ಭಾನುವಾರ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಭಾಗವಾಗಿ ನಡೆಯುತ್ತಿದ್ದ ಬಿಜೆಪಿ ರೋಡ್ಶೋ ವೇಳೆ ಬಿಜೆಪಿಯ ಎರಡು ಬಣಗಳ ನಡುವೆ ಗಲಾಟೆ ನಡೆದ ಪರಿಣಾಮ ರೋಡ್ ಶೋ ಮತ್ತು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಇತ್ತೀಚಿಗೆ ಭಾರೀ ಭ್ರಷ್ಟಾಚಾರ ನಡೆಸಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಮತ್ತು ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್ ಬಣದ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ, ಕೈಕೈ ಮಿಲಾಯಿಸಿದ ಪರಿಣಾಮ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.
ಭ್ರಷ್ಟಾಚಾರ ಪ್ರಕರಣದ ನಂತರ ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿದೆ. ಶಿವಕುಮಾರ್ರವರು ತಮಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ ಭ್ರಷ್ಟಾಚಾರದ ಪ್ರಮುಖ ಆರೋಪಿ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಭಾನುವಾರ ಚನ್ನಗಿರಿಯಲ್ಲಿ ನಡೆಯುತ್ತಿದ್ದ ವಿಜಯ ಸಂಕಲ್ಪ ಯಾತ್ರೆ ರೋಡ್ ಶೋನಲ್ಲಿ ಜಿಲ್ಲೆಯ ಸಂಸದ ಜಿ.ಎಂ ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಎಂಎಲ್ಸಿ ರವಿಕುಮಾರ್ ಮತ್ತು ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಭಾಗವಹಿಸಿದ್ದರು. ಪ್ರಚಾರ ವಾಹನದಲ್ಲಿ ಮಲ್ಲಿಕಾರ್ಜುನ್ ಇದ್ದುದರಿಂದ ನಮ್ಮ ನಾಯಕರಿಗೂ ಅವಕಾಶ ನೀಡಬೇಕೆಂದು ಶಿವಕುಮಾರ್ ಬಣದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಅದಕ್ಕೆ ಅಲ್ಲಿದ್ದವರು ಸೊಪ್ಪು ಹಾಕದಿದ್ದಾಗ ಗಲಾಟೆ ಆರಂಭವಾಗಿದೆ. ರೋಡ್ ಶೋ ತಡೆಯಲಾಗಿದೆ.
ಇದರಿಂದ ಸಿಟ್ಟಿಗೆದ್ದ ಸಂಸದ ಜಿ.ಎಂ ಸಿದ್ದೇಶ್ವರ ರೋಡ್ ಶೋ ನಿಲ್ಲಿಸಿ ಕಾರು ಹತ್ತಿದ್ದಾರೆ. ಅಲ್ಲಿಗೂ ಲಗ್ಗೆಯಿಟ್ಟ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದರ ಕಾರಿನ ಹಿಂಬದಿ ಗಾಜು ಒಡೆದಿದ್ದಾರೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಫ್ಲೆಕ್ಸ್ ಪೈಪೋಟಿ
ಇನ್ನು ಕ್ಷೇತ್ರದಲ್ಲಿ ಟಿಕೆಟ್ಗಾಗಿ ಫ್ಲೆಕ್ಸ್ ಪೈಪೋಟಿ ಆರಂಭವಾಗಿದೆ. ಶಿವಕುಮಾರ್ ಮತ್ತು ಮಾಡಾಳ್ ವಿರೂಪಾಕ್ಷಪ್ಪ ಬಣದವರು ವಿಜಯ ಸಂಕಲ್ಪ ಯಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ. ಶಿವಕುಮಾರ್ರವರ ಫ್ಲೆಕ್ಸ್ ಹರಿದಿದ್ದು ಗಲಾಟೆಗೆ ತಾರಕಕ್ಕೇರಲು ಕಾರಣವಾಗಿದೆ.
ಈ ಕುರಿತು ಟೀಕಿಸಿರುವ ಕಾಂಗ್ರೆಸ್, “ಬಿಜೆಪಿಯ “U ಟರ್ನ್ ಸಂಕಲ್ಪ ಯಾತ್ರೆ” ಮುಂದುವರೆದಿದೆ! ಈಗ ಚನ್ನಾಗಿರಿಯಲ್ಲೂ ಬಿಜೆಪಿ ನಾಯಕರು ಯಾತ್ರೆ ನಡೆಸಲಾಗದೆ U ಟರ್ನ್ ಮಾಡಿಕೊಂಡು ವಾಪಸಾಗಿದ್ದಾರೆ. ಕಾರ್ಯಕರ್ತರೇ ಯಾತ್ರೆ ತಡೆಯುವ ಮೂಲಕ ಬಿ.ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಕಲಹ ಮತ್ತೊಂದು ಹಂತಕ್ಕೆ ಮೇಲೇರಿದೆ! ಜನಾಕ್ರೋಶ ಇರಲಿ, ಕಾರ್ಯಕರ್ತರ ಆಕ್ರೋಶವನ್ನೇ ಎದುರಿಸಲು ಬಿಜೆಪಿಗೆ ಶಕ್ತಿ ಇಲ್ಲ” ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದೆ.
ಇದನ್ನೂ ಓದಿ; ಶಿವಮೊಗ್ಗ: ಪ್ರಾರ್ಥನಾ ಮಂದಿರ, ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