Homeಕರ್ನಾಟಕಕಾರಜೋಳರಿಗೊಂದು ಕಿವಿಮಾತು : ಬಿ.ಚಂದ್ರೇಗೌಡರ ಬಹಿರಂಗ ಪತ್ರ

ಕಾರಜೋಳರಿಗೊಂದು ಕಿವಿಮಾತು : ಬಿ.ಚಂದ್ರೇಗೌಡರ ಬಹಿರಂಗ ಪತ್ರ

ರೈತರು ಬೀದಿಗಿಳಿದು ಪ್ರತಿಭಟಿಸಲಾರರು ಎಂದು ಕೊರೊನಾ ಸೋಂಕು ಬಳಸಿಕೊಂಡು ಭೂ ಕಾಯಿದೆಗೆ ತಿದ್ದುಪಡಿ ತರುವ ಸಂಘದವರ ಹುನ್ನಾರ ಶುದ್ಧ ಸಂಚಿನಿಂದ ಕೂಡಿದೆ. ರೈತರು ಭುಗಿಲೇಳಲು ಕೊರೊನಾ ಅಡ್ಡಿ ಬಂದಿದೆ ಅಷ್ಟೆ.

- Advertisement -
- Advertisement -

ಗೌರಿ ಲಂಕೇಶ್ ಕೊಲೆಯಾದ ನಂತರ ಒಂಥರದ ಶೂನ್ಯ ಆವರಿಸಿದ್ದರಿಂದ, ಊರಿಗೆ ಹೋಗಿ ನನ್ನ ಭಾಗದ ಜಮೀನಿನಲ್ಲಿ ಬೇಸಾಯ ಮಾಡಬೇಕಿನಿಸಿತು. ಗಂಗಾಕಲ್ಯಾಣದ ಬೋರ್‍ವೆಲ್‍ ಗಾಗಿ ಭೂ ದಾಖಲೆಯನ್ನೊದಗಿಸಿದೆ. ಕಾಂಗ್ರೆಸ್ ರಾಜಕಾರಣಿಯ ಪ್ರಭಾವದಿಂದ ಮಂಜೂರಾಗಿ ಬಂತು. ಏಕೆಂದರೆ ಆ ರಾಜಕಾರಣಿಯೂ ಒಂದು ಬೋರ್‍ವೆಲ್ ಪಡೆಯಲಿದ್ದು ಪತ್ರಕರ್ತರೊಬ್ಬರು ಜೊತೆಯಲ್ಲಿರಲೆಂದು ನನ್ನದನ್ನ ಸೇರಿಸಿ ಮಂಜೂರು ಮಾಡಿಸಿದ್ದರು. ಗಂಗಾಕಲ್ಯಾಣದ ಬೋರ್‍ವೆಲ್ ಜನ ನಾವು ತೋರಿದ ಜಾಗದಲ್ಲಿ ಕೊರೆದು ಹೋಗುತ್ತಾರೆಂದು ಗೊತ್ತಾದ ಮೇಲೆ, ನೀರಿನ ಸೆಲೆ ಜಾಗವನ್ನು ನಾನೇ ಗುರುತು ಮಾಡಿಸಲು ಮುಂದಾದೆ. ಗೆಳೆಯರೊಬ್ಬರ ಸಲಹೆಯಂತೆ ಹಾಸನದಿಂದ ನೆಲದೊಳಗಿನ ನೀರಿನ ಝರಿ ಪತ್ತೆಹಚ್ಚುವವರನ್ನ ಕರೆಸಿದೆ. ಅವರು ಬಂದರು. ನೋಡಿದ ಕೂಡಲೆ ಮದುವೆ ಮಾಡಿಸಲು ಬಂದ ಪುರೋಹಿತರನ್ನ ನೋಡಿದಂತಾಯ್ತು. ನನ್ನ ಭಾಗದ ಭೂಮಿಯಲ್ಲಿ ನಿಂತು ಅಂಗೈಯಲ್ಲಿ ಸುಲಿದ ಕಾಯಿ ಇಟ್ಟುಕೊಂಡು ಕೂಡಲೆ ಆ ಮಹಾಮಹಿಮರು ಅಂತದೃಷ್ಠಿಗೆ ಒಳಗಾಗಿ ಚಲಿಸತೊಡಗಿದರು. ನನ್ನ ಭೂಮಿಯನ್ನು ಸುತ್ತಿ ಅಕ್ಕಪಕ್ಕದ ಜಮೀನಿನಲ್ಲೆಲ್ಲಾ ಸುತ್ತತೊಡಗಿದರು. “ಅದು ನನ್ನ ಜಾಗಲ್ಲ” ಎಂಬ ಮಾತು ಅವರ ಕಿವಿಗೆ ಬೀಳಲಿಲ್ಲ. ಭೂಗರ್ಭದ ಜಲ ಕಣ್ಣು ಮತ್ತು ಅವರ ಕಣ್ಣು ಒಂದಾದಂತೆ, ಒಂದು ಜಾಗದಲ್ಲಿ ಪಶ್ಚಿಮಾಭಿಮುಖವಾಗಿ ಪಾದ ಜೋಡಿಸಿ ನಿಂತರು. ಮಣ್ಣಿನಲ್ಲಿ ಅವರ ಪಾದ ಮೂಡಿದವು. ಅಂಗಯ್ಯಲ್ಲಿ ಆಡುತ್ತಿದ್ದ ತೆಂಗಿನ ಶಿಬೆ ಅಲ್ಲಾಡದೆ ನಿಂತಿತ್ತು. ತಮ್ಮ ಪಾದದ ಗುರುತಿನ ಜಾಗದಿಂದ ಈಚೆ ಬಂದ ಅವರು, “ಇಲ್ಲಿ ಕೊರೆಸಿ ಹೆಚ್ಚಿನ ಬರವಸೆ ಬ್ಯಾಡ, ಎರಡಿಂಚು ನೀರು ಬತ್ತದೆ” ಎಂದರು. ಅದು ನನ್ನ ಅಣ್ಣನ ಜಮೀನಾಗಿತ್ತು. ಅದರಿಂದೇನೂ ತೊಂದರೆಯಿರಲಿಲ್ಲ. ಮೂರು ಜನರೂ ಒಂದೇ ತಟ್ಟೆಗೆ ಕೈಯಾಕುವವರಂತಿದ್ದೆವು. ಆದರೂ ಪಾಲಾಗಿ ನಮ್ಮ ನಮ್ಮ ಭೂಮಿ ನಮ್ಮ ಹೆಸರಿಗೆ ಖಾತೆಯಾಗಿದ್ದವು. ಆದ್ದರಿಂದ ಈಗಿನ ಸಮಸ್ಯೆ ಏನೆಂದರೆ ಬೋರ್‍ವೆಲ್ ಅರ್ಜಿ ಮತ್ತು ಭೂ ದಾಖಲೆಯನ್ನ ನಮ್ಮ ಅಣ್ಣನ ಹೆಸರಿಗೆ ವರ್ಗವಾಗಬೇಕಿತ್ತು.

ಆ ಕೆಲಸ ಮಾಡಿಸಿದರಾಯ್ತೆಂದುಕೊಂಡು ಜಲಕಣ್ಣು ಪತ್ತೆ ಹಚ್ಚಿದವರನ್ನ ಕುರಿತು “ತಮ್ಮದ್ಯಾವುರು ಸಾರ್” ಎಂದೆ. ಹಾಸನ ಎಂದರು. ಹಾಸನದತ್ರ ಯಾವೂರು ಅಂದೆ. ‘ಕಿತ್ತಾನೆ’ ಎಂದರು. ಓ ನಮ್ಮ ಗುರುಗಳೂರು ಸಾರ್ ಅದೂ ಎಂದು ಅತ್ಯುತ್ಸಾಹದಿಂದ ಕಿ.ರಂ ಗುಣಗಾನ ಮಾಡಿದೆ. ಕನ್ನಡ ಸಾಹಿತ್ಯ ಕಂಡ ಅಪರೂಪದ ವಿದ್ವಾಂಸನ ಗುಣಗಾನ ಮಾಡುತ್ತ, ಗೋಪಾಲಕೃಷ್ಣ ಅಡಿಗರಂತ ದೊಡ್ಡ ಕವಿನೆ ತಾವು ಬರೆದದ್ದರ ಬಗ್ಗೆ ಕಿ.