Homeಮುಖಪುಟಬೆಂಗಳೂರು: ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ ನಂತರ ಗೋಮೂತ್ರ ಸಿಂಪಡಿಸಿ ಕಚೇರಿ ಶುದ್ಧೀಕರಿಸಿದ ಎಎಪಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ ನಂತರ ಗೋಮೂತ್ರ ಸಿಂಪಡಿಸಿ ಕಚೇರಿ ಶುದ್ಧೀಕರಿಸಿದ ಎಎಪಿ

“ಎಎಪಿ ಮೃದು  ಹಿಂದುತ್ವ ರಾಜಕಾರಣ ಮಾಡುತ್ತಿದೆ” ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, “ಅದರಲ್ಲೇನು ತಪ್ಪಿಲ್ಲ ಅಲ್ಲವೇ? ಮೃದು ಹಿಂದುತ್ವ, ಕಠಿಣ ಹಿಂದುತ್ವ ಕುರಿತು ಅಷ್ಟಾಗಿ ಐಡಿಯಾಸ್‌ ಇಲ್ಲ” ಎಂದರು.

- Advertisement -
- Advertisement -

ಬೆಂಗಳೂರು: ರಾಜ್ಯ ಆಮ್‌ ಆದ್ಮಿ ಪಾರ್ಟಿ (ಎಎಪಿ) ಕಚೇರಿ ಎದುರಿಗೆ ಪ್ರತಿಭಟನೆ ನೆಪದಲ್ಲಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿರುವ ಎಎಪಿ, ಘಟನೆ ಬಳಿಕ ಗೋಮೂತ್ರ ಸಿಂಪಡಿಸಿ ಕಚೇರಿಯನ್ನು ಶುದ್ಧೀಕರಣಗೊಳಿಸಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, “ಕಳೆದ ತಿಂಗಳು ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್‌ ನಿವಾಸದ ಮೇಲೆ ದಾಳಿ ಮಾಡಿದ ಮಾದರಿಯಲ್ಲೇ ಕರ್ನಾಟಕದ ಎಎಪಿ ಕಚೇರಿ ಮೇಲೂ ದಾಳಿ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಕಚೇರಿ ಮುಂದಿದ್ದ ಬೈಕ್‌ಗಳನ್ನೆಲ್ಲ ಬೀಳಿಸಿದ್ದಲ್ಲದೇ, ಕಚೇರಿಯ ಒಳಗೆ ನುಗ್ಗಲು ಮುಂದಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಪ್ರಚೋದನಾಕಾರಿ ಭಾಷಣ ಮಾಡಿ, ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಬಿಜೆಪಿ ಮುಖಂಡ ತಜಿಂದರ್‌ ಪಾಲ್‌ ಬಗ್ಗಾರವರನ್ನು ಪಂಜಾಬ್‌ ಪೊಲೀಸರು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ. ದೇಶದಲ್ಲಿ ಶಾಂತಿ ಕದಡುವವರಿಗೆ ಕಾನೂನಿನನ್ವಯ ಶಿಕ್ಷೆಯಾಗಬೇಕು. ಬೆಂಗಳೂರಿನ ಬಿಜೆಪಿ ಕಾರ್ಯಕರ್ತರಿಗೆ ಎಎಪಿ ಕಚೇರಿ ಮೇಲೆ ದಾಳಿ ಮಾಡಲು ಬಗ್ಗಾರವರ ಬಂಧನ ಒಂದು ನೆಪ ಅಷ್ಟೇ. ರಾಜ್ಯದಲ್ಲಿ ಎಎಪಿಗೆ ಜನಬೆಂಬಲ ಹೆಚ್ಚಾಗುತ್ತಿರುವುದರಿಂದ ಬಿಜೆಪಿ ಹತಾಶವಾಗಿರುವುದೇ ಈ ದಾಳಿಗೆ ಪ್ರಮುಖ ಕಾರಣ” ಎಂದು ಜಗದೀಶ್‌ ವಿ ಸದಂ ಹೇಳಿದ್ದಾರೆ.

“ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಎಎಪಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾದರೂ ಪೊಲೀಸರು ತಡೆಯುತ್ತಾರೆ. ನಮ್ಮ ಮೆರವಣಿಗೆಯನ್ನು ಆರಂಭದಲ್ಲೇ ತಡೆದು ಬಂಧಿಸುತ್ತಾರೆ. ಆದರೆ ಬಿಜೆಪಿ ಕಾರ್ಯಕರ್ತರು ಎಎಪಿ ಕಚೇರಿಗೆ ಬಂದು ಗೂಂಡಾ ವರ್ತನೆ ತೋರಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ರಾಜ್ಯ ಗೃಹ ಸಚಿವಾಲಯವು ಈ ರೀತಿ ಪಕ್ಷಪಾತ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ರಾಜ್ಯದ ಅತ್ಯಂತ ಭ್ರಷ್ಟ ಪಕ್ಷ ಹಾಗೂ ಗಲಭೆಪ್ರಿಯ ಪಕ್ಷವಾದ ಬಿಜೆಪಿಯ ಕಾರ್ಯಕರ್ತರ ಪ್ರತಿಭಟನೆಯಿಂದ ಆಮ್‌ ಆದ್ಮಿ ಪಾರ್ಟಿ ಕಚೇರಿ ಅಪವಿತ್ರಗೊಂಡಿತ್ತು. ಗೋಮೂತ್ರ ಸಿಂಪಡಿಸುವ ಮೂಲಕ ಕಚೇರಿಯನ್ನು ಶುದ್ಧೀಕರಣ ಮಾಡಲಾಗಿದೆ. ರಾಜ್ಯದ ಆಡಳಿತ ಕೂಡ ಬಿಜೆಪಿಯಿಂದ ಅಪವಿತ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕೊಡನೆ ಆಡಳಿತವನ್ನೂ ಆಮ್‌ ಆದ್ಮಿ ಪಾರ್ಟಿಯು ಶುದ್ಧೀಕರಣ ಮಾಡಲಿದೆ” ಎಂದು ತಿಳಿಸಿದ್ದಾರೆ.

