ಲಿಂಗಾಯತ ಯುವತಿಯನ್ನು ಪ್ರೀತಿಸಿ ಮದುವೆಯಾದ ಕುರುಬ ಸಮುದಾಯದ ಯುವಕನಿಗೆ ಹಾಗೂ ಆತನ ಕುಟುಂಬಕ್ಕೆ ಪೊಲೀಸರು, ಜಾತಿವಾದಿಗಳು ಚಿತ್ರಹಿಂಸೆ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ಹಾಗೂ ಜಾತಿವಾದಿಗಳು ಸೇರಿಕೊಂಡು ಪೊಲೀಸ್ ಠಾಣೆಯಲ್ಲೇ ಸಂತ್ರಸ್ತ ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ, ಯುವಕನಿಗೆ ಬೂಟು ನೆಕ್ಕಿಸಲಾಗಿದೆ ಎಂಬ ಆರೋಪ ಬಂದಿದೆ.
ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಗ್ರಾಮದ ಕುರುಬ ಸಮುದಾಯದ ಯುವಕ ಭೀರಪ್ಪ ಹಾಗೂ ಅದೇ ಗ್ರಾಮದ ಲಿಂಗಾಯತ ಸಮುದಾಯದ ಯುವತಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಮೊದಲಿನಿಂದಲೂ ಯುವತಿಯ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮೈಸೂರಿಗೆ ಬಂದು ಮದುವೆಯಾಗಿದ್ದ ಜೋಡಿಯನ್ನು ನಯವಾಗಿ ಬಾಗಲಕೋಟೆಗೆ ಕರೆಸಿಕೊಂಡ ಪೊಲೀಸರು, ಭೀಕರವಾಗಿ ಥಳಿಸಿದ್ದಾರೆ. ಠಾಣೆಯಲ್ಲಿ ಕೂಡಿಹಾಕಿ, ಜಾತಿವಾದಿಗಳೊಂದಿಗೆ ಸೇರಿ ಸಾಯುವಂತೆ ಹೊಡೆದಿದ್ದಾರೆ. ಬಾಯಲ್ಲಿ ಬೂಟು ಇಟ್ಟು ಹಿಂಸೆ ನೀಡಿದ್ದಾರೆ. ಇನ್ನೊಮ್ಮೆ ಹುಡುಗಿಯನ್ನು ನೋಡಿದರೆ ಸಾಯಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ” ಎಂದು ಯುವಕ ತಿಳಿಸಿದ್ದಾರೆ.
ಇದನ್ನೂ ಓದಿರಿ: ಯುಪಿ: ಲಖಿಂಪುರಖೇರಿಯ ಅಪ್ರಾಪ್ತ ದಲಿತ ಸಹೋದರಿಯರ ಅತ್ಯಾಚಾರ, ಹತ್ಯೆ – 6 ಮಂದಿ ಬಂಧನ
ಯುವಕನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಾಪಸ್ ಕಳುಹಿಸಿದ್ದಾರೆ. ಇಷ್ಟಾದ ಮೇಲೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ಹುಡುಗಿಯ ಕಡೆಯವರು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಅಜ್ಞಾತ ಸ್ಥಳಕ್ಕೆ ಸೇರಿಕೊಂಡಿರುವ ಯುವಕ ಭೀರಪ್ಪ ಮಾಧ್ಯಮದೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವುದು ಹೀಗೆ:
“ನನ್ನನ್ನು ಪ್ರೀತಿಸಿದ ಕಾರಣಕ್ಕೆ ಹುಡುಗಿಯನ್ನು ಹೊಡೆಯುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆ ಮಾಡಲು ಯೋಚಿಸಿದ್ದರು. ಆಕೆ ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದಳು. ನನಗೆ ಬೇರೆ ದಾರಿ ಇಲ್ಲದೆ ಮೈಸೂರಿಗೆ ಕರೆದುಕೊಂಡೆ ಹೋದೆ. ಎಂಜಿನಿಯರ್ ಆಗಿರುವ ನನ್ನ ಮಾವನ ಸಹಾಯದಿಂದ ಮದುವೆಯಾದೆ.”