ರಂ ಏನೇಳ್ತನೆ ಅಂತ ಕಾಯ್ತಿದ್ರು ಸಾರ್ ಅಂದೆ. “ಭಾಳ ದೊಡ್ಡ ಮನ್ಸ ಅವುನು” ಎಂದರು. ಆ ಮಾತಿನಲ್ಲಿದ್ದ ವ್ಯಂಗ್ಯ ಗಮನಿಸಿ ನನ್ನ ಪುಂಗಿ ಬಂದ್ ಆಯ್ತು. “ದೇವುರಿಲ್ಲ ದಿಂಡ್ರಿಲ್ಲ ಅನ್ನದು, ಪೂಜೆ ಪುರಸ್ಕಾರ ಆಡಿಕಳದು, ಸಿಗರೇಟ್ ಸೇದದು, ಮನೆ ಮಠ ಜಮೀನು ಹೆಡತಿ ಮಕ್ಕಳು ಯಾವುದರ ಬಗ್ಗೆನೂ ಗಮನವೇ ಇಲ್ದಂಗೆ ಬಾಳೀದ ಊರಲ್ಲಿರೊ ಆಸ್ತಿ ಮನೆ ಕಡೆನೂ ಸುಳುದು ನೋಡಲಿಲ್ಲ. ಜಾತಿ ಬೈಯದು ಧರ್ಮ ಬೈಯದು ಇವುನು ಜೊತಿಗೆ ಆ ಮೈಸೂರಲ್ಲೊಬ್ಬ ಭಗವಾನ್ ಅಂತ ಸೇರಿಕೆಂಡವುನೆ, ಬಾಯಿ ಬಂದಂಗೆ ಮಾತಾಡ್ತನೆ. ಈಚೆಗೆ ಗಿರೀಶ್ ಕಾರ್ನಾಡನೂ ಸೇರಿಕೊಂಡವುನೆ, ಇವುರಿಗ್ಯಲ್ಲ ಏನಾಗ್ಯದೆ ಅಂತಿನಿ” ಎಂದರು. ನನ್ನ ಬೋರ್‍ವೆಲ್ ಪಾಯಿಂಟ್ ಕೆಲಸ ಮುಗಿದಿತ್ತು. ಏಕೆಂದರೆ ಈ ಹಿಂದೆ ಮೋದಿಯ ಕಟ್ಟಾ ಅಭಿಮಾನಿ ಕರೆಸಿ ಎರಡು ಪಾಯಿಂಟ್ ಮಾಡಿಸಿ, ಅವು ಕೈಕೊಟ್ಟು ಒಂದೇ ದಿನಕ್ಕೆ ಒಂದು ಲಕ್ಷ ಕಳೆದುಕೊಂಡಿದ್ದೆ. ಆ ಪಾಯಿಂಟ್‍ಗಳು ವಿಫಲವಾದುದಕ್ಕೆ, ನಾವು ಅವನೆದುರು ಮೋದಿಗೆ ಹಿಗ್ಗಾಮುಗ್ಗಾ ಬೈದಿದ್ದೇ ಕಾರಣವಾಗಿ ತಪ್ಪು ಜಾಗ ತೋರಿಸಿ ಹೋಗಿದ್ದಾನೆಂದು ಬೈದುಕೊಂಡಿದ್ದೆವು. ಈಗ ಕಿರಂ ಸಂಬಂಧಿಗೆ ನಾವು ಅವರ ಕಡೆಯವರು ಎಂದು ಮೋದಲೇ ಗೊತ್ತಿದ್ದರೆ ಕತೆಯೇನೆಂದು ಯೋಚಿಸುವಂತಾಯ್ತು. ಇಂತಹ ಕ್ಷುಲ್ಲಕ ಯೋಚನೆಗೆ ಅವಕಾಶವಿರಲಿಲ್ಲ. ಏಕೆಂದರೆ ಇವರು ಭೂಮಿಪುತ್ರರಾಗಿದ್ದರು. ಸ್ವತಹ ತಮ್ಮ ಜಮೀನಿನಲ್ಲೇ ತಾವೇ ಜಲಕಣ್ಣು ಪತ್ತೆ ಹಚ್ಚಿ ನಂತರ ಉಳಿದವರಿಗೆ ತೋರುವಂತಹ ಉದಾರಿಯಾಗಿದ್ದವರು. ಇಷ್ಟಾದರೂ ಬೆಂಗಾಡಿನಂತಹ ಈ ಭೂಮಿಯಲ್ಲಿ ನೀರು ಬರಲು ಸಾಧ್ಯವೇ ಎಂಬ ಅನುಮಾನವಿತ್ತು.

