ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಾದ ಡಿ.ವೈ ಚಂದ್ರಚೂಡ್ರವರು ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ ಪೀಠದಲ್ಲಿ ಜಸ್ಟಿಸ್ ಚಂದ್ರಚೂಡ್ರವರು ಸಹ ಇದ್ದರು. ಆ ಜಾಮೀನು ತೀರ್ಪನ್ನು ಟೀಕಿಸಿದ ಕಾರಣಕ್ಕಾಗಿಯೇ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಹಾಗಾಗಿ ತಾನೇ ನೀಡಿದ ತೀರ್ಪನ್ನು ಟೀಕಿಸಿದ ವ್ಯಕ್ತಿಯ ವಿರುದ್ಧದ ವಿಚಾರಣೆಯನ್ನು ತಾನೇ ನಡೆಸುವುದು ಸರಿಯಲ್ಲ ಎಂದು ನಿರ್ಧರಿಸಿ ಚಂದ್ರಚೂಡ್ರವರು ವಿಚಾರಣೆಯಿಂದ ಹೊರಗುಳಿದಿದ್ದಾರೆ.
ವಂಚನೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದನ್ನು ಟೀಕಿಸಿ ಕುನಾಲ್ ಕಮ್ರಾ ಟ್ವೀಟ್ ಮಾಡಿದ್ದರು.
2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯಾ ಪತ್ರದಲ್ಲಿ ಅರ್ನಾಬ್ ಹೆಸರು ಉಲ್ಲೇಖಿಸಲಾಗಿತ್ತು. ಆದರೆ ಈ ಪ್ರಕರಣ ವರ್ಷಕ್ಕೂ ಮೊದಲೇ ಮುಚ್ಚಿಹೋಗಿತ್ತು. ಈಗ ಮತ್ತೆ ಅದಕ್ಕೆ ಮರುಜೀವ ನೀಡಿದ ಮುಂಬೈ ಪೊಲೀಸರು 2020ರಲ್ಲಿ ಅರ್ನಾಬ್ ಅವರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಜಾಮೀನು ಪಡೆಯುವ ಸಲುವಾಗಿ ಅವರು ಬಾಂಬೆ ಹೈಕೋರ್ಟ್ಗೆ ಹೋಗಿದ್ದರು. ಆದರೆ ಅದು ಜಾಮೀನು ನಿರಾಕರಿಸಿತ್ತು. ಹಾಗಾಗಿ ಅರ್ನಾಬ್ ಸುಪ್ರೀಂ ಮೆಟ್ಟಿಲೇರಿದ್ದರು.
ಆಗ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿದ್ದ ಚಂದ್ರಚೂಡ್ರವರು ಜಾಮೀನು ನೀಡಿದ್ದರು. ಕೇವಲ ಒಂದು ವಾರದಲ್ಲಿ ಅವರ ಅರ್ಜಿಯನ್ನು ಏಕೆ ಪರಿಗಣಿಸಲಾಯಿತು? ಬೇರೆ ಹೋರಾಟಗಾರರ ಅರ್ಜಿಗಳು ವಿಚಾರಣೆಗೆ ಬರುವುದಿಲ್ಲ ಏಕೆ ಎಂಬ ಪ್ರಶ್ನೆ ಎದ್ದಿತ್ತು.
ದೇಶದಲ್ಲಿ ನೂರಾರು ಹೋರಾಟಗಾರರು ಹಲವಾರು ವರ್ಷಗಳಿಂದ ರಾಜಕೀಯ ಖೈದಿಗಳಾಗಿ ಜೈಲಿನಲ್ಲಿದ್ದರೂ ಅವರಿಗೆ ಏಕೆ ಜಾಮೀನು ನೀಡಿಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಖ್ಯಾತ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ಸುಪ್ರೀಂ ತೀರ್ಪನ್ನು ಟ್ರೋಲ್ ಮಾಡಿದ್ದರು.
ಕುನಾಲ್ ಕಮ್ರ ವಿರುದ್ಧ ಎಂಟು ಜನರಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅನುಮತಿ ನೀಡುವ ಮೂಲಕ, ಕಮ್ರ ತಮಾಷೆಯ ಗೆರೆಯನ್ನು ದಾಟಿದ್ದಾರೆ ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಮೇಲೆ ಅನ್ಯಾಯವಾಗಿ ಕೆಟ್ಟ ರೀತಿಯಲ್ಲಿ ದಾಳಿ ಮಾಡುವುದು ಶಿಕ್ಷೆಗೆ ಕಾರಣವಾಗುತ್ತದೆ ಎಂದು ಜನರು ಅರ್ಥಮಾಡಿಕೊಳ್ಳುವ ಸಮಯ ಇದು” ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಕಮ್ರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲು ತಮ್ಮ ಅನುಮತಿಯನ್ನು ಕೇಳಿದ ವಕೀಲರಿಗೆ ಉತ್ತರಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಕ್ಷಮೆ ಕೇಳಿದರೆ ಪ್ರಕರಣ ಕೈಬಿಡುವುದಾಗಿ ಅಟಾರ್ನಿ ಜನರಲ್ ತಿಳಿಸಿದ್ದರು. ಅದರೆ ಪ್ರಕರಣದ ಕುರಿತು ಮತ್ತೆ ಟ್ವೀಟ್ ಮಾಡಿದ್ದ ಕಮ್ರಾ, ’ನನ್ನ ಟ್ವೀಟ್ಗಳನ್ನು ಹಿಂತೆಗೆದುಕೊಳ್ಳುವ ಅಥವಾ ಅವರಲ್ಲಿ ಕ್ಷಮೆಯಾಚಿಸುವ ಉದ್ದೇಶ ನನಗಿಲ್ಲ. ಅವು ತಮ್ಮಷ್ಟಕ್ಕೇ ಹೇಳಬೇಕಾದುದ್ದನ್ನು ಹೇಳುತ್ತವೆ ಎಂದು ನಾನು ನಂಬುತ್ತೇನೆ” ಎಂದಿದ್ದರು. ಜೊತೆಗೆ “ವಕೀಲರು ಇಲ್ಲ, ಕ್ಷಮಾಪಣೆ ಇಲ್ಲ, ದಂಡ ಕಟ್ಟಲ್ಲ, ಸಮಯ ಹಾಳು ಮಾಡಲ್ಲ” ಎಂದು ತಮ್ಮ ಪತ್ರದೊಂದಿಗೆ ಅಟರ್ನಿ ಜನರಲ್ ವೇಣುಗೋಪಾಲ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.