ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಪನ್ಶೇಂದ್ರ ಗ್ರಾಮದಲ್ಲಿ ನಡೆದ, ಇಬ್ಬರು ದಲಿತರ ಹತ್ಯೆಯನ್ನು ಸಿಬಿಐ ತನಿಖೆಗೆ ನೀಡುವಂತೆ, ಹತ್ಯೆ ನಡೆದ 12 ದಿನಗಳ ಬಳಿಕ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮೃತ ರಾಹುಲ್ ಬೋರಾಡೆ ಮತ್ತು ಪ್ರದೀಪ್ ಬೋರಾಡೆ ಸಂಬಂಧಿಕರು ಮತ್ತು ಜಾತಿ ವಿರೋಧಿ ಸಂಘಟನೆ ಕಾರ್ಯಕರ್ತರು ಇದೊಂದು ಯೋಜಿತ ದಾಳಿ ಎಂದು ಆರೋಪಿಸಿದ್ದಾರೆ.
22 ವರ್ಷದ ರಾಹುಲ್ ಬೋರಾಡೆ ಮತ್ತು 25 ವರ್ಷದ ಪ್ರದೀಪ್ ಬೋರಾಡೆ ಎಂಬ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು, ದೀರ್ಘಕಾಲದ ಭೂ ವಿವಾದಕ್ಕೆ ಸಂಬಂಧಿಸಿದ ದಾಳಿಯಲ್ಲಿ 50 ಕ್ಕೂ ಹೆಚ್ಚು ಜನರ ಗುಂಪಿನಿಂದ ಸೆಪ್ಟೆಂಬರ್ 4 ರಂದು ಇವರ ಮೇಲೆ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಲ್ಲಿ ಈ ಇಬ್ಬರು ಮೃತಪಟ್ಟಿದ್ದರು.
ಇದೇ ದಾಳಿಯಲ್ಲಿ ಮೃತರ ಸಹೋದರ ರಾಮೇಶ್ವರ ಮತ್ತು ತಾಯಿ ನರ್ಮದಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗ ಇಬ್ಬರೂ ಜಲ್ನಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಹುಲ್ ಮತ್ತು ಪ್ರದೀಪ್ ಬೋರಾಡೆ ಅವರ ಸಂಬಂಧಿಕರು ಈ ಕೊಲೆಗಳನ್ನು ಯೋಜಿತ ದಾಳಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: ತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ
ಸದ್ಯ ಜಲ್ನಾ ಪೊಲೀಸರು ಆರೋಪಿಗಳ ವಿರುದ್ಧ, ಕೊಲೆ ಮತ್ತು ಕೊಲೆ ಯತ್ನಕ್ಕಾಗಿ ಐಪಿಸಿಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಈವರೆಗೆ 25 ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸುಧೀರ್ ಖಿರಾದ್ಕರ್, “ಸಂತ್ರಸ್ತರ ಕುಟುಂಬದಿಂದ ಹೆಸರಿಸಲ್ಪಟ್ಟ ಇನ್ನೂ ಐದು ಜನರನ್ನು ಹುಡುಕುವ ಹಂತದಲ್ಲಿದ್ದೇವೆ” ಎಂದು ಹೇಳಿದ್ದಾರೆ.
“ಘಟನೆ ನಡೆದ ಕೂಡಲೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾವು ಕಾರಣವನ್ನು ಕಂಡುಹಿಡಿಯುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಖಿರಾದ್ಕರ್ ತಿಳಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಇದನ್ನೂ ಓದಿ: ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ: ಆತ್ಮಹತ್ಯೆ; ಒಬ್ಬ ಬಾಲಕಿ ಸಾವು!
ಸೆಪ್ಟೆಂಬರ್ 4 ರಂದು, ಬೆಳಿಗ್ಗೆ 6 ಗಂಟೆ ಸುಮಾರಿಗೆ, ಬೋರಾಡ್ಸ್ ತಮ್ಮ ಮನೆಯಿಂದ ಬೆಳಗ್ಗಿನ ನಿತ್ಯಕರ್ಮಗಳಿಗಾಗಿ ಹೊರಟಿದ್ದಾಗ, ಅವರ ಮೇಲೆ 50ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ನಡೆಸಿತು. ಸಂತ್ರಸ್ತರ ಕುಟುಂಬದ ಪ್ರಕಾರ ಭಿಲ್ ಸಮುದಾಯದೊಂದಿಗಿನ ವಿವಾದದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿಕೊಂಡಿದೆ.
ಆಗಸ್ಟ್ 17ರಂದು ಭಿಲ್ ಸಮುದಾಯದ ಹಬ್ಬವೊಂದರಲ್ಲಿ ಮೃತ ರಾಹುಲ್ ಮತ್ತು ಆರೋಪಿಗಳ ನಡುವೆ ವಾದ-ವಿವಾದಗಳಿಂದ ಜಗಳ ಉಂಟಾಗಿ, ಕೆಲವರು ರಾಹುಲ್ನನ್ನು ಥಳಿಸಿದ್ದರು ಎಂದು ರಾಹುಲ್ ಚಿಕ್ಕಪ್ಪ ತುಕಾರಂ ಕಹಳೆ ಹೇಳಿದ್ದಾರೆ.
ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ
“ನಾವು ಮೊದಲೇ ದೂರು ಕೊಟ್ಟಾಗ ಪೊಲೀಸರು ಗಂಭೀರವಾಗಿ ಪರಿಗಣಿಸದಿದ್ದದ್ದು, ಸೆಪ್ಟೆಂಬರ್ 4 ರ ರಕ್ತಸಿಕ್ತ ದಾಳಿಗೆ ಕಾರಣವಾಯಿತು. ಎರಡು ವಾರ ಸಂಚು ರೂಪಿಸಿ ದಾಳಿ ಮಾಡಿದ್ದಾರೆ. ಇಲ್ಲಿನ ಹಿಂಸಾಚಾರಕ್ಕೆ ಸುಧೀರ್ಘ ಇತಿಹಾಸವಿದೆ. ಪೊಲೀಸರು ಇದರ ಬಗ್ಗೆ ಸರಿಯಾಗಿ ಗಮನಹರಿಸಿ, ಪ್ರಕರಣವನ್ನು ತನಿಖೆ ಮಾಡಲಾಗುವುದಿಲ್ಲ. ಆದ್ದರಿಂದಲೇ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒತ್ತಾಯಿಸುತ್ತಿದ್ದೇವೆ ಎಂದು ತುಕಾರಂ ಕಹಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದಲಿತನೊಬ್ಬ ಗ್ರಾ.ಪಂ ಮುಖ್ಯಸ್ಥನಾದುದ್ದನ್ನು ಸಹಿಸದ ಮೇಲ್ಜಾತಿಗಳು: ಗುಂಡಿಕ್ಕಿ ಕೊಲೆ
ಬೋರಾಡೆ ಕುಟುಂಬವು ಹಲವು ವರ್ಷಗಳಿಂದ ಭೂಮಿ ಹೊಂದಿದ್ದು, ಅದು ಹಳ್ಳಿಯ ಬೇರೆ ದಲಿತರಿಗೂ ಪ್ರೋತ್ಸಾಹ ಸಿಕ್ಕಂತಾಗಿ ಅವರೂ ಭೂಮಿ ಹೊಂದಲು ಪ್ರಾರಂಭಿಸಿದ್ದರು. ಇದು ಭೂ ವಿವಾದಗಳಿಗೆ ಕಾರಣವಾಯಿತು ಎಂದು ಬೋರಾಡೆ ಸಂಬಂಧಿಕರು ತಿಳಿಸಿದ್ದಾರೆ.
“ಲ್ಯಾಂಡ್ ಮಾಫಿಯಾಗಳ ಮೂಲಕ ಬೆದರಿಕೆ ಹಾಕಿಸಿ, ಭೂಮಿಯನ್ನು ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದರು. ಕಳೆದ ಮೂರು ವರ್ಷಗಳಿಂದ ಅವರು ನಮಗೆ ತೊಂದರೆ ಕೊಡುತ್ತಿದ್ದಾರೆ” ಎಂದು ಮೃತರ ಕುಟುಂಬದ ಸದಸ್ಯರೊಬ್ಬರು ಆರೋಪಿಸಿದ್ದಾರೆ.
ಇವರು ವಾಸಿಸುತ್ತಿದ್ದ ಪನ್ಶೇಂದ್ರ ಗ್ರಾಮದಲ್ಲಿ ಸುಮಾರು 350 ಮನೆಗಳಿವೆ. ಅವುಗಳಲ್ಲಿ, 20% ಕ್ಕೂ ಹೆಚ್ಚು ಮನೆಗಳು ಭಿಲ್ ಸಮುದಾಯಕ್ಕೆ ಸೇರಿವೆ, ಸುಮಾರು 8% ಬೌದ್ಧರು (ಬೋರಾಡೆಗಳು ಸಹ ಬೌದ್ಧರು) ಮತ್ತು ಕೆಲವು ಮರಾಠರು ಮತ್ತು ಅಲೆಮಾರಿ ಸಮುದಾಯಗಳಿಗೆ ಸೇರಿದವರು ಇದ್ದಾರೆ. ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣ 70% ಕ್ಕಿಂತ ಕಡಿಮೆಯಿದೆ ಮತ್ತು ಇಲ್ಲಿ ಹೆಚ್ಚಿನ ದಲಿತ ಕುಟುಂಬಗಳು ತುಂಡು ಭೂಮಿಯಿರುವ ರೈತರು.