ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರಿಗೆ ಸಂಬಂಧಿಸಿದ ವಿವರಣೆಗಳನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕಿತ್ತು ಬಿಸಾಕಿದೆ.
ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ಮೊದಲ ಪಾಠವಾಗಿ ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಪಾಠವನ್ನು ಇಡಲಾಗಿದೆ. ಭಾರತದ ಸಮಾಜ ಸುಧಾಕರ ಪರಿಚಯವನ್ನು ಈ ಪಾಠವು ಮಕ್ಕಳಿಗೆ ಮಾಡಿಕೊಡುತ್ತದೆ. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠದಲ್ಲಿ- ಬ್ರಹ್ಮ ಸಮಾಜದ ಸ್ಥಾಪಕ ರಾಜರಾಮ ಮೋಹನ್ ರಾಯ್, ಪ್ರಾರ್ಥನಾ ಸಮಾಜದ ಆತ್ಮಾರಾಮ್ ಪಾಂಡುರಂಗ, ಮಹಾದೇವ ಗೋವಿಂದ ರಾನಡೆ, ಸತ್ಯಶೋಧಕ ಸಮಾಜದ ಮಹಾತ್ಮ ಜ್ಯೋತಿಬಾ ಫುಲೆ, ಆರ್ಯ ಸಮಾಜದ ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ ಮಿಷನ್ನ ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಪರಿಚಯ ಸೇರಿದಂತೆ ಥಿಯಸಾಫಿಕಲ್ ಸೊಸೈಟಿ, ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್ ಖಾನ್, ಶ್ರೀ ನಾರಾಯಣಗುರುಗಳ ಕುರಿತು ತಿಳಿಸಿಕೊಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾದ ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 2ರ ಪುಸ್ತಕದ ಪಾಠ ನಾಲ್ಕು “ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ”ಯಲ್ಲಿ ಸಮಾಜ ಸುಧಾರಕರನ್ನು ಪರಿಚಯಿಸಲಾಗಿತ್ತು. ಈಗ ಉಳಿಸಿಕೊಳ್ಳಲಾಗಿರುವ ಪಠ್ಯದ ಜೊತೆಗೆ ಮಹಿಳಾ ಸಮಾಜ ಸುಧಾರಕಿಯರ ಪರಿಚಯವನ್ನೂ ಮಕ್ಕಳಿಗೆ ಮಾಡಿಕೊಡಲಾಗಿತ್ತು. ಸಾವಿತ್ರಿಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತ್ ರಮಾಬಾಯಿ ಅವರ ವಿವರಗಳಿದ್ದವು. ಮಹಿಳಾ ಸಮಾಜ ಸುಧಾರಕಿಯರ ಪಠ್ಯವನ್ನು ಚಕ್ರತೀರ್ಥ ಸಮಿತಿ ಕಿತ್ತು ಬಿಸಾಡಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ತಾಯಂದಿರ ಮಾಹಿತಿಯನ್ನು ತೆರವು ಮಾಡಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ.
ನಾರಾಯಣಗುರುಗಳ ವಿವರಣೆ ಆದ ಮೇಲೆ “ಮಹಿಳಾ ಸಮಾಜ ಸುಧಾರಕಿಯರು” ಉಪಶೀರ್ಷಿಕೆಯಲ್ಲಿ ಸಾವಿತ್ರಿಬಾಯಿ ಫುಲೆ, ತಾರಾಬಾಯಿ ಶಿಂದೆ, ಪಂಡಿತ್ ರಮಾಬಾಯಿ ಅವರ ಪರಿಚಯಗಳನ್ನು ಮಾಡಿಕೊಡಲಾಗಿತ್ತು.
ಹಳೆಯ ಪಠ್ಯದಲ್ಲಿ ಏನಿದೆ?
ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ ಭಾರತದ ಪ್ರಸಿದ್ಧ ಸಮಾಜ ಸುಧಾರಕರು, ಶೈಕ್ಷಣಿಕ ಸುಧಾರಕರು ಹಾಗೂ ಕವಯಿತ್ರಿ. ತಮ್ಮ ಪತಿ ಜ್ಯೋತಿ ಬಾ ಫುಲೆಯವರೊಡಗೂಡಿ ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರಲ್ಲದೆ ತಾವೇ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಬಾಲ ವಿಧವೆಯರಿಗಾಗಿ ಪುನರ್ ವಸತಿ ಕೇಂದ್ರಗಳನ್ನು ತೆರೆಯುವ ಮೂಲಕ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸಲು ಪ್ರಯತ್ನ ಮಾಡಿದರು. ಜಾತಿ ಪದ್ಧತಿ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಡಿದರು. ಅದಕ್ಕಾಗಿ ಅವರು ಸಮಾಜದ ವಿರೋಧವನ್ನು ಎದುರಿಸಬೇಕಾಯಿತು.
