Homeಕಥೆಜಂಬದ ಹೆಬ್ಬಾವು : ರಸ್ಕಿನ್ ಬಾಂಡ್‌ರವರ ಕಥೆ

ಜಂಬದ ಹೆಬ್ಬಾವು : ರಸ್ಕಿನ್ ಬಾಂಡ್‌ರವರ ಕಥೆ

- Advertisement -
- Advertisement -

ತಾತ ತನ್ನ ಬಳಿ ಹೆಚ್ಚುಕಾಲ ಇರಿಸಿಕೊಳ್ಳಲಾಗದೇ ಹೋದ ಒಂದು ಸಾಕು ಪ್ರಾಣಿಯಿತ್ತು. ಅಜ್ಜಿಯು ಹಕ್ಕಿ ಮತ್ತು ಪ್ರಾಣಿಗಳನ್ನೆಲ್ಲಾ ಸಹಿಸುತ್ತಿದ್ದಳು, ಆದರೆ ಸರೀಸೃಪಗಳನ್ನು ಮಾತ್ರ ಆಕೆ ಸಹಿಸುತ್ತಿರಲಿಲ್ಲ. ಶಾಂತ ರೀತಿಯಿಂದ ಇರುತ್ತಿದ್ದ ಹೆನ್ರಿ ಎಂಬ ಊಸರವಳ್ಳಿ (ಇವನ ವಿಷಯಕ್ಕೆ ಆಮೇಲೆ ಬರೋಣ) ಕಂಡರೇನೇ ಅಜ್ಜಿ ಬಿಳಿಚಿಕೊಳ್ಳುತ್ತಿದ್ದರು. ಅಂಥದ್ದರಲ್ಲಿ ಹೆಬ್ಬಾವನ್ನು ಮನೆಯಲ್ಲಿರಿಸಿಕೊಳ್ಳುವ ಅವಕಾಶ ಇರಲಾರದು ಎಂಬುದು ತಾತನಿಗೆ ತಿಳಿದಿರಬೇಕಿತ್ತು.

ಚಿತ್ರವಿಚಿತ್ರದ ಪ್ರಾಣಿಗಳನ್ನು ಕೊಂಡು ತರಬಾರದು ಎಂದು ಕೊಂಡರೂ ತಾತನ ಮನಸ್ಸು ಆ ವಿಷಯದಲ್ಲಿ ಅಂಕೆ ಮೀರಿ ವರ್ತಿಸುತ್ತಿತ್ತು. ನಮ್ಮ ಮನೆಯಲ್ಲಿ ಅದಾಗಲೇ ಟೋಟೋ (ಕೋತಿ) ಇತ್ತು, ಆದರೂ ಪೇಟೆಯಲ್ಲಿ ಹಾವಾಡಿಗನಿಗೆ ನಾಲ್ಕು ರೂಪಾಯಿಗಳನ್ನು ಕೊಟ್ಟು, ನಾಲ್ಕು ಅಡಿ ಉದ್ದದ ಮರಿ ಹೆಬ್ಬಾವನ್ನು ಕೊಂಡರು. ಕೌತುಕದ ಕಣ್ಣುಗಳಿಂದ ನೋಡುತ್ತಿದ್ದ ಮಕ್ಕಳು ಮತ್ತು ಜನಸಂದಣಿ ಮೆಚ್ಚುಗೆಯಿಂದ ನೋಡುವಂತೆ ತನ್ನ ಭುಜದ ಮೇಲೆ ಹೆಬ್ಬಾವನ್ನು ಬಿಟ್ಟುಕೊಂಡು ತಾತ ಮನೆಗೆ ಬಂದರು.

ಅವರು ಬರುವುದನ್ನು ಮೊದಲು ನೋಡಿದ್ದು ಟೋಟೋ. ಹಲಸಿನ ಮರದ ರೆಂಬೆಯಲ್ಲಿ ನೇತಾಡುತ್ತಿದ್ದ ಟೋಟೋ ತನ್ನ ಕುಲದ್ವೇಷಿಯನ್ನು ಕಂಡೊಡನೆಯೇ ಮನೆಯೊಳಕ್ಕೆ ಓಡಿತು. ಯುದ್ಧೋನ್ಮಾದದಲ್ಲಿ ಕಿರುಚತೊಡಗಿತು. ಇದರ ಶಬ್ದವನ್ನು ಕೇಳಿ ಅಜ್ಜಿ ವರಾಂಡಕ್ಕೆ ಬಂದರು. ತಾತನ ಕುತ್ತಿಗೆಗೆ ಸುತ್ತಿಕೊಂಡಿದ್ದ ಹೆಬ್ಬಾವನ್ನು ನೋಡುತ್ತಿದ್ದಂತೆಯೇ ಅಜ್ಜಿಗೆ ಮೂರ್ಛೆ ಬಂದಂತಾಯಿತು.

“ಅದು ನಿಮ್ಮನ್ನು ಉಸಿರು ಕಟ್ಟಿ ಸಾಯಿಸುತ್ತೆ, ಮೊದಲು ಅದನ್ನು ಬಿಸಾಡಿ!” ಎಂದು ಅಜ್ಜಿ ಕಿರಿಚಿದರು.

“ಎಂಥದ್ದೂ ಇಲ್ಲ! ಇದು ಇನ್ನೂ ಎಳೇದು, ಕ್ರಮೇಣ ಹೊಂದಿಕೊಳ್ಳುತ್ತೆ ಬಿಡು” ಎಂದರು ತಾತ.

“ಅದು ಹೊಂದಿಕೊಳ್ಳಬಹುದು, ನನಗೇನೂ ಹೊಂದಿಕೊಳ್ಳುವ ಕರ್ಮ ಇಲ್ಲ. ನಿಮ್ಮ ಸಂಬಂಧಿ ಮಾಬೆಲ್ ನಮ್ಮೊಂದಿಗೆ ಸ್ವಲ್ಪ ದಿನ ಇರಲೆಂದು ನಾಳೆ ಬರುತ್ತಿರುವುದು ನಿಮಗೆ ಗೊತ್ತು. ಮನೆಯಲ್ಲಿ ಹಾವು ಇದೆ ಎಂದು ಗೊತ್ತಾದರೆ ಅವಳು ಒಂದು ನಿಮಿಷ ಕೂಡ ಇರುವುದಿಲ್ಲ ಅಷ್ಟೆ” ಎಂದರು ಅಜ್ಜಿ.

“ಹೌದಾ, ಹಾಗಾದ್ರೆ ಅವಳು ಮನೆಗೆ ಬರುತ್ತಿದ್ದಂತೆಯೇ ಇದನ್ನು ತೋರಿಸಬೇಕು” ಎಂದರು ತಾತ. ಮನೆಗೆ ನೆಂಟರು ಬರುವುದು ಅವರಿಗೂ, ನನಗೂ ಇಬ್ಬರಿಗೂ ಇಷ್ಟವಾಗುತ್ತಿರಲಿಲ್ಲ.

“ಭಾರಿ ಕಿರಿಕಿರಿ ಮನುಷ್ಯ ಕಣ್ರೀ ನೀವು!” ಎಂದು ಗೊಣಗುತ್ತಾ ಅಜ್ಜಿ, “ಮೊದಲು ಈ ಪೀಡೆಯನ್ನು ಬಚ್ಚಲು ಮನೆಯಲ್ಲಿ ಕೂಡಿ ಹಾಕಿ. ನಂತರ ಹೋಗಿ ಯಾರತ್ರ ಕೊಂಡು ತಂದಿರೋ ಅವನನ್ನು ಕರೆದುಕೊಂಡು ಬಂದು ವಾಪಸ್ ಕೊಟ್ಟು ಕಳಿಸಿ” ಎಂದು ಹೇಳಿದರು.

ಗಾಬರಿಗೊಂಡ ನನ್ನ ಮುಖವನ್ನು ನೋಡುತ್ತಾ ತಾತ ಹೆಬ್ಬಾವನ್ನು ಬಚ್ಚಲಿಗೆ ತೆಗೆದುಕೊಂಡು ಹೋಗಿ ಅಲ್ಲಿ ಟಬ್ ನಲ್ಲಿ ಬಿಟ್ಟರು. ಅದರ ಬಾಗಿಲನ್ನು ಮುಚ್ಚಿ ನನ್ನೆಡೆಗೆ ತಾತ ಬೇಸರದಿಂದ ನೋಡಿದರು.

