ಮಹಾರಾಷ್ಟ್ರದ ಸ್ಪೀಕರ್ ಕಚೇರಿ ಅಧಿಕಾರಿ ಭಾಸ್ಕರ್ ಜಾದವ್ ಅವರನ್ನು ನಿಂದಿಸಿದ ಮತ್ತು ದೈಹಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಿಜೆಪಿಯ 12 ಶಾಸಕರನ್ನು ಸೋಮವಾರ ಒಂದು ವರ್ಷದವರೆಗೆ ಸ್ಪೀಕರ್ ಅಮಾನತುಗೊಳಿಸಿದ್ದಾರೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಶಾಸಕರು, ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಂಗಳವಾರ “ಕೌಂಟರ್ ಅಸೆಂಬ್ಲಿ” ನಡೆಸಿ ಪ್ರತಿಭಟಿಸಿದ್ದಾರೆ.
ಹಲವಾರು ಬಿಜೆಪಿ ಶಾಸಕರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್) ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಶಾಸಕ ಕಾಳಿದಾಸ್ ಕೋಲಂಕರ್ ಅವರನ್ನು ಕೌಂಟರ್ ಸದನದ ಸ್ಪೀಕರ್ ಎಂದು ಘೋಷಿಸಿ ಚರ್ಚೆ ನಡೆಸಲು ಪ್ರಸ್ತಾಪಿಸಿದರು.
’ಪಕ್ಷದ 12 ಶಾಸಕರನ್ನು ಸುಳ್ಳು ಆರೋಪದ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ. ನಾನು ಇಲ್ಲಿ ಈ ಸರ್ಕಾರದ ವಿರುದ್ಧ ನಿರ್ಣಯವನ್ನು ಪ್ರಸ್ತಾಪಿಸುತ್ತೇನೆ ಮತ್ತು ಪ್ರಸ್ತಾವನೆಯ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಸದಸ್ಯರನ್ನು ವಿನಂತಿಸುತ್ತೇನೆ’ ಎಂದು ಚರ್ಚೆ ಆರಂಭಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ: ಬಿಜೆಪಿಯ 12 ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತು ಮಾಡಿದ ಸ್ಪೀಕರ್
“ಇದು ಪ್ರಜಾಪ್ರಭುತ್ವದ ಕೊಲೆ. ಬಿಜೆಪಿಯ ಎಲ್ಲಾ ಶಾಸಕರು ಈ ಸರ್ಕಾರದ ಕಾರ್ಯಚಟುವಟಿಕೆಯ ವಿರುದ್ಧ ಮಾತನಾಡಲು ಬಯಸುತ್ತಾರೆ. ಭ್ರಷ್ಟ ಸರ್ಕಾರವನ್ನು ಬಹಿರಂಗಪಡಿಸಲು ಬಯಸುತ್ತಾರೆ” ಎಂದು ವಿಪಕ್ಷ ನಾಯಕ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಸದಸ್ಯರು ಧ್ವನಿವರ್ಧಕಗಳನ್ನು ಬಳಸದಂತೆ ಭದ್ರತಾ ಅಧಿಕಾರಿಗಳು ತಡೆದಿದ್ದಾರೆ.
सभागृहात विरोधकांची दडपशाही म्हणून आमची अभिरूप विधानसभा विधान भवन मुंबई परिसरात सुरू असलेल्या अभिरूप विधानसभेतून माझे भाषण… #MonsoonSession https://t.co/1XFz67lulm
— Devendra Fadnavis (@Dev_Fadnavis) July 6, 2021
ವಿಧಾನಸಭಾ ಭವನ ಮತ್ತು ರಾಜ್ಯದ ಹಲವೆಡೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದರೂ, 12 ಶಾಸಕರನ್ನು ಅಮಾನತುಗೊಳಿಸಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ರಾಜ್ಯ ಸರ್ಕಾರ ಇಂತಹ ಅಶಿಸ್ತು ಮತ್ತು ಅವಿವೇಕವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
“ಪ್ರತಿಪಕ್ಷದ ನಾಯಕರು ನನ್ನ ಕ್ಯಾಬಿನ್ಗೆ ಬಂದು ದೇವೇಂದ್ರ ಫಡ್ನವೀಸ್ ಮತ್ತು ಹಿರಿಯ ನಾಯಕ ಚಂದ್ರಕಾಂತ್ ಪಾಟೀಲ್ ಅವರ ಮುಂದೆಯೇ ಅಸಂಸದೀಯ ಭಾಷೆ ಬಳಸಿ ನನ್ನನ್ನು ನಿಂದಿಸಿದ್ದಾರೆ. ಕೆಲವು ನಾಯಕರು ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ” ಎಂದು ಅಧಿಕಾರಿ ಭಾಸ್ಕರ್ ಜಾಧವ್ ಮಾಧ್ಯಮಗಳಿಗೆ ತಿಳಿಸಿದರು.
ಸಂಜಯ್ ಕುಟೆ, ಆಶಿಸ್ ಶೆಲಾರ್. ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲಾವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟ್, ಯೋಗೇಶ್ ಸಾಗರ್, ಜಯ ಕುಮಾರ್ ರಾವತ್, ನಾರಾಯಣ್ ಕುಚೆ ಮತ್ತು ಕೀರ್ತಿಕುಮಾರ್ ಭಾಂಗ್ಡಿಯಾ ಅಮಾನತುಗೊಂಡ ಶಾಸಕರು.
ಇದನ್ನೂ ಓದಿ: ‘ಶಿವಸೇನೆ ಎಂದಿಗೂ ಬಿಜೆಪಿಯ ಶತ್ರುವಲ್ಲ’: ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್