“ನನ್ನದು ಕುರುಬ ಜಾತಿ. ಆಕೆಯದ್ದು ಲಿಂಗಾಯತ ಜಾತಿ. ರಿಜಿಸ್ಟ್ರಾರ್ ಮ್ಯಾರೇಜ್ ಆದೆವು. ನಾವು ವಾಪಸ್ ಹೋಗಲು ತಡ ಮಾಡಿದೆವು. ಆದರೆ ನನ್ನ ಸಂಬಂಧಿಕರನ್ನು ಬಾಗಲಕೋಟೆ ಗ್ರಾಮಾಂತರ ಠಾಣೆಗೆ ಕರೆತಂದು ಕೂಡಿಹಾಕಿದ್ದರು. ಜೀವ ಬೆದರಿಕೆ ನೀಡುತ್ತಿದ್ದರು. ವಕೀಲರ ಸಹಾಯದಿಂದ ಗ್ರಾಮಾಂತರ ಠಾಣೆಗೆ ಬಂದಾಗ ನನ್ನನ್ನು ಹೊಡೆದರು. ಬೂಟು ಕಾಲಲ್ಲಿ ಒದ್ದರು..”
“ಸ್ಟೇಷನ್ಗೆ ಸಂಬಂಧವಿಲ್ಲದವರೆಲ್ಲ ಥಳಿಸಿದರು. ನನ್ನ ಮಾವಂದಿರರಿಗೆ ಚಿತ್ರ ಹಿಂಸೆ ಕೊಟ್ಟರು. ಕಾಲು ತೊಡೆಯಲ್ಲಿರುವ ಕೂದಲನ್ನು ಕೈಯಲ್ಲೇ ಕಿತ್ತರು. ನನ್ನ ಮಾವ ಮೈಸೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಆ ಹುಡುಗಿಯನ್ನು ಮನೆಗೆ ಕಳುಹಿಸದಿದ್ದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಬೆದರಿಸಿದರು…”
“ಈ ಹಿಂದೆ ಆಕೆ ಎರಡು ಸಲ ಸೂಸೈಡ್ ಮಾಡಿಕೊಳ್ಳಲು ಹೋಗಿದ್ದಳು. ನನ್ನ ಬಿಟ್ಟು ಆಕೆ ಇರಲ್ಲ. ನಾನು ಆಕೆಯನ್ನು ಬಿಟ್ಟು ಇರಲ್ಲ. ಆಕೆಗೇನಾದರೂ ತೊಂದರೆಯಾದರೆ ನನ್ನನ್ನು ಬಂಧಿಸುತ್ತಾರೆ. ನನ್ನ ಮಾವನನ್ನು ಅರೆಸ್ಟ್ ವಾರೆಂಟ್ ಇಲ್ಲದೆಯೂ ಬಂಧಿಸಿ ಭೀಕರವಾಗಿ ಗಾಯಗೊಳಿಸಿದರು.”
“ಸ್ಟೇಷನ್ನಲ್ಲಿ ನಾಲ್ಕೈದು ದಿನ ಕೂಡಿಹಾಕಿದ್ದರು. ಲಿಪ್ಸ್ಟಿಕ್ ಕೊಡಿಸಲು ಸಹ ಯೋಗ್ಯತೆ ಇಲ್ಲದವನು ಶ್ರೀಮಂತ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ಎಂಬಿಬಿಎಸ್ ಮಾಡಲು ಒಂದು ಕೋಟಿ ಇಪ್ಪತ್ತು ಲಕ್ಷ ದುಡ್ಡು ಕಟ್ಟಿದ್ದೇವೆ. ಅದನ್ನು ಇಟ್ಟು ಹೊರಗಡೆ ಹೋಗಿ ಎಂದರು. ಹೀಗೆ ಹೇಳುವಾಗ ಇನ್ನು ನೀಟ್ ಫಲಿತಾಂಶವೇ ಬಂದಿರಲಿಲ್ಲ. ಹೀಗಿರುವಾಗ ಇವರು ಹೇಗೆ ಕೊಟ್ಟಿದ್ದರು?”