ಅದೊಂದು ದಿನ ಇದೇ ಹವಮಾನದಲ್ಲಿ ಸರಿಯಾಗಿ ಅರ್ಧ ರಾತ್ರಿಯಲ್ಲಿ ಸರಕಾರದಿಂದ ಮಂಜೂರಾಗಿದ್ದ ಬೋರ್‍ವೆಲ್ ಕೊರೆಯಲು ಲಾರಿಗಳು ನನ್ನ ಜಮೀನು ಹುಡುಕುತ್ತ ಬಂದವು. ಅವರಿಗೆ ಉತ್ಸಾಹದಿಂದ ಪಾಯಿಂಟ್ ತೋರಿಸಿ ರಾಜಾ ವಿಸ್ಕಿಗಳ ಪ್ಯಾಕೆಟ್ ಬಿಚ್ಚಿಕೊಂಡು ಕುಳಿತುಕೊಂಡರೆ, ಆ ಬೋರ್‍ವೆಲ್ ಸದ್ದಿಗೆ ಯಾರ ಮಾತು ಯಾರಿಗೂ ಕೇಳುತ್ತಿರಲಿಲ್ಲ. ಕಡೆಗೆ ಹೊಟ್ಟೆ ತುಂಬಾ ಕುಡಿದು ನಿದ್ದೆ ಹೋದಾಗ ಸರಿಯಾಗಿ ನಾಲ್ಕು ಗಂಟೆ ರಾತ್ರಿಯಲ್ಲಿ ಭುಜ ತಟ್ಟಿದ ಮುರುಗನ್ ಅಣ್ಣೈಯ್ ಅಂಗೆ ಪಾರು ಎಂದು ತೋರಿಸಿದ. ನಿಜಕ್ಕೂ ಆ ರಾತ್ರಿಯಲ್ಲಾ ಭಗೀರತನಂತೆ ಕಾಣಿಸಿದ. ನೀರು ನೋಡಿ ಬರಬಾರದ ಅಳು ಬಂತು. ಇಂತದೊಂದು ದೃಶ್ಯ ನೋಡಲು ಬಹಳ ಖರ್ಚಾಗಿತ್ತು. ಆದರೂ ಹತಾಶೆಯಿಂದ ಕೈ ಚೆಲ್ಲಿದ್ದ ಕಾಲದಲ್ಲಿ ನೀರು ಕಾಣಿಸಿಕೊಂಡಿತ್ತು. ನಾಲ್ಕು ಗಂಟೆ ರಾತ್ರಿಯಲ್ಲೇ ಎಲ್ಲರಿಗೂ ಪೋನ್ ಮಾಡಿ ಹುಚ್ಚನಂತೆ ಮಾತನಾಡಿದೆ. ಕೊರೆದವರಿಗೆ ಕಾಸು ಕೊಟ್ಟು ಉಳಿದ ಹುಡುಗರಿಗೆ ಭಕ್ಷೀಸುಕೊಟ್ಟು ಕಳುಹಿಸುವಾಗ ಬೆಳಗಾಗತೊಡಗಿತು. ಅದು ಅಂತಿಂಥ ಬೆಳಗಾಗಿರಲಿಲ್ಲ.

ನಂತರ ಮೂರೇ ತಿಂಗಳಲ್ಲಿ ಲೈಟ್‍ಕಂಬ ಮತ್ತು ಟ್ರಾನ್ಸ್ ಮೀಟರ್ ಬಂತು. ಅದನ್ನ ಅಳವಡಿಸಿದವರು “ಕೆ.ಇ.ಬಿ ಸಂಪರ್ಕ ಪಡೆದು ವಿದ್ಯುತ್ ಪಡೆದುಕೊಳ್ಳುವಂತೆ” ಸಲಹೆಕೊಟ್ಟು ಹೋದರು. ಇನ್ನ ಸರಕಾರದಿಂದ ಬರಬೇಕಿದ್ದ ಸಾಮಾಗ್ರಿಗಳೆಂದರೆ ನಾನೂರು ಅಡಿಯ ಜಿವಿಪೈಪು ಮತ್ತು ಕೇಬಲ್ ವೈರು. ಅವು ಬರುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಅದ್ದರಿಂದ ನನ್ನ ಜಮೀನಿಗೆ ಐವತ್ತು ತೆಂಗಿನ ಸೊಸಿ ನೆಡೆಸಿದೆ. ನೆಟ್ಟ ಸಸಿಗಳು ಗಾಳಿಗೆ ದೀಪದಂತೆ ಹೊಯ್ಡಾಡುತ್ತಿರುವುದನ್ನು ನೋಡುತ್ತಿರಬೇಕಾದರೆ, ಪೂರ್ವ ದಿಕ್ಕಿನ ಕಡೆಯಿಂದ ಶಿರಾ ಕಡೆಯ ಕರೆಕುರಿಯ ಮಂದೆ ಹಸಿರು ಭಾಗಕ್ಕೆ ಮಾರಿಯಂತೆ ದಾವಿಸುತ್ತಿತ್ತು. ಆ ಗುಂಪಲ್ಲಿ ಕತ್ತೆ ಮೇಕೆಗಳೂ ಇದ್ದವು. ಈ ಮೇಕೆ ಇಡೀ ಕಾಡನ್ನು ಮೆಲಕಾಡಿಸಿ ಹಿಕ್ಕೆ ಮಾಡಿ ಉದುರಿಸುವಂತಹ ರಕ್ಕಸ ಪ್ರಾಣಿ. ಹೆದರಿದ ನಾನು ಜಮೀನು ಸುತ್ತಲೂ ಕಲ್ಲು ಕಂಬ ನೆಡಿಸಿ ಬೆಂಗಳೂರು ಜೆಸಿ ರಸ್ತೆಯಿಂದ ಮುಳ್ಳುತಂತಿ ತರಿಸಿ ಬಿಗಿಸಿ ಬಂದೋ ಬಸ್ತು ಮಾಡಿದೆ. ಅಷ್ಟರಲ್ಲಿ ಬೇಸಿಗೆ ಬಂತು ಮಳೆಗಾಲ ಮುಗಿದಿದ್ದರಿಂದ ತೆಂಗಿನ ಸಸಿಗಳು ಬಾಡತೊಡಗಿದವು. ಗಂಗಾ ಕಲ್ಯಾಣ ಇಲಾಖೆಗೆ ಹೋಗಿ ಪೈಪು ಮತ್ತು ವೈರುಕೊಟ್ಟು ತೆಂಗಿನಸೊಸಿ ಕಾಪಾಡಲು ಕೇಳಿಕೊಂಡೆ. ಬೋರೆಗೌಡ ಎಂಬ ಅಧಿಕಾರಿ ಅವು ಬಂದ ಕೂಡಲೇ ಫೋನ್ ಮಾಡುವುದಾಗಿ ಹೇಳಿದರು. ಆದರೆ ನನಗೆ ಬರಬೇಕಿದ್ದ ಪೈಪುಗಳ ಪೈಕಿ ಕೇವಲ ಏಳನ್ನ ಬೇರೆ ಯಾರದ್ದೊ ಬೋರ್‍ವೆಲ್ ಹತ್ತಿರ ಇಳಿಸಿ, ಕೇಬಲ್ ವೈರನ್ನೂ ಅಲ್ಲಿಯೇ ಇಳಿಸಿ ನಮಗೆ ತಲುಪಿಸಲು ಹೇಳಿ ಹೋಗಿದ್ದರು. ಅಲ್ಲಿಗೆ ಹೋಗಿ ಕೇಳೀದಾಗ “ಕೇಬಲ್ ವೈರನ್ನ ಯಾರೂ ಕದ್ದುಕೊಂಡು ಹೋಗಿದ್ದಾರೆ ನಿಮ್ಮ ಏಳು ಪೈಪು ಅಲ್ಲಿವೆ ತೆಗೆದುಕೊಂಡು ಹೋಗಿ” ಎಂದರು. ಮಂಡ್ಯದ ಗಂಗಾ ಕಲ್ಯಾಣದ ಜವಬ್ದಾರಿ ಹೊತ್ತ ಅಧಿಕಾರಿಗಳ ಬೇಜಾವಾಬ್ದಾರಿ ಕೆಲಸದಿಂದ ನನ್ನ ಕಣ್ಣ ಮುಂದೆ ನಾನೇ ನೆಟ್ಟ ಐವತ್ತು ತೆಂಗಿನ ಸಸಿಗಳು ಒಣಗಿಹೋದವು!

