Homeಅಂತರಾಷ್ಟ್ರೀಯಪೌರತ್ವ ಕಾಯ್ದೆಯಿಂದ ಬಳಲುತ್ತಿರುವ ಬಿದೂನ್ ಜಿನ್ಸಿಯಾ: ಕುವೈಟ್‌ನ ದೇಶರಹಿತರಿಂದ ಭಾರತ ಕಲಿಯಬೇಕಾದ ಪಾಠ

ಪೌರತ್ವ ಕಾಯ್ದೆಯಿಂದ ಬಳಲುತ್ತಿರುವ ಬಿದೂನ್ ಜಿನ್ಸಿಯಾ: ಕುವೈಟ್‌ನ ದೇಶರಹಿತರಿಂದ ಭಾರತ ಕಲಿಯಬೇಕಾದ ಪಾಠ

ಪೌರತ್ವ ಕಾಯ್ದೆ ಜಾರಿಯಾದ ನಂತರ ತಾವು ವಾಸಿಸುತ್ತಿರುವ ದೇಶದಲ್ಲೇ ದೇಶರಹಿತರಾದ ಕುವೈಟ್‌ನ ಬಿದೂನ್ ಜನರ ಸಂಕಷ್ಟಗಳು ಭಾರತದ ಭಾವೀ ದೇಶರಹಿತರಿಗೆ ಒಂದು ಪಾಠವಾಗಿದೆ...

- Advertisement -
- Advertisement -
  • ಕಿಶೋರ್ ಗೋವಿಂದ

ಅನುವಾದ: ನಿಖಿಲ್ ಕೋಲ್ಪೆ

ಭಾರತ ಮತ್ತು ಕುವೈಟ್ ತೀರಾ ಭಿನ್ನವಾದ ಇತಿಹಾಸ ಹೊಂದಿದ್ದರೂ, ತಾವು ವಾಸಿಸುತ್ತಿರುವ ದೇಶದಲ್ಲೇ ದೇಶರಹಿತರಾದ ಕುವೈಟ್‌ನ ಬಿದೂನ್ ಜನರ ಸಂಕಷ್ಟಗಳು ಭಾರತದ ಭಾವೀ ದೇಶರಹಿತರಿಗೆ ಒಂದು ಪಾಠವಾಗಿದೆ. ಪೌರತ್ವ ನೋಂದಣಿಯ ಕಾರ್ಯಕ್ರಮದಿಂದ ಕುವೈಟ್ ಇನ್ನೂ ನರಳುತ್ತಿದೆ ಮತ್ತು ಸಮಸ್ಯೆಗಳು ದಿನಕಳೆದಂತೆ ಇನ್ನಷ್ಟು ಬಿಗಡಾಯಿಸುತ್ತಿವೆ.

“ಬಿದೂನ್ ಜಿನ್ಸಿಯಾ” ಎಂಬುದು ಅರೇಬಿಕ್ ಭಾಷೆಯಲ್ಲಿ “ರಾಷ್ಟ್ರರಹಿತರು” ಎಂದು ಅರ್ಥಕೊಡುತ್ತದೆ. ಆದರೆ, ಇದೊಂದು ದೊಡ್ಡ ಸುಳ್ಳು. ಯಾಕೆದರೆ ಬಿದೂನ್ ಜಿನ್ಸಿಯಾ ಎನಿಸಿಕೊಂಡ ಬಹುತೇಕ ಜನರು ಕುವೈಟ್‌ನವರೇ ಆಗಿದ್ದು, ಕುವೈಟ್‌ನ ಪೌರತ್ವದಿಂದ ವಂಚಿತರು. ಪೌರತ್ವ ಎಂದರೆ ಒಂದು ರಾಜಕೀಯ ಸಮುದಾಯಕ್ಕೆ ಸೇರಿದವರು ಎಂದು ಅರ್ಥ ಮತ್ತದು ಸ್ವಾತಂತ್ರ್ಯಕ್ಕೆ ಒಂದು ಪೂರ್ವ ಅಗತ್ಯವಾಗಿದೆ. ಜಗತ್ತಿನಾದ್ಯಂತ ಪೌರತ್ವ ವಂಚಿತ ಮತ್ತು ಪೌರತ್ವದಿಂದ ಬರುವ ಸ್ವಾತಂತ್ರ್ಯದಿಂದ ವಂಚಿತರಾದ ಜನರು ತುಂಬಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಜನರು ಯುದ್ಧ ಅಥವಾ ರಾಜಕೀಯ ಕಾರಣಗಳಿಂದಾಗಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಬಿದೂನ್ ಜಿನ್ಸಿಯಾಗಳ ಕತೆ ಇಂತಹಾ ಒಂದು ಉದಾಹರಣೆ. ಅವರಿಗೆ ಒಂದು ರಾಷ್ಟ್ರೀಯತೆ ಇದ್ದಿರಬಹುದು; ಆದರೆ, ಅವರು ದೇಶರಹಿತರು.

