹಕ್ಕಿಗಳ ಬದುಕನ್ನ ಕಣ್ಣಾರೆ ಕಂಡಿದ್ದೇನೆ. ಬಂದವರೊಡನೆ ತೇಜಸ್ವಿ ಹರಟುತ್ತಿದ್ದರೆ ರಾಜೇಶ್ವರಿಯಕ್ಕ ಬಂದು ಕೂರುತ್ತಿದ್ದರು. ಅವರ ಆತಿಥ್ಯಕ್ಕೆ ಲಂಕೇಶ್ ಮಾರುಹೋಗಿದ್ದರು. ಮುಂದೊಮ್ಮೆ ತೇಜಸ್ವಿಯವರ ಸಂದರ್ಶನ ಮಾಡಲು ಕಳುಹಿಸಿದ್ದರು. ಆಗ ರಾಜೇಶ್ವರಿಯಕ್ಕ ನಮ್ಮ ಮಾತು ಕೇಳಿಸಿಕೊಳ್ಳುತ್ತಲೆ ಮೊಟ್ಟೆ ಸಾರಿನ ಅಡುಗೆ ಮಾಡಿ ಬಡಿಸಿದ್ದರು. ಆಗೊಮ್ಮೆ ಸಿರಿಮನೆ ನಾಗರಾಜ್ ದಂಪತಿಗಳೊಡನೆ ಹೋಗಿ ಅರ್ಧ ದಿನ ಮಾತನಾಡಿ ಶೃಂಗೇರಿಯಲ್ಲಿ ಅಂತರ್ಜಾತಿ ವಿವಾಹದ ಸಮ್ಮೇಳನ ಮಾಡುವ ತೀರ್ಮಾನ ಮಾಡಿ ಬಂದಿದ್ದೆವು.

ರಾಜೇಶ್ವರಿಯಕ್ಕನವರದ್ದು ಯಾವಾಗಲೂ ನಗುಮುಖ. ನಗುತ್ತಲೇ ಮಾತನಾಡುತ್ತಿದ್ದರು. ತೇಜಸ್ವಿಯವರೊಡನೆ ಮಾತನಾಡುತ್ತಿದ್ದರೆ, ನಾವು ಎಷ್ಟು ಕೆಟ್ಟದಾಗಿ ಬದುಕುತ್ತಿದ್ದೇವಲ್ಲ ಅನ್ನಿಸುತ್ತಿತ್ತು. ಮನುಷ್ಯ ಮತ್ತು ನಿಸರ್ಗವನ್ನ ಮುಖಾಮುಖಿಯಾಗಿ ನಿಲ್ಲಿಸಿ ನಮ್ಮ ಅವನತಿಯನ್ನು ತೋರಿಸುತ್ತಿದ್ದರು. ದೇವರ ಜಾಗಕ್ಕೆ ನಿಸರ್ಗವನ್ನ ತಂದು ಕೂರಿಸುವ ಅವರ ಬರವಣಿಗೆ ಹೊಸ ತಲೆಮಾರನ್ನ ಆಕರ್ಷಿಸಿದೆ. ರಾಜೇಶ್ವರಿಯಕ್ಕನ ಪ್ರತಿಭೆ ನಮ್ಮ ಅರಿವಿಗೆ ಬಂದಿದ್ದು ಅವರನ್ನು ಚಿಕ್ಕಮಗಳೂರಿಗೆ ಕರೆಸಿ ಮಾತನಾಡಿಸಿದಾಗ. ನಾವೊಂದಿಷ್ಟು ಗೆಳೆಯರು ಚಿಕ್ಕಮಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯ ಕುರಿತ ಸೆಮಿನಾರ್ ಮಾಡಲು ಹೊರಟಾಗ ರಾಜೇಶ್ವರಿಯಕ್ಕನನ್ನ ಕರೆಯಲು ಹೋದೆವು. ಆಗವರು ನಾನು