ನನಗೆ ಬರಬೇಕಾದ ಪೈಪು ಮತ್ತೆ ವೈರಿನ ಬಗ್ಗೆ ಬೋರೇಗೌಡರಿಗೆ ಕೇಳಿದರೆ, “ನಿಮ್ಮ ಲೋನು ಮುಗಿದಿದೆ ಉಳಿಕೆ ಪೈಪು ಮತ್ತು ಕೇಬಲ್ ಖರೀದಿಗೆ ಮತ್ತೆ ಅರ್ಜಿ ಸಲ್ಲಿಸಿ ಮಂಜೂರಾಗುತ್ತೆ” ಎಂದರು. ಎಷ್ಟು ದಿನದಲ್ಲಿ ಎಂದೆ, ಇನ್ನಾರು ತಿಂಗಳಾಗಬಹುದು ಎಂದರು. ಅಷ್ಟರಲ್ಲಿ ಕೊರೊನಾ ಬಂದುದರಿಂದ ನಾನೇ ನಿರ್ಗಮಿಸಬಹುದೆಂದು ಹೆದರಿ ಲೋನಿಗೆ ಅರ್ಜಿ ಹಾಕದೆ ಸುಮ್ಮನಾದೆ.

ಇದನ್ಯಾಕೆ ಹೇಳುತ್ತಿದ್ದೇನೆಂದರೆ, ಕಳೆದ ಅಧಿವೇಶನದಲ್ಲಿ ಗೋವಿಂದ ಕಾರಜೋಳ ರೈತರಿಗೆ ಅನುಕೂಲ ಮಾಡಿ ಗಂಗಾ ಕಲ್ಯಾಣದ ಮೂಲಕ ಉದ್ಧಾರ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಇವರ ಅಧಿಕಾರಿಗಳಿಗೆ ಅಂತಹ ಕಾಳಜಿ ಇಲ್ಲ, ಜವಾಬ್ದಾರಿಯೂ ಇಲ್ಲ. ಇದ್ದಿದ್ದರೆ ನನ್ನನ್ನ ಒಂದು ವರ್ಷ ಸಥಾಯಿಸಿ ಇಪ್ಪತ್ತು ಜಿ.ವಿ ಪೈಪು ಕೊಡುವ ಬದಲು ಏಳು ಪೈಪು ಇಳಿಸಿ ಕೇಬಲ್ ವೈರನ್ನ ಯಾರಿಗೊ ಕೊಟ್ಟು ಹೋಗುತ್ತಿರಲಿಲ್ಲ. ಬೋರ್‍ವೆಲ್ ಕೊರೆಸಿದವನ ಕೈಗೆ ಸಾಮಗ್ರಿ ತಲುಪಿಸಿ ಸಹಿ ಪಡೆಯಬೇಕಾದ ಇವರು ಆ ಕೆಲಸ ಮಾಡಿಲ್ಲ. ಈ ಕಳ್ಳರ ವಿರುದ್ಧ ಹೋರಾಡಲು ಹೋದರೆ ತಬರನಂತಾಗಬೇಕಾಗುತ್ತದೆ ಎಂದು ಸುಮ್ಮನಾದೆ. ಆದರೂ ಈ ಜಮೀನಿನ ಮೇಲೆ ಹಾಕಿದ ಹಣ ಎರಡು ಲಕ್ಷ. ಆ ಕಡೆಯಿಂದ ಒಂದು ಪೈಸೆ ಬರದಿದ್ದರೂ ನಿರಾಶೆಯಾಗಿಲ್ಲ. ಈ ಭೂಮಿ ಕೊಡುವ ನೆಮ್ಮದಿ ವಿಚಿತ್ರವಾದದ್ದು. ಇಲ್ಲಿ ಸಂಜೆಯವರೆಗೂ ಮರದ ನೆರಳಲ್ಲಿ ಕೂತಿದ್ದರೆ ಪತ್ರಿಕೆ, ಟಿ.