ಕುವೈಟ್‌ನ ದೇಶರಹಿತ ಜನರ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಕ್ಕಾಗಿ ಇದೇ ಜನವರಿ 28ರಂದು ಮೂವರು ಪ್ರತಿಭಟನಕಾರರಿಗೆ ಕುವೈಟ್‌ನ ನ್ಯಾಯಾಲಯಗಳು ತಲಾ 10 ವರ್ಷಗಳ ಸೆರೆವಾಸ ವಿಧಿಸಿದವು. ಕಳೆದ ವರ್ಷ ಸೂಕ್ತ  ದಾಖಲೆಗಳನ್ನು ಪಡೆಯಲಾಗದೆ ನೊಂದ ಅಯೇದ್ ಹಮದ್ ಎಂಬ ದೇಶರಹಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ ಕುವೈಟ್ ವಿವಾದಕ್ಕೆ ಒಳಗಾಗಿತ್ತು. ಆತನ ಸಾವು 15 ದೇಶರಹಿತ ವ್ಯಕ್ತಿಗಳು ಪ್ರತಿಭಟನೆ ನಡೆಸುವುದಕ್ಕೆ ಕಾರಣವಾಗಿತ್ತು. ದೇಶರಹಿತರ ಕೆಟ್ಟ ನಿರ್ವಹಣೆಯು ಹಿಂಸೆ ಮತ್ತು ತಮ್ಮದೇ ದೇಶದಲ್ಲಿ ಸೂಕ್ತ ದಾಖಲೆ ಪಡೆಯಲಾಗದೆ ಮಾನ್ಯತೆ ಕಳೆದುಕೊಂಡ ಕುವೈಟಿಗರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದರು.

ಕುವೈಟ್‌ನಲ್ಲಿ ಒಂದು ಲಕ್ಷ ದೇಶರಹಿತರು ಅಥವಾ ಬಿದೂನ್‌ಗಳು ವಾಸಿಸುತ್ತಿದ್ದಾರೆ ಎಂದು ಕುವೈಟ್‌ ಸರಕಾರ ಹೇಳಿತ್ತು. ಅವರೆಲ್ಲರೂ ಬೇರೆ ದೇಶಗಳಿಂದ ಬಂದ ನಿರಾಶ್ರಿತರು ಎಂದೂ ಅದು ವಾದಿಸಿತ್ತು. ಆದರೆ, ಕುವೈಟ್‌ನಲ್ಲಿ 2-3 ಲಕ್ಷ ದೇಶರಹಿತರು ವಾಸಿಸುತ್ತಿದ್ದು, ಅವರಲ್ಲಿ ಹೆಚ್ಚಿನವರು ಸ್ವಾತಂತ್ರ್ಯ ಕಾಲದಿಂದಲೂ ಪೌರತ್ವ ಪಡೆಯಲು ಸಾಧ್ಯವಾಗದ ಕುವೈಟಿಗರೇ ಆಗಿದ್ದಾರೆ ಎಂದು ಬಿದೂನ್ ಕಾರ್ಯಕರ್ತರು ವಾದಿಸುತ್ತಾರೆ. ಆದರೆ, ಕುವೈಟ್ ಸರಕಾರವು ಇನ್ನೂ ಕೂಡಾ ಪೌರತ್ವಕ್ಕೆ ಅರ್ಹರು ಎಂದು ಪರಿಗಣಿಸಲಾದವರಿಗೆ ಕೂಡಾ ಪೌರತ್ವ ನೀಡಲು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.

