ಫ್ರಾನ್ಸ್ನ ಚರ್ಚ್ನಲ್ಲಿ ನಿನ್ನೆ ನಡೆದ ಹಿಂಸಾಚಾರವನ್ನು ವೈಭವೀಕರಿಸಿದ್ದಕ್ಕಾಗಿ ಮಲೇಷ್ಯಾ ಮಾಜಿ ಪ್ರಧಾನಿ ಮಹತೀರ್ ಮೊಹಮದ್ ಅವರ ಟ್ವೀಟ್ ಅನ್ನು ಟ್ವಿಟ್ಟರ್ ತೆಗೆದುಹಾಕಿದ್ದು, ಟ್ವಿಟ್ಟರ್ ಕಂಪನಿಯು ಅವರನ್ನು ತನ್ನ ವೇದಿಕೆಯಿಂದ ನಿಷೇಧಿಸಬೇಕು ಎಂದು ಫ್ರಾನ್ಸ್ನ ಡಿಜಿಟಲ್ ಸಚಿವರು ಒತ್ತಾಯಿಸಿದ್ದಾರೆ.
“ಮಹತೀರ್ ಮೊಹಮದ್ ಅವರ ಖಾತೆಯನ್ನು ತಕ್ಷಣವೇ ನಿಷ್ಕ್ರಿಯಗೊಳಿಸಬೇಕು ಎಂದು ಫ್ರಾನ್ಸ್ನ ಟ್ವಿಟರ್ನ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ. ತೆಗೆದುಹಾಕದಿದ್ದರೆ, ಟ್ವಿಟ್ಟರ್ ಕಂಪನಿ ಈ ಕೊಲೆಗೆ ಔಪಚಾರಿಕ ಕರೆ ನೀಡಿದಂತಾಗುತ್ತದೆ” ಎಂದು ಸೆಡ್ರಿಕ್ ಒ ಹೇಳಿದ್ದಾರೆ.
“ಮುಸ್ಲಿಂ ಉಗ್ರಗಾಮಿಗಳ ದಾಳಿಗೆ ಫ್ರೆಂಚ್ ಅಧಿಕಾರಿಗಳು ಕಾರಣ. ಫ್ರೆಂಚ್ ಜನರ ಸಾವು ಸಮರ್ಥನೀಯ” ಎಂದು 95 ವರ್ಷದ ಮಲೇಷ್ಯಾ ಮಾಜಿ ಪ್ರಧಾನ ಮಂತ್ರಿ ಮಹತೀರ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಭಯೋತ್ಪಾದನೆಯೆಂಬ ಜಾಗತಿಕ ಸಂಕಟ: ಶ್ರೀಲಂಕಾ ದಾಳಿಯ ಹಿನ್ನೆಲೆಯಲ್ಲಿ
ಈ ತಿಂಗಳ ಆರಂಭದಲ್ಲಿ ಪ್ರವಾದಿ ಮುಹಮ್ಮದ್ ವ್ಯಂಗ್ಯಚಿತ್ರಗಳನ್ನು ತರಗತಿಗಳಲ್ಲಿ ತೋರಿಸಿದ ಮಾಧ್ಯಮಿಕ ಶಾಲಾ ಶಿಕ್ಷಕನ ಶಿರಚ್ಚೇಧದ ಕುರಿತು ಹೇಳುತ್ತಾ “ಕೋಪಗೊಳ್ಳಲು ಮತ್ತು ಹಿಂದಿನ ಹತ್ಯಾಕಾಂಡಗಳಿಗಾಗಿ ಲಕ್ಷಾಂತರ ಜನರನ್ನು ಕೊಲ್ಲುವ ಹಕ್ಕು ಮುಸ್ಲಿಮರಿಗಿದೆ” ಎಂದು ಅವರು ಗುರುವಾರ ಟ್ವೀಟ್ಗಳ ಸರಣಿಯಲ್ಲಿ ಹೇಳಿದ್ದರು ಎಂದು ನ್ಯೂ ಇಂಡಿಯನ್ ಎಕ್ಸ್ಪ್ರಸ್ ವರದಿ ಮಾಡಿದೆ.
ಈ ಟ್ವೀಟ್ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಕಂಪನಿಯು ಇದನ್ನು ತೆಗೆದುಹಾಕಿದೆ. ಮಹಾತಿರ್ ಎರಡು ಬಾರಿ ಪ್ರಧಾನಿಯಾಗಿದ್ದರು.
