Homeಚಳವಳಿಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ಕನಸುಗಾರ್ತಿಯೊಬ್ಬಳ ಕಣ್ಣೀರು : ಆತಿಶಿ ಮರ್ಲೀನಾ ಎಂಬ ಶೈಕ್ಷಣಿಕ ಚೈತನ್ಯದ ಕುರಿತು

ದೆಹಲಿ ಸರ್ಕಾರಿ ಶಾಲೆಗಳ ಅಭಿವೃದ್ದಿಯ ಹಿಂದಿನ ಪ್ರೇರಕ ಶಕ್ತಿ ಇವರು.

- Advertisement -
- Advertisement -

| ಪುರುಷೋತ್ತಮ ಬಿಳಿಮಲೆ |

 

ನಾಡಿದ್ದು ಜೂನ್ 8ನೇ ತಾರೀಕಿಗೆ 39 ವರ್ಷ ತುಂಬಲಿರುವ ಆತಿಶಿ ಮರ್ಲಿನಾ ಅವರನ್ನು ಅವರ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ನಾನು ಹತ್ತಿರದಿಂದ ಬಲ್ಲೆ. ಜೆ ಎನ್ ಯುವಿನ ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಆಕೆಗೆ ಭಾರತೀಯ ಇತಿಹಾಸ ಮತ್ತು ವರ್ತಮಾನದ ಬಗ್ಗೆ ಆಳವಾದ ತಿಳುವಳಿಕೆಯಿದೆ. ಅವಳ ತಂದೆಯ ಹೆಸರು ಪ್ರೊ. ವಿಜಯ್ ಸಿಂಗ್ , ತಾಯಿ ತೃಪ್ತಿ ವಹಿ. ಇಬ್ಬರೂ ದೆಹಲಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಎಡಪಂಥೀಯ ಒಲವಿರುವ ಈ ದಂಪತಿಗಳು ಮಾರ್ಕ್ಸ್ ಮತ್ತು ಲೆನಿನ್ ಅವರ ನೆನಪಿಗಾಗಿ ಅತಿಶಿ ಹೆಸರಿಗೆ ಮರ್ಲೀನಾ ಸೇರಿಸಿದರು.

ದೆಹಲಿಯ ಸ್ಪ್ರಿಂಗ್ ಡೇಲ್ ಶಾಲೆಯಲ್ಲಿ ಹೈಸ್ಕೂಲು ಕಲಿತ ಅತಿಶಿಯು ತನ್ನ ಸ್ವಂತ ಪ್ರತಿಭೆಯಿಂದ ದೆಹಲಿಯ ಪ್ರಖ್ಯಾತವಾದ ಸೈಂಟ್ ಸ್ಟೀಫನ್ ನಲ್ಲಿ ಪ್ರವೇಶ ಪಡೆದು, 2001ರಲ್ಲಿ ದೆಹಲಿ ವಿವಿಗೇ ಪ್ರಥಮಳಾಗಿ ಇತಿಹಾಸದಲ್ಲಿ ಪದವಿ ಪಡೆದಳು. ತಕ್ಷಣ ಅವಳಿಗೆ ಬ್ರಿಟನ್ನಿನ ಚೀವಿನಿಂಗ್ ( Chevening Scholarship) ಶಿಷ್ಯವೇತನ ದೊರೆತದ್ದರಿಂದ ಮುಂದಿನ ಶಿಕ್ಷಣಕ್ಕಾಗಿ ಆಕೆ ಆಕ್ಸಫರ್ಡ್ ವಿವಿಗೆ ತೆರಳಿ, 2003ರಲ್ಲಿ ಇತಿಹಾಸದಲ್ಲಿ ಎಂ ಎ ಪದವಿ ಪಡೆದಳು.

ದೆಹಲಿಯ ಸರ್ಕಾರಿ ಶಾಲೆ

ಮುಂದೆ ರೋಡ್ ಸ್ಕಾಲರ್ ಶಿಪ್ ಪಡೆಯುವಲ್ಲಿ ಯಶಸ್ವಿಯಾದ ಆಕೆ 2005ರವರೆಗೆ ಲಂಡನ್ನಿನ ಅತ್ಯಂತ ಶ್ರೀಮಂತವಾದ ಮೆಗ್ಡಲಿನ್ ಕಾಲೇಜಿನಲ್ಲಿ ( Magdalen College) ತನ್ನ ಸಂಶೋಧನೆ ಮತ್ತು ಅಧ್ಯಾಪನವನ್ನು ಮುಂದುವರಿಸಿ, 2006ರಲ್ಲಿ ಭಾರತಕ್ಕೆ ಹಿಂದಿರುಗಿ, ಸ್ವಲ್ಪ ಕಾಲ ಆಂಧ್ರದ ಋಷಿವ್ಯಾಲಿ ಶಾಲೆಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಅಧ್ಯಾಪಕಿಯಾಗಿ ಕೆಲಸ ಮಾಡಿದಳು.

