Homeಮುಖಪುಟನಿರುತ್ತರದಿಂದ ನಿರ್ಗಮಿಸಿದ ಅಕ್ಕ

ನಿರುತ್ತರದಿಂದ ನಿರ್ಗಮಿಸಿದ ಅಕ್ಕ

- Advertisement -
- Advertisement -

ರಾಜೇಶ್ವರಿಯಕ್ಕ ನಿರುತ್ತರದಿಂದ ನಿರ್ಗಮಿಸಿದ್ದಾರೆ. ಹಾಗೆ ನೋಡಿದರೆ, ತೇಜಸ್ವಿಯವರು ತೀರಿಕೊಂಡ ಮೇಲೆ ಅವರೊಬ್ಬರೇ ಹೇಗಿರುತ್ತಾರೆ ಎಂದೆನಿಸಿದ್ದುಂಟು. ಹಾಗೆ ಒಮ್ಮೆ ಕೇಳಿದಾಗ ಆರಾಮಾಗಿದ್ದಿನಿ ಎಂದಿದ್ದರು. ಪುಸ್ತಕ ಪ್ರಕಾಶನದ ಜವಾಬ್ದಾರಿಯನ್ನು ತಮ್ಮನೊಡನೆ ತಾವೇ ನಿರ್ವಹಿಸಿದ್ದರು. ಆ ವ್ಯವಹಾರ ಕುಶಲತೆಯನ್ನ ತೇಜಸ್ವಿ ಕಲಿಸಿ ಹೋಗಿದ್ದರು. ಅದಕ್ಕಿಂತ ಮುಖ್ಯವಾಗಿ ತೇಜಸ್ವಿಯವರು ಮುಂಜಾನೆ ಎದ್ದು, ಕಾಡು ಬರಹೇಳಿ ಕಳುಹಿಸಿದೆ ಎಂಬಂತೆ ತಮ್ಮ ಹತಾರಗಳೊಂದಿಗೆ ಕಾಡಿಗೆ ಹೋದವರು ಸಂಜೆ ಬರುತ್ತಿದ್ದರು. ಹಾಗಾಗಿ ಅವರ ನಿರ್ಗಮನ, ಕಾಡಿಗೆ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎಂಬಂತಾಗಿತ್ತು ರಾಜೇಶ್ವರಿಯವರಿಗೆ.

ಕುವೆಂಪು ತಮ್ಮ ಅವಧಿಯಲ್ಲಿ ಮೈಸೂರು ಯೂನಿವರ್ಸಿಟಿಯನ್ನು ಬೆಳೆಸಿದ ಸಮಯ ಒಂದು ಮರೆಯಲಾಗದ ಯುಗ ಎನ್ನಬಹುದು. ಸಾಹಿತಿಗಳು ಬರೆದಂತೆ ಬದುಕುತ್ತಿದ್ದ ಕಾಲ ಅದು. ’ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಕುವೆಂಪು ಕರೆ ಅವರ ಮಗನನ್ನೆ ತೀವ್ರವಾಗಿ ತಾಕಿತ್ತು. ಅದರಂತೆ ತಾವು ಇಷ್ಟಪಟ್ಟ ರಾಜೇಶ್ವರಿಯವರನ್ನ ಮದುವೆಯಾಗುವ ಪ್ರಸ್ತಾಪವನ್ನ ಕುವೆಂಪು ಮುಂದಿಟ್ಟಾಗ ಸಂತೋಷದಿಂದ ಮಂತ್ರ ಮಾಂಗಲ್ಯ ಸಂಹಿತೆಯನ್ನು ತಾವೇ ಬೋಧಿಸಿ, ಮದುವೆ ಮಾಡಿದ್ದರು. ಅದೂ ಅಂತರ್ಜಾತಿ ವಿವಾಹ! ಈ ಪ್ರಸಂಗ ಅಂದು ಎಷ್ಟು ವಿದ್ಯಾರ್ಥಿಗಳನ್ನ ಪ್ರಭಾವಿಸಿತ್ತೆಂದರೆ ತೇಜಸ್ವಿರ ತಲೆಮಾರಿನ ಒಂದು ದೊಡ್ಡ ವರ್ಗ ಮಂತ್ರ ಮಾಂಗಲ್ಯದ ಮದುವೆ ಮಾಡಿಕೊಂಡರು. ಈ ಪೈಕಿ ಕಡಿದಾಳು ಶಾಮಣ್ಣನವರದೊಂದು ದೊಡ್ಡ ಕತೆ. ಮಂತ್ರಮಾಂಗಲ್ಯ ಮದುವೆಗಾಗಿ ಎಲ್ಲ
ಸೇರಿದ್ದರೆ ಶಾಮಣ್ಣ ಇಸ್ತ್ರಿಗೆ ಕೊಟ್ಟಿದ್ದ ಜುಬ್ಬಾ ತರಲು ಹೋಗಿದ್ದರು. ದೋಟಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಅಂತೂ ಹಳೆ ಜುಬ್ಬದಲ್ಲೇ ಮದುವೆಯಾಗಬೇಕೆಂಬ ಶಾಮಣ್ಣನವರ ಹಠ ಗೆದ್ದಿತು. ತೇಜಸ್ವಿ ರಾಜೇಶ್ವರಿ ಜೋಡಿಯಂತೆ ಶಾಮಣ್ಣ ಶ್ರೀದೇವಕ್ಕನವರದೂ ಒಂದು ಅಪರೂಪದ ಜೋಡಿ.

