1995ರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಂಸದ, ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಭುನಾಥ್ ಸಿಂಗ್ ಅವರು ಮಹಾರಾಜ್ ಗಂಜ್ ಕ್ಷೇತ್ರದಿಂದ ಜೆಡಿಯು ಮತ್ತು ಆರ್ಜೆಡಿ ಸಂಸದರಾಗಿ ಪ್ರತಿನಿಧಿಸಿದ್ದರು. ಮಹಾರಾಜ್ ಗಂಜ್ ನಿಂದಲೇ ಹಲವು ಬಾರಿ ಗೆಲುವು ಸಾಧಿಸಿದ್ದಾರೆ.
ಜೋಡಿ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಪಟ್ಟಾ ಹೈಕೋರ್ಟ್ ಪ್ರಭುನಾಥ್ ಸಿಂಗ್ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿತ್ತು.
ವಿಚಾರಣಾ ನ್ಯಾಯಾಲಯ ಮತ್ತು ಪಟ್ಟಾ ಹೈಕೋರ್ಟ್ ನೀಡಿದ ತೀರ್ಪನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕ್ಕಾ ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠವು ಆಗಸ್ಟ್ 18ರಂದು ರದ್ದು ಮಾಡಿ, ಪ್ರಭುನಾಥ್ ತಪ್ಪಿತಸ್ತ್ರ ಎಂದು ತೀರ್ಪು ನೀಡಿತ್ತು.
ಇಂದು ಶಿಕ್ಷೆಯ ಪ್ರಮಾಣದ ಮೇಲಿನ ವಾದಗಳನ್ನು ಆಲಿಸಿದ ಪೀಠವು ಅಪರಾಧಿ ಪ್ರಭುನಾಥ್ ಸಿಂಗ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
1995ರ ಮಾರ್ಚ್ನಲ್ಲಿ ಬಿಹಾರದ ಸರನ್ ಜಿಲ್ಲೆಯ ಚಾಪ್ರಾದಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ದಿನದಂದು ಇಬ್ಬರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಬಿಹಾರದ ಮಹಾರಾಜ್ ಗಂಜ್ನ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅವರನ್ನು ದೋಷಿ ಎಂದು ತೀರ್ಪು ನೀಡುವ ಸಂದರ್ಭ ಸುಪ್ರೀಂ ಕೋರ್ಟ್, ಸಿಂಗ್ ಅವರು ತಮ್ಮ ವಿರುದ್ಧದ ಸಾಕ್ಷ್ಯ ನಾಶ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ನ್ಯಾಯಾಂಗದಲ್ಲಿ ಅತಿರೇಕದ ಭ್ರಷ್ಟಾಚಾರವಿದೆ: ಅಶೋಕ್ ಗೆಹ್ಲೋಟ್