“ಸ್ಟೇಷನ್ಅನ್ನೇ ಅವರು ಮನೆ ಮಾಡಿಕೊಂಡಿದ್ದರು. ನಿನ್ನನ್ನು ಇವರೆಲ್ಲ ಸೇರಿ ಮರ್ಡರ್ ಮಾಡುತ್ತಾರೆ ಎಂದು ಪೊಲೀಸರೇ ಹೆದರಿಸಿದರು. ಸ್ಟೇಷನ್ ಹೊರಗಡೆ ಕಾಲಿಟ್ಟರೆ ನಿನ್ನ ಕೊಲ್ಲುತ್ತೇವೆ ಎಂದು ಐವತ್ತರಿಂ ಅರವತ್ತು ಜನ ನಿಂತಿದ್ದರು. ಹೊರಗಡೆ ಬಿಟ್ಟರೆ ಸಾಕು, ಎಲ್ಲರೂ ಸೇರಿ ನಿನ್ನನ್ನು ಕಡಿದು ಹಾಕುತ್ತಾರೆ. ಕೊಲೆ ಮಾಡುತ್ತಾರೆ ಎಂದು ಪೊಲೀಸರೇ ಗದರಿಸಿದರು…”
ಇದನ್ನೂ ಓದಿರಿ: ದಲಿತ ಮಕ್ಕಳ ಮೇಲೆ ಮುಂದುವರಿದ ದೌರ್ಜನ್ಯ: ಪ್ರಕರಣ 1, 2, 3, 4
“ಮದುವೆಯಾಗಿದ್ದಕ್ಕೆ ದಾಖಲೆ ಇದೆ. ಆಕೆ ಮನೆ ಬಿಟ್ಟು ಹೊರಗೆ ಬಂದಾಗ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಆದರೆ ಈಗ ನನ್ನ ಮೇಲೆ ಕಿಡ್ನಾಪ್ ಕೇಸ್ ಹಾಕಿದ್ದಾರೆ. ನನ್ನ ಮನೆಯ ಹನ್ನೊಂದು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ದೂರು ಕೊಟ್ಟರೂ ಪೊಲೀಸರು ತೆಗೆದುಕೊಳ್ಳುವುದಿಲ್ಲ. ಸ್ಟೇಷನ್ನೇ ಅವರದಾಗಿದೆ. ನಮಗೆ ಯಾರೂ ಇಲ್ಲ. ನಮ್ಮನ್ನು ಮರ್ಡರ್ ಮಾಡಿಸಲಿದ್ದಾರೆ. ಇದಕ್ಕಿಂತ ನಾವೇ ಸೂಸೈಡ್ ಮಾಡಿಕೊಳ್ಳುವುದು ವಾಸಿ. ದಯವಿಟ್ಟು ನೀವಾದರೂ ಹೆಲ್ಪ್ ಮಾಡಿ…”
-ಎನ್ನುತ್ತಾ ಕಣ್ಣೀರು ಹಾಕುತ್ತಾರೆ ಭೀರಪ್ಪ.
ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂಬುದು ಕಪೋಲ ಕಲ್ಪಿತವೆನ್ನುವುದಕ್ಕೆ ಅವಕಾಶವಿದೆ. ತಾನು ಪ್ರೀತಿಸಿದ ಯುವಕನೊಂದಿಗೆ ಹೊರಬಂದ ಯುವತಿ, ವಿಡಿಯೊ ಕೂಡ ಬಿಡುಗಡೆ ಮಾಡಿದ್ದಾಳೆ. “ನಾನು ಸ್ವ-ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ. ಬೇರೆಯವರನ್ನು ಮದುವೆಯಾಗು ಎಂದು ಮನೆಯಲ್ಲಿ ತುಂಬಾ ಟಾರ್ಚರ್ ಕೊಡುತ್ತಿದ್ದರು. ನಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಬೇಕೆಂದು ಇಲ್ಲಿಗೆ ಬಂದಿದ್ದೇನೆ. ಭೀರಪ್ಪನನ್ನು ಇಷ್ಟಪಡುತ್ತಿದ್ದೇನೆ” ಎಂದಿದ್ದಾರೆ.
ಯುವತಿಯ ಪತ್ರ
ತನ್ನ ಪ್ರೀತಿಯ ಬಗ್ಗೆ ಹಾಗೂ ತನ್ನ ಮನೆಯಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಯುವತಿ ಪೊಲೀಸರಿಗೆ ದೂರನ್ನು ಕಳುಹಿಸಿದ್ದರು. ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದ್ದರು.
ಕರ್ನಾಟಕ ಸರಕಾರದ ವಿರೋಧ ಪಕ್ಷ ನಾಯಕ ಗೌರವಾನ್ವಿತ ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಈ ವಿಷಯ ತಲುಪಲಿ
ರಾಜ್ಯದಲ್ಲಿ ಈಗ ಜಾತೀಯತೆ ಮುಗಿಲು ಮುಟ್ಟುತ್ತಿದೆ. ಬಸವಣ್ಣನವರ ಅನುಯಾಯಿಗಳು ಬಸವ ತತ್ವವನ್ನು ಸಮಾದಿ ಮಾಡುತ್ತಿದ್ದಾರೆ. ಇನ್ನು ಪೊಲೀಸರು, “ನಾವಿರುವುದೇ ಪ್ರಬಲರ ರಕ್ಷಣೆಗೆ” ಎಂಬಂತೆ ವರ್ತಿಸುತ್ತಿದ್ದಾರೆ. ದೀನದಲಿತರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಅವರನ್ನೇ ಬಕ್ಷಣೆ ಮಾಡುತ್ತಿದ್ದಾರೆ. ಇದು ಕ್ರೂರ, ಅನ್ಯಾಯ.