ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕುಡಿಯುವ ನೀರಿನ ಕೊಳಾಯಿಯಲ್ಲಿನ ವಿಷಪೂರಿತ ನೀರನ್ನು ಕುಡಿದು ಅನೇಕರು ಸಾವಿಗೀಡಾಗಿದ್ದರು ಮತ್ತು 200ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ನರಳಾಡಿದ್ದರು. ಈ ದುರಂತಕ್ಕೆ ಅಂತರ್ಜಾತಿ ಪ್ರೇಮ ವಿವಾಹವೇ ಕಾರಣ, ಹಾಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿ.ಓ.ಡಿ. ಅಥವಾ ಸಿ.ಬಿ.ಐ.ಗೆ ಒಳಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಇಂದು(ಶುಕ್ರವಾರ) ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕಾ ಪ್ರಕಟಣೆ ಹೊರಡಿಸಿದ್ದು, ಭಾರತದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಸಹಸ್ರಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ತಮಿಳುನಾಡಿನ ಕೈಲಾರಾಂಜಿಯಲ್ಲಿ ಮಾರಣಹೋಮ ನಡೆಯಿತು.
ಆಂಧ್ರದ ಬೆಲ್ಚಿ, ಪಿಜ್ರ, ಕರಂಚೇಡು, ಸಂಡೂರಿನಲ್ಲಿ ದಲಿತರ ಅತಿದೊಡ್ಡ ನರಮೇಧ ಇತಿಹಾಸದ ಕಪ್ಪುಚುಕ್ಕೆಯಾಗಿದೆ. ಕರ್ನಾಕಟದಲ್ಲಿ ಕಂಬಾಲಪಲ್ಲಿಯಲ್ಲಿ 7 ಜನ ದಲಿತರನ್ನು ಸಜೀವ ದಹನ ಮಾಡಲಾಯಿತು. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಲಾಯಿತು.
”ಇದೀಗ ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಕುಡಿಯುವ ನೀರಿನ ಕೊಳಾಯಿಯಲ್ಲಿನ ವಿಷಪೂರಿತ ನೀರನ್ನು ಕುಡಿದು ಅಸುನೀಗಿದರು. ಸುಮಾರು 200ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ನರಳಿದರು. ವಿಷಪೂರಿತ ನೀರನ್ನು ನಗರಸಭೆ ಪೂರೈಸಿದೆ. ಈ ಕೃತ್ಯದ ಹಿನ್ನೆಲೆ ದಲಿತ ಯುವಕ ಮತ್ತು ಸವರ್ಣಿಯ ಯುವತಿಯ ಅಂತರ್ಜಾತಿ ಪ್ರೇಮ ವಿವಾಹವೇ ಕಾರಣವಾಗಿದೆ. ಆದರೆ ಜಿಲ್ಲಾಡಳಿತವು ದಲಿತರ ಸಾವಿಗೆ ಕಾಲರಾ ಇರಬಹುದೆಂದು ಅನುಮಾನಿಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ” ಎಂದು ದ.ಸಂ.ಸ. ಹೇಳಿದೆ.
”ರಾಜಕಾರಣಿಗಳು ದಲಿತರ ಸಾವು-ನೋವನ್ನು ರಾಜಕೀಯ ಮೇಲಾಟಕ್ಕೆ ಬಳಸಿಕೊಂಡಿದೆ. ಅಲ್ಲದೆ ಸರ್ಕಾರ ಚೂರು-ಪಾರು ಪರಿಹಾರ ನೀಡಿ ಕೈತೊಳೆದುಕೊಂಡಿದೆ. ಹಾಗೂ ಪೊಲೀಸ್ ಇಲಾಖೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲು ಹಿಂಜರಿದಿದೆ. ಆದ್ದರಿಂದ ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಸಿ.ಓ.ಡಿ. ಅಥವಾ ಸಿ.ಬಿ.ಐ.ಗೆ ಒಳಪಡಿಸಬೇಕೆಂದು ಒತ್ತಾಯಿಸಿ ದಿನಾಂಕ : 01-09-2023 ರಂದು ದ.ಸಂ.ಸ. ಮತ್ತು ದಲಿತ ಸಂಘಟನೆಗಳ ಒಕ್ಕೂಟ ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಕ್ಕೊತ್ತಾಯಗಳು :-
1) ಕವಾಡಿಗರಹಟ್ಟಿ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ಒಪ್ಪಿಸಬೇಕು.
2) ಸಾವನ್ನಪ್ಪಿದ 6 ದಲಿತ ಕುಟುಂಬಗಳಿಗೆ ತಲಾ 50.00 ಲಕ್ಷ ಪರಿಹಾರ ಹಾಗೂ ಕುಟುಂಬದಲ್ಲಿ, ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು.
3) ವಿಷಪೂರಿತ ನೀರು ಕುಡಿದು ಆಸ್ಪತ್ರೆ ಸೇರಿ ನರಳಿದ ಪ್ರತಿಯೊಬ್ಬರಿಗೂ 5.00 ಲಕ್ಷ ಪರಿಹಾರ ನೀಡಬೇಕು.
4) ಮೃತ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ತಲಾ 3 ಎಕರೆ ಜಮೀನನ್ನು ನೀಡಬೇಕು.