Homeಮುಖಪುಟರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ರಸ್ತೆ ಅಪಘಾತದ ಸಾವುಗಳಿಗೆ ಸಂಜೀವಿನಿಯಾಗಿ ಸಾವಿರಾರು ಪ್ರಾಣಗಳನ್ನು ಉಳಿಸಿದ ಡಿ.ರಂಗಸ್ವಾಮಿ..

ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

- Advertisement -
- Advertisement -

ಎಲೆಮರೆ-18

-ಅರುಣ್ ಜೋಳದ ಕೂಡ್ಲಿಗಿ

ಆಗಿನ್ನೂ ಬಾಲಕ. ಊರಿಗೆ ಎದುರಾಗಿ ಹೈವೆ. ದಿನ ಬೆಳಗಾದರೆ ವಾಹನಗಳ ಓಡಾಟದ ಗದ್ದಲ, ರಾತ್ರಿಯ ಕನಸಿಗೆ ಹಿನ್ನೆಲೆ ಸಂಗೀತದಂತೆ ಹೈವೆಯ ಸದ್ದು. ಹೀಗಿರುವಾಗ `ಆಕ್ಸಿಡೆಂಟ್’ ಎಂಬ ಶಬ್ದ ಕಿವಿಗೆ ಬಿದ್ದಾಕ್ಷಣ ಊರವರು ರನ್ನಿಂಗ್ ರೇಸ್‌ನ ಸ್ಪರ್ಧಿಗಳಂತೆ ಓಡುತ್ತಿದ್ದರು. ಬಾಲಕನೂ ದಮ್ಮಿಡಿದು ಆಕ್ಸಿಡೆಂಟ್ ಸ್ಥಳಕ್ಕೆ ಧಾವಿಸುತ್ತಿದ್ದ. ಅದೊಂದು ಭಯಾನಕ ಆಕ್ಸಿಡೆಂಟ್. ಎರಡು ಲಾರಿಗಳು ಎದುರಾಬದುರು ಗುದ್ದಿಕೊಂಡು ನುಜ್ಜಾಗಿವೆ. ಒಂದು ಲಾರಿಯಲ್ಲಿ ಟ್ಯಾಂಕರ್ ಹೊಡೆದು ಹಾಲು ಸೋರುತ್ತಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಡ್ರೈವರ್ ಕ್ಲೀನರುಗಳನ್ನು ಕಣ್ಣೆತ್ತಿಯೂ ನೋಡದ ಜನರು, ಟ್ಯಾಂಕರಿನಿಂದ ಸುರಿಯುತ್ತಿದ್ದ ಹಾಲನ್ನು ಕ್ಯಾನು ಪಾತ್ರೆ ಚೆಂಬುಗಳಲ್ಲಿ ತುಂಬಿಸಿಕೊಳ್ಳುವುದರಲ್ಲಿ ಬ್ಯುಜಿಯಾಗಿದ್ದರು.

ಈ ಹುಡುಗ ರಕ್ತದ ಮಡುವಲ್ಲಿ ಸಾವಿನ ಕದ ತಟ್ಟುತ್ತಿದ್ದ ಡ್ರೈವರನನ್ನು ನೋಡುತ್ತಾ ಬಿಕ್ಕಳಿಸಿ ಅಳುತ್ತಿದ್ದ… ಇಂತಹದ್ದೇ ನೂರಾರು ಘಟನೆಗಳಿಗೆ ಸಾಕ್ಷಿಯಾದ ಈ ಹುಡುಗನ ಮನಸ್ಸಲ್ಲಿ ಒಂದು ಪ್ರಶ್ನೆ ಮೊಳೆಯಿತು. `ಆಕ್ಸಿಡೆಂಟ್ ಆದಾಗ ಸಾವಿನೊಂದಿಗೆ ಹೋರಾಡುತ್ತಿರುವ ಜೀವಗಳ ಉಳಿಸಲು ಯಾಕೆ ಜನರು ಮುಂದಾಗುವುದಿಲ್ಲ?’ ಈ ಹುಡುಗ ಹೈಸ್ಕೂಲ್ ದಾಟಿ ಪಿಯುಗೆ ಬರುತ್ತಾನೆ. ತನ್ನೊಳಗೆ ಮೊಳೆತ ಪ್ರಶ್ನೆ ಗಿಡದಿಂದ ಮರವಾಗುತ್ತದೆ. ಕೊನೆಗೆ ಈ ಪ್ರಶ್ನೆಗೆ ತಾನೆ ಉತ್ತರವಾಗಲು ಅಣಿಯಾಗುತ್ತಾನೆ. ಆ ಹುಡುಗನೆ ಚಿತ್ರದುರ್ಗ ತಾಲೂಕಿನ ಇಂಗಳದಾಳು ಎಂಬ ಹಳ್ಳಿಯ ಜಂಗ್ಲಿ ರಂಗಪ್ಪರ ದೇವೇಂದ್ರಪ್ಪ ಮತ್ತು ಸರೋಜಮ್ಮನ ಮಗ ರಾಮಸ್ವಾಮಿ. ಇದೀಗ ಬಿಇಡಿ ಮುಗಿಸಿ ಸ್ನಾತಕೋತ್ತರ ಪದವಿ ಮಾಡುವ ಕನಸೊತ್ತಿದ್ದಾನೆ.

ರಸ್ತೆ ಅಪಘಾತಗಳು ಸಂಭವಿಸಿದ ಸ್ಥಳಗಳಿಗೆ ತತ್‌ಕ್ಷಣಕ್ಕೆ ಭೇಟಿ ನೀಡಿ ಅಪಘಾತಕ್ಕೆ ಒಳಗಾದವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ, ಸಾಧ್ಯವಾದಷ್ಟು ಜೀವ ಉಳಿಸಲು ಪ್ರಯತ್ನಿಸುವ ಕೆಲಸವನ್ನು ರಂಗಸ್ವಾಮಿ 2013 ರಿಂದ ಮಾಡುತ್ತಾ ಬಂದಿದ್ದಾನೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಇಂಗಳದಾಳುವಿನ ಈ ಹುಡುಗನ ಕೆಲಸ ಆರಂಭಕ್ಕೆ ಅಪಾಯಕಾರಿಯಾಗಿ ಕಂಡಿತು. ಪೊಲೀಸರು ಈ ಹುಡುಗನನ್ನು ಸಾಕ್ಷಿಯಾಗಿಸಿದರೆ ಕೋರ್ಟಿಗೆ ಅಲೆಯಬೇಕಾಗುತ್ತದೆ ಎಂದು ಊರವರು ಬುದ್ಧಿವಾದ ಹೇಳಿದರು. ಯಾರು ಯಾರದೋ ರಕ್ತಕ ಕಲೆ ಮಾಡಿಕೊಂಡು ಬರುವ ಈತನನ್ನು ಮನೆಯವರು ಬೈದರು. ಆರಂಭಕ್ಕೆ ಬಣ್ಣದ ಡಬ್ಬಿ ಹಿಡಿದು ಹಸಿಕಡ್ಡಿಯ ತುದಿ ಜಜ್ಜಿಕೊಂಡು ಅಪಘಾತ ವಲಯಗಳಿರುವೆಡೆ ’ಎಚ್ಚರಿಕೆ ಅಪಘಾತ ವಲಯ ನಿಧಾನಕ್ಕೆ ಚಲಿಸಿ’ ಎಂದು ರಸ್ತೆಬದಿಯ ಗೋಡೆಗಳಿಗೆ ಬರೆಯುತ್ತಿದ್ದ ಈ ಯುವಕ ಜನರಿಗೆ ತಲೆಕೆಟ್ಟವನಂತೆ ಕಂಡಿದ್ದ. ಇದೀಗ ಚಿತ್ರದುರ್ಗ ಜಿಲ್ಲೆಯಾದ್ಯಂತ ತಿರುಗಾಡಿ ರಂಗಸ್ವಾಮಿ ಗೆಳೆಯರ ನೆರವಿನೊಂದಿಗೆ ಇಂತಹ 400 ಕ್ಕಿಂತ ಹೆಚ್ಚಿನ ಸೂಚನಾಫಕಲಗಳನ್ನು ಬರೆದಿದ್ದಾನೆ. ನಂತರದಲ್ಲಿ ಕೆಲವು ಕಲಾವಿದರು ರಂಗಸ್ವಾಮಿಯ ಕೆಲಸಕ್ಕೆ ಜೊತೆಯಾಗಿದ್ದಾರೆ.

ನಿಧಾನಕ್ಕೆ ಜೀವ ಉಳಿಸುವ ಈ ಕೆಲಸಕ್ಕೆ ಆಡಿಕೊಂಡ ಜನರಿಂದಲೆ ಮೆಚ್ಚುಗೆ ಬರತೊಡಗಿತು. ರಂಗಸ್ವಾಮಿಯ ಸ್ನೇಹಿತರೂ ತನ್ನ ಕೆಲಸಕ್ಕೆ ಜೊತೆಯಾಗತೊಡಗಿದರು. ಈ ಸಂಖ್ಯೆ ಹೆಚ್ಚಾದಂತೆ `ಸಂಜೀವಿನಿ’ ಎಂಬ ವಾಟ್ಸಪ್ ಗ್ರೂಪ್ ರಚನೆಯಾಯಿತು. ಇದೀಗ ಮೂರು ವಾಟ್ಸಪ್ ಗ್ರೂಪಲ್ಲಿ ಏಳುನೂರ ಐವತ್ತು ಜನರು ಸಂಜೀವಿನಿಯ ಜತೆ ಗುರುತಿಸಿಕೊಳ್ಳುತ್ತಾರೆ. ನೂರಕ್ಕಿಂತ ಹೆಚ್ಚಿನ ಮಹಿಳೆಯರದೇ ಒಂದು ಪ್ರತ್ಯೇಕ ಗುಂಪಿದೆ. ಅದರಲ್ಲಿ ಶಾಲಾ ಶಿಕ್ಷಕಿಯರು ಹೆಚ್ಚಿದ್ದಾರೆ. ಅವರೆಲ್ಲಾ ಶಾಲೆಗಳಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯ ಯಾವುದೇ ರಸ್ತೆಯಲ್ಲಿ ಅಪಘಾತವಾದರೂ ತತ್‌ಕ್ಷಣಕ್ಕೆ ವಾಟ್ಸಪ್ ಗ್ರೂಪಲ್ಲಿ ಫೋಟೋ ಮಾಹಿತಿ ಹಂಚಿಕೆಯಾಗುತ್ತದೆ. ರಂಗಸ್ವಾಮಿ ಆಯಾ ಭಾಗದ ಸಂಜೀವಿನಿ ಸದಸ್ಯರಿಗೆ ಫೋನಾಯಿಸಿ ವಿಚಾರಿಸುತ್ತಾರೆ. ಆಗ ಆ ಭಾಗದ ಸಂಜೀವಿನಿ ಸಂಗಾತಿಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ಒಳಗಾದವರ ರಕ್ಷಿಸಿ ಮೊದಲು ಆಂಬುಲೆನ್ಸ್‌ಗೆ ಫೋನಾಯಿಸುತ್ತಾರೆ. ಅಂಬುಲೆನ್ಸ್ ಅಲಭ್ಯವಾದಲ್ಲಿ ಬೈಕ್, ಆಟೋ, ಟೆಂಪೋ ಯಾವುದನ್ನಾದರೂ ಹಿಡಿದು ಮೊದಲು ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಗೆ ಅಣಿ ಮಾಡುತ್ತಾರೆ. ನಂತರ ಅಪಘಾತಕ್ಕೆ ಒಳಗಾದವರ ಮನೆಯವರಿಗೆ ಮಾಹಿತಿ ಮುಟ್ಟಿಸಿ, ತದನಂತರ ಪೊಲೀಸ್ ಮತ್ತು ಮಾಧ್ಯಮದವರಿಗೆ ಹೇಳುತ್ತಾರೆ. ಇದು ಸಂಜೀವಿನಿಯ ಕೆಲಸದ ಸ್ವರೂಪ.

