ವೈದ್ಯರ ಅನುಪಸ್ಥಿತಿಯಲ್ಲಿ ಖಾಸಗಿ ಆರೋಗ್ಯ ಕೇಂದ್ರದ ಕಿರಿಯ ಸಿಬ್ಬಂದಿ ಮಹಿಳೆಯೊಬ್ಬರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಆಕೆ ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸಮಸ್ತಿಪುರ್ನಲ್ಲಿ 28 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ರಾಜ್ಯದ ರಾಜಧಾನಿ ಪಾಟ್ನಾದಿಂದ ಸುಮಾರು 80 ಕಿಮೀ ದೂರದಲ್ಲಿರುವ ಜಿಲ್ಲೆಯ ಮುಸ್ರಿಘರಾರಿ ಎಂಬ ಸಣ್ಣ ಪಟ್ಟಣದಲ್ಲಿ ಈ ಘಟನೆ ವರದಿಯಾಗಿದೆ. ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಅನಿಶಾ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದೇವೆ ಎಂದು ಬಬಿತಾ ದೇವಿ ಸಂಬಂಧಿಕರು ಹೇಳಿದ್ದಾರೆ. ಸಣ್ಣ ಆರೋಗ್ಯ ಕೇಂದ್ರವು ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿದೆ.
‘ವೈದ್ಯರು ಲಭ್ಯವಿಲ್ಲ ಎಂದು ಕೇಂದ್ರದ ಸಿಬ್ಬಂದಿ ಹೇಳಿದ ನಂತರ ಕಾಂಪೌಂಡರ್ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದರು’ ಎಂದು ಮಹಿಳೆಯ ಸಂಬಂಧಿಕರು ಹೇಳಿದ್ದಾರೆ.
“ನಾವು ಅವಳನ್ನು 9 ಗಂಟೆಗೆ ಇಲ್ಲಿಗೆ ಕರೆತಂದೆವು, ಅವರು ಅವಳಿಗೆ ಲವಣಯುಕ್ತ ನೀರನ್ನು ನೀಡಿದರು. ಸುಮಾರು 11 ಗಂಟೆಗೆ, ಅವರು ಆರಪೇಷನ್ ಪ್ರಾರಂಭಿಸಿದರು. ಸುಮಾರು ಒಂದು ಗಂಟೆಯ ನಂತರ, ಅವರು ಅವಳನ್ನು ಆಂಬ್ಯುಲೆನ್ಸ್ಗೆ ಸೇರಿಸಿದರು ಮತ್ತು ಮೋಹನ್ಪುರದ ಆಸ್ಪತ್ರೆಗೆ (ಸುಮಾರು 10 ಕಿ.ಮೀ ದೂರ) ಕರೆದೊಯ್ದರು” ಎಂದು ಮಹಿಳೆಯ ಚಿಕ್ಕಪ್ಪ ವಿವರಿಸಿದ್ದಾರೆ.
ಆಕೆಯ ಸ್ಥಿತಿಯ ಬಗ್ಗೆ ಕುಟುಂಬ ಸದಸ್ಯರಿಗೆ ಏನನ್ನೂ ಹೇಳಿಲ್ಲ. ಆದರೆ, ಪೋಷಕರು ಆಕೆಯನ್ನು ಪರೀಕ್ಷಿಸಲು ದೇಹ ಮುಟ್ಟಿದಾಗ ತಂಪಾಗಿತ್ತು ಎಂದು ಅವರು ಹೇಳಿದರು. “ಅವಳು ಇಲ್ಲಿಯೇ ಸತ್ತಳು. ಆದರೆ ಅವರು ನಮಗೆ ಹೇಳದೆ ಮೋಹನಪುರಕ್ಕೆ ಸಾಗಿಸಿದರು” ಎಂದು ಮೃತ ಮಹಿಳೆಯ ಚಿಕ್ಕಪ್ಪ ಆರೋಪ ಮಾಡಿದ್ದಾರೆ.
ಬಬಿತಾ ದೇವಿ ಸಾವು ಖಚಿತವಾದ ಬಳಿಕ ಆಕೆಯ ಸಂಬಂಧಿಕರು ಮೃತದೇಹವನ್ನು ಅನಿಶಾ ಆರೋಗ್ಯ ಕೇಂದ್ರಕ್ಕೆ ತಂದು ಪ್ರತಿಭಟನೆ ನಡೆಸಿದರು. ಮುಸ್ರಿಘರಾರಿ ಪಟ್ಟಣದ ಯಾವುದೇ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ ಮತ್ತು ಕಾಂಪೌಂಡರ್ಗಳು ಎಂದು ಕರೆಯಲ್ಪಡುವ ಕಿರಿಯ ಸಿಬ್ಬಂದಿ ಎಲ್ಲಾ ವೈದ್ಯಕೀಯ ಕಾರ್ಯವಿಧಾನಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ರೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಅನಿಶಾ ಆರೋಗ್ಯ ಕೇಂದ್ರದ ಸಿಬ್ಬಂದಿ ಪರಾರಿಯಾಗಿದ್ದಾರೆ; ಪ್ರತಿಯೊಬ್ಬರ ವಿರುದ್ಧವೂ ಪೊಲೀಸ್ ಕೇಸ್ ಹಾಕುವಂತೆ ಮಹಿಳೆಯ ಸಂಬಂಧಿಕರು ಒತ್ತಾಯಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ಫೈಜುಲ್ ಅನ್ಸಾರಿ ತಿಳಿಸಿದ್ದಾರೆ.
ಇದನ್ನೂ ಓದಿ; ಮುಖ್ಯವಾಹಿನಿಯ ಮಾಧ್ಯಮಗಳು ಎಡಪಕ್ಷಗಳನ್ನು ಬಹಿಷ್ಕರಿಸುತ್ತಿವೆ: ಪಿಣರಾಯಿ ವಿಜಯನ್