ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಪರಿಸ್ಥಿತಿಗೆ ಕರ್ನಾಟಕದ ಮುಖ್ಯ ಚುನಾವಣ ಆಯೋಗ ನೇರ ಹೊಣೆ ಎಂದು ನಾಗರೀಕ ಮತ ಕಾವಲು ಸಮಿತಿ ಆರೋಪಿಸಿದೆ.
ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಾಗರಿಕ ಮತ ಕಾವಲು ಸಮಿತಿ, ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದೈನಂದಿನ ವರದಿಯ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಹೆಸರುಗಳನ್ನು ASDDO (ಅನುಮಾನಾಸ್ಪದ/ಸ್ಥಳಾಂತರ) ಪಟ್ಟಿಗೆ ಸೇರಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಈ ಲೆಕ್ಕಾಚಾರ ಸಂಪೂರ್ಣ ತಲೆಬುಡವಿಲ್ಲದ್ದು ಎಂಬುದಕ್ಕೆ ಸಮಿತಿ ಈ ಕೆಳಗಿನ ಅಂಕಿ-ಅಂಶಗಳನ್ನು ಮುಂದಿಟ್ಟಿದೆ.
ಮತದಾರರಿಗೆ ‘ಅನುಮಾನಾಸ್ಪದ’ ಲೇಬಲ್
ದೇಶದಲ್ಲಿ ಸಾಮಾನ್ಯವಾಗಿ ಜನಸಂಖ್ಯೆಗೆ ಅನುಗುಣವಾಗಿ ಮತದಾರರ ಪಟ್ಟಿ ಸ್ಥಿರವಾಗಿರುತ್ತದೆ ಮತ್ತು ಒಂದೇ ಒಂದು ಮತವನ್ನು ಡಿಲೀಟ್ ಮಾಡಲು ಸೂಕ್ತ ಕಾರಣ ನೀಡಬೇಕಿರುತ್ತದೆ. ಆದರೆ ಸಿಇಒ ವಿ. ಅನ್ಬುಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ SIRನಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಅನುಮಾನಾಸ್ಪದವಾಗಿ ನೋಡಲಾಗುತ್ತಿದ್ದು, ಪಟ್ಟಿಯಲ್ಲಿ ಉಳಿಯಲು ಅಧಿಕಾರಿಗಳಿಗೆ ಸಮಾಧಾನ ತರುವ ಸಾಕ್ಷ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತಿದೆ.
ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲು ಆಯೋಗ 4 ಕಠಿಣ ಹಂತಗಳನ್ನು ದಾಟಬೇಕಾದ ಪರಿಸ್ಥಿತಿ ಸೃಷ್ಟಿಸಿದೆ.
- ಬಿಎಲ್ಒ ಸಂಪರ್ಕ: ಬೂತ್ ಮಟ್ಟದ ಅಧಿಕಾರಿ ನೋಂದಾಯಿತ ವಿಳಾಸದಲ್ಲಿ ನಿಮ್ಮನ್ನು ಪತ್ತೆಹಚ್ಚಿ, ಎನ್ಯುಮುರೇಷನ್ ಫಾರಂ ಡಿಜಿಟಲೀಕರಿಸಬೇಕು.
- 2002ರ ಪಟ್ಟಿಯ ಮ್ಯಾಪಿಂಗ್: ನಿಮ್ಮ ಅಥವಾ ನಿಮ್ಮ ಪೋಷಕರ ಹೆಸರು 2002ರ ಕೊನೆಯ Intensive Revision ಪಟ್ಟಿಯೊಂದಿಗೆ ಲಿಂಕ್ ಆಗಬೇಕು.
- ಸ್ವಂತ ಹೆಸರಿನ ದಾಖಲೆ: ಪೂರಕ ದಾಖಲೆಗಳು ನಿಮ್ಮದೇ ಹೆಸರಿನಲ್ಲಿದ್ದು, ಪರಿಶೀಲಿಸುವ ಅಧಿಕಾರಿಯ ಮಾನದಂಡ ಪೂರೈಸಬೇಕು.
- ದೆಹಲಿಯ ಸಾಫ್ಟ್ವೇರ್ ಅಪ್ರೂವಲ್: ನಿಜವಾದ ದಾಖಲೆಗಳಿದ್ದರೂ, ಕಾಗುಣಿತ ಅಥವಾ ಲಿಪ್ಯಂತರದ (Spelling/Transliteration) ಸಣ್ಣ ವ್ಯತ್ಯಾಸ ಬಂದರೂ ದೆಹಲಿ ನಿಯಂತ್ರಣದಲ್ಲಿರುವ ಸಾಫ್ಟ್ವೇರ್ ‘Logical Discrepancy’ ನೆಪವೊಡ್ಡಿ ಹೆಸರುಗಳನ್ನು ತಿರಸ್ಕರಿಸುತ್ತಿದೆ.
