Homeಕರ್ನಾಟಕಶಿವಮೊಗ್ಗ: ಪ್ರಾರ್ಥನಾ ಮಂದಿರ, ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ಶಿವಮೊಗ್ಗ: ಪ್ರಾರ್ಥನಾ ಮಂದಿರ, ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

- Advertisement -
- Advertisement -

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತರು ಎರಡು ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಮೊದಲನೇಯದ್ದು ಶುಕ್ರವಾರ ರಾತ್ರಿ (ಮಾ.18) ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ್ದ ಲೇಡಿಸ್ ನೈಟ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಮತ್ತೊಂದು ರವಿವಾರ (ಮಾ.19) ಗೋಪಿಶೆಟ್ಟಿಕೊಪ್ಪದ ಮನೆಯೊಂದರಲ್ಲಿ ಆರಂಭಿಸಿರುವ ಪ್ರಾರ್ಥನಾ ಮಂದಿರವೊಂದರ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಪ್ರಾರ್ಥನಾ ಮಂದಿರದ ಮೇಲೆ ಬಜರಂಗದಳ ದಾಳಿ

ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಮನೆಯೊಂದರಲ್ಲಿ ಆರಂಭಿಸಿರುವ ಪ್ರಾರ್ಥನಾ ಮಂದಿರವೊಂದರ ಮೇಲೆ ಬಜರಂಗದಳ ಕಾರ್ಯಕರ್ತರು ಭಾನುವಾರ ತುಂಗಾ ನಗರ ಠಾಣೆ ಪೊಲೀಸರ ಸಮ್ಮುಖದಲ್ಲಿ ದಾಳಿ ನಡೆಸಿದರು. ಇಲ್ಲಿ ಹಿಂದೂ ಧರ್ಮೀಯರಿಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ.

ಈ ವಿಚಾರವಾಗಿ ಪ್ರಾರ್ಥನಾ ಮಂದಿರ ನಡೆಸುತ್ತಿದ್ದ ಫಾದರ್ ಮಣಿಕಂಠ ಇಮ್ಯಾನ್ಯುಯಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ವಾಪಸ್‌ ಕಳುಹಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಘಟನೆ ಬಗ್ಗೆ ಪ್ರತಿಕ್ರಿಸಿಯಿದ ಫಾದರ್ ಮಣಿಕಂಠ ಇಮ್ಯಾನ್ಯುಯಲ್, ”ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. 15 ವರ್ಷಗಳಿಂದ ಟ್ರಸ್ಟ್ ಸ್ಥಾಪಿಸಿ ಪ್ರಾರ್ಥನೆ ನಡೆಸುತ್ತಿದ್ದೇವೆ. ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಸಂದರ್ಭದಲ್ಲಿಯೂ ಪ್ರಾರ್ಥನೆ ನಡೆಸಿದ್ದೆವು” ಎಂದು ಅವರು ತಿಳಿಸಿದರು.

ಬಜರಂಗದಳದ ಕಾರ್ಯಕರ್ತ ರಾಜೇಶ್ ಗೌಡ ಮಾತನಾಡಿ, ”ಇಲ್ಲಿ ನಿರ್ಮಿಸಿರುವ ಶೆಡ್‌ಗೆ ಯಾವುದೇ ಟ್ರಸ್ಟ್‌ನ ನಾಮಫಲಕ ಅಳವಡಿಸಿಲ್ಲ. ಅಲ್ಲದೇ 42 ಜನರ ಪಟ್ಟಿ ದೊರೆತಿದೆ. ಇದು ಹಿಂದೂಗಳನ್ನು ಮತಾಂತರ ಮಾಡಲು ಸಿದ್ಧಪಡಿಸಿದ್ದ ಪಟ್ಟಿ” ಎಂದು ಆರೋಪಿಸಿದರು.

ಇದನ್ನೂ ಓದಿ: ಶಿವಮೊಗ್ಗ: ಪ್ರಾರ್ಥನಾ ಮಂದಿರ, ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ದಾಳಿ ವೇಳೆ ಬಜರಂಗದಳದ ಜಿಲ್ಲಾ ಸಂಚಾಲಕ ಅಂಕುಶ್, ನಗರ ಕಾರ್ಯದರ್ಶಿ ಸಚಿನ್, ಜಿತೇಂದ್ರಗೌಡ ತುಂಗಾ ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ ಮಂಜುನಾಥ್, ಪಿಎಸ್ಐ ರಾಜು ರೆಡ್ಡಿ ಇದ್ದರು.

ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ದಾಳಿ

ಶುಕ್ರವಾರ ರಾತ್ರಿ ಶಿವಮೊಗ್ಗದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ್ದ ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಕಾರ್ಯಕ್ರಮವನ್ನೇ ನಿಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದ ನಂತರ, ಎಲ್ಲಾ ಮಹಿಳೆಯರು ಮತ್ತು ಅವರ ಜೊತೆಗಿದ್ದ ಪುರುಷರು ಹೋಟೆಲ್‌ನಿಂದ ಹೊರಬಂದಿದ್ದಾರೆ.

ಕ್ಲಿಫ್ ಎಂಬಸಿ ಹೋಟೆಲ್‌ನ ಹೈವ್‌ ಸೈಬಾರ್‌ನಲ್ಲಿ ಲೇಡಿಸ್ ನೈಟ್ ಪಾರ್ಟಿ ಆಯೋಜಿಸಲಾಗಿತ್ತು. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು, ಹೋಟೆಲ್ ಬಳಿ ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿ ಪಾರ್ಟಿಯನ್ನು ನಿಲ್ಲಿಸಿದ್ದಾರೆ. ಹೆಣ್ಣು ಮಕ್ಕಳನ್ನು ಕರೆಯಿಸಿ ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಜರಂಗದಳ ಆರೋಪಿಸಿದೆ.

ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಅವರು ಮಾತನಾಡಿದ್ದು, ”ಇದು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಶಿವಮೊಗ್ಗದಲ್ಲಿ ಅವಕಾಶ ಕೊಡಲ್ಲ. ಮಲೆನಾಡಿನ ಜನರು ಸುಸಂಸ್ಕೃತರು, ಇಂತಹ ಕಾರ್ಯಕ್ರಮ ಆಯೋಜಿಸಿದರೆ ಸುಮ್ಮನಿರುವುದಿಲ್ಲ. ಲೇಟ್ ನೈಟ್ ಲೇಡಿಸ್ ಪಾರ್ಟಿ ಬಗ್ಗೆ ಈ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದೆವು. ಆದ್ದರಿಂದ ಪೊಲೀಸರ ಜತೆ ಬಂದು ಕಾರ್ಯಕ್ರಮ ನಿಲ್ಲಿಸಿದ್ದೇವೆ” ಎಂದು ಹೇಳಿದ್ದಾರೆ.

”ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಾವು ಅವಕಾಶ ನೀಡುವುದಿಲ್ಲ ಏಕೆಂದರೆ ನಮ್ಮ ನಗರವು ಮತ್ತೊಂದು ಮಣಿಪಾಲವಾಗುವುದು ನಮಗೆ ಇಷ್ಟವಿಲ್ಲ. ಇಂತಹ ಘಟನೆಗಳನ್ನು ಭಜರಂಗದಳ ಸಹಿಸುವುದಿಲ್ಲ” ಎಂದು ಹೇಳಿದ ಅವರು, ಪಾರ್ಟಿಯಲ್ಲಿ ಮಹಿಳೆಯರ ಉಡುಗೆಯನ್ನೂ ಆಕ್ಷೇಪಿಸಿದ್ದಾರೆ.

”ನಮ್ಮ ಸಂಘಟನೆಯು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲಿಲ್ಲ. ಬದಲಿಗೆ ಪೊಲೀಸರಿಗೆ ಮಾಹಿತಿ ನೀಡಿದರು, ಅವರು ಪಾರ್ಟಿಯನ್ನು ನಿಲ್ಲಿಸಿದ್ದಾರೆ ಎಂದು ರಾಜೇಶ್ ಗೌಡ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ ಮಿಥುನ್ ಕುಮಾರ್, ”ನಮ್ಮ ಪೊಲೀಸರು ಪಾರ್ಟಿಯನ್ನು ನಿಲ್ಲಿಸಲಿಲ್ಲ ಎಂದು ಹೇಳಿದ್ದಾರೆ.

”ಕೆಲವು ವ್ಯಕ್ತಿಗಳು ಪಾರ್ಟಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದ ಬಳಿಕ ನಮ್ಮ ಅಧಿಕಾರಿಗಳು ಹೋಟೆಲ್‌ಗೆ ತೆರಳಿದರು” ಎಂದು ಅವರು ತಿಳಿಸಿದ್ದಾರೆ.

”ನಮ್ಮ ಪೊಲೀಸರು ಯಾವುದೇ ಕಾರಣಕ್ಕೂ ಆ ಪಾರ್ಟಿಯನ್ನು ನಿಲ್ಲಿಸಲು ಅಲ್ಲಿಗೆ ಹೋಗಿರಲಿಲ್ಲ. ಅಲ್ಲಿ ಗಲಾಟೆ ನಡೆಯಬಾರದು ಎನ್ನುವ ಉದ್ದೇಶದಿಂದ ಹೋಗಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ” ಎಂದು ಕುಮಾರ್ ಹೇಳಿದರು.

”ಪಾರ್ಟಿಯಲ್ಲಿ ಆಕ್ಷೇಪಾರ್ಹವಾಗುವಂತಹ ವಿಚಾರ ಏನೂ ಇರಲಿಲ್ಲ. ಆದರೆ ಪೊಲೀಸರು ಮತ್ತು ಕಾರ್ಯಕರ್ತರು ಪಾರ್ಟಿಯನ್ನು ಏಕೆ ತಡೆದರು ಎಂಬುದು ನಮಗೆ ತಿಳಿದಿಲ್ಲ” ಎಂದು ಹೋಟೆಲ್ ಜನರಲ್ ಮ್ಯಾನೇಜರ್ ಶಂಕರ್ ಕೆ. ಹೇಳಿದ್ದಾರೆ.

”ನಮ್ಮ ಹೋಟೆಲ್ ಅತ್ಯುತ್ತಮ ಹೆಸರು ಗಳಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ಕಚೇರಿಯ ಜನರು ಸೇರಿದಂತೆ ವಿಐಪಿಗಳಿಗೆ ಇಲ್ಲಿ ನಾವು ಆತಿಥ್ಯ ನೀಡಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತದ ಎಲ್ಲ ಹಿರಿಯ ಅಧಿಕಾರಿಗಳಿಗೆ ತಿಳಿದಿದೆ. ನಾವೇನಾದರೂ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧ. ಆದರೆ ನಾವು ಆ ರೀತಿಯ ಯಾವ ತಪ್ಪನ್ನೂ ಮಾಡಿಲ್ಲ. ಆದರೂ ಏಕೆ ಅವರು ನಮ್ಮ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ನಮಗೆ ತಿಳಿದಿಲ್ಲ” ಎಂದು ಶಂಕರ್ ಅಸಮಧಾನ ಹೊರಹಾಕಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...