Homeಕರ್ನಾಟಕಕಾರಜೋಳರಿಗೊಂದು ಕಿವಿಮಾತು : ಬಿ.ಚಂದ್ರೇಗೌಡರ ಬಹಿರಂಗ ಪತ್ರ

ಕಾರಜೋಳರಿಗೊಂದು ಕಿವಿಮಾತು : ಬಿ.ಚಂದ್ರೇಗೌಡರ ಬಹಿರಂಗ ಪತ್ರ

ರೈತರು ಬೀದಿಗಿಳಿದು ಪ್ರತಿಭಟಿಸಲಾರರು ಎಂದು ಕೊರೊನಾ ಸೋಂಕು ಬಳಸಿಕೊಂಡು ಭೂ ಕಾಯಿದೆಗೆ ತಿದ್ದುಪಡಿ ತರುವ ಸಂಘದವರ ಹುನ್ನಾರ ಶುದ್ಧ ಸಂಚಿನಿಂದ ಕೂಡಿದೆ. ರೈತರು ಭುಗಿಲೇಳಲು ಕೊರೊನಾ ಅಡ್ಡಿ ಬಂದಿದೆ ಅಷ್ಟೆ.

- Advertisement -
- Advertisement -

ಗೌರಿ ಲಂಕೇಶ್ ಕೊಲೆಯಾದ ನಂತರ ಒಂಥರದ ಶೂನ್ಯ ಆವರಿಸಿದ್ದರಿಂದ, ಊರಿಗೆ ಹೋಗಿ ನನ್ನ ಭಾಗದ ಜಮೀನಿನಲ್ಲಿ ಬೇಸಾಯ ಮಾಡಬೇಕಿನಿಸಿತು. ಗಂಗಾಕಲ್ಯಾಣದ ಬೋರ್‍ವೆಲ್‍ ಗಾಗಿ ಭೂ ದಾಖಲೆಯನ್ನೊದಗಿಸಿದೆ. ಕಾಂಗ್ರೆಸ್ ರಾಜಕಾರಣಿಯ ಪ್ರಭಾವದಿಂದ ಮಂಜೂರಾಗಿ ಬಂತು. ಏಕೆಂದರೆ ಆ ರಾಜಕಾರಣಿಯೂ ಒಂದು ಬೋರ್‍ವೆಲ್ ಪಡೆಯಲಿದ್ದು ಪತ್ರಕರ್ತರೊಬ್ಬರು ಜೊತೆಯಲ್ಲಿರಲೆಂದು ನನ್ನದನ್ನ ಸೇರಿಸಿ ಮಂಜೂರು ಮಾಡಿಸಿದ್ದರು. ಗಂಗಾಕಲ್ಯಾಣದ ಬೋರ್‍ವೆಲ್ ಜನ ನಾವು ತೋರಿದ ಜಾಗದಲ್ಲಿ ಕೊರೆದು ಹೋಗುತ್ತಾರೆಂದು ಗೊತ್ತಾದ ಮೇಲೆ, ನೀರಿನ ಸೆಲೆ ಜಾಗವನ್ನು ನಾನೇ ಗುರುತು ಮಾಡಿಸಲು ಮುಂದಾದೆ. ಗೆಳೆಯರೊಬ್ಬರ ಸಲಹೆಯಂತೆ ಹಾಸನದಿಂದ ನೆಲದೊಳಗಿನ ನೀರಿನ ಝರಿ ಪತ್ತೆಹಚ್ಚುವವರನ್ನ ಕರೆಸಿದೆ. ಅವರು ಬಂದರು. ನೋಡಿದ ಕೂಡಲೆ ಮದುವೆ ಮಾಡಿಸಲು ಬಂದ ಪುರೋಹಿತರನ್ನ ನೋಡಿದಂತಾಯ್ತು. ನನ್ನ ಭಾಗದ ಭೂಮಿಯಲ್ಲಿ ನಿಂತು ಅಂಗೈಯಲ್ಲಿ ಸುಲಿದ ಕಾಯಿ ಇಟ್ಟುಕೊಂಡು ಕೂಡಲೆ ಆ ಮಹಾಮಹಿಮರು ಅಂತದೃಷ್ಠಿಗೆ ಒಳಗಾಗಿ ಚಲಿಸತೊಡಗಿದರು. ನನ್ನ ಭೂಮಿಯನ್ನು ಸುತ್ತಿ ಅಕ್ಕಪಕ್ಕದ ಜಮೀನಿನಲ್ಲೆಲ್ಲಾ ಸುತ್ತತೊಡಗಿದರು. “ಅದು ನನ್ನ ಜಾಗಲ್ಲ” ಎಂಬ ಮಾತು ಅವರ ಕಿವಿಗೆ ಬೀಳಲಿಲ್ಲ. ಭೂಗರ್ಭದ ಜಲ ಕಣ್ಣು ಮತ್ತು ಅವರ ಕಣ್ಣು ಒಂದಾದಂತೆ, ಒಂದು ಜಾಗದಲ್ಲಿ ಪಶ್ಚಿಮಾಭಿಮುಖವಾಗಿ ಪಾದ ಜೋಡಿಸಿ ನಿಂತರು. ಮಣ್ಣಿನಲ್ಲಿ ಅವರ ಪಾದ ಮೂಡಿದವು. ಅಂಗಯ್ಯಲ್ಲಿ ಆಡುತ್ತಿದ್ದ ತೆಂಗಿನ ಶಿಬೆ ಅಲ್ಲಾಡದೆ ನಿಂತಿತ್ತು. ತಮ್ಮ ಪಾದದ ಗುರುತಿನ ಜಾಗದಿಂದ ಈಚೆ ಬಂದ ಅವರು, “ಇಲ್ಲಿ ಕೊರೆಸಿ ಹೆಚ್ಚಿನ ಬರವಸೆ ಬ್ಯಾಡ, ಎರಡಿಂಚು ನೀರು ಬತ್ತದೆ” ಎಂದರು. ಅದು ನನ್ನ ಅಣ್ಣನ ಜಮೀನಾಗಿತ್ತು. ಅದರಿಂದೇನೂ ತೊಂದರೆಯಿರಲಿಲ್ಲ. ಮೂರು ಜನರೂ ಒಂದೇ ತಟ್ಟೆಗೆ ಕೈಯಾಕುವವರಂತಿದ್ದೆವು. ಆದರೂ ಪಾಲಾಗಿ ನಮ್ಮ ನಮ್ಮ ಭೂಮಿ ನಮ್ಮ ಹೆಸರಿಗೆ ಖಾತೆಯಾಗಿದ್ದವು. ಆದ್ದರಿಂದ ಈಗಿನ ಸಮಸ್ಯೆ ಏನೆಂದರೆ ಬೋರ್‍ವೆಲ್ ಅರ್ಜಿ ಮತ್ತು ಭೂ ದಾಖಲೆಯನ್ನ ನಮ್ಮ ಅಣ್ಣನ ಹೆಸರಿಗೆ ವರ್ಗವಾಗಬೇಕಿತ್ತು.

ಆ ಕೆಲಸ ಮಾಡಿಸಿದರಾಯ್ತೆಂದುಕೊಂಡು ಜಲಕಣ್ಣು ಪತ್ತೆ ಹಚ್ಚಿದವರನ್ನ ಕುರಿತು “ತಮ್ಮದ್ಯಾವುರು ಸಾರ್” ಎಂದೆ. ಹಾಸನ ಎಂದರು. ಹಾಸನದತ್ರ ಯಾವೂರು ಅಂದೆ. ‘ಕಿತ್ತಾನೆ’ ಎಂದರು. ಓ ನಮ್ಮ ಗುರುಗಳೂರು ಸಾರ್ ಅದೂ ಎಂದು ಅತ್ಯುತ್ಸಾಹದಿಂದ ಕಿ.ರಂ ಗುಣಗಾನ ಮಾಡಿದೆ. ಕನ್ನಡ ಸಾಹಿತ್ಯ ಕಂಡ ಅಪರೂಪದ ವಿದ್ವಾಂಸನ ಗುಣಗಾನ ಮಾಡುತ್ತ, ಗೋಪಾಲಕೃಷ್ಣ ಅಡಿಗರಂತ ದೊಡ್ಡ ಕವಿನೆ ತಾವು ಬರೆದದ್ದರ ಬಗ್ಗೆ ಕಿ.