ಬಿದೂನ್‌ಗಳಾದದ್ದು ಹೇಗೆ?

ಕುವೈತ್, ಪರ್ಶಿಯನ್ ಕೊಲ್ಲಿಯಲ್ಲಿ ಆಯಕಟ್ಟಿನ ಜಾಗದಲ್ಲಿದೆ. ಅದು ಒಟ್ಟೋಮಾನ್ ನಿಯಂತ್ರಣದಲ್ಲಿದ್ದಾಗ ರಾಜಕೀಯ ಸ್ವಾಯತ್ತತೆ ಉಳಿಸಿಕೊಂಡಿತ್ತು.‌ 1899ರಲ್ಲಿ ಅದನ್ನು ಆಶ್ರಿತ ರಾಜ್ಯವನ್ನಾಗಿ ಉಳಿಸಿಕೊಳ್ಳಲು ಆಳುವವರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಎರಡನೇ ಮಹಾಯುದ್ಧದ ಬಳಿಕ ಕುವೈಟ್ ಅತ್ಯಂತ ದೊಡ್ಡ ತೈಲ ರಫ್ತುದಾರನಾಗಿ ಹೊರಹೊಮ್ಮಿತ್ತು. ಭಾರತವೂ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಿಂದ ಕಾರ್ಮಿಕರನ್ನು ಆಕರ್ಷಿಸಿತ್ತು. 1961ರಲ್ಲಿ ಕುವೈಟ್ ಸ್ವತಂತ್ರಗೊಂಡಾಗ ಅಲ್ಲಿನ ಆಳುವ ವರ್ಗವು ಆಶ್ರಿತ ರಾಜ್ಯ ಸ್ಥಾನಮಾನವನ್ನು ಕೊನೆಗೊಳಿಸಿತು.

ಹೊಸ ಸ್ವತಂತ್ರ ದೇಶದ ಮುಂದೆ ಎರಡು ಸವಾಲುಗಳಿದ್ದವು. ಮೊದಲನೆಯದಾಗಿ ತನ್ನನ್ನು ಒಂದು ಗಣರಾಜ್ಯವನ್ನಾಗಿ ಸ್ಥಾಪಿಸಿಕೊಳ್ಳಲು ಅದಕ್ಕೆ ನಾಗರಿಕರ ಯಾದಿಯೊಂದನ್ನು ರಚಿಸುವ ಅಗತ್ಯವಿತ್ತು. ಎರಡನೆಯದಾಗಿ ಒಂದು ಸ್ವತಂತ್ರ ಸೇನೆ ಮತ್ತು ಪೊಲೀಸ್ ಪಡೆಗಳನ್ನು ಸ್ಥಾಪಿಸುವ ಅಗತ್ಯವಿತ್ತು.

ಯಾರು ಪೌರತ್ವಕ್ಕೆ ಅರ್ಹರು ಎಂದು ನಿರ್ಧರಿಸುವ ರಾಷ್ಟ್ರೀಯತೆಯ ಕಾನೂನು ನಗರ ಪ್ರದೇದ ನಿವಾಸಿಗಳು ಮತ್ತು ಪ್ರಭಾವಿ ಸಮುದಾಯಗಳ ಸಂಪರ್ಕ ಹೊಂದಿದ್ದ ಜನರ ಪರವಾಗಿತ್ತು. ಅನೇಕ ಕುವೈಟಿಗರು ಪೌರತ್ವದಿಂದ ವಂಚಿತರಾದರು. ಅನೇಕರು- ದೂರದ ಗ್ರಾಮೀಣ ಪ್ರದೇಶಗಳ ಜನರು, ಒಂದೋ ನಿರಕ್ಷರತೆ ಅಥವಾ ತಿಳುವಳಿಕೆಯ ಕೊರತೆಯಿಂದಾಗಿ ಸೂಕ್ತ ದಾಖಲೆಗಳನ್ನು ಪಡೆಯಲಿಲ್ಲ. ಇವರನ್ನೇ ಮುಂದೆ ಬಿದೂನ್ ಜಿನ್ಸಿಯಾ (ಅರೇಬಿಕ್‌ನಲ್ಲಿ ರಾಷ್ಟ್ರೀಯತೆ ರಹಿತರು) ಅಥವಾ ಕೇವಲ ಬಿದೂನ್ (ರಹಿತರು) ಎಂದು ಕರೆಯಲಾಯಿತು.