“ಬಹುಶಃ ಅಜ್ಜಿ ಹೇಳುತ್ತಿರುವುದು ಸರಿ ಅನ್ಸುತ್ತೆ. ಹಸಿವಾದಾಗ ಅದು ಟೋಟೋವನ್ನು ಹಿಡಿದು ನುಂಗಿ ಬಿಟ್ಟರೆ ಕಷ್ಟ ಅಲ್ವಾ” ಎಂದರು.

ಪೇಟೆಯ ಕಡೆಗೆ ಹಾವಾಡಿಗನನ್ನು ಹುಡುಕಿಕೊಂಡು ಅವಸರದಿಂದ ಹೊರಟರು. ಸುಮಾರು ಎರಡು ಗಂಟೆಗಳ ಕಾಲ ತಾತ ಬರಲೇ ಇಲ್ಲ. ಅದುವರೆಗೂ ಅಜ್ಜಿ ವೆರಾಂಡದಲ್ಲಿ ಅತ್ತಿಂದಿತ್ತ ಶತಪತ ಹಾಕುತ್ತಿದ್ದರು. ತಾತ ಜೋಲು ಮೋರೆ ಹಾಕಿ ಕೊಂಡು ಹಿಂದಿರುಗಿದರು. ಅವರನ್ನು ನೋಡಿದೊಡನೆಯೇ ಹಾವಾಡಿಗ ಸಿಕ್ಕಿಲ್ಲ ಎಂಬುದು ತಿಳಿಯುತ್ತಿತ್ತು.

“ದಯವಿಟ್ಟು, ಅದನ್ನು ನೀವೇ ತಗೊಂಡು ಹೋಗಿ, ಕಾಡಿನ ಹತ್ತಿರ ನದಿಯಂಚಿನಲ್ಲಿ ಬಿಟ್ಟು ಬನ್ನಿ” ಎಂದರು ಅಜ್ಜಿ.

“ಸರಿ ಸರಿ, ಮೊದಲು ಅದಕ್ಕೆ ಊಟ ಹಾಕಬೇಕು” ಎನ್ನುತ್ತಾ ತಾತ, ತಾನು ತಂದಿದ್ದ ಪುಕ್ಕಗಳನ್ನು ಕಿತ್ತಿದ್ದ ಕೋಳಿಯನ್ನು (ಆ ಕಾಲದಲ್ಲಿ ಒಂದು ರೂಪಾಯಿಗಿಂತ ಕಡಿಮೆಗೇ ಈ ರೀತಿಯ ಕೋಳಿ ದೊರಕುತ್ತಿತ್ತು) ತಗೊಂಡು ಬಚ್ಚಲಿನ ಕಡೆ ಹೋದರು. ಹಿಂದೆಯೇ ನಾನು, ಅಜ್ಜಿ, ಅಡುಗೆಯವ ಮತ್ತು ತೋಟದ ಮಾಲಿ ಸಾಲಾಗಿ ಹಿಂಬಾಲಿಸಿದೆವು. ತಾತ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದರು. ತಾತನ ಕಾಲುಗಳ ಪಕ್ಕದಲ್ಲಿ ನಾನು ನುಸುಳಿ ಇಣುಕಿದೆ. ಉಳಿದವರೆಲ್ಲ ಹಿಂದೆಯೇ ಇದ್ದರು. ಹೆಬ್ಬಾವು ಕಾಣಲಿಲ್ಲ.

“ಅದು ಹೊರಟುಹೋಗಿದೆ” ಎಂದು ತಾತ ಘೋಷಿಸಿದರು.

“ದೂರ ಹೋಗಿರಲು ಸಾಧ್ಯವಿಲ್ಲ, ಟಬ್ ಕೆಳಗೆ, ಸುತ್ತ ಮುತ್ತ ಸರಿಯಾಗಿ ನೋಡಿ” ಎಂದರು ಅಜ್ಜಿ.

ಟಬ್ ಕೆಳಗೆ ಹುಡುಕಿದೆವು. ಸುತ್ತ ಮುತ್ತೆಲ್ಲ ನೋಡಿದೆವು. ತಾತ ಕಿಟಕಿಯ ಬಳಿ ಹೋಗಿ ನೋಡಿದರು. “ನಾವು ಕಿಟಕಿ ತೆರೆದು ತಪ್ಪು ಮಾಡಿದೆವು. ಅದು ಕಿಟಕಿಯಿಂದ ಹೊರಹೋಗಿದೆ” ಎಂದರು.

