ಬಿಜೆಪಿ ನಾಯಕ ಹಾಗೂ ವಿಆರ್ಎಲ್ ಮಾಲಿಕರಾದ ವಿಜಯ ಸಂಕೇಶ್ವರ ಅವರು, ಕೊರೊನಾ ಸೋಂಕಿನಿಂದಾಗಿ ಉಂಟಾಗುವ ಆಮ್ಲಜನಕದ ಸಮಸ್ಯೆಯನ್ನು ಬಗೆಹರಿಸಲು, ಮೂಗಿಗೆ ನಿಂಬೆ ರಸ ಹಾಕುವಂತೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವೈಜ್ಞಾನಿಕ ಸಲಹೆ ನೀಡಿ ತಜ್ಞ ವೈದ್ಯರ ಆಕ್ರೋಶಕ್ಕೆ ಕಾರಣರಾಗಿದ್ದರು. ಇದೀಗ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಕೂಡಾ ಸಂಕೇಶ್ವರ ಅವೈಜ್ಞಾನಿಕ ಸಲಹೆಯನ್ನು ಪಾಲಿಸುವಂತೆ ಜನರಿಗೆ ಕರೆ ನೀಡಿದ್ದಾರೆ.
ಕೊಲಾರದ ಬಿಜೆಪಿ ಸಂಸದರಾಗಿರುವ ಎಸ್. ಮುನಿಸ್ವಾಮಿ ಸೋಮವಾರ ತನ್ನ ಫೇಸ್ಬುಕ್ನಲ್ಲಿ ಸಂಕೇಶ್ವರರ ಅವೈಜ್ಞಾನಿಕ ಸಲಹೆಯನ್ನು ಪಾಲಿಸುವಂತೆ ಜನರಿಗೆ ಕರೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ವಿಳಂಬಕ್ಕೆ ಮೋದಿ ಸರ್ಕಾರವೇ ಕಾರಣ ಹೊರತು ರಾಜ್ಯಗಳಲ್ಲ
ಅವರು ತನ್ನ ಫೇಸ್ಬುಕ್ನಲ್ಲಿ, “ಕೊರೊನಾ ಸೋಂಕಿನಿಂದ ಕೆಮ್ಮು, ನೆಗಡಿ ಮತ್ತು ಉಸಿರಾಟಕ್ಕೆ ತೊಂದರೆಯಾದರೆ ನಿಂಬೆಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ಆಕ್ಸಿಜನ್ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು 200 ಕ್ಕೂ ಹೆಚ್ಚು ಜನ ಪ್ರಯೋಗ ಮಾಡಿದ್ದಾರೆ ಎಂದು ಡಾ॥ವಿಜಯ್ ಸಂಕೇಶ್ವರ ರವರು ಹೇಳಿದ್ದಾರೆ. ಎಲ್ಲರೂ ಆಕ್ಸಿಜನ್ ಸಮಸ್ಯೆ ಉಂಟಾದಲ್ಲಿ ಮನೆಯ ಮದ್ದನ್ನು ಬಳಸಿ” ಎಂದು ಹೇಳಿದ್ದಾರೆ.(ಫೇಸ್ಬುಕ್ ಆರ್ಕೈವ್ ಇಲ್ಲಿದೆ)
ಸಂಸದನಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕೊರೊನಾ ತೀವ್ರವಾಗಿ ಹರಡುತ್ತಿರುವ ಕಾಲದಲ್ಲಿ ಅವೈಜ್ಞಾನಿಕತೆಯನ್ನು ಹರಡುತ್ತಿರುವುದು ಎಷ್ಟು ಸರಿ ಎಂದು ಹಲವಾರು ಜನರು ಸಂಸದ ಮುನಿಸ್ವಾಮಿ ನೀಡಿರುವ ಸಲಹೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲಿಂಗಾಯತ ಧರ್ಮ ಕುರಿತು ಎಂ.ಬಿ. ಪಾಟೀಲ್ ಬಗ್ಗೆ ವಿಜಯ್ ಸಂಕೇಶ್ವರ್ ಪತ್ರಿಕೆಯಲ್ಲಿ ಫೇಕ್ ನ್ಯೂಸ್