ಪತಿ ಜ್ಯೋತಿ ಬಾ ಫುಲೆಯ ಸಾಮಾಜಿಕ ಹೋರಾಟಗಳಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದರು. ಅವರ ಸಾವಿನ ನಂತರ ‘ಸತ್ಯ ಶೋಧಕ ಸಮಾಜ’ವನ್ನು ಮುನ್ನಡೆಸಿದರು. ಪ್ಲೇಗ್ ಮಹಾಮಾರಿಯ ರೋಗಕ್ಕೆ ತುತ್ತಾದವರ ಸೇವೆಯನ್ನು ತಮ್ಮ ಮಗನೊಡನೆ ಸೇರಿ ಮಾಡುತ್ತಿರುವಾಗಲೇ ಪ್ಲೇಗ್ ರೋಗಕ್ಕೆ ತುತ್ತಾದರು.
ತಾರಾಬಾಯಿ ಶಿಂದೆ
ತಾರಾಬಾಯಿ ಶಿಂದೆ ಮಹಾರಾಷ್ಟ್ರದ ಮೊದಲ ಮಹಿಳಾ ಹೋರಾಟಗಾರ್ತಿ. ಜ್ಯೋತಿ ಬಾ ಫುಲೆಯವರ ಸತ್ಯಶೋಧಕ ಸಮಾಜದ ಸಕ್ರಿಯ ಸದಸ್ಯರಾಗಿ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬಾಲ ವಿಧವೆಯರ ರಕ್ಷಣೆ ಮತ್ತು ವಿಧವಾ ಪುನರ್ವಿವಾಹಕ್ಕೆ ಬೆಂಬಲ ನೀಡಿದರು. ತಮ್ಮ ಕೃತಿ ‘ಸ್ತ್ರೀ- ಪುರುಷ ತುಲನಾ’ದಲ್ಲಿ ಮಹಿಳೆಯ ಶೋಷಣೆಯನ್ನು ಉಗ್ರವಾಗಿ ಪ್ರತಿಭಟಿಸಿದ್ದಾರೆ.
ಪಂಡಿತ್ ರಮಾಬಾಯಿ
ಪಂಡಿತ್ ರಮಾಬಾಯಿ ಅವರು ಭಾರತದ ಪ್ರಸಿದ್ಧ ಕ್ರೈಸ್ತ ಸಮಾಜ ಸುಧಾರಕಿ. ಅನಂತಶಾಸ್ತ್ರಿ ಡೊಂಗ್ಸೆ ಹಾಗೂ ಲಕ್ಷ್ಮೀಬಾಯಿ ದಂಪತಿಗಳ ಪುತ್ರಿಯಾಗಿ ಪಶ್ಚಿಮಘಟ್ಟದ ಗಂಗಾಮೂಲ ಎಂಬಲ್ಲಿ ಜನಿಸಿದರು. ಅಂದಿನ ಸಾಮಾಜಿಕ ಪರಿಸ್ಥಿತಿಗೆ ವಿರುದ್ಧವಾಗಿ ಶಿಕ್ಷಣ ಪಡೆದರು. ಇಂಗ್ಲೇಡಿನಲ್ಲಿ ಓದುವಾಗ ಕ್ರೈಸ್ತಧರ್ಮೀಯರಾದರು. ಭಾರತೀಯ ಮಹಿಳೆಯ ಉದ್ಧಾರಕ್ಕಾಗಿ ಜೀವನವನ್ನೇ ಮುಡುಪಿಟ್ಟು 1889ರಲ್ಲಿ ‘ಮುಕ್ತಿ ಮಿಷನ್’ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯು ವಿಧವೆಯರು, ಅನಾಥರು ಹಾಗೂ ಕುಡಕರಿಗೆ ಜೀವನೋಪಾಯ ಕಲ್ಪಿಸುತ್ತಾ ಇಂದಿಗೂ ಕಾರ್ಯಶೀಲವಾಗಿದೆ.
ಹೀಗೆ ಮಹಿಳಾ ಸಮಾಜ ಸುಧಾರಕಿಯರ ವಿವರಗಳನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ನೀಡಿತ್ತು. ಆದರೆ ಈಗಿನ ಸಮಿತಿಗೆ ಈ ಭಾಗ ಬೇಡವೆನಿಸಿದೆ. ಸಮಾಜ ಸುಧಾರಕರ ವಿಸ್ತೃತ ಪಠ್ಯವನ್ನು ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ನೀಡಲಾಗಿದೆ. ಆದರೆ ನಾರಾಯಣಗುರುಗಳ ಪಾಠವನ್ನು ಕಟ್ ಮಾಡಲಾಗಿದೆ.