ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದಲ್ಲಿ ಸಂಪುಟದ ಖಾಲಿ ಸ್ಥಾನಗಳನ್ನು ತುಂಬಲು “ಮಾನವ ಸಂಪನ್ಮೂಲ” ಒದಗಿಸಿದ್ದಕ್ಕಾಗಿ ಶಿವಸೇನೆ ಮತ್ತು ಎನ್ಸಿಪಿಗೆ ಬಿಜೆಪಿ ಧನ್ಯವಾದ ಹೇಳಬೇಕು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯ ಮಾಡಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಪಂಚಾಯತಿ ರಾಜ್ ಮತ್ತು ಆರೋಗ್ಯ ಇಲಾಖೆಯ ಹೊಸ ಕೇಂದ್ರ ಸಚಿವರಾದ ಕಪಿಲ್ ಪಾಟೀಲ್ ಮತ್ತು ಭಾರತಿ ಪವಾರ್ ಇಬ್ಬರು ಎನ್ಸಿಪಿಯಲ್ಲಿದ್ದರೆ, ಸಚಿವ ನಾರಾಯಣ್ ರಾಣೆ ಈ ಹಿಂದೆ ಶಿವಸೇನಾ ಮತ್ತು ಕಾಂಗ್ರೆಸ್ನಲ್ಲಿದ್ದರು ಎಂದಿದ್ದಾರೆ.
ಬುಧವಾರ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರದ ನಾಲ್ವರು ಹೊಸ ಕೇಂದ್ರ ಸಚಿವರಲ್ಲಿ ಮೂವರು ಬಿಜೆಪಿ ಹಿನ್ನೆಲೆಯವರಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. “ಪ್ರಧಾನಿ ಮೋದಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡಲು ಅವರಲ್ಲಿ ಪ್ರಮುಖ ಅಂಶಗಳನ್ನು ನೋಡಿರಬೇಕು. ಕೇಂದ್ರ ಸಂಪುಟಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ಒದಗಿಸಿದ್ದಕ್ಕಾಗಿ ಬಿಜೆಪಿಯು ಶಿವಸೇನೆ ಮತ್ತು ಎನ್ಸಿಪಿಗೆ ಧನ್ಯವಾದ ಹೇಳಬೇಕು” ಎಂದು ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಶಿವಸೇನೆ ಸಂಬಂಧ, ಅಮಿರ್ ಖಾನ್-ಕಿರಣ್ ರಾವ್ ಸಂಬಂಧದಂತೆ- ಸಂಜಯ್ ರಾವತ್
ನಾರಾಯಣ್ ರಾಣೆ ಅವರಿಗೆ ಹಂಚಿಕೆಯಾಗಿರುವುದಕ್ಕಿಂತ ಅವರ ಸ್ಥಾನಮಾನ ದೊಡ್ಡದಿದೆ. ನಾರಾಯಣ್ ರಾಣೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದು, ಪ್ರಮುಖ ಖಾತೆಗಳನ್ನು ಹೊಂದಿದ್ದರು” ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ರಾಜ್ಯದ ಕೊಂಕಣ ಪ್ರದೇಶದಲ್ಲಿ ಶಿವಸೇನೆಗೆ ಟಾಂಗ್ ಕೊಡಲು ನಾರಾಯಣ್ ರಾಣೆ ಅವರಿಗೆ ಸಚಿವ ಸ್ಥಾನ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, “ಹೀಗೆ ಹೇಳುವುದು ಕ್ಯಾಬಿನೆಟ್ ಮತ್ತು ಸಂವಿಧಾನವನ್ನು ಅವಮಾನಿಸುವುದಕ್ಕೆ ಸಮವಾಗಿರುತ್ತದೆ” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ನಾಲ್ವರು ಮಂತ್ರಿಗಳಿಗೆ ಉತ್ತಮ ಖಾತೆಗಳು ದೊರೆತಿವೆ. ಎಂಎಸ್ಎಂಇ, ಹಣಕಾಸು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಜನರಿಗೆ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ರಾವತ್ ಹೇಳಿದ್ದಾರೆ. ಜೊತೆಗೆ ಕೇಂದ್ರ ಸಚಿವ ಸಂಪುಟದಿಂದ ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ನಿರ್ಗಮಿಸಿದ ಬಗ್ಗೆ ವಿಷಾದಿಸಿದ್ದಾರೆ.
ರಾಜ್ಯದಿಂದಲು ನಾಲ್ವರು ಕೇಂದ್ರ ಸಂಪುಟವನ್ನು ಸೇರಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗದ ಎ.ನಾರಾಯಣಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕರ್ನಾಟಕದ ವತಿಯಿಂದ ಮೋದಿ ಸಂಪುಟ ಸೇರಿದವರಾಗಿದ್ದಾರೆ.
ಇದನ್ನೂ ಓದಿ: ನಾವು ಪ್ರಮಾಣಪತ್ರ ಹೊಂದಿದ ಗೂಂಡಾಗಳು: ಶಿವಸೇನೆಯ ಸಂಜಯ್ ರಾವತ್