ಬರುತ್ತೇನೆ, ಆದ್ರೆ ಇನ್ವಿಟೇಶನ್‌ನಲ್ಲಿ ನನ್ನ ಹೆಸರು ಹಾಕಬೇಡಿ ಎಂದರು. ಅಲ್ಲಿಗೆ ಅವರು ಬರುವುದಿಲ್ಲವೆಂದು ಅನುಮಾನವಾಯ್ತು. ಆದರೆ ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ ಹಾಜರಾದರು. ಅದೇ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಅಗ್ರಹಾರ ಕೃಷ್ಣಮೂರ್ತಿಗೆ ತೇಜಸ್ವಿ ಹೆಸರಿನಲ್ಲಿ ಕೊಡುವ ಅನಿಕೇತನ ಪ್ರಶಸ್ತಿ ಬಂದಿತ್ತು. ಅದರಿಂದ ಸನ್ಮಾನಕ್ಕೆ ನಾವು ತಯಾರಿ ನಡೆಸುವಾಗ ರಾಜೇಶ್ವರಿಯವರು ಗಲಿಬಿಲಿಗೆ ತುತ್ತಾಗಿದ್ದರು. ಯಾಕೆಂದರೆ ಇಂತಹ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದನ್ನ ಎಲ್ಲಿ ತೇಜಸ್ವಿ ನೋಡುತ್ತಾರೋ ಎಂಬ ಅಳುಕಾಯ್ತಂತೆ. ತೇಜಸ್ವಿಯವರಿಗೆ ಸಭೆ ಸಮಾರಂಭಗಳಲ್ಲಿನ ಸ್ವಾಗತ, ಪರಿಚಯ ಭಾಷಣ, ಸನ್ಮಾನ ವಂದನಾರ್ಪಣೆಗಳೆಲ್ಲ ತುಂಬ ತಮಾಷೆಯ ಪ್ರಹಸನಗಳಾಗಿದ್ದವಂತೆ. ಸನ್ಮಾನಕ್ಕೆ ತುತ್ತಾದ ವ್ಯಕ್ತಿ ಕುರ್ಚಿಯ ಮೇಲೆ ಕುಳಿತು, ಶಾಲಿನಿಂದ ಮುಚ್ಚಿಸಿಕೊಂಡು ಜರಿಪೇಟ, ಗಂಧದ ಹಾರವೆಲ್ಲಾ ಮುಚ್ಚಿ ಕ್ಷಣಹೊತ್ತು ಸತ್ತಂತಾಗಿ ಪೋಟೋ ಕ್ಲಿಕ್ಕಿಸುವುದನ್ನು ನೋಡುತ್ತಿದ್ದಾಗ ತೇಜಸ್ವಿ ಇದೇನೆ ಇದು ಎಂದು ನಕ್ಕಿದ್ದರಂತೆ. ಕಾಡಿನ ಜೀವಿಗಳಾಗಿದ್ದ ಆ ದಂಪತಿಗಳಿಗೆ ಪಟ್ಟಣದಲ್ಲಿ ನಡೆಯುವ ಕಥೆಗಳು ಪ್ರಹಸನದಂತಾಗಿದ್ದವು, ಅಕಸ್ಮಾತ್ ತೇಜಸ್ವಿ ಯಾವುದಾದರೂ ಸಭೆಗೆ ಬಂದರೆ, ತೇಜಸ್ವಿಯವರಿಗೆ ಕಿರಿಕಿರಿಯಾಗದಂತೆ ಸಭೆ ನಡೆಯಬೇಕಿತ್ತು.