ಅಂದು ಮೈಸೂರು ಯೂನಿವರ್ಸಿಟಿಯಲ್ಲಿ ಎಂ.ಎ ಮುಗಿಸಿದ್ದ ತೇಜಸ್ವಿ ಮತ್ತು ರಾಜೇಶ್ವರಿಯವರಿಗೆ ಕೆಲಸ ಸಿಗುವುದು ಕಷ್ಟವೇನಾಗಿರಲಿಲ್ಲ. ಆದರೆ ಆ ಜೋಡಿಹಕ್ಕಿ ಯೂನಿವರ್ಸಿಟಿ ವ್ಯಾಪ್ತಿಯಲ್ಲದೆ ನಗರ ಜೀವನಕ್ಕೆ ವಿದಾಯ ಹೇಳಿ ಚಿತ್ರಕೂಟದ ಕಗ್ಗಾಡಿನ ಅಂಚಿಗೆ ಬಂದು ನೆಲೆಸಿದರು. ಅಲ್ಲಿಗೆ ಆ ಡಿಗ್ರಿ ಸರ್ಟಿಫಿಕೇಟ್ ಏನಾದವೊ ಏನೋ, ಆಗಿನ ಅವರ ತೀರ್ಮಾನ ಈಗ ನೆನಸಿಕೊಂಡರೆ ಭಯವಾಗುತ್ತದೆ. ಏಕೆಂದರೆ ಬದುಕಲು ಒಂದು ನೆಲೆ ಮಾಡಿಕೊಳ್ಳಬೇಕಿತ್ತು. ಜೀವಿಸಲು ಬೇಸಾಯ ಮಾಡಬೇಕಿತ್ತು. ಇಬ್ಬರೂ ನಿರಂತರವಾಗಿ ದುಡಿದು ಚಿತ್ರಕೂಟದಲ್ಲಿ ನೆಲೆಗೊಂಡರು. ತೇಜಸ್ವಿ ನೆಲ ಅಗೆದು ಗದ್ದೆ ಮಾಡಿ ಬದ ಸವರಿ ಅಚ್ಚುಗಟ್ಟು ಮಾಡಿ ಭತ್ತ ಬೆಳೆದರು. ಅದನ್ನು ಕುಯ್ದು ಬಡಿದು, ತೂರಿ, ಕೇರಿ ಸಕಲೇಶಪುರದವರೆಗೂ ಹೋಗಿ ಮಾರಿ ಬಂದರು. ಆಗ ಭತ್ತ ಬೆಳೆದ ರೈತ ಯಾಕೆ ಇನ್ನ ಉದ್ಧಾರವಾಗಿಲ್ಲ ಎಂಬುದು ಅರಿವಿಗೆ ಬಂತು.

