Homeಅಂಕಣಗಳುಗುಜರಾತ್ ಮತ್ತೆ ಬಿಜೆಪಿ ಪಾಲಾಗುವ ಮುನ್ಸೂಚನೆ; ಬದಲಾಗಬೇಕಿರುವ ಕಾಂಗ್ರೆಸ್

ಗುಜರಾತ್ ಮತ್ತೆ ಬಿಜೆಪಿ ಪಾಲಾಗುವ ಮುನ್ಸೂಚನೆ; ಬದಲಾಗಬೇಕಿರುವ ಕಾಂಗ್ರೆಸ್

- Advertisement -
- Advertisement -

ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆದು ಈ ರಾಜ್ಯಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವವರ್‍ಯಾರು ಎಂಬುದು ನಿರ್ಧಾರವಾಗುತ್ತದೆ. ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ನಿಚ್ಚಳ ಎನ್ನುತ್ತವೆ ಎಕ್ಸಿಟ್ ಪೋಲ್‌ಗಳು. ಅಷ್ಟೇ ಅಲ್ಲ, ಇದು ಬಿಜೆಪಿಗೆ ಭರ್ಜರಿ ಜಯವಾಗಲಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮತ್ತಷ್ಟು ಕೃಶಗೊಂಡಿರುವ ಸೂಚನೆಗಳನ್ನು ನೀಡಿವೆ. 25 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆಡಳಿತ ನಡೆಸಿದರೂ, ಅಧಿಕಾರ ವಿರೋಧಿ ಅಲೆ ಬಿಜೆಪಿ ಯಶಸ್ಸನ್ನು ಅಲ್ಪಸ್ವಲ್ಪವೂ ಮುಕ್ಕಾಗಿಸಿಲ್ಲ ಎಂಬುದು ಒಂದೆಡೆಯಾದರೆ, ಕಾಂಗ್ರೆಸ್ ಹಿಂದಿನ ಚುನಾವಣೆಯಲ್ಲಿ ನೀಡಿದಷ್ಟು ಸ್ಪರ್ಧೆಯನ್ನೂ ಈ ಬಾರಿ ಒಡ್ಡಿಲ್ಲ ಎಂಬುದು ಕಳವಳಕಾರಿ ಸಂಗತಿ. ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ತನ್ನ ಅಧ್ಯಕ್ಷಗಾದಿಯನ್ನು ಬದಲಿಸಿದ್ದು, ದಕ್ಷಿಣ ಭಾರತದಿಂದ ಮೂರುವರೆ ಸಾವಿರ ಕಿಲೋಮೀಟರ್‌ಗಳ ಮಹತ್ವಾಕಾಂಕ್ಷೆಯ ಯಾತ್ರೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವುದು- ಇವ್ಯಾವುವೂ ಗುಜರಾತ್ ಚುನಾವಣೆಯಲ್ಲಿ ಮ್ಯಾಜಿಕ್ ಮಾಡಲಾರದೆ ಹೋಗಿವೆ. ಹಿಂದುತ್ವದ ದ್ವೇಷ ಭಾಷಣಗಳು ಈ ಬಾರಿ ಬಿಜೆಪಿ ಪ್ರಚಾರದಲ್ಲಿ ಅಷ್ಟು ಸದ್ದುಮಾಡದೆ ಹೋದರೂ, ಅದರ ಮೌನ ಒಳಹರಿವನ್ನು ನಿರ್ಲಕ್ಷಿಸುವಂತಿಲ್ಲ. ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೋದಿಯವರನ್ನು ರಾವಣನಿಗೆ ಹೋಲಿಸಿ ಆಡಿದ ಒಂದು ಮಾತನ್ನೇ ಹಿಡಿದು, ಮತ್ತೆ ಹುಸಿ ’ರಾಮಭಕ್ತತನ’ವನ್ನು ಉದ್ದೀಪಿಸಿ ಪ್ರಚಾರ ನಡೆಸಿದ್ದು ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ ಗುಜರಾತ್‌ನಲ್ಲಿ ಮೋದಿ-ಷಾ ಅವರ ಹಿಡಿತವನ್ನು ಸಡಿಲಿಸುವುದು ಸಾಮಾನ್ಯ ಮಾತಲ್ಲ ಎಂಬುದು ಈ ಚುನಾವಣೆಗಳಲ್ಲಿ ವ್ಯಕ್ತವಾಗಿದೆ. ಜನಸಾಮಾನ್ಯರನ್ನು ಇಷ್ಟು ಸುಲಭವಾಗಿ ಮತ್ತು ಇಷ್ಟು ದೀರ್ಘ ಕಾಲ ಹೇಗೆ ಮರಳು ಮಾಡಬಹುದು ಎಂಬುದು ಬಿಡಿಸಲಾಗದ ಒಗಟಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕತ್ತುಕುತ್ತಿನ ಸ್ಪರ್ಧೆಯಿರುವಂತೆ ಎಕ್ಸಿಟ್ ಪೋಲ್‌ಗಳು ಬಿಂಬಿಸಿವೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾದರೆ, ಹಿಮಾಚಲದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ ದಾಖಲೆ ಅದರದ್ದಾಗುತ್ತದೆ.

