“ಡಾ.ಎಸ್.ಎಲ್.ಭೈರಪ್ಪ ಅವರು ದೊಡ್ಡ ಸಾಹಿತಿ. ಆದರೆ ಅವರು ಬಿಜೆಪಿ ವಕ್ತಾರರ ರೀತಿ ಮಾತನಾಡಬಾರದು” ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದಿತ ಪಠ್ಯಪುಸ್ತಕಗಳ ಕುರಿತು ಭೈರಪ್ಪನವರು ಒಲವು ತೋರಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.
“ಭೈರಪ್ಪ ದೊಡ್ಡ ಸಾಹಿತಿ. ಅವರು ಬಿಜೆಪಿ ವಕ್ತಾರರ ರೀತಿ ಮಾತನಾಡಬಾರದು. ಸಾರಸ್ವತ ಲೋಕದ ಸೌಂದರ್ಯ ಹೆಚ್ಚಿಸಬೇಕೇ ಹೊರತು, ಪಕ್ಷದ ವಕಾಲತ್ತು ವಹಿಸಬಾರದು. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ” ಎಂದು ಕಿವಿಮಾತು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿರುವುದನ್ನು ಕಟುವಾಗಿ ಟೀಕಿಸಿರುವ ವಿಶ್ವನಾಥ್, “ಪಠ್ಯ ಪರಿಷ್ಕರಣೆ ಪ್ರಕ್ರಿಯೆ ಯಾವುದೋ ಪಕ್ಷದ ಕಾರ್ಯಕ್ರಮವಲ್ಲ. ಸದ್ಯ ಶಿಕ್ಷಣ ಇಲಾಖೆ ಅಧೋಗತಿಗೆ ಹೋಗುತ್ತಿದೆ. ಶಿಕ್ಷಣ ಇಲಾಖೆಯ ಗೊಂದಲಕ್ಕೆ ಕಂದಾಯ ಮಂತ್ರಿ ಉತ್ತರ ಕೊಡಬೇಕಾ? ನಗರಾಭಿವೃದ್ಧಿ ಸಚಿವರು ಉತ್ತರಿಸುತ್ತಾರೆ ಎಂದರೆ ಏನರ್ಥ? ಶಿಕ್ಷಣ ಸಚಿವ ನಾಗೇಶ್ ಏನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ‘ಟ್ರಾಕ್ಟರ್2ಟ್ವಿಟರ್’, ‘ಕಿಸಾನ್ಏಕ್ತಾಮೋರ್ಚಾ’ ಟ್ವಿಟರ್ ಖಾತೆಗಳಿಗೆ ತಡೆ: ಕಾರಣ?
“ಪಠ್ಯಕ್ರಮದ ವಿಷಯದಲ್ಲಿ ಮತ್ತು ಅಕ್ಷರದ ಮೇಲೆ ಸರ್ಕಾರ ಹಠ ಮಾಡಬಾರದು; ಪ್ರತಿಷ್ಠೆಯಾಗಿ ಸ್ವೀಕರಿಸಬಾರದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ವಿಷಯದಲ್ಲಿ ಹಠ ಮಾಡಲಿ, ಶಿಕ್ಷಣ ರಂಗವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿ” ಎಂದಿದ್ದಾರೆ.
“ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸುವ ಪಠ್ಯಕ್ರಮವನ್ನು ಇಡೀ ನಾಡು ಒಕ್ಕೊರಲಿಂದ ವಿರೋಧಿಸಿದೆ. ಆದ್ದರಿಂದ, ಆ ಪಠ್ಯವನ್ನು ವಾಪಸ್ ಪಡೆದು ಪ್ರಸಕ್ತ ಸಾಲಿನಲ್ಲಿ ಹಳೆಯದ್ದನ್ನೇ ಬೋಧಿಸಬೇಕು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಸಾಹಿತಿಗಳು, ಪೋಷಕರು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ವಿಸ್ತೃತವಾಗಿ ಚರ್ಚಿಸಿ ಪಠ್ಯಪುಸ್ತಕ ಪರಿಷ್ಕರಿಸಬೇಕು. ಮುಂದಿನ ಶೈಕ್ಷಣಿಕ ಸಾಲಿನಿಂದ ಎಲ್ಲವನ್ನೂ ಸರಿಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ನೂತನ ಪಠ್ಯ ಪುಸ್ತಕ: ಐವರು ಬಿಜೆಪಿ ನಾಯಕರಿಂದ ವಿರೋಧ
ಪಠ್ಯಪುಸ್ತಕ ವಿವಾದದ ಆರಂಭದಿಂದಲೂ ಎ.ಎಚ್.ವಿಶ್ವನಾಥ್ ಸರ್ಕಾರದ ನಡೆಯನ್ನು ಖಂಡಿಸುತ್ತಲೇ ಬಂದಿದ್ದಾರೆ. ಇವರ ಜೊತೆ ಅನೇಕ ಬಿಜೆಪಿ ನಾಯಕರೂ ದನಿಗೂಡಿಸಿದ್ದಾರೆ.
ವಿವಾದದ ಆರಂಭದಲ್ಲೇ ಪ್ರತಿಕ್ರಿಯೆ ನೀಡಿದ್ದ ಅಡಗೂರು ಎಚ್.ವಿಶ್ವನಾಥ್, “ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞ ಅಲ್ಲ. ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವುದು ದುರಂತ” ಎಂದಿದ್ದರು.
“ಮನಸ್ಸಿಗೆ ಬಹಳ ಬೇಜಾರಾಗುತ್ತಿದೆ. ಪಠ್ಯಪುಸ್ತಕ ಎಂಬುದು ರಾಜಕೀಯ ಸಂಘರ್ಷವಲ್ಲ. ಒಂದು ಸರ್ಕಾರದ ನೀತಿಯ ಮೇಲೆ ಅವುಗಳು ರಚನೆಯಾಗಬಾರದು. ಇನ್ನೊಂದು ಸರ್ಕಾರ ಅವುಗಳನ್ನು ಬದಲಿಸುವುದು ಸರಿಯಲ್ಲ” ಎಂದು ತಿಳಿಸಿದ್ದರು.