ಇದೀಗ ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಸಂಜೀವಿನಿ ಬಳಗ ನೆರವಾಗಿದೆ. ಪೊಲಿಸ್ ಇಲಾಖೆಯೂ ಸಂಜೀವಿನಿ ಬಳಗದ ಸದಸ್ಯರನ್ನು ಅಪಘಾತಕ್ಕೆ ಸಾಕ್ಷಿಯಾಗಿಸದೆ ಬೆಂಬಲಿಸಿದ್ದಾರೆ. ಅಪಘಾತಕ್ಕೆ ಒಳಗಾಗಿ ಸಂಜೀವಿನಿ ನೆರವಿನಿಂದ ಬದುಕುಳಿದವರೂ ಈ ಗುಂಪಿನ ಸಕ್ರಿಯ ಸದಸ್ಯರಾಗಿದ್ದಾರೆ. ಸಂಜೀವಿನಿ ಬಳಗದ ಬಗ್ಗೆ ಪತ್ರಿಕೆ ಟಿವಿಗಳಲ್ಲಿ ಪ್ರಚಾರ ನೋಡಿ ಕೆಲವರು ಸ್ವಆಸಕ್ತಿಯಿಂದ ಸಂಜೀವಿನಿ ಬಳಗಕ್ಕೆ ಸ್ಪಂದಿಸಿದ್ದಾರೆ. ಇದೀಗ ಸಾರಿಗೆ ಇಲಾಖೆಯು ತನ್ನ ರಸ್ತೆ ಸಪ್ತಾಹದಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ರಂಗಸ್ವಾಮಿಯನ್ನು ಅತಿಥಿಯಾಗಿ ಕರೆದು, ತನ್ನ ಅನುಭವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದೆ. 2018 ರಲ್ಲಿ ಚಿತ್ರದುರ್ಗದ ಬಿಇಓ ನಾಗಭೂಷಣ ಅವರು ಶಾಲೆಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಂಗಸ್ವಾಮಿ ಮತ್ತವರ ತಂಡಕ್ಕೆ ಅನುಮತಿ ನೀಡಿದ್ದರು. ಹಾಗಾಗಿ ಪ್ರಾಥಮಿಕ ಶಾಲೆಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ಈತನಕ ಎಂಬತ್ತು ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಇದೀಗ ರಂಗಸ್ವಾಮಿಯನ್ನು ಚಿತ್ರದುರ್ಗ ಜಿಲ್ಲೆಯ ರಸ್ತೆ ಸುರಕ್ಷತೆಯ ಪ್ರಚಾರದ ರಾಯಭಾರಿಯಾಗಿಯನ್ನಾಗಿ ಆಯ್ಕೆ ಮಾಡಲು ಆರ್.ಟಿ.ಓ ಮತ್ತು ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. 2019 ರ ಆರ್.ಟಿ.ಓ ವರದಿಯ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದರೂ, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇದು ಸಂಜೀವಿನಿ ಬಳಗದ ಪರಿಣಾಮ ಎಂದು ರಂಗಸ್ವಾಮಿ ಹೇಳುತ್ತಾರೆ. ರಸ್ತೆಗಳಲ್ಲಿ ಜನರು ಓಡಾಡಿದ ಕಾಲುದಾರಿಗಳಿರುತ್ತವೆ. ಹೈವೆ ರಸ್ತೆಗಳನ್ನು ಮಾಡುವಾಗ ಹೀಗೆ ಜನರು ಓಡಾಡುವ ಕಾಲುದಾರಿಗಳಲ್ಲೆ ರಸ್ತೆ ದಾಟುವ ಮಾರ್ಗಗಳನ್ನಾಗಿಸಬೇಕು. ಆದರೆ ಹೈವೇ ಅಥಾರಿಟಿ ಇವುಗಳನ್ನು ಗಮನಿಸುವುದಿಲ್ಲ. ಇದರಿಂದಾಗಿ ಜನರು ಓಡಾಡಿದ ಹಳೆಯ ದಾರಿಗಳಲ್ಲೆ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಇದು ಕೂಡ ಅಪಘಾತಕ್ಕೆ ಕಾರಣ ಎಂದು ರಂಗಸ್ವಾಮಿ ತನ್ನದೇ ಅನುಭವದಿಂದ ಸಮಸ್ಯೆಗಳನ್ನು ಗುರುತಿಸುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಜೀವಿನಿ ಬಳಗ ಸೂಚಿಸಿದ 96 ಅಪಘಾತ ಸಂಭವದ ಸ್ಥಳಗಳನ್ನು ಸಾರಿಗೆ ಇಲಾಖೆಯವರೂ ಮಾನ್ಯಮಾಡಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಅಣ್ಣ ಶಾಂತಕುಮಾರ್, ಬಿಇಡಿ ಮುಗಿಸಿದ ತಂಗಿ ಮತ್ತು ಅಪ್ಪ ಅಮ್ಮ ಇರುವ ಪುಟ್ಟ ಕುಟುಂಬ ರಾಮಸ್ವಾಮಿಯ ಕೆಲಸಕ್ಕೆ ಇದೀಗ ಬೆಂಬಲವಾಗಿದ್ದಾರೆ. ರಾಮಸ್ವಾಮಿಯ ನೂರಾರು ಗೆಳೆಯರ ಸ್ನೇಹಬಳಗ ಸಂಜೀವಿನಿಯನ್ನು ಜೀವಂತವಾಗಿಟ್ಟಿದೆ.