ಮಲ್ಲಿಕಾರ್ಜುನ್ ಖರ್ಗೆ

ಖರ್ಗೆಯವರು ಮಾಡಿದ ಒಂದು ಸಾಮಾನ್ಯ ಟೀಕೆಯನ್ನು ಹಿಡಿದು ಬಿಜೆಪಿ ಪಕ್ಷ ಅವರನ್ನು ಇನ್ನಿಲ್ಲದಂತೆ ಹಂಗಿಸಿತು. “ಮೋದಿ ಯಾವಾಗಲೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ’ಬೇರೆ ಯಾರನ್ನೂ ನೋಡಬೇಡಿ, ಬರೀ ಮೋದಿ ನೋಡಿ ವೋಟು ಹಾಕಿ’. ಎಷ್ಟು ಬಾರಿ ನಾವು ನಿಮ್ಮನ್ನು ನೋಡಬೇಕು? ಕಾರ್ಪೊರೇಷನ್ ಚುನಾವಣೆ, ಎಂಎಲ್‌ಎ ಮತ್ತು ಎಂಪಿ ಚುನಾವಣೆಯಲ್ಲಿಯೂ ನಿಮ್ಮ ಮುಖವನ್ನೇ ನೋಡಬೇಕು. ನಿಮಗೇನು ರಾವಣನ ರೀತಿಯಲ್ಲಿ 100 ಮುಖಗಳಿವೆಯೇ? ಏನದು?” ಎಂದಿದ್ದರು ಖರ್ಗೆ. ಜನಪ್ರಿಯ ಧಾಟಿಯಲ್ಲಿ ಯಾವುದೇ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯನ್ನು ಟೀಕಿಸುವ ಸಾಮಾನ್ಯ ಸಂಗತಿಯಿದು. ಆದರೆ, ಈ ಆರೋಗ್ಯಕರವಾದ ಟೀಕೆಯನ್ನೇ ಬಿಜೆಪಿ ಮತ್ತು ಮೋದಿಯವರು ತಿರುಚಿದರು. ಮೋದಿ ತಮ್ಮ ರ್‍ಯಾಲಿಯೊಂದರಲ್ಲಿ, “ಲಾರ್ಡ್ ರಾಮನನ್ನು ಎಂದಿಗೂ ನಂಬದವರು ಈಗ ರಾಮಾಯಣದಿಂದ ರಾವಣನನ್ನು ಎಳೆದು ತಂದಿದ್ದಾರೆ. ನನ್ನ ವಿರುದ್ಧ ಆ ಬೈಗುಳವನ್ನು ಉಪಯೋಗಿಸಿದ ಮೇಲೆ ಕ್ಷಮೆ ಕೇಳುವುದಿರಲಿ, ಅವರು ವಿಷಾದವನ್ನೂ ವ್ಯಕ್ತಪಡಿಸಿಲ್ಲ ಎಂಬುದು ನನಗೆ ಆಶ್ಚರ್ಯವನ್ನುಂಟುಮಾಡಿದೆ” ಎಂದು ಹೇಳಿದ್ದರು. ರಾವಣನೆಂದು ಕರೆದದ್ದು ಯಾವ ರೀತಿಯಲ್ಲಿಯೂ ಬೈಗುಳವಲ್ಲ; ಕೆಲವೊಂದು ರಾಮಾಯಣಗಳಲ್ಲಿ ರಾವಣನ ಅವಗುಣಗಳನ್ನು ಚಿತ್ರಿಸಿದ್ದರೆ, ಇನ್ನೂ ಕೆಲವು ರಾವಣನ ಗುಣಗಳನ್ನು ಕೊಂಡಾಡಿವೆ. ರಾವಣನನ್ನು ಆರಾಧಿಸುವ ಸಂಸ್ಕೃತಿಯ ಸಮುದಾಯಗಳಿವೆ. ಅವೆಲ್ಲವನ್ನೂ ಹೊರತುಪಡಿಸಿ ಯೋಚಿಸಿದರೂ, ಒಬ್ಬ ಕೆಟ್ಟ ಆಡಳಿತ ನಡೆಸುತ್ತಿದ್ದ ಪುರಾಣದ ರಾಜನಿಗೆ ಇಂದಿನ ಪ್ರಧಾನಿಯವರನ್ನು ಹೋಲಿಸುವುದು ಮಹಾಪರಾಧವೇ? ಇಲ್ಲ ಎಂಬ ವಿವೇಕವನ್ನು ಜನಸಾಮಾನ್ಯರಲ್ಲಿ ಬಿತ್ತುವವರ್‍ಯಾರು?

ಇದನ್ನೂ ಓದಿ: ಗುಜರಾತ್ – ಹಿಮಾಚಲ ಪ್ರದೇಶ: ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಎಂದ ಎಕ್ಸಿಟ್ ಪೋಲ್‌ಗಳು

ಇರಲಿ, ತಾವೇ ಆರೋಪಿಸಿಕೊಂಡ ಆದರ್ಶಪುರುಷ ರಾಮನನ್ನು ಆರಾಧಿಸುವ ಬಿಜೆಪಿ ಮುಖಂಡರಿಗೆ, ಬಿಲ್ಕಿಸ್ ಬಾನೋರನ್ನು ಅತ್ಯಾಚಾರವೆಸಗಿದ, ಆಕೆಯ ಕಂದಮ್ಮನನ್ನು ನೆಲಕ್ಕೆ ಜಜ್ಜಿ ಸಾಯಿಸಿದ ಅಪರಾಧಿಗಳನ್ನು ಅವರ ಜೈಲುಶಿಕ್ಷೆ ಪೂರ್ಣವಾಗುವುದಕ್ಕೂ ಮುನ್ನಾ ಬಿಡುಗಡೆಗೊಳಿಸಿ ಹಾರ ತುರಾಯಿ ಹಾಕಲು ರಾಮಭಕ್ತಿ ಅಡ್ಡಬರಲಿಲ್ಲವೇ? ಬಿಜೆಪಿಯವರ ’ರಾಮಭಕ್ತಿಗೆ’ ಸೋತುಹೋಗಿರುವ ಗುಜರಾತ್ ಜನತೆಯ ಒಂದು ಭಾಗಕ್ಕೆ ಇದು ಅಸಹ್ಯವೆನಿಸಲಿಲ್ಲ ಏಕೆ? ಮೊರ್ಬಿ ಸೇತುವೆಯ ನವೀಕರಣದಲ್ಲಿ ಮೋಸವೆಸಗಿದ ಕಾರಣಕ್ಕೆ ಅದು ಕುಸಿದು ನೂರಾರು ಜನರ ಸಾವಿಗೆ ಕಾರಣವಾದ ದುರಾಡಳಿತ ಬಿಜೆಪಿಯನ್ನು ಬೆಂಬಲಿಸುವ ಜನರಿಗೆ ಕಾಡಲಿಲ್ಲವೇಕೆ? ನಿರುದ್ಯೋಗ, ಬೆಲೆಯೇರಿಕೆ, ಅಸಮಾನತೆಯ ಕಂದರ ಇವೆಲ್ಲ ’ರಾಮಭಕ್ತಿ’ಯ ಕಣ್ಕಟ್ಟಿನಲ್ಲಿ ಕಾಣೆಯಾದವೇ? ಬಹುಶಃ ರಾವಣ ರಾಜ್ಯದಲ್ಲಿಯೂ ಇಷ್ಟು ಭೀಕರ ಬಿಕ್ಕಟ್ಟುಗಳು ತಲೆದೋರಿರಲಿಲ್ಲವೇನೋ! ಅದಕ್ಕೆ ಪುಷ್ಠಿ ನೀಡುವಂತಹ ಕಥಾನಕಗಳೂ ನಮ್ಮಲ್ಲಿವೆ.