ಎಲ್ಲರೂ ಸೇರಿ ಸೂಕ್ಷ್ಮವಾಗಿ ಹುಡುಕಾಡಿದೆವು. ಮನೆಯ ವಿವಿಧ ಕೋಣೆಗಳು, ಅಡುಗೆ ಮನೆ, ಅಂಗಳದ ಉದ್ಯಾನ, ಗ್ವಾದಲಿ, ಕೋಳಿ ಗೂಡು ಎಲ್ಲೆಡೆ ಹುಡುಕಿದರೂ ಹೆಬ್ಬಾವು ಕಾಣಿಸಲಿಲ್ಲ.

“ಉದ್ಯಾನದ ಗೋಡೆ ದಾಟಿ ಹೊರ ಹೋಗಿರಬೇಕು. ಇಷ್ಟೊತ್ತಿಗೆ ತುಂಬಾ ದೂರ ಹೋಗಿರುತ್ತೆ ಬಿಡಿ” ಎಂದರು ತಾತ.

“ನಾನೂ ಹಾಗೇ ಅಂದ್ಕೋತೀನಿ” ಎಂದು ನಿಟ್ಟುಸಿರಾದರು ಅಜ್ಜಿ.

ಮಾಬೆಲ್ ಆಂಟಿ ಮೂರು ವಾರ ನಮ್ಮೊಂದಿಗೆ ಇರಲೆಂದು ಮರುದಿನವೇ ಆಗಮಿಸಿದರು. ಅಕಸ್ಮಾತ್ ಹೆಬ್ಬಾವು ಕಾಣಿಸಿಕೊಂಡರೆ ಏನು ಕಥೆ ಎಂದು ತಾತ ಮತ್ತು ನಾನು ಚಿಂತಿತರಾಗಿದ್ದೆವು. ಮೂರು ದಿನಗಳಾದರೂ ಅದರ ಸುಳಿವಿರದುದರಿಂದ ಅದು ಹೋಗಿದ್ದು ಒಳ್ಳೇದಾಯ್ತು ಎಂದು ನಾವು ಸಮಾಧಾನಪಟ್ಟುಕೊಂಡೆವು.

ಸಂಜೆ, ಉದ್ಯಾನದಿಂದ ಜೋರು ಕೂಗು ಕೇಳಿಬಂದಿದ್ದರಿಂದ ಎಲ್ಲರೂ ಗಾಬರಿಬಿದ್ದೆವು. ಮಾಬೆಲ್ ಆಂಟಿ ಪಿಶಾಚಿಯನ್ನು ಕಂಡವಳಂತೆ ಕಿರುಚಿಕೊಂಡು ಓಡೋಡಿ ವೆರಂಡದವರೆಗೂ ಬಂದರು.

ಏದುಸಿರು ಬಿಡುತ್ತಾ, “ಸೀಬೆ ಮರ!” ಎಂದು ಉಸಿರೆಳೆದುಕೊಳ್ಳುತ್ತಾ ಆಂಟಿ, “ಹಣ್ಣು ಕೀಳಲು ಹೋದೆ, ಅದು ನನ್ನನ್ನೇ ನೋಡುತ್ತಿತ್ತು. ಅದರ ಕಣ್ಣುಗಳು! ನನ್ನನ್ನು ಸಜೀವವಾಗಿ ತಿನ್ನುವಂತೆ ನೋಡುತ್ತಿತ್ತು…” ಎಂದರು.

“ಸಮಾಧಾನ ಮಾಡ್ಕೋ” ಎನ್ನುತ್ತಾ ಅಜ್ಜಿ ಸುಗಂಧ ಬೆರೆಸಿದ ನೀರನ್ನು ಆಂಟಿಯ ಮೇಲೆ ಚಿಮುಕಿಸಿ, “ಏನಾಯ್ತು, ಏನು ನೋಡಿದೆ?” ಎಂದು ವಿಚಾರಿಸಿದರು.

