ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ 42 ಕ್ರಿಶ್ಚಿಯನ್ ಕುಟುಂಬಗಳಿಗೆ ಹಿಂದುತ್ವ ಗುಂಪಿನ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು ‘ಕ್ಲಾರಿಯನ್ ಇಂಡಿಯಾ’ ನ್ಯೂಸ್ ಪೋರ್ಟ್ಲ್ ವರದಿ ಮಾಡಿದೆ. ‘ಘರ್ ವಾಪ್ಸಿ’ಯಾಗಿ ಅಥವಾ ಗ್ರಾಮ ತೊರೆಯುವಂತೆ ಬೆದರಿಕೆ ಹಾಕಿದ್ದು, ಇದು ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯ ಹುಟ್ಟುಹಾಕಿದೆ.
ಸುದ್ದಿ ಪ್ರಕಾರ, ಆಗಸ್ಟ್ 8 ರಂದು ಹಳ್ಳಿಯಾದ್ಯಂತ ಚಲಿಸುವ ಮೂರು ಚಕ್ರಗಳ ವಾಹನದಲ್ಲಿ ಅಳವಡಿಸಲಾದ ಧ್ವನಿವರ್ಧಕಗಳ ಮೂಲಕ ಬೆದರಿಕೆ ಸಂದೇಶ ಪ್ರಸಾರ ಮಾಡಲಾಯಿತು. ಬೆದರಿಕೆ ಹಾಕುತ್ತಿರುವ ವೀಡಿಯೊಗಳು ಅಂದಿನಿಂದ ಆನ್ಲೈನ್ನಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಹಿಂದುತ್ವ ಗುಂಲಿನ ಸದಸ್ಯರು ಕ್ರಿಶ್ಚಿಯನ್ ಕುಟುಂಬಗಳನ್ನು ಸಮಾಜ ದ್ರೋಹಿಗಳು ಕರೆದಿದ್ದಾರೆ. ಸಂಪೂರ್ಣ ಸಾಮಾಜಿಕ ಬಹಿಷ್ಕಾರ ಜಾರಿಗೊಳಿಸುವಂತೆ ಇತರೆ ಸಮುದಾಯದ ನಿವಾಸಿಗಳಿಗೆ ಕರೆ ನೀಡಿದ್ದಾರೆ. ಗೋಪಾಲಪುರವು ಐತಿಹಾಸಿಕವಾಗಿ ಸಂಪೂರ್ಣವಾಗಿ ಹಿಂದೂಗಳಾಗಿದ್ದು, ಭವಿಷ್ಯದಲ್ಲಿ ಹಿಂದೂಗಳು ಮಾತ್ರ ಇಲ್ಲಿ ವಾಸಿಸಬೇಕು ಎಂದು ಹೇಳಿದ್ದಾರೆ. ಕ್ರಿಶ್ಚಿಯನ್ನರು ಪರಿಣಾಮಕಾರಿಯಾಗಿ ತಮ್ಮ ನಂಬಿಕೆಯನ್ನು ತ್ಯಜಿಸಬೇಕು, ಘರ್ ವಾಪ್ಸಿಯಾಗದಿದ್ದರೆ ತಮ್ಮ ಮನೆಗಳನ್ನು ತೊರೆಯಬೇಕು ಎಂದು ಬರದರಿಕೆ ಹಾಕುತ್ತಿದ್ದಾರೆ.
ಲೌಡ್ಸ್ಪೀಕರ್ ಸಂದೇಶವು ಕ್ರಿಶ್ಚಿಯನ್ ಸಮುದಾಯದ ಪೂಜಾ ಸ್ಥಳಗಳನ್ನು ಸಹ ಗುರಿಯಾಗಿರಿಸಿಕೊಂಡಿದೆ. ಗ್ರಾಮದ ಸಾಮಾಜಿಕ ಸುವ್ಯವಸ್ಥೆಗೆ ಚರ್ಚ್ಗಳು ಅಪಾಯಕಾರಿ ಎಂದು ಅವರು ಆರೋಪಿಸಿದ್ದಾರೆ. ಇಂದು ಚರ್ಚ್ಗಳಿಗೆ ಅನುಮತಿ ನೀಡಿದರೆ, ನಾಳೆ ಮಸೀದಿಗಳು ನಿರ್ಮಾಣವಾಗುತ್ತವೆ ಎಂದು ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಈ ಬೆಳವಣಿಗೆಯು ಭಾರತದ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರನ್ನು ಅಪಾಯವೆಂದು ಬಿಂಬಿಸುತ್ತದೆ. ಓರ್ವ ಭಾಷಣಕಾರನು ಕ್ರಿಶ್ಚಿಯನ್ ಅವಕಾಶ ನೀಡುವುದರಿಂದ ಗ್ರಾಮವು “ಹಾಳಾಗುತ್ತದೆ” ಎಂದು ಹೇಳಿದ್ದಾನೆ.
