ಗನ್ ಮತ್ತು ಲಾಠಿ ಹಿಡಿದು ಶಸ್ತ್ರಸಜ್ಜಿತರಾಗಿ, ಗಲಭೆ ವಿರೋಧಿ ಧಿರಿಸು ಧರಿಸಿದ್ದ ಪೊಲೀಸರ ಗುಂಪನ್ನು, ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಅಟ್ಟಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಕ್ರೂರವಾಗಿ ಥಳಿಸಲಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಪೊಲೀಸರ ಗುಂಡೇಟಿಗೆ ವ್ಯಕ್ತಿ ನೆಲಕ್ಕೆ ಉರುಳಿ ನಿಶ್ಚಲವಾದ ನಂತರವು ಪೊಲೀಸರು ಗುಂಪಾಗಿ ಬಂದು ವ್ಯಕ್ತಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಫೋಟೋ ಪತ್ರಕರ್ತನೊಬ್ಬ ವ್ಯಕ್ತಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಪೊಲೀಸರು ಅವನನ್ನು ತಡೆದು ದೂರ ಕರೆದುಕೊಂಡು ಬಂದ ನಂತರ ಕೂಡಾ ದೂರದಿಂದ ಮತ್ತೆ ಹಾರಿ ಬಂದು ನಿಶ್ಚಲವಾಗಿ ನೆಲಕ್ಕೆ ಬಿದ್ದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಸ್ನೇಹಿತೆಯ ಭೇಟಿ – ಮುಸ್ಲಿಂ ಯುವಕನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು
ಈ ಭಯಾನಕ ದೃಶ್ಯಗಳು ಅತಿಕ್ರಮಣ ವಿರೋಧಿ ಪ್ರಕ್ರಿಯೆ ನಡೆಯುತ್ತಿದ್ದ ರಾಜ್ಯದ ದರ್ರಾಂಗ್ ಜಿಲ್ಲೆಯ ಧೋಲ್ಪುದಲ್ಲಿ ಗುರುವಾರ ನಡೆದಿದೆ. ಪೊಲೀಸರು ಈ ಪ್ರಕ್ರಿಯೆಗಾಗಿ ಸಂಪೂರ್ಣ ಗಲಭೆ ವಿರೋಧಿ ಧಿರಿಸು ಧರಿಸಿ, ರೈಫಲ್ ಮತ್ತು ಲಾಠಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಎಂಎಲ್ ಪಾಲಿಟ್ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಅವರು, “ಒಬ್ಬ ಏಕಾಂಗಿ ವ್ಯಕ್ತಿ ಕೋಲು ಹಿಡಿದುಕೊಂಡು ಓಡುತ್ತ ಬಂದಾಗ ಎದೆಗೆ ಗುಂಡು ಹಾರಿಸಲು ಯಾವ ಪ್ರೋಟೋಕಾಲ್ ಆದೇಶಿಸುತ್ತದೆ. ಬಹುಶಃ ಸತ್ತು ನೆಲಕ್ಕೆ ಬಿದ್ದಿರುವ ಮನುಷ್ಯನ ದೇಹದ ಮೇಲೆ ರಕ್ತಪಿಪಾಸುವಿನಂತೆ ದ್ವೇಷದಿಂದ ಪದೇ ಪದೇ ಜಿಗಿಯುವ, ಕ್ಯಾಮರಾದೊಂದಿಗಿರುವ ನಾಗರಿಕ ಉಡುಪು ಧರಿಸಿದ ವ್ಯಕ್ತಿ ಯಾರು?” ಎಂದು ಪ್ರಶ್ನಿಸಿದ್ದಾರೆ.
What protocol orders firing to the chest of a lone man coming running with a stick @DGPAssamPolice @assampolice ? Who is the man in civil clothes with a camera who repeatedly jumps with bloodthirsty hate on the body of the fallen (probably dead) man? pic.twitter.com/gqt9pMbXDq
— Kavita Krishnan (@kavita_krishnan) September 23, 2021
ಇದನ್ನೂ ಓದಿ: ಪಾದ್ರಿಯಿಂದ ಮುಸ್ಲಿಂ ವಿರೋಧಿ ಭಾಷಣ – ಪ್ರಾರ್ಥನಾ ಸಭೆಯಿಂದ ಹೊರನಡೆದ ಕ್ರೈಸ್ತ ಸನ್ಯಾಸಿನಿಯರು!
