ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದಿರುವ ಆರೋಪದ ಮೇಲೆ ಮಹಾರಾಷ್ಟ್ರದ ಯವತ್ಮಲ್ ಪೊಲೀಸರು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಜಯ್ ರಾವತ್ ವಿರುದ್ಧ ಬಿಜೆಪಿ ಯವತ್ಮಲ್ ಸಂಚಾಲಕ ನಿತಿನ್ ಭೂತಾಡ ಅವರು ದೂರು ದಾಖಲಿಸಿದ್ದಾರೆ. ರಾವುತ್ ಅವರು ಡಿಸೆಂಬರ್ 11ರಂದು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದಿದ್ದಾರೆ ಎಂದು ನಿತಿನ್ ಭೂತಾಡ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ. ರಾವತ್ ಅವರು ‘ಸಾಮ್ನಾ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.
ರಾವತ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 (ಎ), 505, (2) ಮತ್ತು 124 (ಎ) ಅಡಿಯಲ್ಲಿ, ವಿವಿಧ ಗುಂಪುಗಳ ನಡುವೆ ಧ್ವೇಷ ಉತ್ತೇಜಿಸುವುದು ಮತ್ತು ಇತರ ಅಪರಾಧಗಳ ಆರೋಪದ ಮೇಲೆ ಯವತ್ಮಲ್ನ ಉಮರ್ಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಜಯ್ ರಾವತ್, “ನಾನು ಪ್ರಧಾನಿ ವಿರುದ್ಧ ಮಾತನಾಡಿದ ಕಾರಣ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ದೇಶದಲ್ಲಿ ಇನ್ನೂ ಪ್ರಜಾಪ್ರಭುತ್ವ ಇದೆ” ಎಂದಿದ್ದಾರೆ.
“ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಮುಖ್ಯಮಂತ್ರಿಗಳ ಆಯ್ಕೆಯನ್ನು ಉಲ್ಲೇಖಿಸಿರುವ ಸಂಜಯ್ ರಾವತ್, ರಾಜ್ಯಗಳಿಗೆ ಯಾರು ಮುಖ್ಯಮಂತ್ರಿಯಾಗಬೇಕೆಂದು ಬಿಜೆಪಿಯ ಕೇಂದ್ರ ನಾಯಕರು ನಿರ್ಧಾರ ಮಾಡುತ್ತಾರೆ. ಇದರಿಂದ ರಾಜ್ಯಗಳ ಬಿಜೆಪಿ ನಾಯಕರೇ ಆಶ್ಚರ್ಯಪಡುವಂತಾಗಿದೆ. ‘ಬಿಜೆಪಿ ಕಾಂಗ್ರೆಸ್ ಆಗಿ ಬದಲಾಗುತ್ತಿದೆ” ಎಂದಿದ್ದಾರೆ.
ಇದನ್ನೂ ಓದಿ: CM V/s Governor: ತಾರಕಕ್ಕೇರಿದ ಮುಸುಕಿನ ಗುದ್ದಾಟ; ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