“ಹಾವು!” ಎನ್ನುತ್ತಾ ಮಾಬೆಲ್ ಆಂಟಿ ಬಿಕ್ಕಿದರು. “ದೊಡ್ಡ ಗಾತ್ರದ ಹಾವು. ಇಪ್ಪತ್ತು ಅಡಿ ಉದ್ದವಿತ್ತು! ಸೀಬೆ ಮರದಲ್ಲಿತ್ತು. ಅದರ ಕಣ್ಣುಗಳು ಭಯಂಕರ. ನನ್ನನ್ನು ಅದು ಹೇಗೆ ನೋಡಿತು ಗೊತ್ತಾ…”

ತಾತ ಮತ್ತು ಅಜ್ಜಿ ಪರಸ್ಪರ ದೃಷ್ಟಿ ಹಾಯಿಸಿಕೊಂಡರು. ಒಡನೆಯೇ , “ನಾನು ಅದನ್ನು ಕೊಂದು ಬರುತ್ತೀನಿ ತಡಿ” ಎನ್ನುತ್ತಾ ತಾತ ಕೊಡೆಯನ್ನು ಹಿಡಿದು ಅತ್ತ ಕಡೆ ಹೊರಟರು. ಆದರೆ ಸೀಬೆ ಮರದ ಬಳಿ ತಾತ ಹೋಗುವಷ್ಟರಲ್ಲಿ ಹೆಬ್ಬಾವು ಹೊರಟುಹೋಗಿತ್ತು.

“ಬಹುಶಃ ಮಾಬೆಲ್ ಆಂಟಿ ಅದನ್ನು ಬೆದರಿಸಿಬಿಟ್ಟಿರಬೇಕು” ಎಂದೆ ನಾನು.

“ಶ್! ಆಂಟಿಯ ಬಗ್ಗೆ ಹಾಗೆಲ್ಲಾ ಮಾತಾಡಬಾರದು” ಎಂದರು ತಾತ. ಆದರೆ, ತಾತನ ಕಣ್ಣುಗಳಲ್ಲಿ ತುಂಟ ನಗು ಹೊರಹೊಮ್ಮಿದ್ದನ್ನು ನಾನು ಗಮನಿಸಿದೆ.

ಈ ಘಟನೆಯ ನಂತರ ಹೆಬ್ಬಾವು ಹಲವು ಬಾರಿ ಅನಿರೀಕ್ಷಿತ ಸ್ಥಳಗಳಲ್ಲಿ ದರ್ಶನ ಕೊಟ್ಟಿತು. ಸೋಫಾ ಮೆತ್ತೆಯ ಕೆಳಗಿನಿಂದ ಅದೊಮ್ಮೆ ಹೊರಬಂದಾಗ ಮಾಬೆಲ್ ಆಂಟಿ ಬೆಚ್ಚಿ ಬಿದ್ದು, ತಮ್ಮ ಬ್ಯಾಗ್ ತಗೊಂಡು ಮನೆಯಿಂದ ಹೊರಟುಬಿಟ್ಟರು.

ಅದರ ಹುಡುಕಾಟ ಮುಂದುವರೆಯಿತು.

ಒಂದು ಬೆಳಗ್ಗೆ ಸುರುಳಿಸುತ್ತಿಕೊಂಡಿದ್ದ ಹೆಬ್ಬಾವನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ಕಂಡೆ. ಅದು ತನ್ನ ಪ್ರತಿಬಿಂಬವನ್ನೇ ತದೇಕಚಿತ್ತದಿಂದ ನೋಡುತ್ತಿತ್ತು. ನಾನು ತಾತನ ಬಳಿ ಹೋಗಿ ತಿಳಿಸಿ, ಅವರು ಬರುವಷ್ಟರಲ್ಲಿ ಅದು ಹೊರಟುಹೋಗಿತ್ತು. ಉದ್ಯಾನದಲ್ಲೊಮ್ಮೆ ಅದು ಕಾಣಿಸಿತು. ಅಡುಗೆಯವನಿಗೆ ಮಹಡಿಯ ಏಣಿಯ ಮೇಲೆ ತೆವಳುತ್ತಿದ್ದ ಅದು ಕಂಡುಬಂತು. ಎರಡನೇ ಬಾರಿ ಅದನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ನೋಡಿದೆವು. ತನ್ನನ್ನೇ ತಾನು ಮೆಚ್ಚುಗೆಯಿಂದ ನೋಡಿಕೊಳ್ಳುತ್ತಿತ್ತು. ತನ್ನ ಪ್ರತಿಬಿಂಬಕ್ಕೆ ಅದು ಆಕರ್ಷಿತಗೊಂಡಂತಿತ್ತು.