ಬಿದೂನ್ ಕುವೈಟಿಗರು ಪೊಲೀಸ್ ಅಥವಾ ಸೇನೆಗೆ ಸೇರುವಂತಿರಲಿಲ್ಲ. ಸರಕಾರವು ವಿದೇಶಿ ರಾಷ್ಟ್ರೀಯರನ್ನು ಸೇರಿಸಿಕೊಳ್ಳಬೇಕಾಯಿತು. ಬಾಡಿಗೆ ಸೈನಿಕರು ಅಥವಾ ಮರ್ಸಿನರಿಗಳನ್ನು ನೇಮಕ ಮಾಡಿಕೊಂಡ ಅಂತಾರಾಷ್ಟ್ರೀಯ ವಿವಾದವನ್ನು ತಪ್ಪಿಸಲು ಕುವೈಟ್ ಸರಕಾರ ಇಂತಹಾ ಇಡೀ ಜನವರ್ಗವನ್ನೇ ದೇಶರಹಿತರು ಎಂದು ವರ್ಗೀಕರಿಸಿತು. ಇವರಲ್ಲಿ ಹಲವರು ಇರಾಕ್‌ನವರಾಗಿದ್ದು, ಹಲವು ಬಿದೂನ್ ಜನರು ಇರಾಕ್ ಜೊತೆ ಸಂಬಂಧ ಹೊಂದಿದ್ದರು. ಬಹಳ ಕಾಲದಿಂದ ಕುವೈಟ್ ಸೇನೆಯ ಬಹುಸಂಖ್ಯಾತರು ಬಿದೂನ್‌ಗಳೆಂದೇ ವರ್ಗೀಕರಣ ಹೊಂದಿದ್ದಾರೆ.

ಕುವೈಟ್‌ನ ಸ್ವಾತಂತ್ರ್ಯದ ಬಳಿಕದ ಎರಡು ದಶಕಗಳಲ್ಲಿ ಬಿದೂನ್‌ಗಳು ಹಲವಾರು ಹಕ್ಕುಗಳನ್ನು ಹೊಂದಿದ್ದರು. ಅವರಿಗೆ ಉಳಿದ ಕುವೈಟಿಗರಂತೆ ಉದ್ಯೋಗ, ಸಾರ್ವಜನಿಕ ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆಯ ಅವಕಾಶವಿತ್ತು. ಅವರು ಮದುವೆಗಳ ನೋಂದಣಿ ಮತ್ತಿತರ ಗುರುತು ದಾಖಲೆಗಳನ್ನು ಪಡೆಯಬಹುದಾಗಿತ್ತು. ಆದರೆ, ಅವರಿಗೆ ಮತದಾನ ಮಾಡುವ ಅಥವಾ ಪ್ರತಿಭಟನೆ ನಡೆಸುವ ಹಕ್ಕಿರಲಿಲ್ಲ. ಆ ಹಕ್ಕುಗಳು ಕುವೈಟಿ ನಾಗರಿಕರಿಗೆ ಮಾತ್ರ ಸೀಮಿತವಾಗಿದ್ದವು. ಹೊಸದಾಗಿ ಕುವೈಟಿ ನಾಗರಿಕರಾಗಿ ಪೌರತ್ವ ಪಡೆದರೂ ತಕ್ಷಣ ಈ ಹಕ್ಕುಗಳು ಸಿಗುತ್ತಿರಲಿಲ್ಲ. ಮತದಾನ ಮಾಡಲು ಪೌರತ್ವ ಪಡೆದು 30 ವರ್ಷಗಳ ತನಕ ಕಾಯಬೇಕಾಗಿತ್ತು.

