ಕೊರೊನಾ ಸೋಂಕಿತ ಮಹಿಳೆಯೊಬ್ಬಳಿಗೆ ತನ್ನ ಸಹೋದರರು ಆಶ್ರಯ ನೀಡಲು ನಿರಾಕರಿಸಿದ್ದರಿಂದ ಗ್ರಾಮದ ಹೊರವಲಯದ ಮರದ ಕೆಳಗೆ ವಾಸಿಸುತ್ತಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಲುವೋಯಾ ಗ್ರಾಮದಲ್ಲಿ ಜರುಗಿದೆ.
ಕೊರೊನಾ ವೈರಸ್ನ ಹಾನಿಯನ್ನು ನೋಡಿದ ನಂತರವಾದರೂ ಮಾನವೀಯತೆಯನ್ನು ಕಲಿಯಬೇಕಿದ್ದ ಮಾನವ ಸಮಾಜ ಇನ್ನೂ ಅಮಾನವೀಯವಾಗಿಯೇ ಇದೆ ಎಂಬುದನ್ನು ಈ ಘಟನೆ ನಿರೂಪಿಸಿದೆ.
ಘಟನೆಯ ವಿವರ
ಕಡಪ ಜಿಲ್ಲೆಯ ರಾಜಂಪೇಟ ಮಂಡಲದ ಅಡಿಯಲ್ಲಿರುವ ತುರುಪಳ್ಳಿಯ 45 ವರ್ಷದ ಮಹಿಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರು ನೆಲ್ಲೂರು ಜಿಲ್ಲೆಯ ಪೊಡಲಕುರು ರಸ್ತೆಯಲ್ಲಿರುವ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದಾಗ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿ ಮೊದಲು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಅದರಂತೆ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ಖಾತ್ರಿಯಾಗಿದೆ.
ಸೋಂಕು ದೃಢಪಟ್ಟ ನಂತರ ಆ ಮಹಿಳೆಯು ನೆಲ್ಲೂರಿನ ಸರ್ಕಾರಿ ಜನರಲ್ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಬೆಡ್ ಖಾಲಿ ಇಲ್ಲದ ಕಾರಣ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಿದ ನಂತರ ಅವಳು ಕಲುವೋಯಾ ಮಂಡಲ್ Head quarters ನಲ್ಲಿ ಉಳಿದುಕೊಂಡಿರುವ ತನ್ನ ಇಬ್ಬರು ಸಹೋದರರ ಮನೆಗೆ ಹೋದಳು. ಆದರೆ ಅವರೂ ಆಶ್ರಯ ನೀಡಲು ನಿರಾಕರಿಸಿದರು ಎನ್ನಲಾಗಿದೆ.
ಸ್ಥಳೀಯರು ಅವಳನ್ನು ಹಳ್ಳಿಯಲ್ಲಿ ಉಳಿದುಕೊಳ್ಳಲು ಅನುಮತಿಸಲಿಲ್ಲ. ಹಾಗಾಗಿ ಬೇರೆ ದಾರಿಯಿಲ್ಲದೆ ಹಳ್ಳಿಯ ಹೊರವಲಯದಲ್ಲಿರುವ ಮರದ ನೆರಳಿನಲ್ಲಿ ತಂಗಿದ್ದಾಳೆ. ಆಕೆಯ ಅವಸ್ಥೆಯನ್ನು ಮಾಧ್ಯಮಗಳು ಗಮನಿಸುವವರೆಗೂ ಆಕೆಗೆ ದಾರಿಹೋಕರು ಆಹಾರವನ್ನು ನೀಡುತ್ತಿದ್ದರು ಎಂದು ವರದಿಯಾಗಿದೆ.
ಮಾಧ್ಯಮಗಳ ವರದಿಯ ನಂತರ, ಕಂದಾಯ ಅಧಿಕಾರಿಗಳು ಗ್ರಾಮದ ಹೊರವಲಯಕ್ಕೆ ತಲುಪಿ ಮಹಿಳೆಯ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ ಚೀನಾ ಮತ್ತು ಯುಕೆ
ಕಷ್ಟ ಕಾಲದಲ್ಲಿ ಮನುಷ್ಯ ಮಾನವೀಯತೆಯಿಂದ ವರ್ತಿಸಬೇಕು.