ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಮೈತ್ರಿಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಆ ಮೂಲಕ ಅವರು ಬಿಜೆಪಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಮಂತ್ರಿಗಳನ್ನು ಪಡೆಯಲು ಬಿಜೆಪಿ ಸಫಲವಾಗಿದೆ. ಆದರೆ ಗೃಹ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕಾರ್ಯಗಳು, ಜಲಸಂಪನ್ಮೂಲಗಳಂತಹ ಎಲ್ಲಾ ಪ್ರಮುಖ ಇಲಾಖೆಗಳು ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಉಳಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನ ಮಂತ್ರಿಗಳು ಹಾಗೂ ಶಾಸಕರು ಇದ್ದರೂ ಬಿಜೆಪಿಗೆ ಮೈತ್ರಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲವನ್ನೂ ಒಪ್ಪಿಕೊಂಡಿದೆ.
ಕಳೆದ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಎನ್ಡಿಎ ಮೈತ್ರಿಕೂಟದ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯುಗೆ ಬಿಟ್ಟುಕೊಟ್ಟಿತ್ತು.
ಪ್ರಸ್ತುತ ಬಿಜೆಪಿಯಲ್ಲಿ 16 ಮಂತ್ರಿಗಳಿದ್ದು, ಅವರ ಬಳಿ 22 ಖಾತೆಗಳಿವೆ. ಜೆಡಿಯುಗೆ 13 ಮಂತ್ರಿಗಳಿದ್ದರೂ 21 ಪ್ರಮುಖ ಇಲಾಖೆಯನ್ನು ಹಿಡಿತದಲ್ಲಿಟ್ಟುಕೊಂಡಿದೆ. ಜಿತಾನ್ ರಾಮ್ ಮಾಂಜಿ ಅವರ ಎಚ್ಎಎಂ ಪಕ್ಷಕ್ಕೆ ಮತ್ತು ವಿಐಪಿ ಪಕ್ಷಕ್ಕೆ ತಲಾ ಒಂದು ಸಚಿವ ಸ್ಥಾನವನ್ನು ನೀಡಲಾಗಿದೆ.
ಇದನ್ನೂ ಓದಿ: ಕೃಷಿ ಕಾನೂನು ವಿರೋಧಿಸಿ ರಾಜ ಭವನಕ್ಕೆ ಮುತ್ತಿಗೆ: ಬಿಹಾರದ ರೈತರ ಮೇಲೆ ಲಾಠಿ ಚಾರ್ಜ್!
ಹೊಸ ಮಂತ್ರಿ ಮಂಡಲದ ಹಿರಿಯ ನಾಯಕ, ಮಾಜಿ ಕೇಂದ್ರ ಮಂತ್ರಿ ಶಹನಾವಾಜ್ ಹುಸೇನ್ಗೆ ಯಾವುದೇ ಉದ್ಯಮವನ್ನು ಹೊಂದಿರದ ರಾಜ್ಯದಲ್ಲಿ ಉದ್ಯಮ ಸಚಿವಾಲಯವನ್ನು ನೀಡಲಾಗಿದೆ. ಉಪಮುಖ್ಯಮಂತ್ರಿ ರೇಣು ದೇವಿಗೆ ವಿಪತ್ತು ನಿರ್ವಹಣಾ ಖಾತೆಯನ್ನು ನೀಡಲಾಗಿದೆ.
36 ಸದಸ್ಯರನ್ನು ಹೊಂದಿರುವ ಬಿಹಾರ ಸಚಿವ ಸಂಪುಟದಲ್ಲಿ, ಇದುವರೆಗೂ ಮುಖ್ಯಮಂತ್ರಿಯ ಹೊರತಾಗಿ ಕೇವಲ 13 ಮಂದಿ ಮಾತ್ರ ಸಚಿವರಿದ್ದರು.
ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿಯು ಬಿಹಾರದಲ್ಲಿ ಅದ್ಬುತ ಫಲಿತಾಂಶ ಪಡೆಯುವಂತಾಯಿತು. ಪಾಸ್ವಾನ್ ಅವರ ಪಕ್ಷವು ಬಿಜೆಪಿ ಸ್ಫರ್ಧಿಸಿರುವ ಕ್ಷೇತ್ರಗಳನ್ನು ಬಿಟ್ಟು ಜೆಡಿಯು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ, ಜೆಡಿಯು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲದಂತೆ ನೋಡಿಕೊಂಡಿದ್ದರು.
ಇದರಿಂದಾಗಿ ಈ ಹಿಂದೆ 71 ಸ್ಥಾನಗಳನ್ನು ಹೊಂದಿದ್ದ ನಿತೀಶ್ ಕುಮಾರ್ ಪಕ್ಷವಾದ ಜೆಡಿಯು 43 ಕ್ಕೆ ಇಳಿಯಿತು. ಬಿಜೆಪಿಯು 74 ಸ್ಥಾನಗಳನ್ನು ಗೆದ್ದು ಮೈತ್ರಿಕೂಟದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆಯ ನಂತರ ಈ ಬಗ್ಗೆ ನಿತೀಶ್ ಕುಮಾರ್ ತಮ್ಮ ಸೋಲಿಗೆ ಎಲ್ಜೆಪಿಯನ್ನು ದೂಷಿಸಿದ್ದರು.
ಇದನ್ನೂ ಓದಿ: ಬಿಹಾರ: 19 ಲಕ್ಷ ಉದ್ಯೋಗ ನೀಡದಿದ್ದರೆ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ – ತೇಜಸ್ವಿ ಯಾದವ್ ಎಚ್ಚರಿಕೆ