‘ಎಎಪಿ ಕೂಡ ಮೃದು ಹಿಂದುತ್ವ ರಾಜಕಾರಣ ಮಾಡುತ್ತದೆ’ ಎಂಬ ಆರೋಪ ಮೊದಲಿನಿಂದಲೂ ಇದೆ. ಗೋವಿನ ಮೂತ್ರವನ್ನು ತಂದು ಶುದ್ಧೀಕರಣ ಮಾಡುವುದು ಇದನ್ನೇ ಸೂಚ್ಯವಾಗಿ ಹೇಳುತ್ತದೆ. ಗೋವಿನ ಮೂತ್ರ ಬಳಸಿ ಶುದ್ಧೀಕರಣ ಮಾಡಿದ ಘಟನೆಗಳನ್ನು ಮೆಲುಕು ಹಾಕಿದರೆ ಒಂದು ರೀತಿಯ ಅಸ್ಪೃಶ್ಯತೆ ಆಚರಣೆಯ ಧೋರಣೆಯೂ ಇಲ್ಲಿ ಇಣುಕುತ್ತದೆ. ಬಲ ಪಂಥೀಯ ರಾಜಕಾರಣ ಹಾದಿಯಲ್ಲೇ ಎಎಪಿ ಸಾಗುತ್ತಿದೆ ಎಂದು ದೂರಲಾಗುತ್ತಿದೆ. ಈ ಪ್ರಶ್ನೆಯನ್ನಿಟ್ಟುಕೊಂಡು ಜಗದೀಶ್‌ ವಿ.ಸದಂ ಅವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗ, “ಗೋವಿನ ಮೂತ್ರ ಬಳಸಿ ಶುದ್ಧೀಕರಣ ಮಾಡುವುದು ಮೊದಲಿನಿಂದಲೂ ನಮ್ಮಲ್ಲಿರುವ ಸಂಪ್ರದಾಯ. ಇದರಲ್ಲಿ ಎಡ ಪಂಥ- ಬಲ ಪಂಥ ಎಂಬುದಿಲ್ಲ. ನಮ್ಮ ಮನೆಗಳನ್ನು ತೊಳೆಯುವ ಗೋಮೂತ್ರವನ್ನೇ ಬಳಸಲಾಗುತ್ತದೆ. ಎಎಪಿಗೆ ಯಾವ ಪಂಥದ ಹಂಗೂ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿರಿ: ಬಿಜೆಪಿಯ ಬುಲ್ಡೋಜರ್‌ ರಾಜಕೀಯದಿಂದ ಇಡೀ ದೆಹಲಿಯೇ ಧ್ವಂಸವಾಗಲಿದೆ: ಎಎಪಿ

“ಗೃಹಪ್ರವೇಶ ಮಾಡುವಾಗ ನಮ್ಮ ಮನೆಗಳಿಗೆ ಮೊದಲು ಗೋ ಮಾತೆಯನ್ನು ಕರೆದುಕೊಂಡು ಬರುತ್ತೇವೆ. ಯಾವುದನ್ನಾದರೂ ಶುದ್ಧೀಕರಣ ಮಾಡಬೇಕೆಂದರೂ ಗೋ ಮೂತ್ರವನ್ನು ಸಿಂಪಡಣೆ ಮಾಡುವುದು ಸಂಪ್ರದಾಯವಾಗಿದೆ. ಪೀಡೆಗಳು ತೊಲಗಲೆಂಬುದು ಇದರ ಉದ್ದೇಶ. ಪಂಥೀಯ ವಾದಗಳೆಲ್ಲ ಕೆಲಸಕ್ಕೆ ಬರುವುದಿಲ್ಲ. ಅವುಗಳಲ್ಲಿ ನಮಗೆ ನಂಬಿಕೆ ಇಲ್ಲ” ಎಂದರು.

“ಭ್ರಷ್ಟರೆಲ್ಲ, ನೈತಿಕತೆ ಇಲ್ಲದವರೆಲ್ಲ ನಮ್ಮ ಕಚೇರಿಗೆ ನುಗ್ಗಿದಾಗ ಶುದ್ಧೀಕರಣ ಮಾಡಲೇಬೇಕು. ನಾವು ಶುದ್ಧ ರಾಜಕಾರಣ ಮಾಡಲು ಬಂದಿದ್ದೇವೆ. ಹೀಗಾಗಿ ಗೋವಿನ ಮೂತ್ರ ತಂದು ಶುದ್ಧೀಕರಣ ಮಾಡಿದ್ದೇವೆ” ಎಂದು ಹೇಳಿದರು.

“ಎಎಪಿ ಮೃದು  ಹಿಂದುತ್ವ ರಾಜಕಾರಣ ಮಾಡುತ್ತಿದೆ” ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಅದರಲ್ಲೇನು ತಪ್ಪಿಲ್ಲ ಅಲ್ಲವೇ? ಮೃದು ಹಿಂದುತ್ವ, ಕಠಿಣ ಹಿಂದುತ್ವ ಇಂಥವುಗಳ ಕುರಿತು ಅಷ್ಟಾಗಿ ಐಡಿಯಾಸ್‌ ಇಲ್ಲ” ಎಂದು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...