2007ರಲ್ಲಿ ಆಕೆ ಮಧ್ಯಪ್ರದೇಶದ ಹಳ್ಳಿಯೊಂದಕ್ಕೆ ತೆರಳಿ ಸಾವಯವ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡಳು. ಅಲ್ಲಿಯ ಸಂಭಾವನಾ ಸಂಸ್ಥೆಯನ್ನು ( Sambhavana Institute of Public policy) ಆಕೆ ಬೆಳೆಸಿದ ರೀತಿ ಅನನ್ಯವಾದುದು. 2015ರಲ್ಲಿ ನಡೆದ ಖಾಂಡ್ವಾ ಸತ್ಯಾಗ್ರಹದ ಪ್ರೇರಕ ಶಕ್ತಿ ಈಕೆಯೇ.

ಮಧ್ಯಪ್ರದೇಶದಿಂದ ಆಕೆಯನ್ನು ಬಿಡಿಸಿದ ಪ್ರೊ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ ಅವರು 2011ರಲ್ಲಿ ಅವಳನ್ನು ದೆಹಲಿಗೆ ಕರೆತಂದರು. ಆತಿಶಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡು 2013ರಲ್ಲಿ ಆಪ್ ( AAP)ನ ಸೈದ್ಧಾಂತಿಕೆಯನ್ನು ರೂಪಿಸುವ ಸಮಿತಿಗಳಲ್ಲಿ ಆಳವಾಗಿ ಕೆಲಸ ಮಾಡಿದಳು. ಆಪ್ ನ ಪರವಾಗಿ ಆಕೆ ಟೆಲಿವಿಷನ್ ಚ್ಯಾನೆಲ್ ಗಳಲ್ಲಿ ಮಾತಾಡುತ್ತಿದ್ದ ರೀತಿಯಿಂದ ಆಕೆ ವಿಶ್ವದಾದ್ಯಂತ ಜನರ ಗಮನ ಸೆಳೆದಳು. ಒಳ್ಳೆಯ ಭಾಷೆ, ಆಳವಾದ ತಿಳುವಳಿಕೆ, ನಿರುದ್ವಿಗ್ನವಾಗದ ವಿಷಯ ಮಂಡನೆ, ಇದಿರಾಳಿಯ ಮಾತಿಗೂ ಸಂಯಮದಿಂದ ಕಿವಿಗೊಡುತ್ತಿದ್ದ ರೀತಿಯಿಂದ ಆಕೆ ದೆಹಲಿಯಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಳು.

ದೆಹಲಿಯಲ್ಲಿ ಆಪ್ ಸರಕಾರ ರಚನೆಯಾದ ಮೇಲೆ ಮುಖ್ಯಮಂತ್ರಿ ಕೇಜ್ರಿವಾಲ್, ಆತಿಶಿ ಅವರನ್ನು ಶಿಕ್ಷಣ ಮಂತ್ರಿ ಮನೀಶ್ ಸಿಸೋಡಿಯಾ ಅವರ ಶೈಕ್ಷಣಿಕ ಸಲಹೆಗಾರರೆಂದು ನೇಮಕ ಮಾಡಿದರು. ಜುಲಾಯಿ 2015ರಿಂದ ಎಪ್ರಿಲ್ 17, 2018ರವರೆಗೆ ಈ ಹುದ್ದೆಯಲ್ಲಿ ಅಭೂತಪೂರ್ವವಾಗಿ ಕೆಲಸ ಮಾಡಿ, ದೆಹಲಿಯ ಸರಕಾರೀ ಶಾಲೆಗಳ ಸ್ವರೂಪವನ್ನೇ ಅತಿಶಿ ಬದಲು ಮಾಡಿದಳು. ಆದರೆ ಆತಿಶಿಯ ನೇಮಕಾತಿಯೇ ಕಾನೂನು ಬಾಹಿರ ಎಂದು ಹೇಳಿದ ಕೇಂದ್ರ ಸರಕಾರವು ಆಕೆಯ ನೇಮಕಾತಿಯನ್ನೇ ರದ್ದುಗೊಳಿಸಿತು. ಸುಮಾರು ಎರಡು ವರ್ಷಗಳ ತನ್ನ ಸೇವಾವಧಿಯಲ್ಲಿ ಆಕೆ ತಿಂಗಳಿಗೆ ಕೇವಲ ಒಂದು ರೂಪಾಯಿ ಸಂಭಾವನೆ ಮಾತ್ರ ಪಡೆಯುತ್ತಿದ್ದಳು.

