ಉಪಚುನಾವಣೆಯಲ್ಲಿ ನಾನು ಯಾರಿಗೂ ಬೆಂಬಲಿಸುವುದಿಲ್ಲ, ತಟಸ್ಥಳಾಗಿರುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ನೀವು ಯಾರನ್ನು ಬೆಂಬಲಿಸುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಜನ ನನ್ನನ್ನು ಚುನಾಯಿಸಿರುವುದು ಕೆಲಸ ಮಾಡಲಿಕ್ಕೆ. ಎಲ್ಲಾ ಚುನಾವಣೆಗಳಲ್ಲಿಯೂ ಭಾಗವಹಿಸಿ ಪ್ರಚಾರ ಮಾಡಬೇಕೆಂದು ಜನ ನನ್ನ ಬಳಿ ವಿನಂತಿಸಿಲ್ಲ. ಹಾಗಾಗಿ ಈ ಉಪಚುನಾವಣೆಯಲ್ಲಿ ತಟಸ್ಥಳಾಗಿರುತ್ತೇನೆ ಎಂದಿದ್ದಾರೆ.
ಯಾರಿಗೂ ಕೂಡ ನೋಯಿಸಬಾರದು ಎಂಬುದು ನನ್ನ ಉದ್ದೇಶ. ನಾನು ಚುನಾವಣೆಗೆ ನಿಂತಾಗ ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿ ಹಾಕದೆ ದೊಡ್ಡ ಬೆಂಬಲ ನೀಡಿದ್ದರು. ಅದೇ ರೀತಿ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದಿಂದಲೇ ನಾನು ಚುನಾವಣೆಗೆ ನಿಂತಿದ್ದು ಮತ್ತು ಅವರೇ ಕಷ್ಟಪಟ್ಟು ನನ್ನನ್ನು ಗೆಲ್ಲಿಸಿದ್ದು. ಹಾಗಾಗಿ ಯಾರ ಪರವಾಗಿಯೂ ನಾನು ಚುನಾವಣೆಯಲ್ಲಿ ಬೆಂಬಲ ನೀಡವುದಿಲ್ಲ ಎಂದಿದ್ದಾರೆ.
ಒಂದು ಪಕ್ಷಕ್ಕೆ ಬೆಂಬಲ ನೀಡಿದ್ರೆ ಇನ್ನೊಂದು ಪಕ್ಷಕ್ಕೆ ಬೇಜಾರಾಗುತ್ತದೆ ಹಾಗಾಗಿ ತಟಸ್ಥರಾಗಿರುತ್ಥೇನೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಅವರು ಬಿಜೆಪಿ ಪಕ್ಷದ ಪರವಾಗಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಪ್ರಚಾರ ನಡೆಸುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಸದೆಯವರ ಆಪ್ತರ ಜೊತೆ ಮಾತುಕತೆ ನಡೆಸಿ ಬೆಂಬಲ ಕೋರಿದ್ದರು.