ಇದೇ ಮೊದಲ ಬಾರಿಗೆ ಆರಂಭಿಸಲಾಗಿರುವ ‘ಅತ್ಯುತ್ತಮ ಶಾಸಕ ಪ್ರಶಸ್ತಿ’ಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಶಿಕಾರಿಪುರದ ಶಾಸಕ ಬಿ.ಎಸ್.ಯಡಿಯೂರಪ್ಪ ಅವರು ಭಾಜನರಾಗಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಾಜರಿದ್ದ ವಿಧಾನಸಭೆ, ವಿಧಾನ ಪರಿಷತ್ ಜಂಟಿ ಅಧಿವೇಶನದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಶಸ್ತಿಯನ್ನು ಪ್ರಕಟಿಸಿದರು.
‘ಅತ್ಯುತ್ತಮ ಶಾಸಕ ಪ್ರಶಸ್ತಿ’ಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ತಿಳಿಸಿದ ಸ್ಪೀಕರ್ ಕಾಗೇರಿ, “ಪ್ರಶಸ್ತಿ ನೀಡಲು ಹಲವರ ಹೆಸರುಗಳನ್ನು ಪರಿಶೀಲಿಸಿದಾಗ, ಆಯ್ಕೆಯೂ ಕ್ಲಿಷ್ಟಕರವಾಗಿತ್ತು. ಸರ್ವಾನುಮತದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಆಯ್ಕೆ ಮಾಡಲಾಯಿತು” ಎಂದು ತಿಳಿಸಿದರು.
ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿ, 8 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ಪೀಕರ್ ಕಾಗೇರಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಇದ್ದರು.
ಇದನ್ನೂ ಓದಿ: ಸೈಮಾ-2021: ರಚಿತಾ ರಾಮ್, ರಶ್ಮಿಕಾ, ದರ್ಶನ್, ರಕ್ಷಿತ್ ಶೆಟ್ಟಿ, ಬಿ.ಸುರೇಶ್ಗೆ ಪ್ರಶಸ್ತಿ