ತೇಜಸ್ವಿಯವರ ನೆನಪಿನ ಸಭೆಗೆ ಬಂದ ರಾಜೇಶ್ವರಿಯವರು, ತೇಜಸ್ವಿಯವರು ಕಡೆಯವರೆಗೂ ಸರಕಾರಕ್ಕೆ ಒತ್ತಾಯಿಸುತ್ತಿದ್ದ ಕನ್ನಡದ ತಂತ್ರಾಂಶದ ಬಗ್ಗೆ ಕಿಮ್ಮನೆ ರತ್ನಾಕರ್ ಅವರಿಗೆ ಪ್ರಸ್ತಾಪಿಸಿ, ಸಚಿವರಾದಿಯಾಗಿ ಯಾರೂ ಇದನ್ನು ಪ್ರಸ್ತಾಪಿಸದೇ ಇರುವುದಕ್ಕೆ ಬೇಸರಗೊಂಡರು. ಅಲ್ಲದೆ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಅವರ ಭಾಷೆಗಳು ಅಂತರ್ಜಾಲದಲ್ಲಿ ದೊರಕುತ್ತಿರುವಾಗ, ಕನ್ನಡದಲ್ಲಿ ಯಾಕೆ ಇನ್ನೂ ಸಾಧ್ಯವಾಗಿಲ್ಲ ಎಂದರು. ಅವಾಗಾಗಲೇ ರಾಜೇಶ್ವರಿಯವರು ಹೊಸ ಯುಗಕ್ಕೆ ಸಜ್ಜುಗೊಂಡಿರುವುದರ ಬಗ್ಗೆ ಅಚ್ಚರಿಯಾಯ್ತು. ಆವರೆಗೂ ತೇಜಸ್ವಿಯವರ ನೆರಳಿನಲ್ಲಿ ಗೃಹಿಣಿಯಂತೆ ಬದುಕಿದ್ದಂತೆ ಕಂಡಿದ್ದ
ರಾಜೇಶ್ವರಿಯವರು, ತೇಜಸ್ವಿಗೆ ತಕ್ಕ ಸಂಗಾತಿಯಂತೆ ಕಂಡರು.

ಅವರ ನಿರುತ್ತರದ ಅಂಗಳದಲ್ಲಿನ ಸಸ್ಯರಾಶಿ ನೋಡಿದರೆ ವಿಸ್ಮಯವಾಗುತ್ತಿತ್ತು. ಗೌರಿ ಒತ್ತಾಯದಿಂದ ಅವರು ಬರೆದ “ನನ್ನ ತೇಜಸ್ವಿ” ಓದಿದವರಿಗೆ ಅವರೊಬ್ಬ ಪರಿಪಕ್ವ ಅಪ್ರಕಟಿತ ಲೇಖಕಿ ಎಂಬುದು ಅರಿವಾಗುತ್ತದೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನು ಸಿನಿಮಾ ಮಾಡಲು ತೀರ್ಮಾನಿಸಿದ ನಿರ್ದೇಶಕರು, ಆ ಕತೆಯ ಹಕ್ಕುಗಳನ್ನು ತೆಗೆದುಕೊಳ್ಳಲು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನನ್ನನ್ನು ಕರೆದುಕೊಂಡು ಹೋದರು. ರಾಜೇಶ್ವರಿಯಕ್ಕ ಇವುರನ್ನೆಲ್ಲಾ ಕರಕೊಂಡು ಬಂದ್ರೆ ನಾನು ರಾಯಲ್ಟಿ ಕಡಿಮೆ ಮಾಡ್ತಿನಾ ಎಂದು ನಗಾಡಿದರು. ನಾಗತಿಹಳ್ಳಿಗೆ, ನೀವು ಕರ್ವಾಲೋ ಸಿನಿಮಾ ಮಾಡ್ತಿನಿ ಅಂತ ಬರದ ಲೆಟ್ರು ಅದಕ್ಕೆ ತೇಜಸ್ವಿ ಕೊಟ್ಟ ಉತ್ತರ ಇಲ್ಲಿದೆ ನೋಡಿ, ಎಂದು ಫೈಲು ತಂದು ತೋರಿದರು. ಅವರ ಪತ್ರವ್ಯವಹಾರದ ಶಿಸ್ತಿಗೆ ದಂಗುಬಡಿದೆವು. ಆ ಪತ್ರದಲ್ಲಿ ತೇಜಸ್ವಿ, ’ಕತೆಗಾರನಿಗೆ ಅನ್ಯಾಯವಾಗಬಹುದೆಂದು ಯೋಚಿಸಬೇಡಿ, ನೀವು ಹಾಕಿದ ದುಡ್ಡು ಬರುವಂತೆ ಬದಲಾವಣೆ ಮಾಡಿಕೊಳ್ಳಿ’ ಎಂದು ಬರೆದಿದ್ದರು. ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನ ಕೇಳಿದಷ್ಟು ಬೆಲೆಗೆ ಖರೀದಿಸಲಾಯ್ತು. ಆದರೆ ಸಿನಿಮಾ ನಿರೀಕ್ಷಿತ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ.