ಗಣಿತಕ್ಕೇ ಸವಾಲು ಹಾಕಿದ ಆಯೋಗದ ಲೆಕ್ಕ’:
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದೈನಂದಿನ ವರದಿಯ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಹೆಸರುಗಳನ್ನು ASDDO (ಅನುಮಾನಾಸ್ಪದ/ಸ್ಥಳಾಂತರ) ಪಟ್ಟಿಗೆ ಸೇರಿಸಲಾಗಿದೆ. ಆಯೋಗದ ಈ ಲೆಕ್ಕಾಚಾರ ಸಂಪೂರ್ಣ ತಲೆಬುಡವಿಲ್ಲದ್ದು ಎಂಬುದಕ್ಕೆ ಸಮಿತಿ ಈ ಕೆಳಗಿನ ಅಂಕಿ-ಅಂಶಗಳನ್ನು ಮುಂದಿಟ್ಟಿದೆ:
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿ 98.43 ಲಕ್ಷ ಮತದಾರರಿದ್ದು, 52.47 ಲಕ್ಷಕ್ಕೂ ಹೆಚ್ಚು (53.3%) ಜನರು ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದರು.
ಈಗಿನ ಸಿಇಒ ಕಚೇರಿಯ SIR ಅಂಕಿ-ಅಂಶಗಳನ್ನು ನಂಬುವುದಾದರೆ, ಬೆಂಗಳೂರಿನಲ್ಲಿ ಉಳಿಯುವುದು ಕೇವಲ 50 ಲಕ್ಷ ಮತದಾರರು ಮಾತ್ರ. ಅಂದರೆ, ಕಳೆದ ಚುನಾವಣೆಯಲ್ಲಿ ವೋಟ್ ಹಾಕಿದವರಿಗಿಂತಲೂ ಕಡಿಮೆ ಜನರು ಈಗ ಬೆಂಗಳೂರಿನಲ್ಲಿದ್ದಾರೆ ಎಂದಾಗುತ್ತದೆ. ಆಯೋಗದ ಈ ಲೆಕ್ಕಾಚಾರ ನಿಜವಾದರೆ, 2024ರಲ್ಲಿ ನಡೆದದ್ದು ಶೇ. 54 ರಷ್ಟು ಮತದಾನವಲ್ಲ, ಬರೋಬ್ಬರಿ ಶೇ. 105 ರಷ್ಟು ಮತದಾನವೇ ಎಂದು ನಾಗರಿಕ ಸಮಿತಿ ಪ್ರಶ್ನಿಸಿದೆ.
ಆಗಸ್ಟ್ 3, 2026 ರಂದು ಸಿಇಒ ಕಚೇರಿ ನೀಡಿದ ದೈನಂದಿನ ಪ್ರಕಟಣೆಯಂತೆ (No. DPAR 172 ChuMaPa 2026), ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.10 ಕೋಟಿಗೂ ಹೆಚ್ಚು (19.95%) ಮತದಾರರು ASDDO (Absent, Shifted, Dead, Duplicate, Other) ಪಟ್ಟಿಯಲ್ಲಿದ್ದಾರೆ.
ASDDO ಪಟ್ಟಿಯ ವರ್ಗೀಕರಣ ಹೀಗಿದೆ:
- ಶಾಶ್ವತವಾಗಿ ಸ್ಥಳಾಂತರಗೊಂಡವರು (Shifted): 66,23,832 (ಶೇ. 11.95 | ASDDO ಯಲ್ಲಿ ಶೇ. 59.9)
- ಮೃತರು (Dead): 16,21,446 (ಶೇ. 2.93 | ASDDO ಯಲ್ಲಿ ಶೇ. 14.7)
- ಗೈರು / ಪತ್ತೆಯಾಗದವರು (Absent): 16,18,630 (ಶೇ. 2.92 | ASDDO ಯಲ್ಲಿ ಶೇ. 14.6)
- ನಕಲಿ / ಈಗಾಗಲೇ ನೋಂದಾಯಿತರು (Duplicate): 6,78,213 (ಶೇ. 1.22 | ASDDO ಯಲ್ಲಿ ಶೇ. 6.1)
- ಇತರೆ (Other): 5,17,167 (ಶೇ. 0.93 | ASDDO ಯಲ್ಲಿ ಶೇ. 4.7)
ಬೆಂಗಳೂರು ಬೆಳೆಯುತ್ತಿರುವ ನಗರ, ಪ್ರತಿವರ್ಷ 3-4 ಲಕ್ಷ ಜನರು ನಗರಕ್ಕೆ ಸೇರ್ಪಡೆಯಾಗುತ್ತಿದ್ದಾರೆ. 2022ರಿಂದ ಬಾಡಿಗೆ ದರಗಳು ಶೇ. 40 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಅನೌಪಚಾರಿಕ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದರಿಂದ ಸರ್ಕಾರ ‘Gig Workers Welfare Act, 2025’ ಜಾರಿಗೆ ತಂದಿದೆ.