ನಂತರ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ಗೆ ಬಂದು ನೆಲೆಸಿದರು. ಒಂದು ಸಂಸಾರ ಎಷ್ಟು ಬೇಕೊ ಅಷ್ಟೇ ಭೂಮಿಯನ್ನ ಕೊಂಡು ತಮ್ಮ ಕನಸಿನ ಲೋಕ ನಿರ್ಮಿಸಿಕೊಂಡರು. ಅದಾಗಲೇ ’ನಿಗೂಢ ಮನುಷ್ಯರು’, ’ಯಮಳ ಪ್ರಶ್ನೆ’, ’ಅಬಚೂರಿನ ಪೋಸ್ಟಾಫೀಸು’ ಬರೆದಿದ್ದರು. ಅದರ ಮುನ್ನುಡಿಯಲ್ಲಿ ಹೇಳಿದಂತೆ ಕನ್ನಡ ಸಾಹಿತ್ಯದ ಅಂದಿನ ಸ್ಥಿತಿಯಿಂದ ಮುಂದೆ ಹೋಗಲು ಹೊಸದಿಗಂತದೆಡೆಗೆ ಅನಿವಾರ್ಯ ಎಂದು ಘೋಷಿಸಿ ಅದರಂತೆ ಬರೆದರು. ಅಷ್ಟರಲ್ಲಾಗಲೆ ಲಂಕೇಶ್ ಪತ್ರಿಕೆ ಹೊರಬಂದಿದ್ದರಿಂದ ಲಂಕೇಶ್ ಕೋರಿಕೆಯಂತೆ ತೇಜಸ್ವಿ ನಿರಂತರವಾಗಿ ಬರೆಯತೊಡಗಿದರು. ಆಗ ಲಂಕೇಶ್ ಪ್ರತಿವಾರ ಮೂಡಿಗೆರೆಗೆ ಹೊರಡುತ್ತಿದ್ದರು. ಆಗೊಮ್ಮೆ ನಾನು ಮೂಡಿಗೆರೆಗೆ ಬರುತ್ತೇನೆ ಎಂದೆ. ಆಯ್ತು ಬಾ ಎಂದರು. ಅಂದಿನಿಂದ ಹಲವು ಬಾರಿ ಮೂಡಿಗೆರೆಗೆ ಹೋಗಿ ಅಪರೂಪದ ಆ ಜೋಡಿ ಹಕ್ಕಿಗಳ ಬದುಕನ್ನ ಕಣ್ಣಾರೆ ಕಂಡಿದ್ದೇನೆ. ಬಂದವರೊಡನೆ ತೇಜಸ್ವಿ ಹರಟುತ್ತಿದ್ದರೆ ರಾಜೇಶ್ವರಿಯಕ್ಕ ಬಂದು ಕೂರುತ್ತಿದ್ದರು. ಅವರ ಆತಿಥ್ಯಕ್ಕೆ ಲಂಕೇಶ್ ಮಾರುಹೋಗಿದ್ದರು. ಮುಂದೊಮ್ಮೆ ತೇಜಸ್ವಿಯವರ ಸಂದರ್ಶನ ಮಾಡಲು ಕಳುಹಿಸಿದ್ದರು. ಆಗ ರಾಜೇಶ್ವರಿಯಕ್ಕ ನಮ್ಮ ಮಾತು ಕೇಳಿಸಿಕೊಳ್ಳುತ್ತಲೆ ಮೊಟ್ಟೆ ಸಾರಿನ ಅಡುಗೆ ಮಾಡಿ ಬಡಿಸಿದ್ದರು. ಆಗೊಮ್ಮೆ ಸಿರಿಮನೆ ನಾಗರಾಜ್ ದಂಪತಿಗಳೊಡನೆ ಹೋಗಿ ಅರ್ಧ ದಿನ ಮಾತನಾಡಿ ಶೃಂಗೇರಿಯಲ್ಲಿ ಅಂತರ್ಜಾತಿ ವಿವಾಹದ ಸಮ್ಮೇಳನ ಮಾಡುವ ತೀರ್ಮಾನ ಮಾಡಿ ಬಂದಿದ್ದೆವು.

