HomeUncategorizedಪೌರತ್ವ ಮಸೂದೆ: ಗೃಹಮಂತ್ರಿ ಅಮಿತ್ ಶಾಗೆ ಕಾದಿದೆಯಾ ಅಮೆರಿಕಾದ ಬಹಿಷ್ಕಾರ!?

ಪೌರತ್ವ ಮಸೂದೆ: ಗೃಹಮಂತ್ರಿ ಅಮಿತ್ ಶಾಗೆ ಕಾದಿದೆಯಾ ಅಮೆರಿಕಾದ ಬಹಿಷ್ಕಾರ!?

- Advertisement -
- Advertisement -

ಬಹುವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆ ಲಭಿಸಿ, ರಾಷ್ಟ್ರಪತಿಗಳ ಅಂಕಿತವೂ ಬೀಳುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಮೋದಿ ಸರ್ಕಾರ ಹಲವು ದೇಶಗಳ ರಾಜತಾಂತ್ರಿಕ ಒತ್ತಡಕ್ಕೆ ಸಿಲುಕುತ್ತಿದೆ. ಮುಖ್ಯವಾಗಿ ಅಮೆರಿಕಾ ಸಂಸತ್ ಸದಸ್ಯರು ಭಾರತ ಸರ್ಕಾರದ ಪೌರತ್ವ ತಿದ್ದುಪಡಿಯನ್ನು ತೀವ್ರವಾಗಿ ಖಂಡಿಸಿರುವುದು ಮೋದಿ ಸರ್ಕಾರವನ್ನು ಕಂಗೆಡಿಸಿರುವಂತೆ ಕಾಣುತ್ತಿದೆ. ಹಾಗಾಗಿ ಅಲ್ಲಿನ ಸಂಸದರಿಗೆ ನೂತನ ಮಸೂದೆಯ ಬಗ್ಗೆ ಮನವರಿಕೆ ಮಾಡಿಕೊಡಲು ಡಿಸೆಂಬರ್ 18ರಂದು ವಿದೇಶಾಂಗ ಸಚಿವ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಷಿಂಗ್ಟನ್‍ಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ವತಃ ಭಾರತ ವಿದೇಶಾಂಗ ಸಚಿವಾಲಯವೇ ತನ್ನ ಹೇಳಿಕೆಯೊಂದರಲ್ಲಿ, ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಅಮೆರಿಕಾ ಸಂಸತ್ತಿನ ವಿದೇಶಾಂಗ ವ್ಯವಹಾರ ಸಮಿತಿಯು, “ಪೌರತ್ವ ನಿರ್ಧರಣೆಗೆ ಧಾರ್ಮಿಕ ಮಾನದಂಡವನ್ನು ಬಳಸುವ” ಯಾವುದೇ ಪ್ರಯತ್ನವು ಭಾರತೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಿದೆ ಎಂದು ಉಲ್ಲೇಖಿಸಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ತಿಳಿಸಿದೆ.

ಮಸೂದೆ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆಯುತ್ತಿದ್ದಂತೆಯೇ ಅಮೆರಿಕಾ ಸಂಸತ್ ಸದಸ್ಯರಾದ ಆಂಡ್ರೆ ಕಾರ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪೌರತ್ವ ತಿದ್ದುಪಡಿಯನ್ನು `ಕರಾಳ’ ಕಾಯ್ದೆ ಎಂದು ಕರೆದಿದ್ದ ಅವರು, ಈ ಪ್ರಯತ್ನದಿಂದಾಗಿ `ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಹುನ್ನಾರ ಅಡಗಿದೆ’ ಎಂದಿದ್ದರು.

ಇದಕ್ಕೂ ಮುನ್ನ, ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯುತ್ತಿದ್ದಂತೆಯೇ ಅಮೆರಿಕಾದ ಅರೆಸರ್ಕಾರಿ ಸ್ವಾಯತ್ತ ಸಂಸ್ಥೆಯಾದ `ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ’ವು ಮೋದಿ ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿ, “ಅಪ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ವಲಸೆ ಬರುವ ನಿರ್ಗತಿಕರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪೌರತ್ವ ನೀಡುವ ಕೋಮು ಭಾವನೆಯ ಈ ಮಸೂದೆಯನ್ನು ಕಾಯ್ದೆಯಾಗಿ ಜಾರಿಗೆ ತಂದಿದ್ದೇ ಆದಲ್ಲಿ ಗೃಹಮಂತ್ರಿ ಅಮಿತ್ ಶಾ ಹಾಗೂ ಇತರೆ ನಾಯಕರ ಮೇಲೆ ಅಮೆರಿಕಾ ಸರ್ಕಾರ ನಿರ್ಬಂಧ ಹೇರಬೇಕು” ಎಂದು ಟ್ರಂಪ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದ ಭಾರತೀಯ ವಿದೇಶಾಂಗ ಸಚಿವಾಲಯ ಅಮೆರಿಕಾ ಸಂಸತ್ ಸದಸ್ಯರ ಜೊತೆ ಮಾತುಕತೆಗೆ ಮುಂದಾಗಿತ್ತು.