ವಿ ಮತ್ತು ಹೊರ ಜಗತಿನ ಸುದ್ದಿ ಬೇಕಾಗುವುದಿಲ್ಲ. ಇಂತಹ ನೆಮ್ಮದಿಯಿಂದಾಗಿ ನಮ್ಮ ಜನ ಎಂತಹ ಸ್ಥಿತಿಯಲ್ಲೂ ಪರಬಾರೆ ಮಾಡಿಲ್ಲ. ವತ್ತಾರೆ ಅತ್ತೆಯ ಜೊತೆ ಜಗಳಾಡಿದವಳು ಗಂಡನ ಜೊತೆ ಕಿತ್ತಾಡಿದವಳು ಮಂಕ್ರಿ ತೆಗೆದುಕೊಂಡು ಹೊಲದ ಕಡೆ ಹೋಗಿಬಿಟ್ಟರೆ ಸಂಜೆಯಾಗುತ್ತಿದ್ದಂತೆ ಸಮಾಧಾನಗೊಂಡು ಮನೆಗೆ ಮರಳುತ್ತಾರೆ. ನಮ್ಮ ಜನಗಳ ಭೂಮಿ ಸಂಬಂಧವಾದ ಬಾಂಧವ್ಯ ಸಣ್ಣ ಸಂಗತಿಯಲ್ಲ. ಅನಾದಿ ಕಾಲದಿಂದ ದೊಡ್ಡ ಚರಿತ್ರೆಯೇ ಇದೆ. ಇದಾವುದೂ ಗೊತ್ತಿಲ್ಲದ ಬಿಜೆಪಿಗಳು ಲಾಭ ನಷ್ಟದ ಚರ್ಚೆ ಶುರುಮಾಡಿಕೊಂಡು ರೈತನನ್ನು ಅನಾಥ ಗುಲಾಮನನ್ನಾಗಿಸಲು ಹೊರಟಿವೆ. ಇನ್ನೊಂದು ವಿಶೇಷವೆಂದರೆ ಈ ಬಿಜೆಪಿಗಳು ಯಾವುದೇ ಕಾನೂನು ತಂದರು ಅವರ ಅಜೆಂಡ ಅದರೊಳಗೆ ಅಡಗಿರುತ್ತದೆ. ಪುರೋಹಿತಶಾಹಿ ಉದ್ಧಾರದ ಸೂತ್ರಗಳು ಜನಿವಾರದಂತೆ ಸುತ್ತಿಕೊಂಡಿರುತ್ತವೆ. ಅವರ ಇಡೀ ಚರಿತ್ರೆಯಲ್ಲಿ, ಸಾಹಿತ್ಯದಲ್ಲಿ ರೈತನೇ ಇಲ್ಲ. ತಟ್ಟೆಯೊಳಗಿನ ಅನ್ನ ಮಾತ್ರ ಕಾಣುತ್ತದೆಯೇ ಹೊರತು ಅದನ್ನು ಬೆಳೆದ ರೈತನ ಮುಖ ಅವರು ಸತ್ತರೂ ಕಾಣುವುದಿಲ್ಲ. ಇಂತಹ ಜನರೀಗ ಭೂಮಿ ಮಾರಿಕೊಂಡು ರೈತ ಕುಬೇರನಾಗಬಲ್ಲ ಎಂದು ಲೇಖನ ಕೊರೆಯುತ್ತ ಕುಳಿತಿವೆ. ಹುಡುಕಿದರೆ ಈ ಆಲೋಚನೆಗಳ ಮೂಲವೆಲ್ಲಾ ಒಂದೆ.

ಇಂತಹ ಮನೆಮುರುಕ ಕಾನೂನು ತರಬೇಕಾದರೆ ಧೈರ್ಯ ಬೇಕು ಏಕೆಂದರೆ ಪ್ರೊ. ನಂಜುಂಡ ಸ್ವಾಮಿಯವರು ಕಟ್ಟಿಹೋದ ರೈತ ಸಂಘ ಇನ್ನು ಸತ್ತಿಲ್ಲ. ರೈತರು ಬೀದಿಗಿಳಿದು ಪ್ರತಿಭಟಿಸಲಾರರು ಎಂದು ಕೊರೊನಾ ಸೋಂಕು ಬಳಸಿಕೊಂಡು ಭೂ ಕಾಯಿದೆಗೆ ತಿದ್ದುಪಡಿ ತರುವ ಸಂಘದವರ ಹುನ್ನಾರ ಶುದ್ಧ ಸಂಚಿನಿಂದ ಕೂಡಿದೆ. ರೈತರು ಭುಗಿಲೇಳಲು ಕೊರೊನಾ ಅಡ್ಡಿ ಬಂದಿದೆ ಅಷ್ಟೆ.


ಇದನ್ನು ಓದಿ: ಗರ್ಭೀಣಿಯನ್ನು ಕೋಲಿನಲ್ಲಿ ಹೆಗಲಮೇಲ ಹೊತ್ತು ಆಸ್ಪತ್ರೆಗೆ ದಾಖಲು: ಚತ್ತೀಸ್‌ಘಡದಲ್ಲಿ ಮನಕಲಕುವ ವಿಡಿಯೋ.. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...