ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೌಸ್ ಕೀಪಿಂಗ್, ವಾರ್ಡ್ ಅಟೆಂಡರ್, ಲಿಫ್ಟ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ ಮತ್ತು ಸೆಕ್ಯುರಿಟಿ ಕಾರ್ಮಿಕರಿಗೆ ಕಳೆದ ಅಕ್ಟೋಬರ್ ತಿಂಗಳಿನಿಂದ ವೇತನವನ್ನು ಪಾವತಿ ಮಾಡಿರದ ಹಿನ್ನೆಲೆ ಸೋಮವಾರ (ನ.29) ಎಲ್ಲಾ ಕಾರ್ಮಿಕರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಮಿಕರಿಗೆ ತಕ್ಷಣ ಎರಡು ತಿಂಗಳ ವೇತನ ಪಾವತಿ ಮಾಡಬೇಕು ಮತ್ತು ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನವನ್ನು ನೀಡಬೇಕು ಎಂಬ ಹಕ್ಕೋತ್ತಾಯದೊಂದಿಗೆ ಬಿಎಂಸಿಆರ್ಐ (ವಿಕ್ಟೋರಿಯಾ ಆಸ್ಪತ್ರೆ) ಆಡಳಿತ ಮಂಡಳಿಯ ವಿರುದ್ಧ ಎಐಸಿಸಿಟಿಯು ಸಂಘಟನೆಯ ವತಿಯಿಂದ ಸೋಮವಾರ (ನ.29) ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಕಾನೂನುಗಳ ಅನ್ವಯ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತವನ್ನು ಕಡ್ಡಾಯವಾಗಿ ಪಾವತಿಸಬೇಕಾಗಿರುತ್ತದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಯಾದ ಬಿಎಂಸಿಆರ್ಐ ಈ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗೌರವದಿಂದ ವರ್ತಿಸಿ; ಘನತೆಯುತ್ತ ಕೆಲಸದ ವಾತಾವರಣ ನಿರ್ಮಿಸಿ: ಬೆಂಗಳೂರು ಪೌರ ಕಾರ್ಮಿಕರ ಆಕ್ರೋಶ
ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಯಾದ ಬಿಎಂಸಿಆರ್ಐ ಈ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಇರುವ ಕಾರಣ, ಮನೆ ಬಾಡಿಗೆ, ಊಟ-ಬಟ್ಟೆ, ಅನಾರೋಗ್ಯಕ್ಕೆ ಚಿಕಿತ್ಸೆ ಮತ್ತು ಮಕ್ಕಳ ಸ್ಕೂಲ್ ಫೀ ಸೇರಿದಂತೆ ಇತರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈ ಕಾರ್ಮಿಕರು ಬಡ್ಡಿ ಸಾಲದ ಸುಳಿಯಲ್ಲಿ ಸಿಲುಕಬೇಕಾಗಿದೆ. ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತೀರುವ ಈ ಸಂಧರ್ಭದಲ್ಲಿ ಬಿಎಂಸಿಆರ್ಐ ಆಡಳಿತ ಮಂಡಳಿಯು ಕಾರ್ಮಿಕರಿಗೆ ವೇತನ ನೀಡದೆ ದುಡಿಸಿಕೊಳ್ಳುತ್ತಿರುವುದರಿಂದ ಕಾರ್ಮಿಕರು ಬೀದಿಪಾಲಾಗುವ ಸಂಭವವಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿಟಿಯು ಆಕ್ರೋಶ ವ್ಯಕ್ತಪಡಿಸಿದೆ.
ಸರಿಯಾದ ಸಮಯಕ್ಕೆ ವೇತನ ನೀಡದೆ ದುಡಿಸಿಕೊಳ್ಳುವುದು ಕಾರ್ಮಿಕ ಶೋಷಣೆ ಮತ್ತು ಗುಲಾಮಿ ಪದ್ಧತಿಗೆ ಸಮ ಎಂದು ಹಲವಾರು ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಹೀಗಿದ್ದರು ಬಿಎಂಸಿಆರ್ಐ ಕಾರ್ಮಿಕರಿಗೆ ವೇತನ ನೀಡದೆ ದುಡಿಸಿಕೊಳ್ಳುತ್ತಿರುವುದು ಕಾರ್ಮಿಕ ಕಾನೂನುಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ಆದೇಶಗಳ ಉಲ್ಲಂಘನೆಯಾಗಿರುತ್ತದೆ ಎಂದು ಸಂಘಟನೆ ತಿಳಿಸಿದೆ.