ರಂ ಏನೇಳ್ತನೆ ಅಂತ ಕಾಯ್ತಿದ್ರು ಸಾರ್ ಅಂದೆ. “ಭಾಳ ದೊಡ್ಡ ಮನ್ಸ ಅವುನು” ಎಂದರು. ಆ ಮಾತಿನಲ್ಲಿದ್ದ ವ್ಯಂಗ್ಯ ಗಮನಿಸಿ ನನ್ನ ಪುಂಗಿ ಬಂದ್ ಆಯ್ತು. “ದೇವುರಿಲ್ಲ ದಿಂಡ್ರಿಲ್ಲ ಅನ್ನದು, ಪೂಜೆ ಪುರಸ್ಕಾರ ಆಡಿಕಳದು, ಸಿಗರೇಟ್ ಸೇದದು, ಮನೆ ಮಠ ಜಮೀನು ಹೆಡತಿ ಮಕ್ಕಳು ಯಾವುದರ ಬಗ್ಗೆನೂ ಗಮನವೇ ಇಲ್ದಂಗೆ ಬಾಳೀದ ಊರಲ್ಲಿರೊ ಆಸ್ತಿ ಮನೆ ಕಡೆನೂ ಸುಳುದು ನೋಡಲಿಲ್ಲ. ಜಾತಿ ಬೈಯದು ಧರ್ಮ ಬೈಯದು ಇವುನು ಜೊತಿಗೆ ಆ ಮೈಸೂರಲ್ಲೊಬ್ಬ ಭಗವಾನ್ ಅಂತ ಸೇರಿಕೆಂಡವುನೆ, ಬಾಯಿ ಬಂದಂಗೆ ಮಾತಾಡ್ತನೆ. ಈಚೆಗೆ ಗಿರೀಶ್ ಕಾರ್ನಾಡನೂ ಸೇರಿಕೊಂಡವುನೆ, ಇವುರಿಗ್ಯಲ್ಲ ಏನಾಗ್ಯದೆ ಅಂತಿನಿ” ಎಂದರು. ನನ್ನ ಬೋರ್‍ವೆಲ್ ಪಾಯಿಂಟ್ ಕೆಲಸ ಮುಗಿದಿತ್ತು. ಏಕೆಂದರೆ ಈ ಹಿಂದೆ ಮೋದಿಯ ಕಟ್ಟಾ ಅಭಿಮಾನಿ ಕರೆಸಿ ಎರಡು ಪಾಯಿಂಟ್ ಮಾಡಿಸಿ, ಅವು ಕೈಕೊಟ್ಟು ಒಂದೇ ದಿನಕ್ಕೆ ಒಂದು ಲಕ್ಷ ಕಳೆದುಕೊಂಡಿದ್ದೆ. ಆ ಪಾಯಿಂಟ್‍ಗಳು ವಿಫಲವಾದುದಕ್ಕೆ, ನಾವು ಅವನೆದುರು ಮೋದಿಗೆ ಹಿಗ್ಗಾಮುಗ್ಗಾ ಬೈದಿದ್ದೇ ಕಾರಣವಾಗಿ ತಪ್ಪು ಜಾಗ ತೋರಿಸಿ ಹೋಗಿದ್ದಾನೆಂದು ಬೈದುಕೊಂಡಿದ್ದೆವು. ಈಗ ಕಿರಂ ಸಂಬಂಧಿಗೆ ನಾವು ಅವರ ಕಡೆಯವರು ಎಂದು ಮೋದಲೇ ಗೊತ್ತಿದ್ದರೆ ಕತೆಯೇನೆಂದು ಯೋಚಿಸುವಂತಾಯ್ತು. ಇಂತಹ ಕ್ಷುಲ್ಲಕ ಯೋಚನೆಗೆ ಅವಕಾಶವಿರಲಿಲ್ಲ. ಏಕೆಂದರೆ ಇವರು ಭೂಮಿಪುತ್ರರಾಗಿದ್ದರು. ಸ್ವತಹ ತಮ್ಮ ಜಮೀನಿನಲ್ಲೇ ತಾವೇ ಜಲಕಣ್ಣು ಪತ್ತೆ ಹಚ್ಚಿ ನಂತರ ಉಳಿದವರಿಗೆ ತೋರುವಂತಹ ಉದಾರಿಯಾಗಿದ್ದವರು. ಇಷ್ಟಾದರೂ ಬೆಂಗಾಡಿನಂತಹ ಈ ಭೂಮಿಯಲ್ಲಿ ನೀರು ಬರಲು ಸಾಧ್ಯವೇ ಎಂಬ ಅನುಮಾನವಿತ್ತು.