ಅರವಿಂದ್ ಕ್ರೇಜಿವಾಲ್

ಕವಿ ಸಿದ್ಧಲಿಂಗಯ್ಯನವರು ಹಲವೆಡೆ ಈ ಪ್ರಸಂಗವನ್ನು ಅವರ ಭಾಷಣಗಳಲ್ಲಿ ಹೇಳುತ್ತಿದ್ದರು; 90ರ ದಶಕದಲ್ಲೊಮ್ಮೆ ಅವರು ಮೈಸೂರು ಭಾಗದಲ್ಲಿ ಸಂಚರಿಸುತ್ತಿದ್ದರಂತೆ. ಆಗ ಒಂದೂರಿನಲ್ಲಿ ಒಂದಜ್ಜಿ ಗೊಳೋ ಎಂದು ಅಳಲು ಶುರುಮಾಡಿತಂತೆ. ‘ಅಯ್ಯೋ ಟಿವಿಯಲ್ಲಿ ನಮ್ಮಪ್ಪಂದು ಏನೂ ಹಾಕಲ್ಲವೆಲ್ಲಪ್ಪ, ಎಲ್ಲಾ ಅವನದ್ದೇ ಅಗೋಯ್ತು’ ಎಂದು ಗೋಳಾಡಿತಂತೆ. ಆಗ ರಾಮಾಯಣ ಟಿವಿಯಲ್ಲಿ ಬರುತ್ತಿದ್ದ ಕಾಲ; ಅದರಲ್ಲಿ ರಾವಣನನ್ನು ವೈಭವೀಕರಿಸಿಲ್ಲ ಎಂಬುದು ಆ ಅಜ್ಜಿಯ ಅಳಲಾಗಿತ್ತು. ಹೀಗೆ ರಾವಣನನ್ನು ಪೂಜಿಸುವ ರಾವಣನ ಒಕ್ಕಲು ಸಮುದಾಯಗಳು ಮೈಸೂರು ಭಾಗದ ಹಲವು ಪ್ರದೇಶಗಳಲ್ಲಿವೆ ಎಂದು ಸಿದ್ದಲಿಂಗಯ್ಯನವರು ಹೇಳುತ್ತಿದ್ದರು. ಇನ್ನು ಎಷ್ಟೋ ಬೌದ್ಧ ಮತ್ತು ಜೈನ ರಾಮಾಯಣಗಳಲ್ಲಿ ರಾವಣನನ್ನು ಕೆಟ್ಟದಾಗಿ ಚಿತ್ರಿಸಿರದ ನಿರೂಪಣೆಗಳಿವೆ. ಖ್ಯಾತ ಸಂಸ್ಕೃತ ವಿದ್ವಾಂಸ ಎಸ್ ಕೆ ರಾಮಚಂದ್ರ ರಾವ್ ಅವರು ’ರಾಮಾಯಣ ಸಮೀಕ್ಷೆ’ ಎಂಬ ಒಂದು ಪುಟ್ಟ ಪುಸ್ತಕದಲ್ಲಿ ಜಗತ್ತಿನ ಹಲವು ಸಂಸ್ಕೃತಿಗಳಲ್ಲಿರುವ ನೂರಾರು ವಿಭಿನ್ನ ರಾಮಾಯಣಗಳ ಬಗ್ಗೆ ಬರೆಯುತ್ತಾರೆ. ’ಬೌದ್ಧರ ರಾಮಾಯಣ’ ಎಂಬ ಮೊದಲ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ: “ರಾವಣನ ಪ್ರಸ್ತಾಪ ಇನ್ನಷ್ಟು ಸ್ಪಷ್ಟವಾಗಿ ಬರುವುದು ಮಹಾಯಾನ ಬೌದ್ಧರ ’ಲಂಕಾವತಾರ ಸೂತ್ರ’ದಲ್ಲಿ. ಕ್ರಿಸ್ತಾಬ್ಧ ಐದು ಅಥವಾ ಆರನೆಯ ಶತಮಾನದಲ್ಲಿ ವಿರಚಿತವಾದ ಈ ಸಂಸ್ಕೃತ ಗ್ರಂಥ ವಿಜ್ಞಾನ ವಾದವನ್ನು ಎತ್ತಿಹಿಡಿಯುತ್ತದೆ. ಚೀಣೀ ಮತ್ತು ಜಪಾನೀ ಬೌದ್ಧ ವಾಙ್ಮಯದಲ್ಲಿ ಈ ಗ್ರಂಥಕ್ಕೆ ತುಂಬ ಮಾನ್ಯತೆಯುಂಟು. ಮಹಾಮತಿಯೆಂಬ ಬೋಧಿ ಸತ್ತ್ವನಿಂದ ಪ್ರಚೋದಿತನಾದ ರಾವಣನು ಬುದ್ಧನನ್ನು ಸಂಧಿಸುವ ವಿಸ್ತಾರವಾದ ವಿವರದಿಂದ ಈ ಸೂತ್ರ ಆರಂಭವಾಗುತ್ತದೆ. ರಾವಣನು ಇಲ್ಲಿ ಲಂಕೆಯ ರಾಕ್ಷಸೇಶ್ವರನಾದ ಜಿಜ್ಞಾಸು, ಜ್ಞಾನಸಂಪನ್ನ, ಶೀಲವಂತ. ಬುದ್ಧನಲ್ಲಿಯೂ ಬೌದ್ಧಧರ್ಮದಲ್ಲಿಯೂ ಶ್ರದ್ಧಾಳು. ಈ ಗ್ರಂಥದ ಮೂರನೇ ಪರಿಚ್ಛೇದದಲ್ಲಿ ಬುದ್ಧನ ಹಲವಾರು ಹೆಸರುಗಳನ್ನು ಹೇಳಿದ್ದಾರೆ. ತಥಾಗತ, ಸ್ವಯಂಭೂ, ವಿನಾಯಕ, ಬ್ರಾಹ್ಮಣ, ವಿಷ್ಣು, ಈಶ್ವರ, ಪ್ರಧಾನ, ಅರಿಷ್ಟನೇಮಿ, ಭಾಸ್ಕರ ಇತ್ಯಾದಿ, ಇತ್ಯಾದಿ. ಈ ಪರ್ಯಾಯನಾಮಗಳ ಪಟ್ಟಿಯಲ್ಲಿ ರಾಮನೆಂಬ ಹೆಸರೂ ಸೇರಿರುವುದು ಸ್ವಾರಸ್ಯವಾಗಿದೆ. ಮುಂದೆ ಹತ್ತನೆಯ ಪರಿಚ್ಛೇದ ಕಲಿಯುಗದ ಅವಧಿಯಲ್ಲಿ ವಾಸನೂ, ಪಾಂಡವ ಕೌರವರೂ, ರಾಮನೂ, ಮೌರ್ಯರಾಜರೂ, ನಂದರಾಜರೂ, ಗುಪ್ತ ರಾಜರೂ ಅನುಕ್ರಮವಾಗಿ ಬರುತ್ತಾರೆಂದು ಹೇಳುತ್ತದೆ. ಆದರೆ ರಾವಣನ ವಿಚಾರ ಹೇಳುತ್ತ ಸೀತಾಪಹರಣ, ರಾಮನೊಂದಿಗೆ ಸಮರವೇ ಮುಂತಾದ ಯಾವ ವಿವರವೂ ಬರುವುದಿಲ್ಲ. ಹೀಗೆ ಸಾವಿರಾರು ರಾಮಾಯಣಗಳಲ್ಲಿ ಏಕರೂಪತೆಯ ರಾಮನಿಲ್ಲ, ಅಥವಾ ಏಕರೂಪತೆಯ ರಾವಣನೂ ಇಲ್ಲ. ಇನ್ನು ರಾಮನನ್ನು ಪ್ರಶ್ನಿಸುವ ಪಠ್ಯಗಳಿಗೂ ಕೊರತೆಯೇನಿಲ್ಲ. ಕನ್ನಡ ಬರಹಗಾರ ಗೌರೀಶ ಕಾಯ್ಕಿಣಿ ಅವರ ಒಂದು ಪುಸ್ತಕದ ಹೆಸರು ’ವಾಲ್ಮೀಕಿ ತೂಕಡಿಸಿದಾಗ’. ಅದರಲ್ಲಿನ ’ಶೂರ್ಪಣಖೀ ಪ್ರಸಂಗ’ ಎಂಬ ಒಂದು ಪ್ರಬಂಧದಲ್ಲಿ “ಬೆಕ್ಕು ಇಲಿಯೊಂದಿಗೆ ಚಿನ್ನಾಟವಾಡುವಂತೆ ಆ ರಾಕ್ಷಸಿಯೊಂದಿಗೆ ರಾಮ ವ್ಯಂಗ್ಯ ವಿನೋದಕ್ಕೆ ತೊಡಗಿದನು. ಪ್ರಕೃತಿಯಿಂದಲೂ ಗಂಭೀರವೃತ್ತಿಯ ವ್ಯಕ್ತಿ ವಿನೋದಕ್ಕೆ ಇಳಿದರೆ ಕೆಲ ಸಲ ವಿಪರೀತಕ್ಕೆ ಮುಳುಗುತ್ತದೆ. ಏಕೆಂದರೆ ಇತರರು ಅದನ್ನು ಗಂಭೀರವಾಗಿಯೇ ಗ್ರಹಿಸುತ್ತಾರೆ. ಅದೊಂದು ’ಪರಿಹಾಸ ವಿಜಲ್ಪಿತ’ ’ಪರಮಾರ್ಥದಲ್ಲಿ ತೆಗೆದುಕೊಳ್ಳುವುದರಲ್ಲಿ ಎಂದು ತಿಳಿಯುವುದಿಲ್ಲ” ಎನ್ನುತ್ತಾರೆ. ರಾಮನ ಬಗ್ಗೆ ಇದೊಂದು ಸೌಮ್ಯವಾದ ಪ್ರತಿಭಟನೆ. ಇಂತಹ ಟೀಕೆಗಳಿಂದ ಹಿಡಿದು, ಮಾನವಶಾಸ್ತ್ರ-ಸಮಾಜಶಾಸ್ತ್ರಗಳ ನೆಲೆಯಲ್ಲಿ ರಾಮ ಮತ್ತು ರಾಮಾಯಣಗಳನ್ನು ವಿಶ್ಲೇಷಿಸಿರುವ ಪಠ್ಯಗಳಿವೆ. ರಾಮಾಯಣ ಕಥೆಯ ಪುರಾಣಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಿ ರಾಮನನ್ನು ಬಾಬಾಸಾಹೇಬರೂ ತೀವ್ರವಾಗಿ ವಿಮರ್ಶೆಗೆ ಒಡ್ಡಿದ್ದರು. ಇಷ್ಟೆಲ್ಲಾ ಹೇಳಿದ್ದು, ಇಂತಹ ವಿಮರ್ಶೆಗೆ ಒಡ್ಡುವ ಪರಂಪರೆ ಹಿಂದಿನಿಂದಲೂ ಇದೆ ಎಂಬ ಕಾರಣಕ್ಕೆ. ಇಂತಹ ಬಹುತ್ವದ ಮತ್ತು ಪ್ರಶ್ನಿಸುವ ಪರಂಪರೆಯಿಂದ ಬಿಜೆಪಿಯಂತೂ ದೂರಕ್ಕೆ ಜಿಗಿದಿದೆ. ಆದರೆ, ಜಾತ್ಯತೀತ ಪರಂಪರೆಯ ಮಾತುಗಳನ್ನಾಡುತ್ತಿದ್ದ ಕಾಂಗ್ರೆಸ್‌ಗೆ ಏನಾಗಿದೆ?

