Homeಕರ್ನಾಟಕಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ.

- Advertisement -
- Advertisement -

ನಮ್ಮ ನಂಜನಗೂಡಿನಲ್ಲಿರುವ, ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪನಿಯಾದ ಎಟಿ&ಎಸ್ ಕಂಪನಿಗೆ ಸೇರಿದ ಟ್ರೈನಿ ನೌಕರರು ಹಾಗೂ ಕಾರ್ಮಿಕವರ್ಗವು ಎರಡೂ ಕರೋನಾ ಅಲೆಗಳನ್ನು ದಾಟಿಕೊಂಡು ನಡೆಸುತ್ತಿರುವ ಈ ಧರಣಿ ಚಳುವಳಿಗೆ ಇಂದಿಗೆ ಒಂದು ವರ್ಷ ತುಂಬಿತು. ಇದು ದುಃಖದ ದಿನ. ಕಳೆದ ಒಂದು ವರ್ಷದ ಕಾಲದ ಈ ಕಾರ್ಮಿಕರ ಬದುಕನ್ನು ಹೇಗೆ ವಿವರಿಸಬೇಕು? ಅವರ ಬದುಕು ಒಂದು ಯಾತನಾ ಶಿಬಿರದಂತೆಯೇ ಕಾಣಿಸುತ್ತದೆ. ಈ ಯಾತನಾ ಶಿಬಿರ ಯಾಕಾಗಿ? ನೌಕರರು ಕೇಳುತ್ತಿರುವುದಾದರೂ ಏನು?

ಅವರು ಕೇಳುತ್ತಿರುವುದು ಇಷ್ಟೆ : “ನಾವು ಟ್ರೈನಿಗಳು ಕಳೆದ ಎಂಟತ್ತು ವರ್ಷಗಳಿಂದಲೂ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ನಾವು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ 2 ವರ್ಷಗಳು ಟ್ರೈನಿ ಅವಧಿ ಎಂದಿತ್ತು. ಆ ಅವಧಿ ಮುಗಿದು ಎಷ್ಟೋ ವರ್ಷಗಳಾಗಿದ್ದರೂ ನಮ್ಮನ್ನು ಖಾಯಂ ಮಾಡಿಲ್ಲ. ಈಗಲಾದರೂ ನಮ್ಮ ಕೆಲಸವನ್ನು ಪರ್ಮನೆಂಟ್ ಮಾಡಿ ಹಾಗೂ ನಮ್ಮ ಸಂಬಳವನ್ನು ಹೆಚ್ಚು ಮಾಡಿ” – ಇದಿಷ್ಟೆ ಈ ನೌಕರರು ಕೇಳುತ್ತಿರುವುದು. ಇದಿಷ್ಟೆ. ಇದಿಷ್ಟನ್ನು ಕೇಳಿದ್ದಕ್ಕಾಗಿ ಈ ವಿದೇಶಿ ಮೂಲದ ಎಟಿ&ಎಸ್ ಕಂಪನಿಯು ನ್ಯಾಯ ಕೇಳಿದ ನೌಕರರನ್ನು ಕೆಲಸದಿಂದಲೇ ವಜಾ ಮಾಡಿಬಿಟ್ಟಿತು. ಈ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕಾಗಿ, ಪ್ರಶ್ನಿಸಿದ ಕಾರ್ಮಿಕ ನಾಯಕನನ್ನೇ ವಜಾ ಮಾಡಿಬಿಟ್ಟಿತು. ವಜಾ ಮಾಡಿದ್ದಕ್ಕೆ “ಆ ಕಾರ್ಮಿಕ ನಾಯಕ ಒಂದು ದಿನ ಕೆಲಸಕ್ಕೆ ಗೈರು ಹಾಜರಾಗಿದ್ದ” ಎಂಬ ಚಿಲ್ಲರೆ ಕಾರಣ ಕೊಟ್ಟಿತು! ಇದು ಕಂಪನಿ ಆಡಳಿತ ಮಂಡಳಿಯ ಚಿಲ್ಲರೆ ಬುದ್ದಿಯ ಕೆಲಸ. ಇದಿರಲಿ, ತಮ್ಮ ಕಾರ್ಮಿಕ ನಾಯಕನನ್ನು ವಜಾ ಮಾಡಿದ್ದಕ್ಕೆ ನೊಂದ ಕಾರ್ಮಿಕರು ಸಾಂಕೇತಿಕ ಪ್ರತಿರೋಧವಾಗಿ “ಮೂರು ದಿನಗಳ ಕಾಲ ಕಂಪನಿ ಕಾರ್ಖಾನೆಯ ಕ್ಯಾಂಟೀನಿನಲ್ಲಿ ಊಟ ಮಾಡಲ್ಲ” ಎಂದು ಆಡಳಿತ ಮಂಡಳಿಗೆ ಪತ್ರ ಬರೆದದ್ದಕ್ಕೆ ಆ ಕಾರ್ಮಿಕರನ್ನೂ ವಜಾ ಮಾಡಲಾಯ್ತು. ಏನಿದು? ಉಸಿರೆತ್ತಿದರೆ ಉಸಿರನ್ನೇ ತೆಗೆಯುವ ಕೆಲಸ. ಹೀಗೆ 75 ಜನ ಕಾರ್ಮಿಕರನ್ನು ವಜಾ ಮಾಡಿದ್ದಾರೆ. ವಜಾದ ಮೇಲೆ ವಜಾ. ನಾವು ನೋಡಿಕೊಂಡು ಪ್ರೇಕ್ಷಕರಾಗಿದ್ದೇವೆ.