ರಾಜೇಶ್ವರಿಯಕ್ಕನವರದ್ದು ಯಾವಾಗಲೂ ನಗುಮುಖ. ನಗುತ್ತಲೇ ಮಾತನಾಡುತ್ತಿದ್ದರು. ತೇಜಸ್ವಿಯವರೊಡನೆ ಮಾತನಾಡುತ್ತಿದ್ದರೆ, ನಾವು ಎಷ್ಟು ಕೆಟ್ಟದಾಗಿ ಬದುಕುತ್ತಿದ್ದೇವಲ್ಲ ಅನ್ನಿಸುತ್ತಿತ್ತು. ಮನುಷ್ಯ ಮತ್ತು ನಿಸರ್ಗವನ್ನ ಮುಖಾಮುಖಿಯಾಗಿ ನಿಲ್ಲಿಸಿ ನಮ್ಮ ಅವನತಿಯನ್ನು ತೋರಿಸುತ್ತಿದ್ದರು. ದೇವರ ಜಾಗಕ್ಕೆ ನಿಸರ್ಗವನ್ನ ತಂದು ಕೂರಿಸುವ ಅವರ ಬರವಣಿಗೆ ಹೊಸ ತಲೆಮಾರನ್ನ ಆಕರ್ಷಿಸಿದೆ. ರಾಜೇಶ್ವರಿಯಕ್ಕನ ಪ್ರತಿಭೆ ನಮ್ಮ ಅರಿವಿಗೆ ಬಂದಿದ್ದು ಅವರನ್ನು ಚಿಕ್ಕಮಗಳೂರಿಗೆ ಕರೆಸಿ ಮಾತನಾಡಿಸಿದಾಗ. ನಾವೊಂದಿಷ್ಟು ಗೆಳೆಯರು ಚಿಕ್ಕಮಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯ ಕುರಿತ ಸೆಮಿನಾರ್ ಮಾಡಲು ಹೊರಟಾಗ ರಾಜೇಶ್ವರಿಯಕ್ಕನನ್ನ ಕರೆಯಲು ಹೋದೆವು. ಆಗವರು ನಾನು ಬರುತ್ತೇನೆ, ಆದ್ರೆ ಇನ್ವಿಟೇಶನ್‌ನಲ್ಲಿ ನನ್ನ ಹೆಸರು ಹಾಕಬೇಡಿ ಎಂದರು. ಅಲ್ಲಿಗೆ ಅವರು ಬರುವುದಿಲ್ಲವೆಂದು ಅನುಮಾನವಾಯ್ತು. ಆದರೆ ಕಾರ್ಯಕ್ರಮದ ಸಮಯಕ್ಕೆ ಸರಿಯಾಗಿ ಹಾಜರಾದರು. ಅದೇ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ಅಗ್ರಹಾರ ಕೃಷ್ಣಮೂರ್ತಿಗೆ ತೇಜಸ್ವಿ ಹೆಸರಿನಲ್ಲಿ ಕೊಡುವ ಅನಿಕೇತನ ಪ್ರಶಸ್ತಿ ಬಂದಿತ್ತು. ಅದರಿಂದ ಸನ್ಮಾನಕ್ಕೆ ನಾವು ತಯಾರಿ ನಡೆಸುವಾಗ ರಾಜೇಶ್ವರಿಯವರು ಗಲಿಬಿಲಿಗೆ ತುತ್ತಾಗಿದ್ದರು. ಯಾಕೆಂದರೆ ಇಂತಹ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದನ್ನ ಎಲ್ಲಿ ತೇಜಸ್ವಿ ನೋಡುತ್ತಾರೋ ಎಂಬ ಅಳುಕಾಯ್ತಂತೆ. ತೇಜಸ್ವಿಯವರಿಗೆ ಸಭೆ ಸಮಾರಂಭಗಳಲ್ಲಿನ ಸ್ವಾಗತ, ಪರಿಚಯ ಭಾಷಣ, ಸನ್ಮಾನ ವಂದನಾರ್ಪಣೆಗಳೆಲ್ಲ ತುಂಬ ತಮಾಷೆಯ ಪ್ರಹಸನಗಳಾಗಿದ್ದವಂತೆ. ಸನ್ಮಾನಕ್ಕೆ ತುತ್ತಾದ ವ್ಯಕ್ತಿ ಕುರ್ಚಿಯ ಮೇಲೆ ಕುಳಿತು, ಶಾಲಿನಿಂದ ಮುಚ್ಚಿಸಿಕೊಂಡು ಜರಿಪೇಟ, ಗಂಧದ ಹಾರವೆಲ್ಲಾ ಮುಚ್ಚಿ ಕ್ಷಣಹೊತ್ತು ಸತ್ತಂತಾಗಿ ಪೋಟೋ ಕ್ಲಿಕ್ಕಿಸುವುದನ್ನು ನೋಡುತ್ತಿದ್ದಾಗ ತೇಜಸ್ವಿ ಇದೇನೆ ಇದು ಎಂದು ನಕ್ಕಿದ್ದರಂತೆ. ಕಾಡಿನ ಜೀವಿಗಳಾಗಿದ್ದ ಆ ದಂಪತಿಗಳಿಗೆ ಪಟ್ಟಣದಲ್ಲಿ ನಡೆಯುವ ಕಥೆಗಳು ಪ್ರಹಸನದಂತಾಗಿದ್ದವು, ಅಕಸ್ಮಾತ್ ತೇಜಸ್ವಿ ಯಾವುದಾದರೂ ಸಭೆಗೆ ಬಂದರೆ, ತೇಜಸ್ವಿಯವರಿಗೆ ಕಿರಿಕಿರಿಯಾಗದಂತೆ ಸಭೆ ನಡೆಯಬೇಕಿತ್ತು.

ತೇಜಸ್ವಿಯವರ ನೆನಪಿನ ಸಭೆಗೆ ಬಂದ ರಾಜೇಶ್ವರಿಯವರು, ತೇಜಸ್ವಿಯವರು ಕಡೆಯವರೆಗೂ ಸರಕಾರಕ್ಕೆ ಒತ್ತಾಯಿಸುತ್ತಿದ್ದ ಕನ್ನಡದ ತಂತ್ರಾಂಶದ ಬಗ್ಗೆ ಕಿಮ್ಮನೆ ರತ್ನಾಕರ್ ಅವರಿಗೆ ಪ್ರಸ್ತಾಪಿಸಿ, ಸಚಿವರಾದಿಯಾಗಿ ಯಾರೂ ಇದನ್ನು ಪ್ರಸ್ತಾಪಿಸದೇ ಇರುವುದಕ್ಕೆ ಬೇಸರಗೊಂಡರು. ಅಲ್ಲದೆ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಅವರ ಭಾಷೆಗಳು ಅಂತರ್ಜಾಲದಲ್ಲಿ ದೊರಕುತ್ತಿರುವಾಗ, ಕನ್ನಡದಲ್ಲಿ ಯಾಕೆ ಇನ್ನೂ ಸಾಧ್ಯವಾಗಿಲ್ಲ ಎಂದರು. ಅವಾಗಾಗಲೇ ರಾಜೇಶ್ವರಿಯವರು ಹೊಸ ಯುಗಕ್ಕೆ ಸಜ್ಜುಗೊಂಡಿರುವುದರ ಬಗ್ಗೆ ಅಚ್ಚರಿಯಾಯ್ತು. ಆವರೆಗೂ ತೇಜಸ್ವಿಯವರ ನೆರಳಿನಲ್ಲಿ ಗೃಹಿಣಿಯಂತೆ ಬದುಕಿದ್ದಂತೆ ಕಂಡಿದ್ದ
ರಾಜೇಶ್ವರಿಯವರು, ತೇಜಸ್ವಿಗೆ ತಕ್ಕ ಸಂಗಾತಿಯಂತೆ ಕಂಡರು.

ಅವರ ನಿರುತ್ತರದ ಅಂಗಳದಲ್ಲಿನ ಸಸ್ಯರಾಶಿ ನೋಡಿದರೆ ವಿಸ್ಮಯವಾಗುತ್ತಿತ್ತು. ಗೌರಿ ಒತ್ತಾಯದಿಂದ ಅವರು ಬರೆದ “ನನ್ನ ತೇಜಸ್ವಿ” ಓದಿದವರಿಗೆ ಅವರೊಬ್ಬ ಪರಿಪಕ್ವ ಅಪ್ರಕಟಿತ ಲೇಖಕಿ ಎಂಬುದು ಅರಿವಾಗುತ್ತದೆ. ತೇಜಸ್ವಿಯವರ ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನು ಸಿನಿಮಾ ಮಾಡಲು ತೀರ್ಮಾನಿಸಿದ ನಿರ್ದೇಶಕರು, ಆ ಕತೆಯ ಹಕ್ಕುಗಳನ್ನು ತೆಗೆದುಕೊಳ್ಳಲು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನನ್ನನ್ನು ಕರೆದುಕೊಂಡು ಹೋದರು. ರಾಜೇಶ್ವರಿಯಕ್ಕ ಇವುರನ್ನೆಲ್ಲಾ ಕರಕೊಂಡು ಬಂದ್ರೆ ನಾನು ರಾಯಲ್ಟಿ ಕಡಿಮೆ ಮಾಡ್ತಿನಾ ಎಂದು ನಗಾಡಿದರು. ನಾಗತಿಹಳ್ಳಿಗೆ, ನೀವು ಕರ್ವಾಲೋ ಸಿನಿಮಾ ಮಾಡ್ತಿನಿ ಅಂತ ಬರದ ಲೆಟ್ರು ಅದಕ್ಕೆ ತೇಜಸ್ವಿ ಕೊಟ್ಟ ಉತ್ತರ ಇಲ್ಲಿದೆ ನೋಡಿ, ಎಂದು ಫೈಲು ತಂದು ತೋರಿದರು. ಅವರ ಪತ್ರವ್ಯವಹಾರದ ಶಿಸ್ತಿಗೆ ದಂಗುಬಡಿದೆವು. ಆ ಪತ್ರದಲ್ಲಿ ತೇಜಸ್ವಿ, ’ಕತೆಗಾರನಿಗೆ ಅನ್ಯಾಯವಾಗಬಹುದೆಂದು ಯೋಚಿಸಬೇಡಿ, ನೀವು ಹಾಕಿದ ದುಡ್ಡು ಬರುವಂತೆ ಬದಲಾವಣೆ ಮಾಡಿಕೊಳ್ಳಿ’ ಎಂದು ಬರೆದಿದ್ದರು. ’ಕಿರಗೂರಿನ ಗಯ್ಯಾಳಿಗಳು’ ಕತೆಯನ್ನ ಕೇಳಿದಷ್ಟು ಬೆಲೆಗೆ ಖರೀದಿಸಲಾಯ್ತು. ಆದರೆ ಸಿನಿಮಾ ನಿರೀಕ್ಷಿತ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ.

ಶಿವಮೊಗ್ಗದ ಗ್ರಂಥಾಲಯಾಧಿಕಾರಿ ಪ್ರೇಮಲತ ಅದೇ ಜಿಲ್ಲೆಯ ಹೊಸ ಕಾರಾಗೃಹದಲ್ಲಿ
ಗ್ರಂಥಾಲಯವನ್ನು ತೆರೆಯಲು ತೀರ್ಮಾನಿಸಿದರು. ಅದರ ಉದ್ಘಾಟನೆಗೆ ರಾಜೇಶ್ವರಿಯವರನ್ನು ಆಹ್ವಾನಿಸಲಾಗಿ ಅವರು ಬರಲೊಪ್ಪಿದ್ದು ನಮಗೆಲ್ಲಾ ಆಶ್ಚರ್ಯವಾಗಿತ್ತು. ನಿಗದಿಯಾದ ದಿನಕ್ಕೆ ರಾಜೇಶ್ವರಿಯವರೊಂದಿಗೆ ಚಿದಾನಂದಗೌಡರು ತಾರಿಣಿಯವರೊಂದಿಗೆ ಬಂದೇಬಿಟ್ಟರು. ಅದು ಹೊಸ ಜೈಲಾಗಿದ್ದರಿಂದ ವಿನೂತನವಾಗಿತ್ತು. ತುಮಕೂರು ಜೈಲಿನ ಮಹಿಳಾ ಕೈದಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಹೆಣ್ಣುಮಕ್ಕಳಿಗಾಗಿ ಕುಶಲ ಕೆಲಸಗಳ ಜೊತೆಗೆ ಒಳ್ಳೆಯ ಗ್ರಂಥಾಲಯವೂ ತೆರೆಯುವುದಿತ್ತು. ರಾಜೇಶ್ವರಿಯಕ್ಕನನ್ನು ನಾನು ಪರಿಚಯಿಸುತ್ತ “ಈ ಜಗತ್ತಿನ ಶ್ರೇಷ್ಠ ಲೇಖಕರಾದ ತೇಜಸ್ವಿಯವರ ಧರ್ಮ ಪತ್ನಿ ರಾಜೇಶ್ವರಿಯವರು ಬಂದಿದ್ದಾರೆ” ಎಂದೆ. “ಇದು ನನ್ನ ಮಾತಲ್ಲ ಲಂಕೇಶರು ಕರ್ನಾಟಕ ಸಂಘಕ್ಕೆ ಬಂದಿದ್ದಾಗ ತೇಜಸ್ವಿಯವರ ಎದುರೇ ಹೇಳಿದ ಮಾತು” ಎಂದೆ; ಇಂತಹ ಯಾವ ಮಾತಿಗೂ ತೇಜಸ್ವಿಯವರಾಗಲಿ ರಾಜೇಶ್ವರಿಯವರಾಗಲಿ ಉಬ್ಬುವವರಾಗಿರಲಿಲ್ಲ.