ಅದೊಂದು ದಿನ ಇದೇ ಹವಮಾನದಲ್ಲಿ ಸರಿಯಾಗಿ ಅರ್ಧ ರಾತ್ರಿಯಲ್ಲಿ ಸರಕಾರದಿಂದ ಮಂಜೂರಾಗಿದ್ದ ಬೋರ್‍ವೆಲ್ ಕೊರೆಯಲು ಲಾರಿಗಳು ನನ್ನ ಜಮೀನು ಹುಡುಕುತ್ತ ಬಂದವು. ಅವರಿಗೆ ಉತ್ಸಾಹದಿಂದ ಪಾಯಿಂಟ್ ತೋರಿಸಿ ರಾಜಾ ವಿಸ್ಕಿಗಳ ಪ್ಯಾಕೆಟ್ ಬಿಚ್ಚಿಕೊಂಡು ಕುಳಿತುಕೊಂಡರೆ, ಆ ಬೋರ್‍ವೆಲ್ ಸದ್ದಿಗೆ ಯಾರ ಮಾತು ಯಾರಿಗೂ ಕೇಳುತ್ತಿರಲಿಲ್ಲ. ಕಡೆಗೆ ಹೊಟ್ಟೆ ತುಂಬಾ ಕುಡಿದು ನಿದ್ದೆ ಹೋದಾಗ ಸರಿಯಾಗಿ ನಾಲ್ಕು ಗಂಟೆ ರಾತ್ರಿಯಲ್ಲಿ ಭುಜ ತಟ್ಟಿದ ಮುರುಗನ್ ಅಣ್ಣೈಯ್ ಅಂಗೆ ಪಾರು ಎಂದು ತೋರಿಸಿದ. ನಿಜಕ್ಕೂ ಆ ರಾತ್ರಿಯಲ್ಲಾ ಭಗೀರತನಂತೆ ಕಾಣಿಸಿದ. ನೀರು ನೋಡಿ ಬರಬಾರದ ಅಳು ಬಂತು. ಇಂತದೊಂದು ದೃಶ್ಯ ನೋಡಲು ಬಹಳ ಖರ್ಚಾಗಿತ್ತು. ಆದರೂ ಹತಾಶೆಯಿಂದ ಕೈ ಚೆಲ್ಲಿದ್ದ ಕಾಲದಲ್ಲಿ ನೀರು ಕಾಣಿಸಿಕೊಂಡಿತ್ತು. ನಾಲ್ಕು ಗಂಟೆ ರಾತ್ರಿಯಲ್ಲೇ ಎಲ್ಲರಿಗೂ ಪೋನ್ ಮಾಡಿ ಹುಚ್ಚನಂತೆ ಮಾತನಾಡಿದೆ. ಕೊರೆದವರಿಗೆ ಕಾಸು ಕೊಟ್ಟು ಉಳಿದ ಹುಡುಗರಿಗೆ ಭಕ್ಷೀಸುಕೊಟ್ಟು ಕಳುಹಿಸುವಾಗ ಬೆಳಗಾಗತೊಡಗಿತು. ಅದು ಅಂತಿಂಥ ಬೆಳಗಾಗಿರಲಿಲ್ಲ.

ನಂತರ ಮೂರೇ ತಿಂಗಳಲ್ಲಿ ಲೈಟ್‍ಕಂಬ ಮತ್ತು ಟ್ರಾನ್ಸ್ ಮೀಟರ್ ಬಂತು. ಅದನ್ನ ಅಳವಡಿಸಿದವರು “ಕೆ.ಇ.ಬಿ ಸಂಪರ್ಕ ಪಡೆದು ವಿದ್ಯುತ್ ಪಡೆದುಕೊಳ್ಳುವಂತೆ” ಸಲಹೆಕೊಟ್ಟು ಹೋದರು. ಇನ್ನ ಸರಕಾರದಿಂದ ಬರಬೇಕಿದ್ದ ಸಾಮಾಗ್ರಿಗಳೆಂದರೆ ನಾನೂರು ಅಡಿಯ ಜಿವಿಪೈಪು ಮತ್ತು ಕೇಬಲ್ ವೈರು. ಅವು ಬರುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಅದ್ದರಿಂದ ನನ್ನ ಜಮೀನಿಗೆ ಐವತ್ತು ತೆಂಗಿನ ಸೊಸಿ ನೆಡೆಸಿದೆ. ನೆಟ್ಟ ಸಸಿಗಳು ಗಾಳಿಗೆ ದೀಪದಂತೆ ಹೊಯ್ಡಾಡುತ್ತಿರುವುದನ್ನು ನೋಡುತ್ತಿರಬೇಕಾದರೆ, ಪೂರ್ವ ದಿಕ್ಕಿನ ಕಡೆಯಿಂದ ಶಿರಾ ಕಡೆಯ ಕರೆಕುರಿಯ ಮಂದೆ ಹಸಿರು ಭಾಗಕ್ಕೆ ಮಾರಿಯಂತೆ ದಾವಿಸುತ್ತಿತ್ತು. ಆ ಗುಂಪಲ್ಲಿ ಕತ್ತೆ ಮೇಕೆಗಳೂ ಇದ್ದವು. ಈ ಮೇಕೆ ಇಡೀ ಕಾಡನ್ನು ಮೆಲಕಾಡಿಸಿ ಹಿಕ್ಕೆ ಮಾಡಿ ಉದುರಿಸುವಂತಹ ರಕ್ಕಸ ಪ್ರಾಣಿ. ಹೆದರಿದ ನಾನು ಜಮೀನು ಸುತ್ತಲೂ ಕಲ್ಲು ಕಂಬ ನೆಡಿಸಿ ಬೆಂಗಳೂರು ಜೆಸಿ ರಸ್ತೆಯಿಂದ ಮುಳ್ಳುತಂತಿ ತರಿಸಿ ಬಿಗಿಸಿ ಬಂದೋ ಬಸ್ತು ಮಾಡಿದೆ. ಅಷ್ಟರಲ್ಲಿ ಬೇಸಿಗೆ ಬಂತು ಮಳೆಗಾಲ ಮುಗಿದಿದ್ದರಿಂದ ತೆಂಗಿನ ಸಸಿಗಳು ಬಾಡತೊಡಗಿದವು. ಗಂಗಾ ಕಲ್ಯಾಣ ಇಲಾಖೆಗೆ ಹೋಗಿ ಪೈಪು ಮತ್ತು ವೈರುಕೊಟ್ಟು ತೆಂಗಿನಸೊಸಿ ಕಾಪಾಡಲು ಕೇಳಿಕೊಂಡೆ. ಬೋರೆಗೌಡ ಎಂಬ ಅಧಿಕಾರಿ ಅವು ಬಂದ ಕೂಡಲೇ ಫೋನ್ ಮಾಡುವುದಾಗಿ ಹೇಳಿದರು. ಆದರೆ ನನಗೆ ಬರಬೇಕಿದ್ದ ಪೈಪುಗಳ ಪೈಕಿ ಕೇವಲ ಏಳನ್ನ ಬೇರೆ ಯಾರದ್ದೊ ಬೋರ್‍ವೆಲ್ ಹತ್ತಿರ ಇಳಿಸಿ, ಕೇಬಲ್ ವೈರನ್ನೂ ಅಲ್ಲಿಯೇ ಇಳಿಸಿ ನಮಗೆ ತಲುಪಿಸಲು ಹೇಳಿ ಹೋಗಿದ್ದರು. ಅಲ್ಲಿಗೆ ಹೋಗಿ ಕೇಳೀದಾಗ “ಕೇಬಲ್ ವೈರನ್ನ ಯಾರೂ ಕದ್ದುಕೊಂಡು ಹೋಗಿದ್ದಾರೆ ನಿಮ್ಮ ಏಳು ಪೈಪು ಅಲ್ಲಿವೆ ತೆಗೆದುಕೊಂಡು ಹೋಗಿ” ಎಂದರು. ಮಂಡ್ಯದ ಗಂಗಾ ಕಲ್ಯಾಣದ ಜವಬ್ದಾರಿ ಹೊತ್ತ ಅಧಿಕಾರಿಗಳ ಬೇಜಾವಾಬ್ದಾರಿ ಕೆಲಸದಿಂದ ನನ್ನ ಕಣ್ಣ ಮುಂದೆ ನಾನೇ ನೆಟ್ಟ ಐವತ್ತು ತೆಂಗಿನ ಸಸಿಗಳು ಒಣಗಿಹೋದವು!