ಗೋಪಾಲಪುರವು ಒಂದು ಸಣ್ಣ ಹೊಸ ಬಡಾವಣೆಯಾಗಿದೆ. 2011 ರಲ್ಲಿ ನಡೆದ ಕೊನೆಯ ಜನಗಣತಿಯಲ್ಲಿ, ಇದು 411 ಕುಟುಂಬಗಳಲ್ಲಿ 2,387 ನಿವಾಸಿಗಳನ್ನು ಹೊಂದಿತ್ತು. ಈಗ ಕ್ರಿಶ್ಚಿಯನ್ ಸಮುದಾಯದ 42 ಕುಟುಂಬಗಳು ನೆಲೆ ನಿಂತಿವೆ.
ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿದ ಹೆಸರು ಬಹಿರಂಗಪಡಿಸಲು ಬಯಸದ ಕ್ರಿಶ್ಚಿಯನ್ ನಿವಾಸಿಯೊಬ್ಬರು, ಸಮುದಾಯವು ದೀರ್ಘಕಾಲದಿಂದ ಒತ್ತಡವನ್ನು ಎದುರಿಸುತ್ತಿದೆ ಎಂದು ಹೇಳಿದರು.
ಹಿಂದುತ್ವ ಗುಂಪುಗಳು ಭಾರತೀಯ ಕ್ರೈಸ್ತರು ಮತ್ತು ಮುಸ್ಲಿಮರು ಹಿಂದೂಗಳ ವಂಶಸ್ಥರು, ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ತರಬೇಕು ಎಂದು ವಾದಿಸಲು ‘ಘರ್ ವಾಪ್ಸಿ’ ಎಂಬ ಪರಿಕಲ್ಪನೆಯನ್ನು ಬಹಳ ಹಿಂದಿನಿಂದಲೂ ಬಳಸುತ್ತಿವೆ.
ಈ ಘಟನೆಯು ಸಾಂವಿಧಾನಿಕ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಮಾನವ ಹಕ್ಕುಗಳ ಪರ ವಕೀಲರು ಹೇಳಿದ್ದಾರೆ. ಜೆಸ್ಯೂಟ್ ಪಾದ್ರಿ ಮತ್ತು ಕಾರ್ಯಕರ್ತ ಫಾದರ್ ಸೆಡ್ರಿಕ್ ಪ್ರಕಾಶ್ ಅವರು, ಇಡೀ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆಗೆ ಕರೆಗಳು ಧಾರ್ಮಿಕ ವಿವಾದವನ್ನು ಮೀರಿ ಭಾರತದ ಸಾಂವಿಧಾನಿಕ ಖಾತರಿಗಳಾದ ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೇರವಾಗಿ ಪ್ರಶ್ನಿಸುತ್ತವೆ ಎಂದು ಹೇಳಿದರು.
ಈ ದ್ವೇಷ ಭಾಷಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ವಾಷಿಂಗ್ಟನ್ ಮೂಲದ ಇಂಡಿಯಾ ಹೇಟ್ ಲ್ಯಾಬ್ 2025 ರಲ್ಲಿ ದ್ವೇಷ ಭಾಷಣ ಎಂದು ಕರೆಯಲಾದ 1,318 ಪ್ರಕರಣಗಳನ್ನು ದಾಖಲಿಸಿದೆ. ಇದು 2024 ರಲ್ಲಿ 1,165 ಮತ್ತು 2023 ರಲ್ಲಿ 668 ರಷ್ಟಿತ್ತು.
2025 ರ ಘಟನೆಗಳಲ್ಲಿ, 1,164 ಘಟನೆಗಳು, ಭಾರತೀಯ ಜನತಾ ಪಕ್ಷ (ಬಿಜೆಪಿ) ಅಥವಾ ಅದರ ಮಿತ್ರ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ.


