ಕೋವಿಡ್ ಎರಡನೇ ಅಲೆಯಿಂದ ಚೇತರಿಸಿಕೊಳ್ಳುವ ಮೊದಲೇ ಒಮೈಕ್ರಾನ್ ವೇರಿಯಂಟ್ ದಾಳಿಯಿಟ್ಟಿದೆ. ಬೆಂಗಳೂರಿನಲ್ಲಿ ಇಬ್ಬರಿಗೆ ಒಮೈಕ್ರಾನ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಬೆನ್ನಲ್ಲೆ ದಕ್ಷಿಣ ಆಫ್ರಿಕಾದಿಂದ ಬಂದ 10 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಸರ್ಕಾರಕ್ಕೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ.
ನವೆಂಬರ್ 12 ರಿಂದ 22 ರ ನಡುವೆ ಬೆಂಗಳೂರಿಗೆ ಬಂದ 10 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರಿಗೆ ಕೊರನಾ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದರು ಅವರು ನಾಪತ್ತೆಯಾಗಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಕೊಟ್ಟ ವಿಳಾಸಗಳು ತಪ್ಪಾಗಿವೆ. ಅಲ್ಲದೆ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಆರೋಗ್ಯ ಇಲಾಖೆಯು ಈ ಸಂಬಂಧ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದು ಅವರ ಪತ್ತೆಗೆ ಮನವಿ ಮಾಡಿದೆ.
ಒಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) 40 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕೋವಿಡ್ -19 ಬೂಸ್ಟರ್ ಡೋಸ್ ಅನ್ನು ಒದಗಿಸಲು ಶಿಫಾರಸು ಮಾಡಿದೆ.
ಇನ್ನೂ ಲಸಿಕೆ ಪಡೆಯದ ಅಪಾಯದಲ್ಲಿರುವ ಎಲ್ಲಾ ಜನರಿಗೆ ವ್ಯಾಕ್ಸಿನೇಷನ್ ಮಾಡುವುದು ಮತ್ತು 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಅನ್ನು ಪರಿಗಣಿಸುವುದು, ಮೊದಲು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸುವುದು ಒಮೈಕ್ರಾನ್ ಅನ್ನು ತಟಸ್ಥಗೊಳಿಸಲು ಸಾಕಾಗುತ್ತದೆ ಎಂದು INSACOG ತನ್ನ ವಾರದ ಬುಲೆಟಿನ್ನಲ್ಲಿ ಹೇಳಿದೆ.
ದಕ್ಷಿಣ ಆಫ್ರಿಕಾದಲ್ಲಿ ಗುರುವಾರ ಒಂದೇ ದಿನ 11,535 ಹೊಸ ಪ್ರಕರಣಗಳು ದಾಖಲಾಗಿವೆ. ವಿಜ್ಞಾನಿಗಳು ಹೊಸ ರೂಪಾಂತರದ ಬಗ್ಗೆ ಜಗತ್ತನ್ನು ಎಚ್ಚರಿಸಿದಾಗ ಒಂದು ವಾರದಲ್ಲಿ ಐದು ಪಟ್ಟು ಪ್ರಕರಣಗಳು ಹೆಚ್ಚಾಗಿವೆ.
ಇದನ್ನೂ ಓದಿ; ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