ಮುಖ್ಯಮಂತ್ರಿ ಯಡಿಯೂರಪ್ಪರ ಮಗ ಬಿ.ವೈ ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ ಮರಡಿಯವರ ವಿರುದ್ಧ ಸುಲಿಗೆ ಮತ್ತು ವಸೂಲಿ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿ ದಾಖಲಿಸಲಾಗಿದ್ದ ದೂರನ್ನಾಧರಿಸಿ FIR ದಾಖಲಿಸದ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಮತ್ತು ಕೇಂದ್ರ ವಿಭಾಗದ DCP ಎಂ. ಎನ್. ಅನುಚೇತ್ ವಿರುದ್ದ ದೂರು ದಾಖಲಾಗಿದೆ.
ಮುಖ್ಯಮಂತ್ರಿ ಕುಟುಂಬದ ಸದಸ್ಯರು ಸುಲಿಗೆ ಮತ್ತು ವಸೂಲಿ ದಂಧೆ ಮಾಡಿದ್ದಾರೆ ಎಂದು ಜನಾಧಿಕಾರ ಸ೦ಘರ್ಷ ಪರಿಷತ್ನ ಆದರ್ಶ್ ಆರ್ ಅಯ್ಯರ್, ಪ್ರಕಾಶ್ ಬಾಬು ಬಿ.ಕೆ, ವಿಶ್ವನಾಥ್ ಬಿ.ವಿಯವರು ಸೆಪ್ಟಂಬರ್ 25ರಂದು ದೂರು ದಾಖಲಿಸಿದ್ದರು. ಆದರೆ ದೂರು ದಾಖಲಾಗಿ 120 ಗ೦ಟೆಗಳಾದರೂ FIR ದಾಖಲಾಗಿಲ್ಲ. ಹೀಗಾಗಿ ದೂರುದಾರರು ಐಪಿಸಿ ಕಲ೦ 217 ರ ಪ್ರಕಾರ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಹಾಗೂ ಡಿಸಿಪಿ ಎಂ. ಎನ್. ಅನುಚೇತ್ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!
ಐಪಿಸಿ ಕಲ೦ 217 ರ ಪ್ರಕಾರ, ಯಾವುದೇ ಸರ್ಕಾರಿ ನೌಕರರು ಕಾನೂನಿನ ನಿರ್ದೇಶನ ಉಲ್ಲಂಘಿಸಿ ಯಾರನ್ನಾದರೂ ಶಿಕ್ಷೆಯಿಂದ ರಕ್ಷಿಸಲು ತಡೆದರೆ ಸ೦ಜ್ಞೆಯ ಅಪರಾಧ (Cognizable Offence) ಆಗಿದೆ.
ಸಂಜ್ಞೆಯ ಅಪರಾಧದಲ್ಲಿ ಪೊಲೀಸ್ ಅಧಿಕಾರಿಯು ನ್ಯಾಯಾಲಯದ ಅನುಮತಿಯಿಲ್ಲದೆ FIR ದಾಖಲಿಸಬಹುದಾಗಿದೆ. ಕೊಲೆ, ಕಳ್ಳತನ, ದರೋಡೆ, ಸುಲಿಗೆ ಹಾಗೂ ಅತ್ಯಾಚಾರದಂತ ಅಪರಾಧಗಳು ಸಂಜ್ಞೆಯ ಅಪರಾಧದ ಅಡಿಯಲ್ಲಿ ಬರುತ್ತದೆ.
ಅಷ್ಟೇ ಅಲ್ಲದೆ ದೂರಿನಲ್ಲಿರುವ ಮಾಹಿತಿಯು ಸ೦ಜ್ಞೆಯ ಅಪರಾಧವಾಗಿದೆ ಎಂದು ತಿಳಿದು ಬಂದರೆ ಸಿಆರ್ಪಿಸಿ ಸೆಕ್ಷನ್ 154 ರಡಿಯಲ್ಲಿ ಠಾಣಾಧಿಕಾರಿಗಳು ಕಡ್ಡಾಯವಾಗಿ FIR ದಾಖಲಿಸಬೇಕಾಗುತ್ತದೆ. ಇ೦ತಹ ಸ೦ದರ್ಭದಲ್ಲಿ ಪೂರ್ವ ವಿಚಾರಣೆಯನ್ನು ಮಾಡಲು ಪೊಲೀಸರಿಗೆ ಅವಕಾಶವಿಲ್ಲ. ಹಾಗಾಗಿ ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ಸಿಆರ್ಪಿಸಿ ಸೆಕ್ಷನ್ 154 ಅನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳಿವೆ.
ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!
ಜನಾಧಿಕಾರ ಸಂಘರ್ಷ ಪರಿಷತ್ ಸೆಪ್ಟಂಬರ್ 25ರಂದು, ಬಿ.ವೈ ವಿಜಯೇಂದ್ರ ಮತ್ತು ಶಶಿಧರ ಮರಡಿಯವರು ರಾಮಲಿಂಗಂ ಕನ್ಸ್ಸ್ಟ್ರಕ್ಸನ್ನ ಚಂದ್ರಕಾಂತ್ ಎಂಬುವವರಿಂದ ಹಣ ನೀಡದಿದ್ದರೆ ನಿಮ್ಮ ಬಿಡಿಎ ಪ್ರಾಜೆಕ್ಟ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿ ಆರ್ಟಿಜಿಎಸ್ ಮೂಲಕ ಅಪಾರ ಪ್ರಮಾಣದ (7 ಕೋಟಿ ರೂಗಳು) ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಹಲವಾರು ಸಾಕ್ಷಿಗಳ ಸಮೇತ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸಿತ್ತು.