2022ರ ಏಷ್ಯಾ ಕಪ್ ಶ್ರೀಲಂಕಾ ಪಾಲಾಗಿದ್ದು ದಸುನ್ ಶನಕ ನೇತೃತ್ವದ ತಂಡವು ಪಾಕಿಸ್ತಾನವನ್ನು 23 ರನ್ಗಳಿಂದ ಸೋಲಿಸಿ ಆರನೇ ಬಾರಿಗೆ ಏಷ್ಯಾ ಕಪ್ ಅನ್ನು ಗೆದ್ದುಕೊಂಡಿತು. ಈ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ಶ್ರೀಲಂಕಾ ಭಾವುಟ ಹಿಡಿದು ಸಂಭ್ರಮಿಸಿದ್ದಾರೆ.
ಕಪ್ ಗೆಲ್ಲುವಲ್ಲಿ ಶ್ರೀಲಂಕಾ ಆಲ್ರೌಂಡ್ ಪ್ರದರ್ಶನ ತೋರಿತು. ತಂಡವು ಒಂದು ಹಂತದಲ್ಲಿ 58 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ತತ್ತರಿಸಿತು. ಆದರೆ ಭಾನುಕಾ ರಾಜಪಕ್ಸೆ ಅವರ 71 ರನ್ಗಳಿಂದಾಗಿ, ಶ್ರೀಲಂಕಾ 20 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು. ಶ್ರೀಲಂಕಾ ತಂಡವು ಪಾಕಿಸ್ತಾನವನ್ನು 147 ರನ್ಗಳಿಗೆ ಆಲೌಟ್ ಮಾಡಿ 23 ರನ್ಗಳಿಂದ ಕಪ್ ತನ್ನದಾಗಿಸಿಕೊಂಡಿತು.
ಗೆಲುವಿನ ನಂತರ, ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಶ್ರೀಲಂಕಾದ ಧ್ವಜದೊಂದಿಗೆ ಪೋಸ್ ನೀಡಿದ್ದು, ದಸುನ್ ಶನಕಾ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ಗಂಭೀರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಸೂಪರ್ ಸ್ಟಾರ್ ತಂಡ. ನಿಜವಾಗಿಯೂ ಅರ್ಹವಾಗಿದೆ! #CongratsSriLanka” ಎಂದು ಬರೆದುಕೊಂಡಿದ್ದಾರೆ.
ಗೌತಮ್ ಗಂಭೀರ್ ಯಾವುದೇ ತಂಡದ ಬೆಂಬಲಿಗನಾಗಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಕ್ರಿಕೆಟ್ ಕಾಮೆಂಟರಿ ಮಾಡಲು ಬಂದಿದ್ದರು. ಇದಾಗ್ಯೂ ಒಂದು ತಂಡವನ್ನು ಬೆಂಬಲಿಸಿ ಮೈದಾನದಲ್ಲಿ ಧ್ವಜ ಹಿಡಿದು ಸಂಭ್ರಮಿಸಿರುವುದಕ್ಕೆ ಹಲವು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಅವರು ಕಾಮೆಂಟರಿ ವೇಳೆ ಆಡಿದ ಮಾತುಗಳಿಗೂ ಆಕ್ಷೇಪಗಳು ವ್ಯಕ್ತವಾಗಿವೆ. ಆ ಬಳಿಕ ಶ್ರೀಲಂಕಾ ಅಭಿಮಾನಿಗಳನ್ನು ರಂಜಿಸಲು ಗಂಭೀರ್ ಬಾವುಟ ಹಿಡಿದಿದ್ದಾರೆಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.
Former Indian Cricketer @GautamGambhir waved a Sri Lankan flag to celebrate the Sri Lanka win after some fans criticised him over several remarks he made during commentary pic.twitter.com/JtYNvjRAqh
— Azzam Ameen (@AzzamAmeen) September 11, 2022