ಜಿಲ್ಲಾವಾರು ವ್ಯತ್ಯಾಸದ ವೈರುಧ್ಯ:
ನಿಜವಾಗಿಯೂ ಕಾರ್ಮಿಕರ ಹೊರವಲಸೆ ಹೆಚ್ಚಿರುವ ಕಲ್ಯಾಣ ಕರ್ನಾಟಕದ ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಡಿತದ ದರ ಶೇ. 16.5 ರಿಂದ 18.4 ರಷ್ಟಿದೆ (ರಾಜ್ಯದ ಸರಾಸರಿ ಶೇ. 19.95 ಗಿಂತ ಕಡಿಮೆ).ಆದರೆ, ದೇಶದ ಪ್ರಮುಖ ಒಳವಲಸೆ ತಾಣವಾದ ಬೆಂಗಳೂರಿನಲ್ಲಿ ಕಡಿತದ ದರ ಬರೋಬ್ಬರಿ ಶೇ. 48.41 (ರಾಜ್ಯದ ಸರಾಸರಿಗಿಂತ ಎರಡು ಪಟ್ಟು ಹೆಚ್ಚು).
ಜನರು ನಿಜವಾಗಿಯೂ ನಗರ ಬಿಟ್ಟು ಹೋಗಿದ್ದಾರೋ ಅಥವಾ ಈಗ ವಾಸಿಸುತ್ತಿರುವ ವಿಳಾಸದಲ್ಲಿ ಅವರನ್ನು ಪತ್ತೆಹಚ್ಚಲು ವಿಫಲವಾಗಿರುವ ಸಿಇಒ ಕಚೇರಿಯ ಅಧಿಕಾರಿಗಳು, ಸುಲಭವಾಗಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ತಪ್ಪಾಗಿ ದಾಖಲಿಸುತ್ತಿದ್ದಾರೋ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ.
ಮುಖ್ಯ ಚುನಾವಣಾಧಿಕಾರಿಗಳಿಗೆ ನಾಗರಿಕ ಸಮಿತಿಯ ಒತ್ತಾಯಗಳು:
- ಭಾನುವಾರ ವಿಶೇಷ ಬೂತ್ ಅಭಿಯಾನ: ಬೆಂಗಳೂರಿನ ಉದ್ಯೋಗಿಗಳು ಬೆಳಿಗ್ಗೆಯೇ ಕೆಲಸಕ್ಕೆ ತೆರಳಿ ತಡವಾಗಿ ಬರುವುದರಿಂದ, ಭಾನುವಾರಗಳಂದು ಪೂರ್ವಯೋಜಿತ ಬೂತ್ ಸಭೆಗಳನ್ನು ನಡೆಸಿ ಎನ್ಯುಮುರೇಷನ್ ಫಾರಂ ವಿತರಿಸಿ ಸ್ವೀಕರಿಸಬೇಕು.
- ಸ್ಥಳದಲ್ಲೇ ಫಾರಂ-8 ವಿತರಣೆ: ಕರ್ನಾಟಕದ ಒಂದು ವಿಳಾಸದಿಂದ ಮತ್ತೊಂದು ವಿಳಾಸಕ್ಕೆ ಮನೆ ಬದಲಾಯಿಸಿದವರನ್ನು ‘ಡಿಲೀಟ್’ ಮಾಡಬಾರದು. ವಾಸಿಸುತ್ತಿರುವ ಸ್ಥಳದಲ್ಲೇ ಅವರಿಗೆ ಎನ್ಯುಮುರೇಷನ್ ಫಾರಂ ಹಾಗೂ ‘ಫಾರಂ ನಂಬರ್ 8’ ನೀಡಿ ಮತವನ್ನು ಹೊಸ ವಿಳಾಸಕ್ಕೆ ಸ್ಥಳಾಂತರಿಸಬೇಕು.
- ಸೆಪ್ಟೆಂಬರ್ ಅಂತ್ಯದವರೆಗೆ ಗಡುವು ವಿಸ್ತರಿಸಿ: ಕೇವಲ 10 ದಿನಗಳ ಕಣ್ಣೊರೆಸಿಕಾಯ ವಿಸ್ತರಣೆಯಿಂದ ಏನೂ ಪ್ರಯೋಜನವಿಲ್ಲ. ಹೊಸ ತಂತ್ರಜ್ಞಾನ ಮತ್ತು ಪಾರದರ್ಶಕ ಪ್ರಕ್ರಿಯೆಯೊಂದಿಗೆ ಎನ್ಯುಮುರೇಷನ್ ಪ್ರಕ್ರಿಯೆಯನ್ನು ಸೆಪ್ಟೆಂಬರ್ ಕೊನೆಯ ವಾರದವರೆಗೆ ವಿಸ್ತರಿಸಬೇಕು ಎಂದು ನಾಗರಿಕ ಮತ ಕಾವಲು ಸಮಿತಿ ಒತ್ತಾಯಿಸಿದೆ.