ಇದರ ನಡುವೆ ಒಂದು ತಮಾಷೆ. ಆಥವಾ ಕ್ರೂರ ವ್ಯಂಗ್ಯ. ಈ ವಿದೇಶಿ ಮೂಲದ ಕಂಪನಿಗೆ ನಂದಕಿಶೋರ್ ರವರು ಮಾನವ ಸಂಪನ್ಮೂಲ ಅಧಿಕಾರಿ. ಇವರು ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಗೆ ಲಿಖಿತ ಹೇಳಿಕೆ ನೀಡುತ್ತಾ ತಮ್ಮ ಕಂಪನಿಯು ಟ್ರೈನಿ ನೌಕರರಿಗೆ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ಕೊಡುವುದನ್ನೆ “ಕಂಪನಿಯು ಎಲ್ಲರಿಗಿಂತಲೂ Better, ಅಂದರೆ ಉತ್ತಮ ಸಂಬಳವನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ. ನಾನು ಕುತೂಹಲಕ್ಕೆ ಅವರ ಸಂಬಳವನ್ನು ವಿಚಾರಿಸಿದೆ. ಶ್ರೀ ನಂದಕಿಶೋರ್ ಅವರು ತಿಂಗಳಿಗೆ ಅಧಿಕೃತವಾಗಿ ಎರಡೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಇವರಿಗೆ ಅತ್ಮಸಾಕ್ಷಿ ಇದೆಯೇ? ಅವರ ಅತ್ಮಸಾಕ್ಷಿ ಸತ್ತಿದೆ ಎಂದುಕೊಳ್ಳೊಣ. ಆದರೆ ಅವರ ಮಕ್ಕಳು ಸಂವೇದನಾಶೀಲರಾಗಿದ್ದಲ್ಲಿ “ಈ ನಮ್ಮ ಅಪ್ಪ ತಾನು ಮಾತ್ರ ತಿಂಗಳಿಗೆ ಎರಡೂವರೆ ಲಕ್ಷ ಸಂಬಳ ತೆಗೆದುಕೊಳ್ಳುತ್ತಾ, ತನ್ನ ಕಂಪನಿಯ ಕಾರ್ಮಿಕರಿಗೆ ತಿಂಗಳಿಗೆ ಕೇವಲ ಹತ್ತು ಸಾವಿರ ಕೊಟ್ಟು ಅದನ್ನು Better ಸಂಬಳ ಅನ್ನುತ್ತಿದ್ದಾರಲ್ಲ! ಇವರಿಗೆ ಏನಾಗಿದೆ?” ಎಂಬ ಪ್ರಶ್ನೆ ಅವರ ಮಕ್ಕಳಲ್ಲಿ ಬಂದರೆ, ಶ್ರೀ ನಂದಕಿಶೋರ್ ಅವರ ಮಕ್ಕಳ ಕಣ್ಣಲ್ಲಿ ಕುಬ್ಜರಾಗುವುದಿಲ್ಲವೇ?.

ಇದನ್ನೆಲ್ಲಾ ಹೇಗೆ ಆರ್ಥಮಾಡಿಕೊಳ್ಳಬೇಕೋ ನನಗೆ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಎಟಿ&ಎಸ್ ಆಡಳಿತ ಮಂಡಳಿಯ ನಡಾವಳಿ ನೋಡಿದರೆ ಇದು ಮನುಷ್ಯರು ಮಾಡುವ ಕೆಲಸ ಅಲ್ಲ ಅನಿಸುತ್ತದೆ. ಅಥವಾ ಆ ಆಡಳಿತ ಮಂಡಳಿಯಲ್ಲಿ ‘ಮನುಷ್ಯರು’ ಇದ್ದರೂ ಅವರೊಳಗೆ ‘ಮನುಷ್ಯತ್ವ’ ಇಲ್ಲ ಅನ್ನಿಸಿಬಿಡುತ್ತದೆ.
ಅಥವಾ ಹೀಗೂ ಇರಬಹುದೇ? “BECAUSE WE SAY SO” ಅಂತ ಒಂದು ಪುಸ್ತಕ ಇದೆ. ‘ಯಾಕೆಂದರೆ ನಾವು ಹೇಳ್ತಾ ಇದ್ದೇವೆ, ಅಷ್ಟೇ’ ಅಂತ ಆದರ ಅರ್ಥ. ಇದನ್ನು ಬರೆದವರು ನೋಮ್ ಚೋಮ್‌ಸ್ಕಿ. ಜಗತ್ತಿನ ಮಹಾನ್ ಚಿಂತಕ. ಇವರು ಜಗತ್ತಿಗೇ ಸೇರಿದವರು. ನೋಮ್ ಚೋಮ್‌ಸ್ಕಿಯವರು ಹೇಳಿದ ಆ ಮಾತು, ಬಂಡವಾಳಶಾಹಿ ಕಾಂಚಾಣದ ಧಿಮಾಕಿನ ಗರ್ವದ ಬಗ್ಗೆ. ಇಲ್ಲೂ ನಂಜನಗೂಡಿನ ಎಟಿ&ಎಸ್ ಕಂಪನಿ ಆಡಳಿತ ಮಂಡಳಿಯೂ ಅದೇ ಕಾಂಚಾಣದ ಗರ್ವದ ಧಿಮಾಕು ತೋರಿಸಿದೆ. ಅವರು ಹೇಳಿದ್ದೇ ಮಾತು. ಅದರಲ್ಲಿ ಸತ್ಯ ನ್ಯಾಯ ಇರಬೇಕೆಂದಿಲ್ಲ. ಅವರು ಹೇಳಿದ್ದೇ ಕಾನೂನು! ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವೆ? ಸರ್ಕಾರದ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಹಾಗೂ ಕಾರ್ಮಿಕ ನ್ಯಾಯಾಲಯ ಏನು ಮಾಡುತ್ತಿವೆ?
ಇವುಗಳದೂ ಕೂಡಾ ಒಂದು ದಾರುಣ ಕಥೆಯೇ. ಕೆಲಸ ಕಳೆದುಕೊಂಡ ಕಾರ್ಮಿಕರ ಬದುಕು ಪ್ರೈ ಆಗುತ್ತ ಬೇಯುತ್ತಿದ್ದರೂ, ಕಳೆದ ಮೂರು ವರ್ಷಗಳಿಂದಲೂ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್, ಕಾರ್ಮಿಕ ನ್ಯಾಯಾಲಯಗಳು ಈ ಸಮಸ್ಯೆಯ ವಾದವಿವಾದವನ್ನು ಸವಿಯುತ್ತಾ ಕಾಲ ಸವೆಸುತ್ತಿವೆ. ಹೀಗೆ ಇನ್ನೊಂದಿಷ್ಟು ದಿನ ತಳ್ಳಿಬಿಟ್ಟರೆ ಆ ಕೆಲಸ ಕಳೆದುಕೊಂಡ ನೌಕರರ ಸೇವಾವಧಿಯೇ ಮುಗಿದು ಬಿಡುವುದೇನೊ? ನ್ಯಾಯವು ಎಲ್ಲಿದೆ?

ನೋಮ್ ಚಾಮ್ಸ್ಕಿ

ಆಯ್ತು, ಈ ಕಾಯ್ದೆಗಳನ್ನು ರೂಪಿಸುವವರಾದರೂ ಯಾರು? ಶಾಸನಗಳನ್ನು ರೂಪಿಸುವುದಕ್ಕಾಗಿಯೇ ರಾಜ್ಯದಲ್ಲಿ ಶಾಸನಸಭೆ ಅಂತ ಒಂದಿದೆ. ಶಾಸನಗಳನ್ನು ರೂಪಿಸುವುದಕ್ಕಾಗೇ ಶಾಸನಸಭೆ ಅಂತ ಇರೋದು. ಮತದಾರರ ಮೂಲಕ ಆಯ್ಕೆಯಾಗಿ ಶಾಸನಸಭೆಗೆ ಹೋಗುವ ಇಂದಿನ ಬಹುಸಂಖ್ಯಾತ ಶಾಸಕರಿಗೆ, ತಾವು ಶಾಸನ ಮಾಡುವುದಕ್ಕಾಗಿ ಆಯ್ಕೆಯಾಗಿ ಶಾಸಕ ಆಗಿರುವುದು ಎಂಬ ಅರಿವು ಇದ್ದಂತಿಲ್ಲ. ಇಂಥವರು ಆಯ್ಕೆಯಾದ ಮೇಲೆ ತಾವು ಜನಪ್ರತಿನಿಧಿಗಳು ಎಂದು ಅಂದುಕೊಂಡಂತೂ ಇಲ್ಲ. ಅವರಿಗೆ ಪ್ರಜ್ಞೆ ಇದ್ದಿದ್ದರೆ, ಎಲ್ಲಾದರೂ ಎರಡು ವರ್ಷಗಳ ಟ್ರೈನಿ ಕಾಲಾವಧಿ ಮುಗಿದ ಮೇಲೆ ಅಲ್ಲೆ ಕೆಲಸವನ್ನು ಮುಂದುವರಿಸಿದರೆ ಅದು ‘ಖಾಯಂ’ ಎಂದೇ ಆಗುತ್ತದೆ ಎಂಬ ಕಾಯ್ದೆ ರಚಿಸಲ್ಪಡುತ್ತಿತ್ತು. ಆದ್ದರಿಂದ, ದುರಂತ ಇರುವುದು ಇಲ್ಲೇ.