ಗ್ರಂಥಾಲಯ ಉದ್ಘಾಟಿಸಿದ ರಾಜೇಶ್ವರಿಯಕ್ಕ ಮಹಿಳಾ ಕೈದಿಗಳಿಗೆ ಇಲ್ಲಿನ ಗ್ರಂಥಾಲಯವನ್ನು
ಸದುಪಯೋಗಪಡಿಸಿಕೊಳ್ಳಲು ಹೇಳಿದ್ದಲ್ಲದೆ, ಕೈದಿಗಳ ಸನ್ನಡತೆಯ ಕಾರಣವಾಗಿ ನ್ಯಾಯಾಧೀಶರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಲು ಇರುವ ಕೋರಿಕೆಯ ವಿಷಯಗಳನ್ನು ವಿಸ್ತಾರವಾಗಿ ಹೇಳಿದರು. ಕೈದಿಯೊಬ್ಬರನ್ನು ಕುರಿತು ರಾಜೇಶ್ವರಿಯಕ್ಕ ’ನಿಮ್ಮ ಭಾಷೆ ವಿವರದ ಕ್ರಮ ಚೆನ್ನಾಗಿದೆ, ಇಲ್ಲಿನ ಗ್ರಂಥಾಲಯದಲ್ಲಿ ಓದಿ ಲೇಖಕಿಯಾಗಿ’ ಎನ್ನುತ್ತಾ ’ನೀವ್ಯಾಕೆ ಜೈಲಲಿದ್ದೀರಿ’ ಎಂದು ಪ್ರಶ್ನಿಸಿದರು. ಆ ಹೆಣ್ಣು ಮಗಳು ಗಂಡನ ಕೊಲೆ ಆರೋಪವಿದೆ ಎಂದಾಗ ರಾಜೇಶ್ವರಿಯಕ್ಕ ನಿರುತ್ತರದಾದರು.

ಅವರು ಶಿವಮೊಗ್ಗದಿಂದ ಹೊರಡುವಾಗ ಚಂದ್ರೇಗೌಡ್ರೆ ನೀವು ತಂದಿರೊ “ತೇಜಸ್ವಿ ನೆನಪಲ್ಲಿ” ಪುಸ್ತಕದಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ, ಗುರುತು ಮಾಡಿದ್ದೀನಿ, ಮರುಮುದ್ರಣ ಮಾಡುವಾಗ ತೆಗೆದು ಹಾಕಿ ಎಂದರು. ’ಆಯ್ತು ಕಣಕ್ಕ’ ಎಂದೆ. ರಾಜೇಶ್ವರಿ ತುಂಬು ಧೈರ್ಯದ ಅಪರೂಪದ ಕಾಡಿನ ಜೀವ. ತೇಜಸ್ವಿ ತೀರಿಕೊಂಡ ಮೇಲೆಯೂ ಕಾಡಿನಿಂದ ಕದಲಲಿಲ್ಲ. ಆದರೂ ತಮ್ಮ ಶರೀರವನ್ನು ಮೆಡಿಕಲ್ ಕಾಲೇಜಿಗೆ ದಾನಮಾಡಿ ಅಶ್ಚರ್ಯ ಮೂಡಿಸಿದ್ದಾರೆ. ಕುವೆಂಪು ಮತ್ತು ತೇಜಸ್ವಿಯವರು ಕವಿಶೈಲದಲ್ಲಿ ನೆಲೆಗೊಂಡರೆ, ಮಣ್ಣಿಗಾಗಿ ನಿರುತ್ತರ ಅಥವಾ ಕವಿಶೈಲ ಕೈಬಿಡಲು ಅವರು ತೆಗೆದುಕೊಂಡ ತೀರ್ಮಾನ ಸಾಮಾನ್ಯದಲ್ಲ. ಇದೊಂದು ಉತ್ತುಂಗದ ನಡವಳಿಕೆ. ರಾಜೇಶ್ವರಿ ಅಕ್ಕನ ಬದುಕೇ ಅಂತಹದ್ದು. ಶ್ರೇಷ್ಠತೆಗೆ ಉದಾಹರಣೆಯಾಗಿ ನಿಲ್ಲುವಂತಾದ್ದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿ ನೆನಪು; ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...