ಈ ಬಗ್ಗೆ ನಾನುಗೌರಿ.ಕಾಮ್ನೊಂದಿಗೆ ಮಾತನಾಡಿದ ವೈದ್ಯರೊಬ್ಬರು, “ಮುಖ್ಯವಾಗಿ ಮೂಗಿನಲ್ಲಿ ಗಾಳಿಯನ್ನು ಬಿಟ್ಟು ಬೇರೆ ಯಾವುದೆ ವಸ್ತುಗಳನ್ನು ಸೇವಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಶ್ವಾಸನಾಳಕ್ಕೆ ಗಂಭೀರ ಹಾನಿಯುಂಟು ಮಾಡುತ್ತದೆ. ಅಷ್ಟೇ ಅಲ್ಲದೆ ನಿಂಬೆ ರಸದಿಂದ ಕೊರೊನಾ ವೈರಸ್ ಸಾಯುತ್ತದೆ ಎಂಬುದಕ್ಕೆ ಯಾವ ವೈಜ್ಞಾನಿಕ ಆಧಾರವು ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು, ಅದರಲ್ಲೂ ಕೊರೊನಾದಂತಹ ಸಮಯದಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಬಾರದು” ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ಅಮೀನ್ ಮಟ್ಟು ಅವರು, “ಲಿಂಬೆ ಹಣ್ಣು ಚಿಕಿತ್ಸೆಯ ಸಲಹೆ ನೀಡಿದ ಮಾಧ್ಯಮೋದ್ಯಮಿ ವಿಜಯ್ ಸಂಕೇಶ್ವರ್, ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು” ಎಂದು ಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ಫೇಸ್ಬುಕ್ ಸ್ಟೇಟಸ್ನಲ್ಲಿ ಕೂಡಾ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮ ಎಂಬ ಫೇಸ್ಬುಕ್ ಖಾತೆಯು, “ಬರೀ ಇದೆ ಆಯ್ತು. ಗೋಮೂತ್ರ ಕುಡಿಯಿರಿ, ಚಪ್ಪಾಳೆತಟ್ಟಿ, ಜಾಗಟೆ ಹೊಡಿರಿ, ಲಿಂಬೆರಸ ಕುಡಿರಿ. ಸಾಮಾನ್ಯನ್ನು ವೈಜ್ಞಾನಿಕವಾಗಿ ಮೇಲೆತ್ತುವುದ ಬಿಟ್ಟು ಬರೀ ಇಂಥ ಮೂಢ ನಂಬಿಕೆಗಳಿಂದ ದೇಶವನ್ನು ಅಧಃ ಪತನದತ್ತ ತೆಗೆದುಕೊಂಡು ಹೋಗುತ್ತಿದ್ದೀರಿ. ಸಂಶಯವೇ ಇಲ್ಲ ಅದಕ್ಕೋಸ್ಕರವೆ ಬಿಜೆಪಿಯನ್ನು ಜನರು ಅಷ್ಟು ವಿರೋಧ ಮಾಡುವುದು. ವೈಜ್ಞಾನಿಕ ತಿಳುವಳಿಕೆ ಇಲ್ಲ, ವೈಚಾರಿಕತೆ ಅಂತೂ ಇಲ್ಲವೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋಹನ್ ಬಲ್ಲಿದವ್ ಅವರು, “ವಿಜಯ ಸಂಕೇಶ್ವರ ಅವರು ವೈದ್ಯಕೀಯ ಶಿಕ್ಷಣ ಎಲ್ಲಿ ಪಡೆದರು” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಂಕೇಶ್ವರರ Some-ಶೋಧನೆಗಳು: ಉಚಿತ ರೇಷನ್ ಕೊಟ್ಟರೆ ಜನ ಕೆಲಸಕ್ಕೆ ಬರಲ್ಲ! ಆಮ್ಲಜನಕ ಸಮಸ್ಯೆ ಬಗೆಹರಿಸಲು ನಿಂಬೆರಸ!