ದೇಶವ್ಯಾಪಿ ಮುಷ್ಕರ ನಡೆಸುವ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ನೌಕರರಿಗೆ ದೀಪಾವಳಿ ಹಬ್ಬಕ್ಕೂ ಮೊದಲೇ ವೇತನ ನೀಡಲಾಗುವುದು ಉಭಯ ನಿಗಮಗಳ ಆಡಳಿತ ಮಂಡಳಿ ಭರವಸೆ ನೀಡಿದೆ.
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ನೌಕರರು ವೇತನ ಬಾಕಿ ಉಳಿಸಿಕೊಂಡಿರುವುದನ್ನು ಶೀಘ್ರವೇ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ನೌಕರರ ಒತ್ತಡಕ್ಕೆ ಮಣಿದಿರುವ ಆಡಳಿತ ಮಂಡಳಿಗಳು ನೌಕರರಿಗೆ ವೇತನ ನೀಡುವುದಾಗಿ ತಿಳಿಸಿವೆ.
ನಮ್ಮ ಸ್ವಂತ ಸಂಪನ್ಮೂಲದಿಂದ ನೌಕರರಿಗೆ ದೀಪಾವಳಿ ಹಬ್ಬಕ್ಕೂ ಮೊದಲೇ ವೇತನ ನೀಡುತ್ತೇವೆ ಜನರಿಗೆ ಸೇವೆ ಒದಗಿಸುತ್ತಿರುವುದರಿಂದ ತಿಂಗಳಿಗೆ 1600 ಕೋಟಿ ರೂಪಾಯಿ ಆದಾಯ ಸೃಷ್ಟಿಯಾಗುತ್ತಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಪುರ್ ವಾರ್ ಹೇಳಿದ್ದಾರೆ.
ಎಂಟಿಎನ್ಎಲ್ ಪ್ರಧಾನ ವ್ಯವಸ್ಥಾಪಕ ಮಾತನಾಡಿ ಆಗಸ್ಟ್ 2019ರ ವೇತನವನ್ನು ಅಕ್ಟೋಬರ್ 25ರೊಳಗೆ ನೀಡುವುದಾಗಿ ಹೇಳಿದ್ದಾರೆ.
ಬಿಎಸ್ಎನ್ಎಲ್ ನೌಕರರನ್ನು ಹೊರಗಿಟ್ಟರೂ ಎಂಟಿಎನ್ಎಲ್ ನೌಕರರೇ 22 ಸಾವಿರ ಮಂದಿ ಇದ್ದಾರೆ. ಇವರಿಗೆ ಆಗಸ್ಟ್ ಮತ್ತು ಸೆಪ್ಟಂಬರ್ ವೇತನ ನೀಡಿಲ್ಲ.
ಈ ಮಧ್ಯೆ ಎಂಟಿಎನ್ಎಲ್ ಕಾರ್ಯನಿರ್ವಾಹಕ ಅಸೋಸಿಯೇಷನ್ ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ಪ್ರಧಾನಿ ಕಚೇರಿಗೆ ಮೇಣದ ಬತ್ತಿ ನಡಿಗೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಇನ್ನೊಂದೆಡೆ ಈಗ ಸೃಷ್ಟಿಯಾಗುತ್ತಿರುವ ಆದಾಯ ಸಾಕಾಗುತ್ತಿಲ್ಲ. ಕಾರ್ಯಾಚರಣೆ ವೆಚ್ಚ ಮತ್ತು ಶಾಸನಬದ್ದ ಪಾವತಿಗೆ ಹೆಚ್ಚು ಹಣ ಬೇಕಾಗಿದೆ. ಸರ್ಕಾರದ ಖಾತ್ರಿಯ ಮೇಲೆ ಬ್ಯಾಂಕುಗಳಿಂದ ನಿಧಿ ಸಂಗ್ರಹಿಸಲು ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.