ಬಿದೂನ್‌ಗಳಿಗೆ ಕಳಂಕ

1980ರ ದಶಕದಲ್ಲಿ ಕುವೈಟ್ ಸರಕಾರ ಬಿದೂನ್‌ಗಳ ಹಲವಾರು ಹಕ್ಕುಗಳನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು. ಇರಾನಿನ ಕ್ರಾಂತಿಯಿಂದ ಆರಂಭವಾಗಿ, ಇರಾನ್- ಇರಾಕ್ ಯುದ್ಧದ ತನಕ ಕೊಲ್ಲಿಯ ಸಂಘರ್ಷಗಳ ಸಮಯದಲ್ಲಿ ಹಲವಾರು ನಿರಾಶ್ರಿತರು ಕುವೈಟ್‌ಗೆ ಬಂದರು. ಸೇನೆಗೆ ಕಡ್ಡಾಯ ಸೇರ್ಪಡೆ ಮತ್ತಿತರ ದಮನಗಳಿಂದ ತಪ್ಪಿಸಿಕೊಳ್ಳಲು ಅನೇಕ ಇರಾಕಿಗಳು ಕುವೈಟ್‌ಗೆ ಬಂದಿದ್ದಾರೆ ಎಂಬ ಕತೆಗಳು ಕುವೈಟ್ ಸರಕಾರವು ಬಿದೂನ್‌ಗಳನ್ನು ಸಂಶಯದಿಂದ ಕಾಣುವಂತೆ ಮಾಡಿತು.

1986ರಲ್ಲಿ ಸರಕಾರ ಬಿದೂನ್‌ಗಳ ಸ್ಥಾನಮಾನವನ್ನು ‘ಅಕ್ರಮ ನಿವಾಸಿಗಳು’ ಎಂದು ಬದಲಿಸಿತು. ಇದರಿಂದ ಅವರು ಹಲವಾರು ಹಕ್ಕುಗಳನ್ನು ಕಳೆದುಕೊಂಡರು. ಅವರನ್ನು ಉಚಿತ ಶಿಕ್ಷಣ, ವಸತಿ ಮತ್ತು ಆರೋಗ್ಯ ಸೇವೆಗಳಿಂದ ಹೊರಗಿಡಲಾಯಿತು. ಅನೇಕರನ್ನು ಕೆಲಸದಿಂದ ವಜಾ ಮಾಡಲಾಯಿತು. ಸರಕಾರ ವಿದೇಶಿ ನಿವಾಸಿ ಕಾನೂನನ್ನು ಬಿದೂನ್‌ಗಳ ಮೇಲೆ ಅನ್ವಯಿಸಲು ಆರಂಭಿಸಿತು. ಹಲವು ತಲೆಮಾರುಗಳಿಂದ ಕುವೈಟ್‌ನಲ್ಲಿ ವಾ‌ಸಿಸುತ್ತಿದ್ದ ಜನರನ್ನು ಏಕಾಏಕಿಯಾಗಿ ವಿದೇಶೀಯರು ಎಂದು ಪರಿಗಣಿಸಲಾಯಿತು. ಅನೇಕ ಬಿದೂನ್‌ಗಳನ್ನು ಹೊರಗಟ್ಟಲಾಯಿತೆಂದೂ ಹೇಳಲಾಗುತ್ತದೆ.

ಬೇರಾವುದೇ ರಾಷ್ಟ್ರವು ಅವರನ್ನು ತನ್ನ ರಾಷ್ಟ್ರೀಯರು ಎಂದು ಪರಿಗಣಿಸದೇ ಇರುವುದರಿಂದ ಅವರನ್ನು ವಿದೇಶಿ ನಿವಾಸಿ ಕಾನೂನಿನಂತೆ ಹೊರಗಿನವರು ಎಂದು ಪರಿಗಣಿಸಲಾಗದು ಎಂದು 1988ರಲ್ಲಿ ಮೇಲ್ಮನವಿ ನ್ಯಾಯಾಲಯವೊಂದು ತೀರ್ಪು ನೀಡಿತು. ಆದರೆ, ಇದನ್ನು ಅವಗಣಿಸಿದ ಸರಕಾರವು, ಬಿದೂನ್‌ಗಳ ಗಡಿಪಾರನ್ನು ಮುಂದುವರಿಸಿತು. 1980ರ ದಶಕದಲ್ಲಿ ಪೌರತ್ವ ಕಾನೂನಿಗೆ ತಿದ್ದುಪಡಿ ಮಾಡಿ ಅದನ್ನು ಇನ್ನಷ್ಟು ಕಠಿಣಗೊಳಿಸಲಾಯಿತು.