ನಿನ್ನೆ ಫ್ರಾನ್ಸ್ನ ಚರ್ಚ್ನಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಚಾಕು ಹಿಡಿದ ದಾಳಿಕೋರನೊಬ್ಬ ”ಅಲ್ಲಾಹು ಅಕ್ಬರ್” ಎಂದು ಕೂಗುತ್ತಾ ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ 3 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
ಇದನ್ನೂ ಓದಿ: ಸಾಧ್ವಿ ಪ್ರಗ್ಯಾ ಭಯೋತ್ಪಾದನೆ ಮತ್ತು ದ್ವಂದ್ವಗಳು
ನಿನ್ನೆ ಬೆಳಿಗ್ಗೆ ನಡೆದ ದಾಳಿಯ ನಂತರ ಹಲ್ಲೆಕೋರನನ್ನು ಬಂಧಿಸಲಾಗಿದ್ದು, ಬಂಧನದ ಸಮಯದಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ಏಕಾಂಗಿಯಾಗಿ ಇಂತಹ ಕೆಲಸ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಸ್ ನಗರದ ಚರ್ಚ್ನಲ್ಲಿ ನಡೆದ ಈ ಭಯೋತ್ಪಾದಕ ಘಟನೆಯಲ್ಲಿ “ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವ ದಾಳಿಕೋರನೊಬ್ಬ ಚಾಕುವಿನಿಂದ ಮಹಿಳೆಯೊಬ್ಬಳ ಶಿರಚ್ಚೇದನ ಮಾಡಿದ್ದಾನೆ. ಜೊತೆಗೆ ಇತರ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ.
ಪೊಲೀಸರಿಂದ ಬಂಧನಕ್ಕೊಳಗಾದ ನಂತರವೂ ದಾಳಿಕೋರನು “ಅಲ್ಲಾಹು ಅಕ್ಬರ್” ಎಂಬ ಪದವನ್ನು ಪದೇ ಪದೇ ಕೂಗಿದ್ದಾನೆ.
ಇದನ್ನೂ ಓದಿ: ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ
ಈ ದಾಳಿಯನ್ನು ಭಯೋತ್ಪಾದಕತೆ ಎಂದು ಬಣ್ಣಿಸಿದ ನೈಸ್ ನಗರದ ಮೇಯರ್ ಕ್ರಿಶ್ಚಿಯನ್ ಎಸ್ಟ್ರೋಸಿ ತಮ್ಮ ಟ್ವಿಟರ್ನಲ್ಲಿ, “ಇದು ನಗರದ ನೊಟ್ರೆಡೇಮ್ ಚರ್ಚ್ನಲ್ಲಿ ಸಂಭವಿಸಿದೆ. ಚರ್ಚ್ ಒಳಗೆ ಕೊಲ್ಲಲ್ಪಟ್ಟ ಜನರಲ್ಲಿ ಒಬ್ಬರು ಚರ್ಚ್ ವಾರ್ಡನ್ ಎಂದು ತಿಳಿದುಬಂದಿದೆ. ಮಹಿಳೆಯೊಬ್ಬರು ಚರ್ಚ್ ಒಳಗಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಕಟ್ಟಡದ ಎದುರಿನ ಬಾರ್ಗೆ ಓಡಿಹೋದರು. ಚಾಕು ದಾಳಿಕೋರನನ್ನು ವಶಕ್ಕೆ ತೆಗೆದುಕೊಳ್ಳುವಾಗ ಪೊಲೀಸರು ಗುಂಡು ಹಾರಿಸಿದ್ದಾರೆ” ಎಂದು ಹೇಳಿದ್ದಾರೆ.
“ಸಾಕು, ಇನ್ನು ಸಾಕು. ನಮ್ಮ ಪ್ರದೇಶದಿಂದ ಇಸ್ಲಾಮೋ-ಫ್ಯಾಸಿಸಂ ಅನ್ನು ಖಚಿತವಾಗಿ ತೊಡೆದುಹಾಕಲು ಮತ್ತು ಹಿಂಸೆಯಿಂದ ಫ್ರಾನ್ಸ್ ಮುಕ್ತವಾಗಲು ಈಗ ಸಮಯ ಬಂದಿದೆ” ಎಂದು ಮೇಯರ್ ಆಕ್ರೋಶ ವ್ಯಕ್ತಪಡಿಸಿದರು.
ಈ ತಿಂಗಳ ಆರಂಭದಲ್ಲಿ ಇಂತಹದ್ದೇ ಘಟನೆಯೊಂದು ಪ್ಯಾರಿಸ್ ಉಪನಗರದಲ್ಲಿ ವರದಿಯಾಗಿದ್ದು, ವಿದ್ಯಾರ್ಥಿಯಿಂದಲೇ ಶಿಕ್ಷಕನ ಮೇಲಿನ ಹಲ್ಲೆ ಮತ್ತು ಶಿರಚ್ಚೇದನ ನಡೆದಿತ್ತು. ಇಂದಿನ ಈ ದಾಳಿ ಇದಕ್ಕೆ ಸಂಪೂರ್ಣ ಹೊಂದಿಕೆಯಾಗುತ್ತದೆ.
ಇದನ್ನೂ ಓದಿ: ಬಲಪಂಥೀಯ ಭಯೋತ್ಪಾದನೆಯ ಬೇರುಗಳು