ಈಗ ನಂಜನಗೂಡಿಗೆ ಬಂದರೆ, ಇಲ್ಲಿ ನಡೆಯುತ್ತಿರುವ ಎಟಿ&ಎಸ್ ಕಾರ್ಮಿಕರ 365 ದಿನಗಳ ಬವಣೆ ನೋಡಿಕೊಂಡು ಈ ಕ್ಷೇತ್ರದ ಶಾಸಕರು ಇದ್ದಾರೋ ಇಲ್ಲವೋ ಅನ್ನುವಂತೆ ಇದ್ದಾರೆ. ನಿಗೂಢವಾದ ಮೌನ ವಹಿಸಿದ್ದಾರೆ. ಇಲ್ಲಿನ ಶಾಸಕರು ತಮ್ಮ ಮೌನವನ್ನು ಇನ್ನೂ ಮುಂದುವರಿಸಿದರೆ, ದಿನಕಳೆದಂತೆ ಅದಕ್ಕೆ ‘ನಾನಾರ್ಥ’ ಹುಟ್ಟಿಕೊಳ್ಳುತ್ತದೆ. ಇದು ನನಗೆ ಹೆಚ್ಚು ನೋವು ತಂದಿದೆ. ಯಾಕೆಂದರೆ, ಶಾಸಕ ಹರ್ಷವರ್ಧನ್ ಅವರು ಕರ್ನಾಟಕದ ಧೀಮಂತ ನಾಯಕ ಬಸವಲಿಂಗಪ್ಪನವರ ಮೊಮ್ಮಗ. ಹಾಗೇ ದಿಟ್ಟತನಕ್ಕೆ ಹೆಸರಾದ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ. ಪ್ರಸಾದ್ ರವರು ಎಟಿ&ಎಸ್ ಕಂಪನಿಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ ಕೂಡ. ಆದರೂ ಅವರ ಮಾತಿಗೆ ಬೆಲೆ ಸಿಕ್ಕಿಲ್ಲ. ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್‌ರವರ ಗೌರವ ಉಳಿಸುವುದು ಶ್ರೀ ಹರ್ಷವರ್ಧನ್ ಅವರ ಕರ್ತವ್ಯ ಮತ್ತು ಹೊಣೆಗಾರಿಕೆ ಎಂದು ಅವರಿಗೆ ನೆನಪಿಸುತ್ತಿರುವೆ, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ. ಇವರು ಇನ್ನೂ ಯುವಕರಾಗಿರುವುದರಿಂದ ಇದನ್ನು ಅವರಿಂದ ನಿರೀಕ್ಷಿಸುತ್ತೇನೆ.

ಬಿ ಹರ್ಷವರ್ಧನ್

ಇಲ್ಲದಿದ್ದರೆ, ನಾಳೆ ಏನಾದರೂ ಜನತಾ ನ್ಯಾಯಾಲಯ ಏರ್ಪಟ್ಟು ಎಟಿ&ಎಸ್ ಕಾರ್ಮಿಕರ ಸಮಸ್ಯೆ ವಿಚಾರಣೆ ನಡೆದರೆ, ಅಲ್ಲಿ, ಆ ಜನತಾ ನ್ಯಾಯಾಲಯದಲ್ಲಿ ಮೊದಲನೇ ಅಪರಾಧಿ ಸ್ಥಾನದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ನಂದಕಿಶೋರ್ ಹಾಗೂ ಎರಡನೇ ಸ್ಥಾನದಲ್ಲಿ ಈ ಕ್ಷೇತ್ರದ ಶಾಸಕ ಶ್ರೀ ಹರ್ಷವರ್ಧನ್ ನಿಲ್ಲುತ್ತಾರೆ ಎಂದೇ ನನಗೆ ಅನ್ನಿಸುತ್ತದೆ. ಇದಾಗದಿರಲಿ ಎಂದು ಆಶಿಸುವೆ.

ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...