ಸೆನ್ಸಾರ್ ಪ್ರಮಾಣಪತ್ರ ನೀಡಲು ಮುಂಬೈನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ನಲ್ಲಿ ಲಂಚದ ಆರೋಪದ ಹಿನ್ನೆಲೆ ಸಿಬಿಎಫ್ಸಿ ಅಧಿಕಾರಿಗಳು ಮತ್ತು ಮೂವರು ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ತಮ್ಮ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಮುಂಬೈನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ನಲ್ಲಿ(ಸಿಬಿಎಫ್ಸಿ) ಲಂಚ ಪಡೆದಿದ್ದಾರೆ ಎಂದು ತಮಿಳು ನಟ ವಿಶಾಲ್ ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿಶಾಲ್ ಅವರು ತಮ್ಮ ತಮಿಳು ಚಿತ್ರ ‘ಮಾರ್ಕ್ ಆಂಟೋನಿಯ’ ಹಿಂದಿ ಆವೃತ್ತಿಯ ಬಿಡುಗಡೆಯ ಪ್ರಮಾಣ ಪತ್ರಕ್ಕೆ CBFC ಗೆ 6.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ಬೇಡಿಕೆ ಇಡಲಾಗಿತ್ತು ಎಂದು ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳು ಆರೋಪಿತ ಸಿಬಿಎಫ್ಸಿ ಸಿಬ್ಬಂದಿಯ ಹೆಸರು ಬಹಿರಂಗಪಡಿಸಿಲ್ಲ. ಆದರೆ ಇತರ ಮೂವರನ್ನು ಮೆರ್ಲಿನ್ ಮೆನಗಾ, ಜೀಜಾ ರಾಮದಾಸ್ ಮತ್ತು ರಾಜನ್ ಎಂ ಎಂದು ಗುರುತಿಸಲಾಗಿದೆ. ಅವರು ಸೆಪ್ಟೆಂಬರ್ನಲ್ಲಿ 7 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ನಲ್ಲಿ ಹೆಸರಿಸಿರುವ ವ್ಯಕ್ತಿಗಳ ಸ್ಥಳಗಳು ಸೇರಿ ಮುಂಬೈನಲ್ಲಿ 4 ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.
24 ಗಂಟೆಗಳಲ್ಲಿ ತಮ್ಮ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ಲಂಚ ಕೇಳಿದ್ದರು ಎಂದು ವಿಶಾಲ್ ಆರೋಪಿಸಿದ್ದರು.
ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗಮನಹರಿಸಬೇಕು. ಚಿತ್ರದ ಸೆನ್ಸಾರ್ಗಾಗಿ ಆನ್ಲೈನ್ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಆದರೆ ನಾವು ಕಚೇರಿಗೆ ಭೇಟಿಕೊಟ್ಟಾಗ ವ್ಯಕ್ತಿಯೊಬ್ಬರು ಸರ್ಟಿಫಿಕೇಟ್ ನೀಡಲು 6.5 ಲಕ್ಷ ಲಂಚ ಕೇಳಿದ್ದಾರೆ. ಚಿತ್ರವನ್ನು ವೀಕ್ಷಿಸಿ ಪರಿಶೀಲನೆ ನಡೆಸಲು 3 ಲಕ್ಷ ಮತ್ತು ಸರ್ಟಿಫಿಕೇಟ್ ನೀಡಲು 3.5 ಲಕ್ಷ ಕೇಳಿದ್ದರು. ಬೇರೆ ದಾರಿ ಇಲ್ಲದೆ ಹಣ ಪಾವತಿಸಿ ಸರ್ಟಿಫಿಕೇಟ್ ಪಡೆದಿದ್ದೇನೆ ಎಂದು ವಿಶಾಲ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ವಿಶಾಲ್ ಆರೋಪಗಳ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರತಿಕ್ರಿಯಿಸಿದ್ದು, ಸರ್ಕಾರವು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಇದನ್ನು ಓದಿ: ನಾಂದೇಡ್: ಸರಣಿ ಸಾವು ಸಂಭವಿಸಿದ ಸರ್ಕಾರಿ ಆಸ್ಪತ್ರೆಯ ಡೀನ್ ವಿರುದ್ಧ ಎಫ್ಐಆರ್ ದಾಖಲು