ಮುಂದೆ ಒಂದು ಟ್ರಸ್ಟ್ ಮಾಡಿ ರಾಜ್ಯವ್ಯಾಪಿ ಸಂಜೀವಿನಿ ಬಳಗವನ್ನು ವಿಸ್ತರಿಸುವ ಕನಸು ರಂಗಸ್ವಾಮಿಯದು. ಪ್ರಜಾವಾಣಿ 2020 ರ ಯುವ ಸಾಧಕರನ್ನು ಗುರುತಿಸುವಾಗ ರಂಗಸ್ವಾಮಿಯನ್ನು ಗುರುತಿಸಿ ಗೌರವಿಸಲಾಗಿದೆ. ಹಲವು ಸಂಘಸಂಸ್ಥೆಗಳು ರಂಗಸ್ವಾಮಿಯ ಕೆಲಸವನ್ನು ಮೆಚ್ಚಿ ಬೆಂಬಲಿಸಿವೆ. ಮೇಲುಜಾತಿಗಳಿಂದ ಮುಟ್ಟಿಸಿಕೊಳ್ಳದ ದಲಿತ ಸಮುದಾಯಕ್ಕೆ ಸೇರಿದ ರಂಗಸ್ವಾಮಿ ಸ್ವತಃ ಸಾವಿರಾರು ಜನರನ್ನು ಮುಟ್ಟಿ ಅವರುಗಳ ಜೀವ ಉಳಿಸಲು ಶ್ರಮಿಸುತ್ತಿರುವುದು ಜಾತಿವಾದಿ ರೋಗಿಷ್ಠ ಸಮಾಜಕ್ಕೆ ಮದ್ದಿನಂತೆ ಕಾಣುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...