1990ರಲ್ಲಿ ಇರಾಕ್ ಕುವೈಟನ್ನು ಆಕ್ರಮಿಸಿದಾಗ ಬಿದೂನ್‌ಗಳು ಹರಕೆಯ ಕುರಿಗಳಾದರು. ಕುವೈಟ್ ಸೇನೆಯ ಕೆಲವರನ್ನು ಸೆರೆಹಿಡಿದು ಇರಾಕ್ ಪರ ಹೋರಾಡುವಂತೆ ಮಾಡಲಾಯಿತು. ಇರಾಕ್ ಸೇನೆ ಕುವೈಟನ್ನು ಪ್ರವೇಶಿಸಿದಂದಿನಿಂದ ಪ್ರತಿಯೊಬ್ಬ ದೇಶ ರಹಿತರಿಗೆ ದ್ರೋಹಿಗಳೆಂಬ ಕಳಂಕ ಹಚ್ಚಲಾಯಿತು. ಇರಾಕ್ ಕುವೈಟ್‌ನಿಂದ ಹಿಂದೆಗೆದ ಬಳಿಕ ಅನೇಕ ಬಿದೂನ್‌ಗಳನ್ನು ಮಿಲಿಟರಿ ವಿಚಾರಣೆಗೆ ಗುರಿಪಡಿಸಲಾಯಿತು. ದೊಡ್ಡ ಪ್ರಮಾಣದಲ್ಲಿ ಸೇವೆಯಿಂದ ವಜಾ ಆರಂಭವಾಯಿತು. ಉಳಿಯಲು ಬಯಸುವ ಹಲವರು ವಿದೇಶಿ ರಾಷ್ಟ್ರೀಯರೆಂದು ಘೋಷಿಸಿಕೊಂಡು ಉದ್ಯೋಗ ವೀಸಾದಲ್ಲಿ ಕುವೈಟ್‌ನಲ್ಲಿ ಉಳಿಯಬೇಕಾಯಿತು.

2000ದಲ್ಲಿ ಕುವೈಟ್ ಸರಕಾರ ಬಿದೂನ್‌ಗಳ ಸ್ಥಾನಮಾನವನ್ನು ಪುನರ್ವಿಮರ್ಶಿಸುವ ಮತ್ತು ಪ್ರತಿ ವರ್ಷ 2,000 ಬಿದೂನ್‌ಗಳಿಗೆ ಪೌರತ್ವ ನೀಡುವ ಭರವಸೆ ನೀಡಿದರೂ, ಆ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ.