ಶಿವಮೊಗ್ಗದ ಗ್ರಂಥಾಲಯಾಧಿಕಾರಿ ಪ್ರೇಮಲತ ಅದೇ ಜಿಲ್ಲೆಯ ಹೊಸ ಕಾರಾಗೃಹದಲ್ಲಿ
ಗ್ರಂಥಾಲಯವನ್ನು ತೆರೆಯಲು ತೀರ್ಮಾನಿಸಿದರು. ಅದರ ಉದ್ಘಾಟನೆಗೆ ರಾಜೇಶ್ವರಿಯವರನ್ನು ಆಹ್ವಾನಿಸಲಾಗಿ ಅವರು ಬರಲೊಪ್ಪಿದ್ದು ನಮಗೆಲ್ಲಾ ಆಶ್ಚರ್ಯವಾಗಿತ್ತು. ನಿಗದಿಯಾದ ದಿನಕ್ಕೆ ರಾಜೇಶ್ವರಿಯವರೊಂದಿಗೆ ಚಿದಾನಂದಗೌಡರು ತಾರಿಣಿಯವರೊಂದಿಗೆ ಬಂದೇಬಿಟ್ಟರು. ಅದು ಹೊಸ ಜೈಲಾಗಿದ್ದರಿಂದ ವಿನೂತನವಾಗಿತ್ತು. ತುಮಕೂರು ಜೈಲಿನ ಮಹಿಳಾ ಕೈದಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಹೆಣ್ಣುಮಕ್ಕಳಿಗಾಗಿ ಕುಶಲ ಕೆಲಸಗಳ ಜೊತೆಗೆ ಒಳ್ಳೆಯ ಗ್ರಂಥಾಲಯವೂ ತೆರೆಯುವುದಿತ್ತು. ರಾಜೇಶ್ವರಿಯಕ್ಕನನ್ನು ನಾನು ಪರಿಚಯಿಸುತ್ತ “ಈ ಜಗತ್ತಿನ ಶ್ರೇಷ್ಠ ಲೇಖಕರಾದ ತೇಜಸ್ವಿಯವರ ಧರ್ಮ ಪತ್ನಿ ರಾಜೇಶ್ವರಿಯವರು ಬಂದಿದ್ದಾರೆ” ಎಂದೆ. “ಇದು ನನ್ನ ಮಾತಲ್ಲ ಲಂಕೇಶರು ಕರ್ನಾಟಕ ಸಂಘಕ್ಕೆ ಬಂದಿದ್ದಾಗ ತೇಜಸ್ವಿಯವರ ಎದುರೇ ಹೇಳಿದ ಮಾತು” ಎಂದೆ; ಇಂತಹ ಯಾವ ಮಾತಿಗೂ ತೇಜಸ್ವಿಯವರಾಗಲಿ ರಾಜೇಶ್ವರಿಯವರಾಗಲಿ ಉಬ್ಬುವವರಾಗಿರಲಿಲ್ಲ.