ಘಟನೆಯನ್ನು ಖಂಡಿಸಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, “ಇದು ಯಾವ ನರಕ? ಈ ಹತ್ಯೆಯಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಈಗಲೇ ಕ್ರಮ ಕೈಗೊಳ್ಳಿ. ನತದೃಷ್ಟ ವ್ಯಕ್ತಿಯನ್ನು ಬಂಧಿಸಬಹುದಿತ್ತು. ಅವರನ್ನು ಕೊಲ್ಲಲು ಪೊಲೀಸರಿಗೆ ಅಧಿಕಾರವಿಲ್ಲ. ಒಂದು ಸಮಾಜವಾಗಿ ನಮಗೆ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧೋಲ್ಪುದಲ್ಲಿ ನಡೆದ ಅತಿಕ್ರಮಣ ವಿರೋಧಿ ಪ್ರಕ್ರಿಯೆಯಲ್ಲಿ ಒಂಬತ್ತು ಪೊಲೀಸರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಕೆಲವು ಮಾಧ್ಯಮಗಳು, “ತಮ್ಮ ಮನೆಗಳನ್ನು ತೆರವುಗೊಳಿಸುತ್ತಿದ್ದ ಪೊಲೀಸರ ವಿರುದ್ದ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ತಾರಕಕ್ಕೇರಿ, ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಸದ್ದಾಂ ಹುಸೇನ್ ಮತ್ತು ಶೇಖ್ ಫರೀದ್ ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿ, ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ವರದಿ ಮಾಡಿವೆ.
ಸೋಮವಾರ ಕೂಡಾ ಅತಿಕ್ರಮಣ ವಿರೋಧಿ ಪ್ರಕ್ರಿಯೆಯ ಕಾರ್ಯಾಚರಣೆಯಲ್ಲಿ ಸುಮಾರು 800 ಕುಟುಂಬಗಳನ್ನು ಹೊರಹಾಕಲಾಗಿದೆ. ಸ್ಥಳೀಯರು ಕಲ್ಲುಗಳಿಂದ ದಾಳಿ ಮಾಡಿದ್ದರಿಂದ ಬಲಪ್ರಯೋಗಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಬಾಲಕಿಯ ಅಪಹರಣ; ಆರ್ಎಸ್ಎಸ್ ಮುಖಂಡ ಸೇರಿ ಐವರ ಬಂಧನ
“ನಮ್ಮ ಒಂಬತ್ತು ಪೊಲೀಸರು ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈಗ ಪರಿಸ್ಥಿತಿ ಸಾಮಾನ್ಯವಾಗಿದೆ” ಎಂದು ಇಂದಿನ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
‘‘ಘರ್ಷನೆಯ ಪರಿಸ್ಥಿತಿಯಿಂದಾಗಿ ನಾವು ಹೊರಹಾಕುವಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ನಾವು ನಂತರ ಮೌಲ್ಯಮಾಪನ ಮಾಡುತ್ತೇವೆ. ಇಲ್ಲಿಂದ ಈಗಲೇ ಹಿಂದಿರುಗುತ್ತಿದ್ದೇವೆ” ಎಂದು ಘರ್ಷಣೆಯ ಸ್ಥಳದಲ್ಲಿದ್ದ ಹಾಜರಿದ್ದ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಆದರೆ ಸ್ಥಳೀಯರನ್ನು ಹೊಡೆದುರುಳಿಸಿದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, “ಆ ಪ್ರದೇಶವು ದೊಡ್ಡದಾಗಿದ್ದು, ನಾನು ಇನ್ನೊಂದು ಬದಿಯಲ್ಲಿದ್ದೆ. ಈ ಬಗ್ಗೆ ಪರಿಶೀಲಿಸಿ ಪರಿಸ್ಥಿತಿಯನ್ನು ನಿರ್ಣಯಿಸುತ್ತೇನೆ” ಎಂದು ಹೇಳಿದ್ದಾರೆ.
ಕಳೆದ ಸೋಮವಾರ ನಡೆದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ನಂತರ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “800 ಮನೆಗಳನ್ನು ತೆರವುಗೊಳಿಸುವ ಮೂಲಕ 4500 ಬಿಘಾಗಳನ್ನು ತೆರವುಗೊಳಿಸಿದ್ದಕ್ಕಾಗಿ ದರ್ರಾಂಗ್ ಜಿಲ್ಲಾಡಳಿತ ಮತ್ತು ಅಸ್ಸಾಂ ಪೊಲೀಸರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದ್ದರು.
ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಎಂದ ಝೀ ಮತ್ತು ನ್ಯೂಸ್18!