ಆಡಳಿತವನ್ನು ಜನರ ಹತ್ತಿರ ಕೊಂಡೊಯ್ಯುವ ಆಕೆಯ ಮೊಹಲ್ಲಾ ಸಭಾ ( ಅದರ ಕೆಲವು ಪ್ರಾಯೋಗಿಕ ಸಭೆಗಳಲ್ಲಿ ನಾನು ಭಾಗಿಯಾಗಿದ್ದೆ) ಯೋಜನೆಯನ್ನು ದೆಹಲಿಯ ರಾಜ್ಯಪಾಲರು ಕೊನೆಗೂ ಅಂಗೀಕರಿಸಲೇ ಇಲ್ಲ.

ಇಂಥ ಕನಸುಕಂಗಳ , ಹೋರಾಟಗಾರ್ತಿ ಅತಿಶಿ ಇವತ್ತು ಸಾರ್ವಜನಿಕರೆದುರು ಕಣ್ಣೀರು ಸುರಿಸುವಂಥ ವಾತಾವರಣ ನಿರ್ಮಾಣವಾಗಿದೆ. ಉತ್ತರ ದೆಹಲಿಯಲ್ಲಿ ಆಕೆ ಲೋಕ ಸಭೆಗೆ ಸ್ಪರ್ಧಿಸುವ ಪ್ರದೇಶಗಳಲ್ಲಿ ಆಕೆಯ ಚಾರಿತ್ರ್ಯ ಹರಣ ಮಾಡುವಂಥ ಅಶ್ಲೀಲ ಕರಪತ್ರಗಳನ್ನು ಹಂಚಲಾಗಿದೆ. ಅವಳ ಹೆಸರಿನ ಮುಂದಿರುವ ಮಾರ್ಲೀನಾ ಪದವನ್ನು ಗಮನಿಸಿ, ಆಕೆ ಬೇರಾವುದೋ ಧರ್ಮದವಳೆಂದು ಭಾವಿಸಿ, ಜನರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಲಾಗಿದೆ. ಇಂಥ ಕೆಲಸಗಳನ್ನು ಯಾರು ಮಾಡುತ್ತಾರೆ ಎಂದು ನಾನೇನೂ ಹೇಳಬೇಕಾಗಿಲ್ಲವಲ್ಲ! ಅವಳ ಇದಿರಾಳಿ ಕ್ರಿಕೆಟಿಗ ಗೌತಮ್ ಗಂಭೀರ್ ಇಂಥ ಲುಚ್ಛ ಕೆಲಸ ಮಾಡಿರಲಾರ, ಆದರೆ ಕರಪತ್ರವನ್ನು ಖಂಡಿಸುವ ಘನತೆಯನ್ನೂ ಆತ ತೋರಿಲ್ಲ.

ದೆಹಲಿಯಲ್ಲಿ ನನ್ನ ಕಣ್ಣೆದುರೇ ಬೆಳೆದವರು ಇಬ್ಬರು- ಒಬ್ಬ ಕನ್ನಯ್ಯ ಕುಮಾರ್ ಮತ್ತು ಇನ್ನೊಬ್ಬರು ಆತಿಶಿ. ಅವರು ಎಷ್ಟು ಒಳ್ಳೆಯವರು, ಸಾಮಾಜಿಕ ಕಳಕಳಿಯುಳ್ಳವರು ಮತ್ತು ಪ್ರತಿಭಾವಂತರೆಂಬುದೆಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಈ ಪ್ರತಿಭೆಗಳನ್ನು ಎಳವೆಯಲ್ಲಿಯೇ ಮಟ್ಟ ಹಾಕಲು ಎಷ್ಟೊಂದು ಶಕ್ತಿಗಳು, ಎಷ್ಟೊಂದು ಬಗೆಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿದಾಗ ನಿಜಕ್ಕೂ ದಿಗ್ಭ್ರಮೆಯಾಗುತ್ತದೆ.
ನಮ್ಮ ದೇಶಕ್ಕೆ ನಿಜಕ್ಕೂ ಏನು ಬೇಕಾಗಿದೆ ಎಂದೇ ತಿಳಿಯುತ್ತಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...