ಆದಾಗ್ಯೂ ಅಮೆರಿಕಾ ಸಂಸತ್ ಸದಸ್ಯರು ಕಾಯ್ದೆಯನ್ನು ಸಂಸತ್ತಿನಲ್ಲೇ ಟೀಕಿಸುತ್ತಿರುವುದರಿಂದ ಆ ಸರ್ಕಾರ ಭಾರತದ ಮೇಲೆ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯನ್ನು ಮನಗಂಡು ಸ್ವತಃ ವಿದೇಶಾಂಗ ಸಚಿವ ಹಾಗೂ ರಕ್ಷಣಾ ಸಚಿವರು ತುರ್ತು ಅಮೆರಿಕಾ ಭೇಟಿಗೆ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಂದಹಾಗೆ, ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಭಾರತ ಸರ್ಕಾರದ ಕ್ರಮವನ್ನು ಟೀಕಿಸಿ ಅಮೆರಿಕಾ ಸಂಸತ್ತಿನಲ್ಲಿ ಖಂಡನಾ ನಿರ್ಣಯವೊಂದನ್ನು ಮಂಡಿಸಲಾಗಿತ್ತು. ಹಲವು ದಶಕಗಳ ಕಾಶ್ಮೀರ ವಿವಾದದ ಇತಿಹಾಸದಲ್ಲಿ ಅಮೆರಿಕಾ ಸಂಸತ್ತು ಭಾರತವನ್ನು ಖಂಡಿಸಿ ನಿರ್ಣಯ ಮಂಡಿಸಿದ್ದು ಇದೇ ಮೊದಲು. ಈಗ ಪೌರತ್ವ ಮಸೂದೆಗೂ ಅಮೆರಿಕಾ ಸಂಸತ್ತು ಅಷ್ಟೇ ಟೀಕಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವುದು ಮೋದಿ ಸರ್ಕಾರವನ್ನು ರಾಜತಾಂತ್ರಿಕ ಒತ್ತಡಕ್ಕೆ ಸಿಲುಕಿಸಿದೆ.

ಇತ್ತ ಮಸೂದೆಯನ್ನು ಮಂಡಿಸುತ್ತ ಲೋಕಸಭೆಯಲ್ಲಿ ಗೃಹಮಂತ್ರಿ ಅಮಿತ್ ಶಾ “ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ದೌರ್ಜನ್ಯಕ್ಕೆ ತುತ್ತಾಗಿ ನಿರ್ವಸತಿಗರಾಗಿ ಬರುವ ವಲಸಿಗರಿಗೆ ಈ ಕಾಯ್ದೆ ಆಶ್ರಯ ಒದಗಿಸಲಿದೆ” ಎಂದು ಹೇಳಿದ್ದ ಹೇಳಿಕೆಗೆ ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸರ್ಕಾರಗಳು ಅಸಮಾಧಾನ ವ್ಯಕ್ತಪಡಿಸಿವೆ. ಇವೆರಡೂ ಇತ್ತೀಚಿನ ದಿನಗಳಲ್ಲಿ ಭಾರತದ ಮಿತ್ರರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದ್ದವು.

ಇಂಡಿಯಾ ಟುಡೆ ಟೀವಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅಪ್ಘಾನಿಸ್ತಾನದ ರಾಯಭಾರಿ ತಹೀರ್ ಖಾದ್ರಿಯವರು “ಅಪ್ಘಾನಿಸ್ತಾನವನ್ನು ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿರೋದು ಸರಿಯಲ್ಲ. ಘನಿಯವರ ಸರ್ಕಾರವು ಅಪ್ಘಾನಿಸ್ತಾನದ ಅಲ್ಪಸಂಖ್ಯಾತರ ಪ್ರಾತಿನಿಧಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಪೂರ್ಣಪ್ರಮಾಣದಲ್ಲಿ ಶ್ರಮಿಸುತ್ತಿದೆ” ಎಂದಿದ್ದಾರೆ. ಇನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊಮಿನ್ ಅವರು ಗುರುವಾರ ನವದೆಹಲಿಗೆ ನೀಡಬೇಕಿದ್ದ ಭೇಟಿಯನ್ನು ಕೊನೇ ಕ್ಷಣದಲ್ಲಿ ರದ್ದು ಪಡಿಸಿರುವುದು ಭಾರತವು ಬಾಂಗ್ಲಾದೇಶದ ಮೇಲೆ ಅಲ್ಪಸಂಖ್ಯಾತರಿಗೆ ಕಿರುಕುಳು ನೀಡುತ್ತಿರುವ ಆರೋಪ ಹೊರಿಸಿದ ಕಾರಣಕ್ಕೆ ಎನ್ನಲಾಗುತ್ತಿದೆ.

ಅತ್ತ, ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದರಿಂದ ಜಪಾನ್ ಪ್ರಧಾನಿ ಶಿಂಜೋ ಅಬೆಯವರು ಕೂಡಾ ಭಾರತದ ಪ್ರವಾಸವನ್ನು ಮುಂದೂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...