“ಇದಕ್ಕೆ ನಾವೆಲ್ಲರೂ ಹೆಚ್ಚೆಚ್ಚು ಗಮನ ಕೊಡುತ್ತಿರುವುದರಿಂದ ಇದಕ್ಕೆ ಜಂಬ ಬಂದಿದೆ: ಎಂದರು ತಾತ.

“ಮಾಬೆಲ್ ಆಂಟಿಯನ್ನು ಮೆಚ್ಚಿಸಲು ಚೆನ್ನಾಗಿ ಕಾಣಲೆಂದು ಕನ್ನಡಿ ನೋಡಿಕೊಳ್ಳುತ್ತಿರ ಬಹುದು” ಎಂದು ನಾನು ಹೇಳಿದೆ.

(ಹೀಗನ್ನಬಾರದಿತ್ತು ಅಂತ ಆಮೇಲೆ ಅನ್ನಿಸಿತು. ಏಕೆಂದರೆ, ನನ್ನ ಈ ಮಾತನ್ನು ಕೇಳಿಸಿಕೊಂಡ ಅಜ್ಜಿ ಮುಂದಿನ ವಾರ ಪೂರಾ ಖರ್ಚಿಗೆ ಕಾಸು ಕೊಡಲಿಲ್ಲ)

“ಏನಾದರಾಗಲಿ ನಮಗೆ ಈಗ ಅದರ ದೌರ್ಬಲ್ಯ ತಿಳಿಯಿತು” ಎಂದರು ತಾತ.

“ನೀವೂ ತಮಾಷೆ ಮಾಡಲು ಶುರು ಮಾಡಿದ್ರಾ?” ಎಂದರು ಕೋಪದಿಂದ ಅಜ್ಜಿ.

“ಏ, ನಾನು ಮಾಬೆಲ್ ಬಗ್ಗೆ ಮಾತಾಡಲಿಲ್ಲ, ಹೆಬ್ಬಾವನ್ನು ಹಿಡಿಯಲು ಅದರ ಕನ್ನಡಿ ವೀಕ್ಷಣೆಯ ಹವ್ಯಾಸ ಸಹಾಯವಾಗಬಹುದು ಎಂಬರ್ಥದಲ್ಲಿ ಹೇಳಿದೆ” ಎಂದು ತಾತ ವಿವರಣೆ ಕೊಟ್ಟರು.

ತಾತ ಹೆಬ್ಬಾವನ್ನು ಹಿಡಿಯಲು ಒಂದು ದೊಡ್ಡ ಪಂಜರನ್ನು ತಯಾರಿಸಿದರು. ಅದರ ಒಂದು ಕೊನೆಯಲ್ಲಿ ಕನ್ನಡಿಯನ್ನು ಅಳವಡಿಸಿದರು. ಒಳಗೆ ಕೋಳಿಯ ಮಾಂಸ ಮತ್ತಿತರ ರುಚಿರುಚಿ ತಿನಿಸುಗಳನ್ನಿಟ್ಟರು. ಅದರ ಪ್ರವೇಶದ್ವಾರವನ್ನು ಸುಲಭವಾಗಿ ಮುಚ್ಚಲು ವ್ಯವಸ್ಥೆ ಮಾಡಿದರು.

ನಾವು ಈ ಪಂಜರವನ್ನು ಮಾಡುವ ಹೊತ್ತಿಗಾಗಲೇ ಮಾಬೆಲ್ ಆಂಟಿ ಮನೆ ಬಿಟ್ಟು ಹೋಗಿಯಾಗಿತ್ತು. ಆದರೂ, ನಾವು ಈ ಹಾವು ಹಿಡಿಯುವ ಯೋಜನೆ ಮಾಡಲೇಬೇಕಿತ್ತು. ಏಕೆಂದರೆ, ಮನೆಯಲ್ಲಿ ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದುಬಿಡುತ್ತಿದ್ದ ಈ ಹೆಬ್ಬಾವನ್ನು ಇರಿಸಿಕೊಳ್ಳುವಂತಿರಲಿಲ್ಲ. ಹೆಬ್ಬಾವು ವಿಷಜಂತುವೇನಲ್ಲ, ಆದರೆ ಅದು ಕೋತಿಯನ್ನು ಸರಾಗವಾಗಿ ನುಂಗಿಬಿಡಬಹುದು ಮತ್ತು ಚಿಕ್ಕ ಬಾಲಕನಾದ ನಾನು ಮನೆಯಲ್ಲಿದ್ದಾಗ ಹಿರಿಯರು ಅದನ್ನು ಇರಿಸಿಕೊಳ್ಳುವುದು ಅಪಾಯ ಎಂದು ಭಾವಿಸಿದ್ದರು.