ಅರಬ್ ಸ್ಪ್ರಿಂಗ್‌ನಲ್ಲಿ ಬಿದೂನ್

2011ರಲ್ಲಿ ಅರಬ್ ಸ್ಪ್ರಿಂಗ್ ಚಳವಳಿ ಕುವೈಟ್‌ಗೆ ಹರಡಿದಾಗ ಬಿದೂನ್‌ಗಳೇ ಮುಂಚೂಣಿಯಲ್ಲಿದ್ದರು. ಪೌರತ್ವ ಹೊಂದಿರದ ಕಾರಣದಿಂದ ಅವರು ಬಂಧನ ಮತ್ತು ಗಡಿಪಾರಿನ ಭೀತಿಯನ್ನು ಎದುರಿಸುತ್ತಿದ್ದರು. ಪ್ರತಿಭಟನೆ ಹೆಚ್ಚಾದಾಗ ಸರಕಾರವು ಪ್ರತೀ ಕುವೈಟ್ ನಾಗರಿಕರಿಗೆ 1000 ದೀನಾರ್ ಮತ್ತು ಆಹಾರ ಅನುದಾನದ ಭರವಸೆ ನೀಡಿತು. ನೂರಾರು ಮಂದಿ ಬಿದೂನ್ ಕೊಳೆಗೇರಿ ನಿವಾಸಿಗಳು ತಮಗೆ ಪೌರತ್ವ ಇಲ್ಲದ ಕಾರಣ ಪ್ರತಿಭಟಿಸಿದರು. ಪ್ರತಿಭಟನೆ ತೀವ್ರಗೊಂಡು ವರ್ಷದೊಳಗೆ ಸಾವಿರಾರು ಜನರು ಸೇರಿಕೊಂಡರು. ಪ್ರತಿಭಟನೆಯು ದೇಶರಹಿತತೆಯ ವಿಷಯವನ್ನು ಮೀರಿ ಬೆಳೆದಾಗ ಸರಕಾರವು ಬಿದೂನ್‌ಗಳಿಗೆ 11 ಸೌಲಭ್ಯಗಳನ್ನು ನೀಡಿತು. ಇದರಲ್ಲಿ ಜನನ, ಮರಣ, ಮದುವೆ ನೋಂದಣಿ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಅವಕಾಶ,  ಬಿದೂನ್ ಕಾರ್ಡುಗಳನ್ನು ನೀಡುವ ಮೂಲಕ ಮಾನ್ಯತೆ ನೀಡುವ ಭರವಸೆ ಸೇರಿದ್ದವು.

ಬಿದೂನ್‌ಗಳ ನೋಂದಣಿ ಆಮೆಗತಿಯಲ್ಲಿ ನಡೆದಿದೆ. ಹೆಚ್ಚಿನ ಬಿದೂನ್ ಜನರು ವಿದೇಶೀಯರೆಂದು ಸರಕಾರ ಈಗಲೂ ಹೇಳುತ್ತಿದೆ. ಪರಿಣಾಮವಾಗಿ ಹಲವಾರು ಬಿದೂನ್‌ಗಳು ಈಗಲೂ ಉದ್ಯೋಗ ವೀಸಾಗಳಿಗೆ ಅರ್ಜಿ ಹಾಕಬೇಕಾಗಿದೆ. ತಮ್ಮದೇ ದೇಶದಲ್ಲಿ ಅವರಿಗೆ ಹಕ್ಕುಗಳನ್ನು ನಿರಾಕರಿಸಿದಂತಾಗಿದೆ.

ಇತ್ತೀಚೆಗೆ ಭಾರತದಲ್ಲಿ ಎನ್‌ಆರ್‌ಸಿಯಿಂದಾಗಿ ಭಾರೀ ಸಂಖ್ಯೆಯಲ್ಲಿ ಜನರು ಪೌರತ್ವ ಕಳೆದುಕೊಳ್ಳುವ ಭಯ ಉಂಟಾಗಿದೆ. ಈ ಸಮಯದಲ್ಲಿ ಬೇರೆ ದೇಶಗಳು ಇಂತದ್ದೇ ವಿಷಯಗಳನ್ನು ಹೇಗೆ ನಿರ್ವಹಿಸಿವೆ ಎಂದು ನೋಡುವುದು ಮುಖ್ಯವಾಗಿದೆ. ಇತಿಹಾಸವು ಭಿನ್ನವಾಗಿದ್ದರೂ, ಕುವೈಟ್ ಮತ್ತು ಅದರ ಬಿದೂನ್ ಜನರ ಸಂಕಷ್ಟದ ಕತೆಗಳು ಎಚ್ಚರಿಕೆ ನೀಡುತ್ತವೆ. ಕುವೈಟ್ ಪೌರತ್ವ ನೋಂದಣಿಯ ವಿಷಯದಲ್ಲಿ ಇಂದಿಗೂ ತಳಮಳಿಸುತ್ತಿದ್ದು, ಸಮಸ್ಯೆಗಳು ದಿನಗಳೆದಂತೆ ಇನ್ನಷ್ಟು ಬಿಗಡಾಯಿಸುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...