ನನಗೆ ಬರಬೇಕಾದ ಪೈಪು ಮತ್ತೆ ವೈರಿನ ಬಗ್ಗೆ ಬೋರೇಗೌಡರಿಗೆ ಕೇಳಿದರೆ, “ನಿಮ್ಮ ಲೋನು ಮುಗಿದಿದೆ ಉಳಿಕೆ ಪೈಪು ಮತ್ತು ಕೇಬಲ್ ಖರೀದಿಗೆ ಮತ್ತೆ ಅರ್ಜಿ ಸಲ್ಲಿಸಿ ಮಂಜೂರಾಗುತ್ತೆ” ಎಂದರು. ಎಷ್ಟು ದಿನದಲ್ಲಿ ಎಂದೆ, ಇನ್ನಾರು ತಿಂಗಳಾಗಬಹುದು ಎಂದರು. ಅಷ್ಟರಲ್ಲಿ ಕೊರೊನಾ ಬಂದುದರಿಂದ ನಾನೇ ನಿರ್ಗಮಿಸಬಹುದೆಂದು ಹೆದರಿ ಲೋನಿಗೆ ಅರ್ಜಿ ಹಾಕದೆ ಸುಮ್ಮನಾದೆ.

ಇದನ್ಯಾಕೆ ಹೇಳುತ್ತಿದ್ದೇನೆಂದರೆ, ಕಳೆದ ಅಧಿವೇಶನದಲ್ಲಿ ಗೋವಿಂದ ಕಾರಜೋಳ ರೈತರಿಗೆ ಅನುಕೂಲ ಮಾಡಿ ಗಂಗಾ ಕಲ್ಯಾಣದ ಮೂಲಕ ಉದ್ಧಾರ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಇವರ ಅಧಿಕಾರಿಗಳಿಗೆ ಅಂತಹ ಕಾಳಜಿ ಇಲ್ಲ, ಜವಾಬ್ದಾರಿಯೂ ಇಲ್ಲ. ಇದ್ದಿದ್ದರೆ ನನ್ನನ್ನ ಒಂದು ವರ್ಷ ಸಥಾಯಿಸಿ ಇಪ್ಪತ್ತು ಜಿ.ವಿ ಪೈಪು ಕೊಡುವ ಬದಲು ಏಳು ಪೈಪು ಇಳಿಸಿ ಕೇಬಲ್ ವೈರನ್ನ ಯಾರಿಗೊ ಕೊಟ್ಟು ಹೋಗುತ್ತಿರಲಿಲ್ಲ. ಬೋರ್‍ವೆಲ್ ಕೊರೆಸಿದವನ ಕೈಗೆ ಸಾಮಗ್ರಿ ತಲುಪಿಸಿ ಸಹಿ ಪಡೆಯಬೇಕಾದ ಇವರು ಆ ಕೆಲಸ ಮಾಡಿಲ್ಲ. ಈ ಕಳ್ಳರ ವಿರುದ್ಧ ಹೋರಾಡಲು ಹೋದರೆ ತಬರನಂತಾಗಬೇಕಾಗುತ್ತದೆ ಎಂದು ಸುಮ್ಮನಾದೆ. ಆದರೂ ಈ ಜಮೀನಿನ ಮೇಲೆ ಹಾಕಿದ ಹಣ ಎರಡು ಲಕ್ಷ. ಆ ಕಡೆಯಿಂದ ಒಂದು ಪೈಸೆ ಬರದಿದ್ದರೂ ನಿರಾಶೆಯಾಗಿಲ್ಲ. ಈ ಭೂಮಿ ಕೊಡುವ ನೆಮ್ಮದಿ ವಿಚಿತ್ರವಾದದ್ದು. ಇಲ್ಲಿ ಸಂಜೆಯವರೆಗೂ ಮರದ ನೆರಳಲ್ಲಿ ಕೂತಿದ್ದರೆ ಪತ್ರಿಕೆ, ಟಿ.