ತಿರುಚ್ಚಿಯಲ್ಲಿರುವ ‘ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ’ (ಟಿಎನ್ಎನ್ಎಲ್ಯು) ನಲ್ಲಿ ಅಮಾನವೀಯ ಘಟನೆ ನಡೆದಿದ್ದು, 22 ವರ್ಷದ ದಲಿತ ವಿದ್ಯಾರ್ಥಿಯೋರ್ವನಿಗೆ ಸಹಪಾಠಿಗಳು ಮೋಸದಿಂದ ಮೂತ್ರ ಕುಡಿಸಿದ್ದಾರೆ.
ಮೂಲಗಳ ಪ್ರಕಾರ, ತಿರುಚ್ಚಿ-ದಿಂಡುಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ‘ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ’ದ ಆವರಣದಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಕಾರ್ಯಕ್ರಮದ ಸಂದರ್ಭದಲ್ಲಿ ಜನವರಿ 6, 2024 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಯ ದೂರಿನ ಮೇರೆಗೆ ಈ ಕುರಿತು ವಿವಿ ಸಮಿತಿ ತನಿಖೆಯನ್ನು ಆರಂಭಿಸಿದೆ.
ಅಂತಿಮ ವರ್ಷದ ದಲಿತ ವಿದ್ಯಾರ್ಥಿಯನ್ನು ಆತನ ಇಬ್ಬರು ಸಹಪಾಠಿಗಳು, ಅದರಲ್ಲಿ ಓರ್ವ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಇಬ್ಬರು ಸಹಪಾಠಿಗಳು ಆತನಿಗೆ ತಂಪು ಪಾನೀಯದ ಜೊತೆ ಮೂತ್ರವನ್ನು ಬೆರೆಸಿ ಕುಡಿಯುವಂತೆ ಕೊಟ್ಟಿದ್ದಾರೆ. ಮರುದಿನ ತಾನು ಮೋಸ ಹೋಗಿರುವುದು ತಿಳಿದ ವಿದ್ಯಾರ್ಥಿಯು ಅಧ್ಯಾಪಕರಿಗೆ ದೂರು ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎಸ್.ಎಂ. ಬಾಲಕೃಷ್ಣನ್ ಮಾತನಾಡಿದ್ದು, ದೂರನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆಯು ಮುಂದಿನ ವಿಚಾರಣೆ ನಡೆಸಲು ಮೂವರು ಸಹಾಯಕ ಪ್ರಾಧ್ಯಾಪಕರನ್ನು ಒಳಗೊಂಡ ರ್ಯಾಗಿಂಗ್ ವಿರೋಧಿ ಸಮಿತಿಯನ್ನು ರಚಿಸಿದೆ. ಸಮಿತಿಯು ಜನವರಿ 18ರಂದು ತನ್ನ ವರದಿಯನ್ನು ಸಲ್ಲಿಸಲಿದೆ. ಆ ಬಳಿಕ ವರದಿಯ ಆಧಾರದಲ್ಲಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರ್ಯಾಗಿಂಗ್ ವಿರೋಧಿ ಸಮಿತಿಯ ವರದಿಯ ಆಧಾರದ ಮೇಲೆ ಸಂಸ್ಥೆಯು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ರಿಜಿಸ್ಟ್ರಾರ್ ಹೇಳಿದ್ದು, ಆರೋಪಿತ ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಕಂಡುಬಂದರೆ, ವಿಶ್ವವಿದ್ಯಾಲಯವು ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಿದೆ ಮತ್ತು ಮುಂದಿನ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.
ಇಂತದ್ದೇ ಪ್ರಕರಣ 2018ರ ಆಗಸ್ಟ್ನಲ್ಲಿ ಪಂಜಾಬ್ನ ಜಲಂಧರ್ನಲ್ಲಿ ನಡೆದಿತ್ತು. 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಸಹಪಾಠಿಗಳು ಮೋಸದಿಂದ ಮೂತ್ರ ಕುಡಿಸಿದ್ದರು. ಈ ಬಗ್ಗೆ ವಿದ್ಯಾರ್ಥಿ ಶಿಕ್ಷಕರ ಬಳಿ ದೂರು ನೀಡಲು ಹೋದಾಗ ಶಿಕ್ಷಕಿ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ನೊಂದ ಬಾಲಕ ಮನೆಯ ಮೇಲ್ಛಾವಣೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. 12 ವರ್ಷದ ಬಾಲಕನಿಗೆ ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಶಿಕ್ಷಕಿ ಶ್ರೀಕಿ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಕುರಿತು ಬಾಲಕನ ತಾಯಿಯು ಪೊಲೀಸರಿಗೆ ದೂರು ನೀಡಿದ್ದರು. ಮಗನ ಕೆಲವು ಸಹಪಾಠಿಗಳು ಅವನ ನೀರಿನ ಬಾಟಲಿಗೆ ಮೂತ್ರ ವಿಸರ್ಜನೆ ಮಾಡಿದರು ಮತ್ತು ಅವನು ಬಾಟಲಿಯ ನೀರು ಕುಡಿದ ನಂತರ ಅವನನ್ನು ಹೀಯಾಳಿಸಿದ್ದಾರೆ. ಅವನು ತನ್ನ ತರಗತಿಯ ಶಿಕ್ಷಕರಿಗೆ ದೂರು ನೀಡಿದಾಗ ಶರ್ಮಾ ಅವನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಓದಿ: ಬುಡಕಟ್ಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಗ್ರಾಮದ ಮುಖ್ಯಸ್ಥ