ರಾಮನವಮಿಯಂದೇ ಬಸವ ಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗಾರ ಅವರು ರಾಮನಿಗೆ ಅವಮಾನ ಮಾಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ. ಅವರು ಬಸವಕಲ್ಯಾಣದಲ್ಲಿ ರಾಮನ ಪ್ರತಿಕೃತಿ ಕಾಲಿನ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾ ಯಾತ್ರೆ ವೇಳೆ ಈ ಘಟನೆ ನಡೆದಿದ್ದು, ಶರಣು ಸಲಗಾರ ಅವರು ರಾಮನ ಕಾಲಿನ ಮೇಲೆ ನಿಂತು ಮೂರ್ತಿಗೆ ಮಾಲೆ ಹಾಕುವುದರ ಜೊತೆಗೆ, ರಾಮನ ಕಾಲ ಮೇಲೆ ನಿಂತು ಬಗೆಬಗೆಯಲ್ಲಿ ಪೋಸು ಬೇರೆ ಕೊಟ್ಟಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿವೆ.
ಶಾಸಕ ಶರಣು ಸಲಗಾರ ಅವರೇ ತಾವು ರಾಮನ ಮೇಲೆ ನಿಂತಿರುವ ಫೋಟೊವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಶಾಸಕರೇ ಎಡವಟ್ಟು ಮಾಡಿಕೊಂಡಿದ್ದು, ಈಗ ಎಲ್ಲೆಡೆ ವೈರಲ್ ಆಗಲು ಕಾರಣವಾಗಿದೆ ಎನ್ನಲಾಗಿದೆ. ಇದರ ವಿರುದ್ಧ ರಾಮ ಭಕ್ತರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೇ ಈ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಪೊಸ್ಟ್ ಮಾಡಿ, ಇದು ಹಿಂದು ಸಂಸ್ಕೃತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನಾವು ಆರಾಧಿಸುವ ಶ್ರೀ ರಾಮನ ಮೂರ್ತಿ ಮೇಲೆ ನಿಂತು ಶಾಸಕರು ಅವಮಾನ ಮಾಡಿದ್ದಾರೆ” ಎಂದು ಸಾರ್ವಜನಿಕರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ee BlueJP galu adikarada dahakke bekadare Ramana taleyamele kalannu Saha iduttare.