ವಿ ಮತ್ತು ಹೊರ ಜಗತಿನ ಸುದ್ದಿ ಬೇಕಾಗುವುದಿಲ್ಲ. ಇಂತಹ ನೆಮ್ಮದಿಯಿಂದಾಗಿ ನಮ್ಮ ಜನ ಎಂತಹ ಸ್ಥಿತಿಯಲ್ಲೂ ಪರಬಾರೆ ಮಾಡಿಲ್ಲ. ವತ್ತಾರೆ ಅತ್ತೆಯ ಜೊತೆ ಜಗಳಾಡಿದವಳು ಗಂಡನ ಜೊತೆ ಕಿತ್ತಾಡಿದವಳು ಮಂಕ್ರಿ ತೆಗೆದುಕೊಂಡು ಹೊಲದ ಕಡೆ ಹೋಗಿಬಿಟ್ಟರೆ ಸಂಜೆಯಾಗುತ್ತಿದ್ದಂತೆ ಸಮಾಧಾನಗೊಂಡು ಮನೆಗೆ ಮರಳುತ್ತಾರೆ. ನಮ್ಮ ಜನಗಳ ಭೂಮಿ ಸಂಬಂಧವಾದ ಬಾಂಧವ್ಯ ಸಣ್ಣ ಸಂಗತಿಯಲ್ಲ. ಅನಾದಿ ಕಾಲದಿಂದ ದೊಡ್ಡ ಚರಿತ್ರೆಯೇ ಇದೆ. ಇದಾವುದೂ ಗೊತ್ತಿಲ್ಲದ ಬಿಜೆಪಿಗಳು ಲಾಭ ನಷ್ಟದ ಚರ್ಚೆ ಶುರುಮಾಡಿಕೊಂಡು ರೈತನನ್ನು ಅನಾಥ ಗುಲಾಮನನ್ನಾಗಿಸಲು ಹೊರಟಿವೆ. ಇನ್ನೊಂದು ವಿಶೇಷವೆಂದರೆ ಈ ಬಿಜೆಪಿಗಳು ಯಾವುದೇ ಕಾನೂನು ತಂದರು ಅವರ ಅಜೆಂಡ ಅದರೊಳಗೆ ಅಡಗಿರುತ್ತದೆ. ಪುರೋಹಿತಶಾಹಿ ಉದ್ಧಾರದ ಸೂತ್ರಗಳು ಜನಿವಾರದಂತೆ ಸುತ್ತಿಕೊಂಡಿರುತ್ತವೆ. ಅವರ ಇಡೀ ಚರಿತ್ರೆಯಲ್ಲಿ, ಸಾಹಿತ್ಯದಲ್ಲಿ ರೈತನೇ ಇಲ್ಲ. ತಟ್ಟೆಯೊಳಗಿನ ಅನ್ನ ಮಾತ್ರ ಕಾಣುತ್ತದೆಯೇ ಹೊರತು ಅದನ್ನು ಬೆಳೆದ ರೈತನ ಮುಖ ಅವರು ಸತ್ತರೂ ಕಾಣುವುದಿಲ್ಲ. ಇಂತಹ ಜನರೀಗ ಭೂಮಿ ಮಾರಿಕೊಂಡು ರೈತ ಕುಬೇರನಾಗಬಲ್ಲ ಎಂದು ಲೇಖನ ಕೊರೆಯುತ್ತ ಕುಳಿತಿವೆ. ಹುಡುಕಿದರೆ ಈ ಆಲೋಚನೆಗಳ ಮೂಲವೆಲ್ಲಾ ಒಂದೆ.

ಇಂತಹ ಮನೆಮುರುಕ ಕಾನೂನು ತರಬೇಕಾದರೆ ಧೈರ್ಯ ಬೇಕು ಏಕೆಂದರೆ ಪ್ರೊ. ನಂಜುಂಡ ಸ್ವಾಮಿಯವರು ಕಟ್ಟಿಹೋದ ರೈತ ಸಂಘ ಇನ್ನು ಸತ್ತಿಲ್ಲ. ರೈತರು ಬೀದಿಗಿಳಿದು ಪ್ರತಿಭಟಿಸಲಾರರು ಎಂದು ಕೊರೊನಾ ಸೋಂಕು ಬಳಸಿಕೊಂಡು ಭೂ ಕಾಯಿದೆಗೆ ತಿದ್ದುಪಡಿ ತರುವ ಸಂಘದವರ ಹುನ್ನಾರ ಶುದ್ಧ ಸಂಚಿನಿಂದ ಕೂಡಿದೆ. ರೈತರು ಭುಗಿಲೇಳಲು ಕೊರೊನಾ ಅಡ್ಡಿ ಬಂದಿದೆ ಅಷ್ಟೆ.


ಇದನ್ನು ಓದಿ: ಗರ್ಭೀಣಿಯನ್ನು ಕೋಲಿನಲ್ಲಿ ಹೆಗಲಮೇಲ ಹೊತ್ತು ಆಸ್ಪತ್ರೆಗೆ ದಾಖಲು: ಚತ್ತೀಸ್‌ಘಡದಲ್ಲಿ ಮನಕಲಕುವ ವಿಡಿಯೋ.. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...