ಸ್ವಲ್ಪ ದಿನ ಏನೂ ವಿಶೇಷ ಸಂಭವಿಸಲಿಲ್ಲ. ಒಂದು ಬೆಳಗ್ಗೆ ನಾನು ಶಾಲೆಗೆ ಹೊರಟಿದ್ದೆ, ಆಗ ಹೆಬ್ಬಾವನ್ನು ಪಂಜರದಲ್ಲಿ ಕಂಡೆ. ಅದಕ್ಕಾಗಿ ಇರಿಸಿದ್ದ ತಿನಿಸುಗಳನ್ನೆಲ್ಲಾ ಮುಗಿಸಿತ್ತು. ಸುರುಳಿಸುತ್ತಿಕೊಂಡು ಕನ್ನಡಿಯನ್ನು ನೋಡಿಕೊಂಡು ಮಲಗಿತ್ತು. ಅದರ ಮೊಗದಲ್ಲಿ ಹಸನ್ಮುಖವಿತ್ತು ? ನೀವು ಬೇಕಿದ್ದರೆ ಹೆಬ್ಬಾವಿನ ಮುಗುಳ್ನಗೆಯನ್ನು ಊಹಿಸಿಕೊಳ್ಳಬಹುದು.

ಮೆಲ್ಲಗೆ ಪಂಜರದ ಬಾಗಿಲನ್ನು ಮುಚ್ಚಿದೆ. ಆದರೆ, ಹೆಬ್ಬಾವು ನನ್ನನ್ನು ಗಮನಿಸಲಿಲ್ಲ. ತಾತ ಮತ್ತು ತೋಟದ ಮಾಲಿ ಪಂಜರವನ್ನು ಟಾಂಗಾದಲ್ಲಿ ಇರಿಸಿಕೊಂಡು ನದಿಯ ಅಂಚಿಗೆ ಒಯ್ದರು. ಪಂಜರದ ಬಾಗಿಲನ್ನು ತೆರೆದಿಟ್ಟು ವಾಪಸ್ ಬಂದರು. ಅವರು ಬಾಗಿಲನ್ನು ತೆರೆದು ಸ್ವಲ್ಪ ದೂರ ಬಂದರೂ ಹೆಬ್ಬಾವು ಹೊರಕ್ಕೇ ಬರಲಿಲ್ಲವಂತೆ.

ಅಲ್ಲಿಂದ ಬಂದ ನಂತರ ತಾತ, “ಆ ಕನ್ನಡಿಯನ್ನು ವಾಪಸ್ ತೆಗೆದುಕೊಂಡು ಬರಲು ಮನಸ್ಸಾಗಲಿಲ್ಲ. ಇದೇ ಮೊದಲ ಬಾರಿ ಪ್ರೀತಿಯಲ್ಲಿ ಮುಳುಗಿರುವ ಹಾವನ್ನು ನಾನು ಕಂಡದ್ದು” ಎಂದರು.

ಮೂಲ: ರಸ್ಕಿನ್ ಬಾಂಡ್
ಕನ್ನಡಕ್ಕೆ: ಡಿ ಜಿ ಮಲ್ಲಿಕಾರ್ಜುನ್
ಶಿಡ್ಲಘಟ್ಟದವರು. ಮೆಡಿಕಲ್ ಶಾಪ್ ನಡೆಸುವ ಮಲ್ಲಿಕಾರ್ಜುನ್ ಅವರ ಆಸಕ್ತಿಗಳು ಮತ್ತು ಪ್ರವೃತ್ತಿಗಳು ಹಲವು. ಫೋಟೋಗ್ರಾಫರ್ ಆಗಿ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಪ್ರವಾಸದ ಹುಚ್ಚು ಕೂಡ. ಅವರ ಅನುವಾದದ `ರಸ್ಕಿನ್ ಬಾಂಡ್ ಕಥೆಗಳು’ ಪುಸ್ತಕ ಕನ್ನಡ ಓದುಗ ವಲಯದಲ್ಲಿ ಬಹಳ ಗಮನ ಸೆಳೆಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...