ಗ್ರಂಥಾಲಯ ಉದ್ಘಾಟಿಸಿದ ರಾಜೇಶ್ವರಿಯಕ್ಕ ಮಹಿಳಾ ಕೈದಿಗಳಿಗೆ ಇಲ್ಲಿನ ಗ್ರಂಥಾಲಯವನ್ನು
ಸದುಪಯೋಗಪಡಿಸಿಕೊಳ್ಳಲು ಹೇಳಿದ್ದಲ್ಲದೆ, ಕೈದಿಗಳ ಸನ್ನಡತೆಯ ಕಾರಣವಾಗಿ ನ್ಯಾಯಾಧೀಶರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಲು ಇರುವ ಕೋರಿಕೆಯ ವಿಷಯಗಳನ್ನು ವಿಸ್ತಾರವಾಗಿ ಹೇಳಿದರು. ಕೈದಿಯೊಬ್ಬರನ್ನು ಕುರಿತು ರಾಜೇಶ್ವರಿಯಕ್ಕ ’ನಿಮ್ಮ ಭಾಷೆ ವಿವರದ ಕ್ರಮ ಚೆನ್ನಾಗಿದೆ, ಇಲ್ಲಿನ ಗ್ರಂಥಾಲಯದಲ್ಲಿ ಓದಿ ಲೇಖಕಿಯಾಗಿ’ ಎನ್ನುತ್ತಾ ’ನೀವ್ಯಾಕೆ ಜೈಲಲಿದ್ದೀರಿ’ ಎಂದು ಪ್ರಶ್ನಿಸಿದರು. ಆ ಹೆಣ್ಣು ಮಗಳು ಗಂಡನ ಕೊಲೆ ಆರೋಪವಿದೆ ಎಂದಾಗ ರಾಜೇಶ್ವರಿಯಕ್ಕ ನಿರುತ್ತರದಾದರು.

ಅವರು ಶಿವಮೊಗ್ಗದಿಂದ ಹೊರಡುವಾಗ ಚಂದ್ರೇಗೌಡ್ರೆ ನೀವು ತಂದಿರೊ “ತೇಜಸ್ವಿ ನೆನಪಲ್ಲಿ” ಪುಸ್ತಕದಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ, ಗುರುತು ಮಾಡಿದ್ದೀನಿ, ಮರುಮುದ್ರಣ ಮಾಡುವಾಗ ತೆಗೆದು ಹಾಕಿ ಎಂದರು. ’ಆಯ್ತು ಕಣಕ್ಕ’ ಎಂದೆ. ರಾಜೇಶ್ವರಿ ತುಂಬು ಧೈರ್ಯದ ಅಪರೂಪದ ಕಾಡಿನ ಜೀವ. ತೇಜಸ್ವಿ ತೀರಿಕೊಂಡ ಮೇಲೆಯೂ ಕಾಡಿನಿಂದ ಕದಲಲಿಲ್ಲ. ಆದರೂ ತಮ್ಮ ಶರೀರವನ್ನು ಮೆಡಿಕಲ್ ಕಾಲೇಜಿಗೆ ದಾನಮಾಡಿ ಅಶ್ಚರ್ಯ ಮೂಡಿಸಿದ್ದಾರೆ. ಕುವೆಂಪು ಮತ್ತು ತೇಜಸ್ವಿಯವರು ಕವಿಶೈಲದಲ್ಲಿ ನೆಲೆಗೊಂಡರೆ, ಮಣ್ಣಿಗಾಗಿ ನಿರುತ್ತರ ಅಥವಾ ಕವಿಶೈಲ ಕೈಬಿಡಲು ಅವರು ತೆಗೆದುಕೊಂಡ ತೀರ್ಮಾನ ಸಾಮಾನ್ಯದಲ್ಲ. ಇದೊಂದು ಉತ್ತುಂಗದ ನಡವಳಿಕೆ. ರಾಜೇಶ್ವರಿ ಅಕ್ಕನ ಬದುಕೇ ಅಂತಹದ್ದು. ಶ್ರೇಷ್ಠತೆಗೆ ಉದಾಹರಣೆಯಾಗಿ ನಿಲ್ಲುವಂತಾದ್ದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿ ನೆನಪು; ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...