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಚುನಾವಣೆಯಿಂದ ರಾಮಾಯಣಕ್ಕೆ ಜಿಗಿದಿದ್ದಕ್ಕೆ ಕಾರಣವಿದೆ ಮತ್ತು ಸಂಬಂಧವೂ ಇದೆ. ಹಲವು ರಾಜ್ಯಗಳಲ್ಲಿ ಬಿಜೆಪಿಯನ್ನು ಎದುರಿಸಲು ಶಕ್ತಿಯಿರುವ ಕಾಂಗ್ರೆಸ್ ಪಕ್ಷ ಸಂಘ ಪರಿವಾರದ ಸಿದ್ಧಾಂತವನ್ನು ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪೊಸಿಷನ್‌ಅನ್ನು ಆಯ್ದುಕೊಳ್ಳಲು ಹಿಂಜರಿಯುತ್ತಿದೆ. ಖರ್ಗೆ ಅವರ ಹೇಳಿಕೆ ತಾಜಾ ಉದಾಹರಣೆಯಾಗಿದ್ದರೆ, ರಾಮಮಂದಿರ ಕಟ್ಟುವ ವಿಚಾರದಲ್ಲಿಯೂ ಸಂಘ ಪರಿವಾರದ ಕುತ್ಸಿತ ನಿಲುವಿಗೆ ಗಟ್ಟಿಯಾದ ವಿರೋಧಿ ನಿಲುವನ್ನು ತಳೆಯಲು ಕಾಂಗ್ರೆಸ್ ವಿಫಲವಾಯಿತು. ಖರ್ಗೆಯವರ ಟೀಕೆಯನ್ನು ಕೂಡ ಇನ್ನಷ್ಟು ತೀವ್ರವಾಗಿ ಈ ಸಂದರ್ಭದಲ್ಲಿ ಸಮರ್ಥಿಸಿಕೊಳ್ಳಬೇಕಿತ್ತು. ಅದು ಆಗಲೇ ಇಲ್ಲ. ಈಗಾಗಲೆ ಎಎಪಿ ಪಕ್ಷ ಮೃದು ಹಿಂದುತ್ವ ಧೋರಣೆಯನ್ನು ತಳೆದು ಬಿಜೆಪಿಯ ಪ್ರತಿಪಕ್ಷವಾಗಲು ಅಥವಾ ಅವರಿಂದ ಅಧಿಕಾರ ಕಸಿಯಲು ಹಲವೆಡೆ ಪ್ರಯತಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಎಲ್ಲಾ ಸಂಗತಿಗಳಲ್ಲಿಯೂ, ಕಟ್ಟಾ ಜಾತ್ಯತೀತವಾದ, ಬಹುತ್ವದ ತಿಳಿವಿನ, ಅಲ್ಪಸಂಖ್ಯಾತ ಹಾಗೂ ದಮನಿತರನ್ನು ಪ್ರತಿನಿಧಿಸುವ ಪಕ್ಷವಾಗಿ ಕಾಂಗ್ರೆಸ್ ರೂಪಾಂತರ ಹೊಂದದ ಹೊರತು ಇಂತಹ ಗುಜರಾತ್ ಬಿಜೆಪಿ ಗೆಲುವುಗಳನ್ನು ಇನ್ನೆಷ್ಟು ಎಣಿಸಬೇಕೋ? ರಾಜಕೀಯ ಸ್ಪೆಕ್ಟ್ರಂನಲ್ಲಿ ಕಾಂಗ್ರೆಸ್ ಹಿಂದುತ್ವದ ಆಸುಪಾಸಿನಲ್ಲಿಯೇ ತನ್ನ ಸ್ಥಾನವನ್ನು ಹುಡುಕಹೊರಟರೆ ಕೋಮುವಾದಿಗಳ ಕೆಲಸ ಇನ್ನಷ್ಟು ಸುಲಭವಾದೀತಷ್ಟೇ! ಅಲ್ಲಿಂದ ದೂರ ಸರಿದು ತರ್ಕ, ವಿವೇಕ, ಬಹುತ್ವಗಳ ಆಧಾರದ ಮೇಲೆ ಸಂವಿಧಾನ ಪ್ರಣೀತ ಭಾರತ ಕಟ್ಟಲು ಮುಂದಾಗುವುದೊಳಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಉತ್ತಮ ವಿಮರ್ಶೆ..,
    ಆದರೆ ಬಿಜೆಪಿ ನಿಮ್ಮ ನೀರೀಕ್ಷೆಗೆ ಸರಿಯಾಗಿ ಇರಬೇಕು ಎಂದರೆ ಹೇಗೆ…!!!???

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...